ಆ್ಯಪ್ನಗರ

ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರ ಪ್ರತಿಭಟನೆ

ರಾಜ್ಯದ ಹಮಾಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಸರಕಾರ ಈಡೇರಿಸಬೇಕು ಎಂದು ರಾಜ್ಯ ಹಮಾಲಿ ಫೆಡೆರೇಶನ್‌ ಕೊಡಗು ಸಮಿತಿ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

Vijaya Karnataka 13 Jul 2019, 5:00 am
ಮಡಿಕೇರಿ: ರಾಜ್ಯದ ಹಮಾಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಸರಕಾರ ಈಡೇರಿಸಬೇಕು ಎಂದು ರಾಜ್ಯ ಹಮಾಲಿ ಫೆಡೆರೇಶನ್‌ ಕೊಡಗು ಸಮಿತಿ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
Vijaya Karnataka Web MDK-mdk12jay4


ಸಮಿತಿ ರಾಜ್ಯಾಧ್ಯಕ್ಷ ಮಹಂತೇಶ್‌ ಮಾತನಾಡಿ, ವ್ಯಾಪಾರ ವಹಿವಾಟಿನಲ್ಲಿ ಮಹತ್ವ ಪಾತ್ರ ವಹಿಸುವ ಶ್ರಮ ಜೀವಿಗಳಾದ ಹಮಾಲಿ ಕಾರ್ಮಿಕರು, ರಾಜ್ಯದ ಮಾರುಕಟ್ಟೆ, ಅಕ್ಕಿ, ಆಯಿಲ್‌ ಮೊದಲಾದ ಗಿರಣಿಗಳಲ್ಲಿ ಹಾಗೂ ನಗರ ಮತ್ತು ಗ್ರಾಮೀಣ ಪ್ರದೇಶದ ಬಜಾರ್‌ಗಳಲ್ಲಿ ಅತ್ಯಂತ ಭಾರವಾದ ಮೂಟೆಗಳನ್ನು ಹೊತ್ತು ಶ್ರಮಿಸುತ್ತಿದ್ದಾರೆ. ಇಂತಹ ಶ್ರಮ ಜೀವಿಗಳಿಗೆ ಸರಕಾರ ಯಾವುದೇ ಸೌಲಭ್ಯ ನೀಡದೆ ವಂಚಿಸುತ್ತಿದೆ ಎಂದು ಆರೋಪಿಸಿದರು.

ಅಸಂಘಟಿತ ಕಾರ್ಮಿಕರಲ್ಲಿ ಶ್ರಮದಾಯಕ ಕೆಲಸ ನಿರ್ವಹಿಸುವ ಇವರಿಗೆ ಯಾವುದೇ ರೀತಿಯ ಸಾಮಾಜಿಕ ಭದ್ರತೆಯ ಇಲ್ಲ. ಸ್ವಂತ ನಿವೇಶನ, ಮನೆಗಳು ಇಲ್ಲದೆ ಸರಕಾರದ ಮೂಲ ಸೌಲಭ್ಯದಿಂದ ವಂಚಿತರಾಗಿದ್ದಾರೆ, ಅವರ ಉತ್ತಮ ಬದುಕಿಗೆ ಸರಕಾರ ವಿವಿಧ ಸೌಲಭ್ಯವನ್ನು ಘೋಷಿಸಬೇಕು ಎಂದು ಆಗ್ರಹಿಸಿದರು.

ಸಮಿತಿಯು ರಾಜ್ಯದಾದ್ಯಂತ ಕೆಲವು ವರ್ಷಗಳಿಂದ ಹಲವಾರು ಹೋರಾಟಗಳನ್ನು ನಡೆಸುತ್ತಾ ಬಂದಿದೆ. ನಮ್ಮ ಸಮಸ್ಯೆಯನ್ನು ಪರಿಹರಿಸಲು ಈ ಹಿಂದಿನ ಸರಕಾರಗಳು ತಕ್ಕ ಮಟ್ಟಿನ ಗಮನವನ್ನು ನೀಡಿದೆಯಾದರೂ ಹಮಾಲಿ ಕಾರ್ಮಿಕರ ಪ್ರಮುಖ ಬೇಡಿಕೆಗಳು ಹಾಗೆ ಉಳಿದಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ಸಮಿತಿ ಜಿಲ್ಲಾಧ್ಯಕ್ಷ ಪಿ.ಆರ್‌. ಭರತ್‌ ಮಾತನಾಡಿ, ಬಹುತೇಕ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿರುವ ಬಡ ಹಮಾಲಿ ಕಾರ್ಮಿಕರ ಬೇಡಿಕೆಗಳನ್ನು ಪರಿಹರಿಸಲು ಸೂಕ್ತ ಕ್ರಮವನ್ನು ಸರಕಾರ ವಹಿಸಬೇಕು ಎಂದು ಮನವಿ ಮಾಡಿದರು.

ಮುಖ್ಯ ಮಾರುಕಟ್ಟೆ ಮತ್ತು ಆಪ್ತ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಜಾಗಗಳನ್ನು ವಸತಿ ಯೋಜನೆಗಾಗಿ ಗುರುತಿಸಬೇಕು. ಮಾರುಕಟ್ಟೆಗಳಲ್ಲಿ ಜಾಗದ ಲಭ್ಯತೆ ಇಲ್ಲದ ಪಕ್ಷ ದಲ್ಲಿ ಸರಕಾರಿ ಅಥವಾ ಖಾಸಗಿ ಜಮೀನನ್ನು ಖರೀದಿಸಲು ಅಗತ್ಯ ಕ್ರಮವಹಿಸಬೇಕು ಮನವಿ ಮಾಡಿದರು.

ಪ್ರಧಾನಮಂತ್ರಿ ಅವಾಸ್‌, ದೇವರಾಜ ಅರಸು ವಸತಿ ಯೋಜನೆಗಳನ್ನು ಬಳಸಿಕೊಂಡು ಕೂಡಲೇ ವಸತಿ ರಹಿತ ಹಮಾಲಿ ಕಾರ್ಮಿಕರಿಗೆ ವಸತಿ ಯೋಜನೆ ರೂಪಿಸಿ ಜಾರಿ ಮಾಡಬೇಕು, ಭವಿಷ್ಯನಿಧಿ ಯೋಜನೆ ತಕ್ಷ ಣದಿಂದ ಜಾರಿ ಮಾಡಬೇಕು ಎಂದು ಮನವಿ ಮಾಡಿದರು.

ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್‌ ವಿತರಿಸಿಲ್ಲ. ಅರ್ಜಿ ಸಲ್ಲಿಸಿದ ಎಲ್ಲ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್‌ ನೀಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಹಸನಬ್ಬ, ಪದಾಧಿಕಾರಿ ಗೋಪಾಲ ಕೃಷ್ಣ, ಕೆ.ಎಸ್‌. ಶಾಜಿ, ಬಸೀರ್‌, ಕರೀಂ ಹಾಜರಿದ್ದರು.

ಬೇಡಿಕೆಗಳು

ವಸತಿ ರಹಿತ ಹಮಾಲಿ ಹಮಾಲಿ ಕಾರ್ಮಿಕರಿಗೆ ವಸತಿ ಕಲ್ಪಿಸಬೇಕು

ಶ್ರಮಿಕ ಭವನ ಇಲ್ಲದ ಎಪಿಎಂಸಿಗಳಲ್ಲಿ ಕಾರ್ಮಿಕರಿಗೆ ವಿಶ್ರಾಂತಿ ಮತ್ತು ಸ್ವಚ್ಛತೆಗಾಗಿ ಶ್ರಮಿಕ ಭವನ ನಿರ್ಮಿಸಬೇಕು

ಅಸಂಘಟಿತ ಕಾರ್ಮಿಕರಿಗೆ ಯೋಗ್ಯವಾದ ಪಿಂಚಣಿ ಯೋಜನೆ, ಅವರ ಮಕ್ಕಳಿಗೆ ಶಿಕ್ಷ ಣಕ್ಕೆ ಸಹಾಯ, ಮರಣ ಪರಿಹಾರ ವಿಮೆ ಮುಂತಾದ ಸೌಲಭ್ಯ ಜಾರಿ ಮಾಡಲು ಸೂಕ್ತ ಯೋಜನೆ ಜಾರಿ ಮಾಡಬೇಕು

ಸರಕಾರದ ವಿವಿಧ ಯೋಜನೆಗಳನ್ನು ಬಳಸಿಕೊಂಡು ಮಂಡಳಿಯಿಂದ ಅಸಂಘಟಿತ ಕಾರ್ಮಿಕರಿಗೆ ವಿಶೇಷ ವಸತಿ ಯೋಜನೆ ರೂಪಿಸಬೇಕು

ಸರಕಾರಿ ಮತ್ತು ಖಾಸಗಿ ಮಿಲ್‌, ಗೋಡೌನ್‌, ವೇರಹೌಸ್‌ ಹಮಾಲಿ ಕಾರ್ಮಿಕರಿಗೆ ಕಡ್ಡಾಯವಾಗಿ ಭವಿಷ್ಯನಿಧಿ, ಇಎಸ್‌ಐ ಮುಂತಾದ ಕಾರ್ಮಿಕ ಕಾನೂನನ್ನು ಕಡ್ಡಾಯವಾಗಿ ಜಾರಿ ಮಾಡಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ