ಆ್ಯಪ್ನಗರ

ಜಿಲ್ಲೆಯಲ್ಲಿ ಯೋಗ ದಿನ

ಜಿಲ್ಲೆಯ ನಾನಾ ಭಾಗಗಳಲ್ಲಿ ಜನರು ಹುರುಪಿನಿಂದ ಭಾಗವಹಿಸುವುದರೊಂದಿಗೆ ಅರ್ಥ ಪೂರ್ಣವಾಗಿ ನಾಲ್ಕನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದರು.

Vijaya Karnataka 22 Jun 2018, 5:00 am
ಮಡಿಕೇರಿ: ಜಿಲ್ಲೆಯ ನಾನಾ ಭಾಗಗಳಲ್ಲಿ ಜನರು ಹುರುಪಿನಿಂದ ಭಾಗವಹಿಸುವುದರೊಂದಿಗೆ ಅರ್ಥ ಪೂರ್ಣವಾಗಿ ನಾಲ್ಕನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದರು.
Vijaya Karnataka Web yoga day in district
ಜಿಲ್ಲೆಯಲ್ಲಿ ಯೋಗ ದಿನ


ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಆಯುಷ್‌ ಇಲಾಖೆ , ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಉಜಿರೆ ಯೋಗ ವಿಜ್ಞಾನಗಳ ಮಹಾವಿದ್ಯಾಲಯ, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ, ಭಾರತೀಯ ವಿದ್ಯಾಭವನ, ಯೋಗ ಭಾರತಿ, ನೆಹರು ಯುವ ಕೇಂದ್ರ ಇವರ ಸಹಕಾರದಲ್ಲಿ ಗುರುವಾರ ನಗರದ ಮೈತ್ರಿ ಹಾಲ್‌ನಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಸಾಕಷ್ಟು ಮಂದಿ ಪಾಲ್ಗೊಂಡಿದ್ದರು.

ವೃಕ್ಷಾಸನ, ಪಾದಹಸ್ತಾಸನ, ತಾಡಾಸನ, ತ್ರಿಕೋನಾಸನ, ಭದ್ರಾಸನ, ವಜ್ರಾಸನ, ಉಷ್ಟ್ರಾಸನ, ಅರ್ಧ ಉಷ್ಟ್ರಾಸನ, ಶಶಾಂಕಾಸನ, ಉತ್ತಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಅರ್ಧ ಹಲಾಸನ, ಪವನಮುಕ್ತಾಸನ, ಶವಾಸನ ಅಭ್ಯಾಸ ನಡೆಯಿತು. ಶಾಸಕ ಎಂ.ಪಿ.ಅಪ್ಪಚ್ಚುರಂಜನ್‌, ಎಂಎಲ್‌ಸಿ ಸುನೀಲ್‌ ಸುಬ್ರಹ್ಮಣಿ, ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್‌, ಜಿ.ಪಂ.ಸಿಇಒ ಪ್ರಶಾಂತ್‌ ಕುಮಾರ್‌ ಮಿಶ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ.ಸತೀಶ್‌ ಕುಮಾರ್‌, ಉಪ ವಿಭಾಗಾಧಿಕಾರಿ ರಮೇಶ್‌ ಪಿ.ಕೋನರೆಡ್ಡಿ, ಡಿವೈಎಸ್‌ಪಿ ಸುಂದರರಾಜ್‌ ಯೋಗಾಸನ ಮಾಡಿದರು.

ಆಯುಷ್‌ ಅಧಿಕಾರಿ ಡಾ.ಶ್ರೀನಿವಾಸ್‌ , ಡಾ.ಅಮೂಲ್ಯ, ಡಾ.ವಿಶ್ವತಿಲಕ್‌ ಹಾಜರಿದ್ದರು.

ನಂತರ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್‌, ನಿತ್ಯ ನಾವು ಯೋಗಾಭ್ಯಾಸ ಮಾಡುವುದರಿಂದ ರೋಗಗಳಿಂದ ಮುಕ್ತಿ ಪಡೆಯಬಹುದು ಎಂದು ಹೇಳಿದರು.

ವಿಶ್ವದ 192ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಯೋಗ ದಿನಾಚರಣೆಯನ್ನು ಆಯೋಜಿಸುವ ಮೂಲಕ ಯೋಗದ ಮಹತ್ವ ಸಾರಲಾಗುತ್ತಿದೆ. ಹಲವು ಕಾಯಿಲೆಗಳಿಂದ ದೂರವಿರಲು ಪ್ರಾಚೀನ ಆರೋಗ್ಯ ಪದ್ಧತಿಯಾದ ಯೋಗವನ್ನು ಮೈಗೂಡಿಸಿಕೊಳ್ಳುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.

ದೇಹದ ಒಳಗೆ ಮತ್ತು ಹೊರಗೆ ಸುಸ್ಥಿತಿ ಕಾಪಾಡಿಕೊಳ್ಳಲು ಯೋಗವೊಂದೇ ಮಾರ್ಗ. ಯೋಗದಿಂದ ನೈಪುಣ್ಯತೆ ಬರುತ್ತದೆ. ಪ್ರಚೋದನಾತ್ಮಕ ಅಂಶಗಳು ಕಡಿಮೆಯಾಗಲಿವೆ ಎಂದು ಅವರು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಸುನೀಲ್‌ ಸುಬ್ರಮಣಿ ಮಾತನಾಡಿ, ಇಂದಿನ ಜಂಜಾಟದ ಬದುಕಿನಲ್ಲಿ ಶಾಂತಿ, ನೆಮ್ಮದಿ, ಸಹನೆಗೆ ಯೋಗವನ್ನು ನಿತ್ಯ ರೂಢಿಸಿಕೊಳ್ಳಬೇಕು. ಆರೋಗ್ಯವೇ ಭಾಗ್ಯ ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, ಶಾರೀರಿಕ ಮತ್ತು ಮಾನಸಿಕವಾಗಿ ಸದೃಢವಾಗಿರಲು ಯೋಗ ಸಹಕಾರಿಯಾಗಿದೆ. ಇದರಿಂದ ಆತ್ಮ ಸದೃಢ ಹೆಚ್ಚಲಿದೆ. ಜತೆಗೆ ತಾಳ್ಮೆ ಬೆಳೆಸಿಕೊಳ್ಳಲು ಯೋಗ ಅನುಕೂಲ. ಆದ್ದರಿಂದ ಪ್ರತಿಯೊಬ್ಬರೂ ಯೋಗದಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಮಾತನಾಡಿ, ನಿತ್ಯ ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಯೋಗ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪೊಲೀಸ್‌ ವರಿಷ್ಠ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್‌ ಮಾತನಾಡಿ, ಮಾನಸಿಕ, ದೈಹಿಕ, ಶಾಂತಿ ಸಂಯಮಗಳನ್ನು ಕಾಯ್ದುಕೊಳ್ಳಲು ಯೋಗ ಮಾಡುವುದು ಅಗತ್ಯ ಎಂದರು.

ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಬಿ.ಎಚ್‌.ರಾಮಚಂದ್ರ ಮಾತನಾಡಿ, ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಯೋಗ ತರಬೇತಿ ನೀಡುವಂತಾಗಬೇಕು ಎಂದು ಸಲಹೆ ಮಾಡಿದರು.

ಮೂಳೆ ಮತ್ತು ಮಾಂಸಖಂಡ ಬಲಪಡಿಸಲು ಯೋಗ ಅಗತ್ಯ. ಜೀರ್ಣವಾಗುವ ಆಹಾರವನ್ನು ಸೇವಿಸಬೇಕು. ಮಿತವಾಗಿ ಆಹಾರ ಸೇವನೆ ಮಾಡಬೇಕು. ಇದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಯೋಗ ತರಬೇತಿ ನೀಡಿದ ಉಜಿರೆಯ ಕಾವ್ಯಾ ಹೆಗ್ಡೆ ಮಾತನಾಡಿ, ಪ್ರಾಣಯಾಮ, ಯೋಗ ಮಾಡುವುದರಿಂದ ಮಾನಸಿಕ ಮತ್ತು ಭೌದ್ಧಿಕ ಹಿಡಿತ ಸಾಧಿಸಲು ಸಹಕಾರಿಯಾಗಿದೆ ಎಂದು ಅವರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ