ಆ್ಯಪ್ನಗರ

ಪಕ್ಷ ದ್ರೋಹಿಗಳ ವಿರುದ್ಧ ದೂರು ನೀಡಲು ಹೆದರದಿರಿ

ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಕ್ಕೆ ದ್ರೋಹ ಎಸಗಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್‌ನ ಹೈಕಮಾಂಡ್‌ಗೆ ದೂರು ನೀಡುವುದಕ್ಕೆ ಯಾವುದೇ ಕಾರಣಕ್ಕೂ ಎದೆಗುಂದುವುದು ಬೇಡ ಎಂದು ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಅವರನ್ನು ಬೆಂಬಲಿಗರು, ಮುಖಂಡರು, ಕಾರ್ಯಕರ್ತರು ಆಗ್ರಹಿಸಿದರು.

Vijaya Karnataka 30 Jun 2019, 3:14 pm
ಕೋಲಾರ: ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಕ್ಕೆ ದ್ರೋಹ ಎಸಗಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್‌ನ ಹೈಕಮಾಂಡ್‌ಗೆ ದೂರು ನೀಡುವುದಕ್ಕೆ ಯಾವುದೇ ಕಾರಣಕ್ಕೂ ಎದೆಗುಂದುವುದು ಬೇಡ ಎಂದು ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಅವರನ್ನು ಬೆಂಬಲಿಗರು, ಮುಖಂಡರು, ಕಾರ್ಯಕರ್ತರು ಆಗ್ರಹಿಸಿದರು.
Vijaya Karnataka Web dont be afraid to complain against party traitors
ಪಕ್ಷ ದ್ರೋಹಿಗಳ ವಿರುದ್ಧ ದೂರು ನೀಡಲು ಹೆದರದಿರಿ


ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ನಿವಾಸದಲ್ಲಿ ಶನಿವಾರ ಬೆಂಬಲಿಗರು, ಮುಖಂಡರು, ಕಾರ್ಯಕರ್ತರ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಮುಖಂಡರು, ಚುನಾವಣೆಯಲ್ಲಿ ಯಾರಾರ‍ಯರು ಏನೇನು ಮಾಡಿದ್ದಾರೆ ಎನ್ನುವ ಎಲ್ಲ ವಿಚಾರಗಳು ಈಗ ಗೊತ್ತಾಗಿದೆ. ನಿಮ್ಮ ಬಳಿಯಿದ್ದು, ನಿಮ್ಮಿಂದ ಅಧಿಕಾರಗಳನ್ನು ಪಡೆದುಕೊಂಡವರೇ ಬೆನ್ನಿಗೆ ಚೂರಿ ಹಾಕಿದ್ದಾರೆ ಅದನ್ನು ಮರೆಯುವಂತಿಲ್ಲ.

ನಿಮಗೆ ಟಿಕೆಟ್‌ ತಪ್ಪಿಸಲು ದೆಹಲಿಗೆ ನಿಯೋಗ ತೆರಳಿತ್ತು. ಪಕ್ಷ ದಿಂದ ಅಭ್ಯರ್ಥಿ ಘೋಷಣೆಯಾದ ಬಳಿಕವಾದರೂ ಅವರು ಕೆಲಸ ಮಾಡುತ್ತಾರ ಎಂದು ನೋಡಿದೆವು, ಆದರೆ ಅವರು ಪಕ್ಷ ದ್ರೋಹಿಗಳಾಗುತ್ತಾರೆ ಎಂದು ಊಹಿಸಿರಲಿಲ್ಲ ಎಂದು ಕಿಡಿಕಾರಿದರು.

ಬಿಜೆಪಿ ಪರ ದುಡಿದವರನ್ನು ಹೊರಹಾಕಿಸಿ:
ಕೆಲ ಶಾಸಕರು ಬಿಜೆಪಿ ಪರ ಕೆಲಸ ಮಾಡಿದ್ದಾರೆ. ಅಂತಹವರನ್ನು ಹೊರಹಾಕಿ ಎಂದು ಇದೇ ವೇಳೆ ಒಕ್ಕೊರಲಿನಿಂದ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಕೆಪಿಸಿಸಿ ಹಿರಿಯ ಉಪಾಧ್ಯಕ್ಷ ಜನ್ನಘಟ್ಟ ವೆಂಕಟಮುನಿಯಪ್ಪ, ಲೋಕಸಭೆ ಚುನಾವಣೆಯಲ್ಲಿ 1991ರಿಂದ 2014ರ ವರೆಗೆ ಸತತವಾಗಿ ಕಾಂಗ್ರೆಸ್‌ ಗೆದ್ದುಕೊಂಡು ಬಂದ ಕ್ಷೇತ್ರ ಕೋಲಾರ. ಐದು ಕಾಂಗ್ರೆಸ್‌, ಕಾಂಗ್ರೆಸ್‌ ಬೆಂಬಲದಿಂದ ಗೆದ್ದ ಒಬ್ಬ ಪಕ್ಷೇತರರು ಇದ್ದರೂ ಕೆಲ ಶಾಸಕರು ಬಿಜೆಪಿ ಪರ ಕೆಲಸ ಮಾಡಿದರು.

ಈ ಮಹಾನುಭಾವರಿಗೆ ಮುಂದಿದೆ ಮಾರಿ ಹಬ್ಬ. ಈಗಲೇ ಕ್ರಮ ಕೈಗೊಂಡರೆ ಶಾಸಕರು ಕೈ ಬಿಡಬಹುದೆಂಬ ಭಯ ವರಿಷ್ಠರದ್ದು ಎಂದರು.

ಸಹಾಯ ಪಡೆದವರೇ ಮೋಸ ಮಾಡಿದರು: ಮುಖಂಡ ಊರುಬಾಗಿಲು ಶ್ರೀನಿವಾಸ್‌ ಮಾತನಾಡಿ, ಚುನಾವಣೆಯಲ್ಲಿ ಕೆ.ಎಚ್‌.ಮುನಿಯಪ್ಪ 8ನೇ ಬಾರಿ ಗೆದ್ದಿದ್ದರೆ ಜಿಲ್ಲೆಗೆ ಸಿಗುತ್ತಿದ್ದ ಗೌರವವೇ ಬೇರೆ. ಆದರೆ ಪಕ್ಷ ದ ಸವಲತ್ತು ಉಂಡವರು, ಮುನಿಯಪ್ಪ ಅವರಿಂದ ಸಹಾಯ ಪಡೆದವರೇ ಮೋಸ ಮಾಡಿದರು.

ಜೆಡಿಎಸ್‌ನವರು ಬೆಂಬಲಿಸಲಿಲ್ಲ. ಕೆಸಿ ವ್ಯಾಲಿ ವಿಚಾರದಲ್ಲಿ ವಿಷ ಹಿಂಡಿ ಕೆಟ್ಟ ವಾತಾವರಣ ನಿರ್ಮಿಸಿದರು. ಪಕ್ಷ ದ್ರೋಹಿಗಳಿಗೆ ಶಿಕ್ಷೆ ಆಗದಿದ್ದರೆ ನಿಷ್ಠಾವಂತ ಕಾರ್ಯಕರ್ತರಿಗೆ ನೋವಾಗುತ್ತದೆ ಎಂದು ಕ್ರಮಕ್ಕೆ ಆಗ್ರಹಿಸಿದರು.

ಸೋನಿಯಾ ಬಳಿ ನಿಯೋಗ: ಅಲ್ಪಸಂಖ್ಯಾತ ಮುುಖಂಡ ಇಕ್ಬಾಲ್‌ ಅಹಮದ್‌ ಮಾತನಾಡಿ, ಕೆಎಚ್‌.ಮುನಿಯಪ್ಪ ಸೋತಿರಬಹುದು, ಎಐಸಿಸಿ ಕಾರ್ಯಕಾರಿಣಿ ಸದಸ್ಯರಾಗಿ ಪಕ್ಷ ದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. 3 ಲಕ್ಷ ಕ್ಕೂ ಅಧಿಕ ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತರು ನಿಮ್ಮ ಜತೆಗಿದ್ದಾರೆ. ದ್ರೋಹ ಮಾಡಿದವರ ವಿರುದ್ಧ ಸೋನಿಯಾ ಬಳಿ ನಿಯೋಗ ಬರುತ್ತೇವೆ, ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

ಬಂಗಾರಪೇಟೆ ಮುಖಂಡರೊಬ್ಬರು ಮಾತನಾಡುತ್ತಾ, ಕೆಎಚ್‌ ಮುನಿಯಪ್ಪ ನೋಟು, ಬಿಜೆಪಿಗೆ ಓಟು ಎಂದು ಶಾಸಕ ಎಸ್‌.ಎನ್‌. ನಾರಾಯಣಸ್ವಾಮಿ ನೇರವಾಗಿ ಬಿಜೆಪಿ ಬೆಂಬಲಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಟಿಕೆಟ್‌ ನೀಡಬೇಡಿ, ಲೋಕಸಭೆ ಚುನಾವಣೆಯಲ್ಲಿ ತೊಂದರೆ ಆಗುತ್ತದೆ ಎಂದು ಮುನಿಯಪ್ಪ ಅವರನ್ನು ಎಚ್ಚರಿಸಿದ್ದರೂ ಕೇಳಲಿಲ್ಲ. ಮುಂದಿನ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಟಿಕೆಟ್‌ ನೀಡಬಾರದು ಎಂದು ಆಗ್ರಹಿಸಿದರು.

ಸಭೆಯಲ್ಲಿ ಜಮೀರ್‌ಪಾಷ, ರಾಮಲಿಂಗಾರೆಡ್ಡಿ, ಜಯದೇವ್‌, ಕುಮಾರ್‌, ಪ್ರಸಾದ್‌ಬಾಬು ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ