* ವಿಧಾನಸಭೆ ಚುನಾವಣೆ ಪರಿಣಾಮ
* ಶೇ. 80ರಷ್ಟು ಕೊರತೆ, ಮೊದಲೇ ಬುಕ್ಕಿಂಗ್ ಮಾಡುವ ರಾಜಕೀಯ ಮುಖಂಡರು
* ಕೃಷಿ ಚಟುವಟಿಕೆಗೆ ಕಾರ್ಮಿಕರು ಸಿಗದೆ ಪರದಾಟ
- ಜಿ.ಕೆ. ಮಂಜುನಾಥ್ ಕೋಲಾರ
ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ರಾಜಕೀಯ ಕಣ ರಂಗೇರಿದೆ. ಇದರ ಪರಿಣಾಮ ಕೂಲಿಕಾರ್ಮಿಕರಿಗೆ ಬರ ಎದುರಿಸುವಂತಾಗಿದೆ.
ಬೆಳಗ್ಗೆಯಿಂದ ಸಂಜೆವರೆಗೆ ದುಡಿದು 200,350 ರೂ.ಕೂಲಿ ಪಡೆಯುವ ಬದಲು, ರಾಜಕಾರಣಿಗಳು ಕರೆದ ಸ್ಥಳಕ್ಕೆ ಹೋಗಿ,ಅವರು ನೀಡುವ 500 ರೂ. ಪಡೆಯುವತ್ತ ಮನಸ್ಸು ವಾಲುತ್ತಿರುವುದೇ, ಕೂಲಿ ಕಾರ್ಮಿಕರಿಗೆ ಡಿಮ್ಯಾಂಡ್ ಹೆಚ್ಚಾಗಲು ಕಾರಣವಾಗಿದೆ.
ಚುನಾವಣೆಗೆ ಇನ್ನು ಸುಮಾರು ಮೂರು ತಿಂಗಳು ಬಾಕಿ ಇರುವಾಗಲೇ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಕಣಕ್ಕಿಳಿಯಲು ಆಕಾಂಕ್ಷಿಗಳ ಲಾಬಿ ಒಂದೆಡೆಯಾದರೆ, ಮತದಾರರನ್ನು ಓಲೈಸಲು, ಸೆಳೆಯುವ ದೃಷ್ಟಿಯಿಂದ ನಾನಾ ಕಸರತ್ತು ನಡೆಯುತ್ತಿದೆ. ಪ್ರೇಕ್ಷಣೀಯ ಸ್ಥಳ,ಯಾತ್ರಾ ಸ್ಥಳ ಮತ್ತಿತರೆಡೆ ಉಚಿತವಾಗಿ ಪ್ರವಾಸಕ್ಕೆ ಕಳುಹಿಸುವುದು ಸಾಮಾನ್ಯವಾಗಿದೆ. ಸಮಸ್ಯೆ ಎಂದಾಕ್ಷಣ ಕೂಡಲೆ ಸ್ಪಂದಿಸುವ ವಾತಾವರಣ ನಿರ್ಮಾಣವಾಗಿದೆ. ಗ್ರಾಮದಲ್ಲಿ ಜಾತ್ರೆ,ಊರ ಹಬ್ಬವೆಂದರೆ,ಅದಕ್ಕೆ ಅಗತ್ಯವಿಧಿರುವ ಸಾಮಗ್ರಿಯೂ ಮನೆಗೆ ಸೇರಲಿದೆ. ಇಷ್ಟೆಲ್ಲಾ ಸೌಲಭ್ಯಗಳು ನಿರಾಯಾಸವಾಗಿ ದೊರಕುತ್ತಿರುವಾಗ, ಕಷ್ಟಪಡುವುದೇಕೆಂಬ ಭಾವನೆ ಹಲವು ಮಂದಿಯಲ್ಲೀಗ ಬೇರುಬಿಟ್ಟಿದೆ.
ಮೊದಲೆ ನಡೆಯುತ್ತೆ ಬುಕ್ಕಿಂಗ್: ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಕೈಗೊಳ್ಳುತ್ತಿರುವ ಸಮಾವೇಶಗಳಲ್ಲಿ ರಾಜಕೀಯ ಪಕ್ಷಗಳು ತನ್ನ ಪ್ರಾಬಲ್ಯ ಪ್ರದರ್ಶನಕ್ಕೆ ಮಹಿಳಾ ಸಂಘಗಳು, ಕೂಲಿ ಕಾರ್ಮಿಕರು ಮತ್ತಿತರರು ಆಧಾರವಾಗಿದೆ. ಪಕ್ಷದ ಪರ ಜನರಿದ್ದಾರೆಂಬುದನ್ನು ತೋರ್ಪಡಿಸುವ ನಿಟ್ಟಿನಲ್ಲಿ ಇವರನ್ನು ಬಳಕೆ ಮಾಡಿಕೊಳ್ಳಧಿಲಾಧಿಗುಧಿತ್ತಿದೆ.
ಸಮಾವೇಶಕ್ಕೂ ಮೊದಲೆ ಮಹಿಳಾ ಮತ್ತಿತರ ಸಂಘಗಳ ಪ್ರಮುಖರು,ಕೂಲಿ ಕಾರ್ಮಿಕರನ್ನು ಕರೆತರುತ್ತೇವೆಂದು ಹೇಳುವವರನ್ನು ಹಿಡಿದಿಟ್ಟುಕೊಳ್ಳುವ ರಾಜಕಾರಣಿಗಳು,ಒಬ್ಬರಿಗೆ 300ರಿಂದ 500ರೂ.ಊಟ,ಉಪಾಹಾರದ ಖರ್ಚುವೆಚ್ಚ, ವಾಹನದ ವ್ಯವಸ್ಥೆಗೆ ಅಗತ್ಯ ಆರ್ಥಿಕ ನೆರವು ನೀಡಿ, ಜವಾಬ್ದಾರಿ ನೀಡಲಾಗುತ್ತಿದೆ. ಈ ಬುಕ್ಕಿಂಗ್ ವ್ಯವಸ್ಥೆ ಈಗಾಗಲೆ ಪ್ರಾರಂಭವಾಗಿದೆ.
ಶೇ.80ರಷ್ಟು ಕೊರತೆ: ಸುಮಾರು ಎರಡು ತಿಂಗಳಿಂದ ಕೂಲಿ ಕಾರ್ಮಿಕರ ಕೊರತೆ ಹೆಚ್ಚಾಗಿದೆ.
ರಾಗಿ ಒಕ್ಕಣೆ ಮತ್ತಿತರ ಕೃಷಿ ಚಟುವಟಿಕೆ ಬಹುತೇಕ ಅಂತ್ಯಗೊಂಡಿದ್ದರೂ, ತರಕಾರಿ ಮತ್ತಿತರ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಈ ಭಾಗದಲ್ಲಿ ವರ್ಷವೆಲ್ಲಾ ಕೃಷಿ ಚಟುವಟಿಕೆ ನಡೆಯುತ್ತಲೆ ಇರುತ್ತದೆ. ಕೃಷಿ ಕಾರ್ಮಿಕರ ಅಗತ್ಯವಿರುತ್ತದೆ. ಮೂರು ದಿನ ಮುನ್ನವೆ ಕೂಲಿಯವರಿಗೆ ಹೇಳಿದರೂ, ಅವರು ಹಾಜರಾಗುವವರೆಗೂ,ಗ್ಯಾರೆಂಟಿ ಇರುವುದಿಲ್ಲ.
ಎರಡು ಹೊತ್ತು ಊಟ ಹಾಕಿ, 200ರಿಂದ 350 ರೂ. ಕೂಲಿ ಪಾವತಿಸುತ್ತೀರಿ. ಸಂಜೆಯವರೆಗೂ ದುಡಿಯಬೇಕು. ಸಮಾವೇಶಕ್ಕೆ ಹೋದರೆ,ಊಟ, ಉಪಚಾರದ ಜತೆಗೆ, ಹಣ ಸಿಧಿಗುಧಿತ್ತದೆ. ಉಚಿತವಾಗಿ ಸುತ್ತಾಡುತ್ತೇವೆ. ಸಂಜೆ ಖರ್ಚಿಗೂ ಹಣ ಸಿಗುತ್ತದೆ. ಹೀಗಿರುವಾಗ ದಿನವೆಲ್ಲಾ ಕಷ್ಟಪಡುವುದೇಕೆ ಎಂದು ಕೂಲಿ ಕಾರ್ಮಿಕರು ಹೇಳುವುದು ಸಾಮಾನ್ಯವಾಗಿದೆ. ಕೃಷಿ ಕಾರ್ಮಿಕರ ಕೊರತೆಯಿಂದ ರೈತರು ಮತ್ತಿತರೀಗ ಪರದಾಡುವ ದುಸ್ಥಿತಿ ಎದುರಾಗಿದೆ.
ಚುನಾವಣೆ ಘೋಷಣೆಯಾಗಿ, ರಾಜಕೀಯ ಚಟುವಟಿಕೆ ಮತ್ತಷ್ಟು ಬಿರುಸುಗೊಂಡರೆ,ಕೂಲಿ ಕಾರ್ಮಿಕರು ಸಿಗದ ಪರಿಸ್ಥಿತಿ ಎದುರಾಗಬಹುದೆಂಬ ಆತಂಕ ರೈತರು ಮತ್ತಿತರನ್ನು ಕಾಡತೊಡಗಿದೆ.
ಬಾಕ್ಸ್....
ತಿಳಿಯದವರಷ್ಟೆ ಕೂಲಿನಾಲಿ
ರಾಜಕೀಯ ಬಗ್ಗೆ ಹೆಚ್ಚು ತಿಳಿವಳಿಕೆ ಇಲ್ಲದವರು, ನಿರಾಸಕ್ತಿ ಹೊಂದಿರುವವರು ಮತ್ತಿತರ ಕೂಲಿ ಕಾರ್ಮಿಕರಷ್ಟೆ ತಮ್ಮ ನಿತ್ಯ ಕಾಯಕದಲ್ಲಿ ನಿರತರಾಗಿದ್ದಾರೆ.
ರಾಜಕಾರಣಿಗಳ ಹಿಂದೆ ಹೋಗಲು ಇಷ್ಟವಿಲ್ಲದವರು, ದೂರದ ಊರಲ್ಲಿ ಹಮ್ಮಿಕೊಳ್ಳುವ ಸಮಾವೇಶಕ್ಕೆ ಹೋದಲ್ಲಿ ತೊಂದರೆ ಎದುರಾಗಬಹುದೆಂಬ ಭಯವುಳ್ಳವರಷ್ಟೆ ನಿತ್ಯ ಜೀವನಕ್ಕಾಗಿ ಅವಲಂಭಿಸಿರುವ ಕೂಲಿಗೆ ಹೋಗುತ್ತಿದ್ದಾರೆ.
---
ಕೂಲಿ ಕಾರ್ಮಿಕರ ಕೊರತೆಯಿಂದ ಸ್ವತಃ ನಾನು ತೊಂದರೆ ಅನುಭವಿಸುತ್ತಿದ್ದೇನೆ. ಕ್ಯಾಪ್ಸಿಕಂ, ಟೊಮೇಟೊ ಮತ್ತಿತರ ಬೆಳೆ ಬೆಳೆದಿದ್ದು, ಕಾರ್ಮಿಕರು ಸಿಗುತ್ತಿಲ್ಲ. ಮೂರು ದಿನ ಮುಂಚಿತವಾಗಿ ಅವರಿಗೆ ತಿಳಿಸಿದರೂ, ಬರುವುದಿಲ್ಲ. ರಾಜಕೀಯ ಪಕ್ಷದವರು ಕರೆದಿದ್ದಾರೆ ಎಂದು ಹೇಳುತ್ತಾರೆ. ಕೃಷಿ ಚಟುವಟಿಕೆಗೆ ಕಾರ್ಮಿಕರ ಅಭಾವ ತಲೆದೋರಿದೆ.
- ಕೆ.ನಾರಾಯಣಗೌಡ, ರಾಜ್ಯ ಉಪಾಧ್ಯಕ್ಷ, ರೈತಸಂಘ.