ಆ್ಯಪ್ನಗರ

ಹಣ ಕೊಟ್ಟರೂ ಹುಲ್ಲು ಸಿಗದಂತಹ ಸ್ಥಿತಿ

ಶ್ರೀನಿವಾಸಪುರ ತಾಲೂಕಿನಲ್ಲಿ ಸತತ ಮೂರು ವರ್ಷಗಳಿಂದ ಮಳೆ ಕೊರತೆಯಿಂದಾಗಿ ಬರದ ಬವಣೆ ಬಲಗೊಂಡಿದೆ, ಜಾನುವಾರುಗಳಿಗೆ ಮೇವಿನ ಸಮಸ್ಯೆ ಹೆಚ್ಚಾಗಿದೆ. ಹಣಕೊಟ್ಟರೂ ಹುಲ್ಲು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಹೈನುಗಾರಿಕೆಯನ್ನು ನಂಬಿರುವ ರೈತರು ಕಂಗಾಲಾಗಿದ್ದಾರೆ.

Vijaya Karnataka 21 Mar 2019, 5:00 am
ಶ್ರೀನಿವಾಸಪುರ ಗ್ರಾಮಾಂತರ : ಶ್ರೀನಿವಾಸಪುರ ತಾಲೂಕಿನಲ್ಲಿ ಸತತ ಮೂರು ವರ್ಷಗಳಿಂದ ಮಳೆ ಕೊರತೆಯಿಂದಾಗಿ ಬರದ ಬವಣೆ ಬಲಗೊಂಡಿದೆ, ಜಾನುವಾರುಗಳಿಗೆ ಮೇವಿನ ಸಮಸ್ಯೆ ಹೆಚ್ಚಾಗಿದೆ. ಹಣಕೊಟ್ಟರೂ ಹುಲ್ಲು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಹೈನುಗಾರಿಕೆಯನ್ನು ನಂಬಿರುವ ರೈತರು ಕಂಗಾಲಾಗಿದ್ದಾರೆ.
Vijaya Karnataka Web even though money is paid there is no grass
ಹಣ ಕೊಟ್ಟರೂ ಹುಲ್ಲು ಸಿಗದಂತಹ ಸ್ಥಿತಿ


ಕಳೆದ ಮುಂಗಾರಿನಲ್ಲಿ ಮಳೆ ಬಾರದ ಕಾರಣ ಬಿತ್ತಿದ ಕಾಳು ಮೊಳಕೆ ಒಡೆಯದೆ ಮಣ್ಣು ಪಾಲಾದ ಪರಿಣಾಮವಾಗಿ ಈ ಬಾರಿ ರೈತರಿಗೆ ಸುಗ್ಗಿಯ ಹಿಗ್ಗು ಮಾಯವಾಗಿದೆ. ಒಂದು ಹಿಡಿ ಕಾಳು ಮನೆ ಸೇರಿಲ್ಲ, ಜತೆಗೆ ಹಿಡಿ ಹುಲ್ಲು ಕೈಗೆ ಸಿಕ್ಕಿಲ್ಲ. ಅಳಿದುಳಿದ ಹುಲ್ಲು ಈಗಾಗಲೇ ಮುಗಿದು ಹೋಗಿದೆ. ದನ ಸಾಕುವ ಜವಾಬ್ದಾರಿ ಹೊತ್ತ ಗ್ರಾಮೀಣ ಮಹಿಳೆಯರು ಹಾಗೂ ಪುರುಷರು ಬಯಲಿನ ಮೇಲೆ ಒಣಗಿದ ಹುಲ್ಲನ್ನು ಹೊರೆದು ತಂದು ಜಾನುವಾರುಗಳ ಜೀವ ಉಳಿಸುವ ಕಾರ್ಯ ಮಾಡುತ್ತಿದ್ದಾರೆ.

ಕೈಕೊಟ್ಟ ಮಳೆ: ಸೀಮೆಹಸು ಪಾಲನೆ ಇಲ್ಲಿನ ರೈತರ ಮುಖ್ಯ ಕಸುಬು. ಮೊದಲ ಮಳೆಯಾದ ಸಂದರ್ಭದಲ್ಲಿ ಹೆಚ್ಚಿನ ರೈತರು ಜಾನುವಾರು ಮೇವಿಗಾಗಿ ಜೋಳ ಬಿತ್ತನೆ ಮಾಡಿದ್ದರು. ಮೊಳಕೆಯೂ ಬಂದಿತ್ತು. ಆದರೆ ಮತ್ತೆ ಮಳೆ ಕೈಕೊಟ್ಟಿದ್ದರಿಂದ ಜೋಳದ ಪೈರು ಒಣಗಿದೆ. ಇಷ್ಟು ದಿನ ಕೊಳವೆಬಾವಿಗಳ ಸೌಲಭ್ಯವಿರುವ ರೈತರು ಅವುಗಳ ಆಶ್ರಯದಲ್ಲಿ ಬೆಳೆದಿದ್ದ ಮೇವನ್ನು ಇತರೆ ರೈತರು ದುಬಾರಿ ಬೆಲೆಗೆ ಖರೀದಿಸಿ ಹಸುಗಳನ್ನು ಸಾಕಲಾಗುತ್ತಿದೆ. ಈಗ ಅದರ ಲಭ್ಯತೆಯೂ ಕಡಿಮೆಯಾಗಿದೆ.

ಒಣಗಿದ ಹುಲ್ಲು: ಮಾವಿನ ತೋಟಗಳಲ್ಲಿ ಬೆಳೆದಿದ್ದ ಹುಲ್ಲು ಒಣಗಿ ಹೋಗಿ ಕಾಡು ಮತ್ತು ಬೆಟ್ಟಗಳಲ್ಲಿ ದೊರೆಯುವ ಹುಲ್ಲಿನ ಪರಿಸ್ಥಿತಿಯೂ ಇದೇ ಆಗಿದೆ. ಹೀಗಾಗಿ ಅನ್ಯ ಮಾರ್ಗವಿಲ್ಲದೆ ಒಣ ಹುಲ್ಲು ಸಂಗ್ರಹಿಸಿ ತರುವುದರ ಜತೆಗೆ ಚಿಗುರು ಹೊಡೆಯುತ್ತಿರುವ ಬೇವು, ಹೊಂಗೆ, ಆರಳಿ, ಆಲದ ಮರದ ಸೊಪ್ಪುಗಳನ್ನು ತಂದು ದನಗಳಿಗೆ ಹಾಕಲಾಗುತ್ತಿದೆ.

ದೂರ ಪ್ರದೇಶಗಳಿಗೆ ಸೈಕಲ್‌ ಮತ್ತು ಬೈಕ್‌ಗಳಲ್ಲಿ ತೆರಳಿ ಮೇವು ತರುವ ರೈತರಿಗೂ ಇಲ್ಲಿ ಕೊರತೆ ಇಲ್ಲ. ಇದು ಸಾಧ್ಯವಾಗದೆ ದುಬಾರಿ ಬೆಲೆಯ ರಾಸುಗಳನ್ನು ಮಾರಲು ಕೆಲವು ರೈತರು ಮುಂದಾಗಿದ್ದಾರೆ.

ಕೆರೆ-ಕುಂಟೆಗಳು ನೀರಿಲ್ಲದೆ ಖಾಲಿಯಾಗಿರುವುದರಿಂದ ಜನ ಮತ್ತು ಜಾನುವಾರುಗಳಿಗೆ ನೀರಿನ ಸಮಸ್ಯೆ ತಲೆದೋರಿದೆ. ದನಗಾಹಿಗಳು ನೀರಿಗಾಗಿ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟಾದರೂ ತಾಲೂಕು ಆಡಳಿತ ಮಂದಗತಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿದೆ.


ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿಲ್ಲ. ಕೊಳವೆಬಾವಿಗಳಲ್ಲಿ ನೀರಿನ ಲಭ್ಯತೆ ಪ್ರಮಾಣ ಕುಸಿದಿದೆ. ತಾಲೂಕಿನಲ್ಲಿ 65 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ನಾಗರಿಕರಿಗೆ ತೊಂದರೆಯಾಗದಂತೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಅಗತ್ಯ ಇರುವ ಕಡೆ ಕೊಳವೆಬಾವಿ ನಿರ್ಮಿಸಿ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ.

-ಅಪ್ಪಿರೆಡ್ಡಿ, ನೀರು ಮತ್ತು ನೈರ್ಮಲ್ಯ ಇಲಾಖೆ

ತಾಲೂಕಿನಲ್ಲಿ 10 ವಾರಗಳಿಗೆ ಸಾಕಾಗುವಷ್ಟು ಜಾನುವಾರು ಮೇವು ಲಭ್ಯವಿದೆ. ಪಶುಪಾಲನೆ ಇಲಾಖೆಯಿಂದ ರೈತರಿಗೆ ಉಚಿತವಾಗಿ ಮೇವಿನ ಬೀಜ ವಿತರಿಸಲಾಗುತ್ತಿದೆ. ಜಾನುವಾರುಗಳ ಮೇವು ಮತ್ತು ನೀರಿನ ಸಮಸ್ಯೆ ನಿವಾರಣೆಗೆ ನರೇಗಾ ಯೋಜನೆಯಡಿ ತೊಟ್ಟಿಗಳನ್ನು ನಿರ್ಮಿಸಿ ನೀರು ತುಂಬಿಸುವಂತೆ ಗ್ರಾಮ ಪಂಚಾಯಿತಿಗಳಿಗೆ ಸೂಚಿಸಲಾಗಿದೆ.

-ಬಿ.ಎಸ್‌.ರಾಜೀವ್‌, ತಹಸೀಲ್ದಾರ್‌

ತಾಲೂಕಿನಲ್ಲಿ 40 ಸಾವಿರ ಹಸು, ಎಮ್ಮೆ ಹಾಗೂ ಎತ್ತುಗಳಿವೆ. 1.23 ಲಕ್ಷ ಕುರಿ ಹಾಗೂ ಮೇಕೆಗಳಿಗೆ ಬರದಲ್ಲಿ ಹಸಿರು ಮೇವು ಬೆಳೆಯಲು ನೀರಿನ ಅನುಕೂಲ ಇರುವ ರೈತರಿಗೆ ಬಿತ್ತನೆ ಮಾಡಲು ಎಕರೆಯೊಂದಕ್ಕೆ 4 ಮಿನಿಕಿಟ್‌ ಮೇವಿನ ಬೀಜ ವಿತರಿಸಲಾಗಿದೆ. ಈ ಪ್ರಕ್ರಿಯೆ ಮುಂದುವರಿದಿದ್ದು ಮೇವು ಬೆಳೆದ ರೈತರು ತಮಗೆ ಅಗತ್ಯವಿದ್ದಷ್ಟು ಉಳಿಸಿಕೊಂಡು ಉಳಿದ ಮೇವನ್ನು ಮಾರಬಹುದಾಗಿದೆ.

-ಸತ್ಯನಾರಾಯಣ, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ

ಬರ ಬದುಕನ್ನು ಬರಡು ಮಾಡಿದೆ. ದನಗಳಿಗೆ ಮೇವು-ನೀರಿನ ಸಮಸ್ಯೆಯಾದರೆ ಜನರಿಗೆ ಬದುಕಿನ ಸಮಸ್ಯೆ ಕಾಡುತ್ತಿದೆ. ಬೇಗ ಮಳೆಯಾಗದಿದ್ದರೆ ವಲಸೆ ಹೋಗಬೇಕಾಗುತ್ತದೆ. ಸರಕಾರ ಜಾನುವಾರಗಳ ಜೀವ ಉಳಿಸಲು ಗೋಶಾಲೆಗಳನ್ನು ಪ್ರಾರಂಭಿಸಬೇಕು.

-ಜಗದೀಶ್‌, ನೇಕಾರ, ಲಕ್ಷ್ಮೀಪುರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ