ಆ್ಯಪ್ನಗರ

ಬೆಳೆ ವಿಮೆ ಮಾಡಿಸಲು ರೈತರ ಮೀನಮೇಷ

ಬೆಳೆ ಕೈಕೊಟ್ಟರೆ ಬೆಳೆ ವಿಮೆಯಾದರೂ ಕೈಹಿಡಿಯುತ್ತದೆ ಎಂದು ನಂಬಿದವರಿಗೆ ಇನ್ನು ವಿಮಾ ಹಣವೇ ದೊರಕಿಲ್ಲ. ಕಳೆದ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿದವರು, ಈಗ ಪ್ರಸಕ್ತ ಮುಂಗಾರಿನಲ್ಲಿ ಬೆಳೆ ವಿಮೆ ಮಾಡಿಸಲು ಮೀನಮೇಷ ಎಣಿಸುತ್ತಿದ್ದಾರೆ.

Vijaya Karnataka 21 Jun 2019, 3:11 pm
ಜಿ.ಕೆ.ಮಂಜುನಾಥ್‌ ಕೋಲಾರ
Vijaya Karnataka Web farmers are not interested i crop insurance
ಬೆಳೆ ವಿಮೆ ಮಾಡಿಸಲು ರೈತರ ಮೀನಮೇಷ


ಬೆಳೆ ಕೈಕೊಟ್ಟರೆ ಬೆಳೆ ವಿಮೆಯಾದರೂ ಕೈಹಿಡಿಯುತ್ತದೆ ಎಂದು ನಂಬಿದವರಿಗೆ ಇನ್ನು ವಿಮಾ ಹಣವೇ ದೊರಕಿಲ್ಲ. ಕಳೆದ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿದವರು, ಈಗ ಪ್ರಸಕ್ತ ಮುಂಗಾರಿನಲ್ಲಿ ಬೆಳೆ ವಿಮೆ ಮಾಡಿಸಲು ಮೀನಮೇಷ ಎಣಿಸುತ್ತಿದ್ದಾರೆ.

ಪ್ರಧಾನಮಂತ್ರಿ ಫಸಲ್‌ ಭೀಮಾ ಯೋಜನೆಯಡಿ ರಾಗಿ ಮತ್ತಿತರ ಬೆಳೆಗೆ ವಿಮೆ ಮಾಡಿಸಿದ್ದ ಸಾವಿರಾರು ಮಂದಿ ರೈತರು, ಬೆಳೆ ಕೈಕೊಟ್ಟಿದ್ದರಿಂದ ವಿಮಾ ಮೊತ್ತವಾದರೂ ಶೀಘ್ರವೇ ಕೈ ಸೇರಲಿದೆ ಎಂಬ ಆಶಾಭಾವನೆಯೊಂದಿಗೆ ಕಳೆದ ವರ್ಷದಿಂದ ವಿಮಾ ಮೊತ್ತಕ್ಕಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ.

2018-19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 1,02,000 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಈ ಪೈಕಿ 71063 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, 52320.06 (ಕೋಲಾರ ತಾಲೂಕಿನಲ್ಲಿ 12,115, ಮಾಲೂರು ತಾಲೂಕಿನಲ್ಲಿ 11,078, ಬಂಗಾರಪೇಟೆ ತಾಲೂಕಿನಲ್ಲಿ 11475, ಮುಳಬಾಗಲು ತಾಲೂಕಿನಲ್ಲಿ 5,824, ಶ್ರೀನಿವಾಸಪುರ ತಾಲೂಕಿನಲ್ಲಿ 11,828) ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಷ್ಟವಾಗಿತ್ತು. ಇದರಲ್ಲಿ ರಾಗಿ 32,024.2 ಹೆಕ್ಟೇರ್‌ ಸೇರಿದಂತೆ ಒಟ್ಟು 39,438.06 ಹೆಕ್ಟೇರ್‌ಪ್ರದೇಶದ ಬೆಳೆ ಶೇ. 33ರಷ್ಟು ನಷ್ಟವಾಗಿತ್ತು. ಬೆಳೆ ನಷ್ಟ ಪರಿಹಾರ ಒಂದೆಡೆಯಾದರೆ, ಬೆಳೆ ವಿಮೆ ಮಾಡಿಸಿದರೆ, ಬೆಳೆ ಕೈಕೊಟ್ಟಾಗ ನೆರವಾಗುತ್ತದೆಂಬ ಕಾರಣಕ್ಕೆ ಸಾವಿರಾರು ಮಂದಿ ರೈತರು ಪ್ರಧಾನ ಮಂತ್ರಿ ಫಸಲ್‌ ಭೀಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ್ದರು.

ಒಟ್ಟು 11,360 ಮಂದಿ ಬೆಳೆ ವಿಮೆ: ವಿವಿಧ ಬೆಳೆಗೆ ಒಟ್ಟು 11,360 ಮಂದಿ ಪ್ರಧಾನಮಂತ್ರಿ ಫಸಲ್‌ ಭೀಮಾ ಯೋಜನೆಯಡಿ ಬೆಳೆ ವಿಮೆ ಮಾಡಿದ್ದರು.

ನೆಲಗಡಲೆ ಬೆಳೆಗೆ 1,633, ಹುರಳಿ ಬೆಳೆಗೆ 12, ಭತ್ತ ಬೆಳೆಗೆ 13, ತೊಗರಿ ಬೆಳೆಗೆ 85, ರಾಗಿ ಬೆಳೆಗೆ 9416 ಮಂದಿ, ಟೊಮ್ಯಾಟೊ ಬೆಳೆಗೆ 201 ಮಂದಿ ಕಳೆದ ಮುಂಗಾರು ಹಂಗಾಮಿನಲ್ಲಿ ವಿಮೆ ಮಾಡಿದ್ದರು. ಇವರಿಂದ ಒಟ್ಟು 92,14,000 (92.14ಲಕ್ಷ ರೂಪಾಯಿ) ವಿಮಾ ಮೊತ್ತ ಪಾವತಿಯಾಗಿದೆ. ಆದರೆ, ಈವರೆಗೂ ಬೆಳೆ ವಿಮೆ ಮೊತ್ತ ಖಾತೆಗೆ ಜಮಾ ಆಗದಿರುವುದು, ರೈತರು ನಿತ್ಯ ಎದುರು ನೋಡುವಂತಾಗಿದೆ.

ಪ್ರಸಕ್ತ ಸಾಲಿನ(2019-20) ಮುಂಗಾರು ಹಂಗಾಮಿ ಬೆಳೆ ವಿಮೆ ಮಾಡಿಸುವಂತೆ ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸಲಾರಂಭಿಸಿದ್ದಾರೆ. ರಾಗಿ, ತೊಗರಿ ಮತ್ತಿತಿರ ಕೃಷಿ ಬೆಳೆಗೆ ವಿಮೆ ಮಾಡಿಸಲು ಅರಿವು ಮೂಡಿಸಲಾಗುತ್ತಿದೆ. ತೋಟಗಾರಿಕೆ ಇಲಾಖೆ ಸಹ ಮುಂಗಾರು ಹಂಗಾಮಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ವಯ ಮಾವು, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್‌ ಭೀಮಾ ಯೋಜನೆಯನ್ವಯ ಟೊಮ್ಯಾಟೊ ಬೆಳೆಗಾರರು ವಿಮೆ ಮಾಡಿಸಿಕೊಳ್ಳಬಹುದೆಂದು ಪ್ರಚಾರ ಕೈಗೊಳ್ಳುತ್ತಿದೆ. ಆದರೆ, ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಮಾಡಿಸಿದ ವಿಮೆ ಮಾಡಿಸಿದ ಹಣವೆ ಈವರೆಗೂ ಬಂದಿಲ್ಲವೆಂಬುದು, ವಿಮೆ ಮಾಡಿಸಲು ರೈತರು ಮೀನಮೇಷ ಎಣಿಸಲು ಕಾರಣವಾಗಿದೆ. ಆದರೆ, ಅಧಿಕಾರಿಗಳು, ವಿಮೆ ಹಣ ರೈತರ ಖಾತೆಗೆ ಜಮಾ ಆಗುವುದರಲ್ಲಿ ಯಾವುದೆ ಅನುಮಾನವಿಲ್ಲ ಎಂದು ಮಾಹಿತಿ ಒದಗಿಸಿದ್ದಾರೆ.

2018-19ನೇ ಸಾಲಿನಲ್ಲಿ ಫಸಲ್‌ ಭೀಮಾ ಯೋಜನೆಯಡಿ ರಾಗಿ ಬೆಳೆಗೆ ವಿಮೆ ಮಾಡಿಸಿದ್ದೆ. 7.20ಎಕರೆ ಜಮೀನಿಗೆ 2367 ರೂಪಾಯಿ ವಿಮೆ ಮೊತ್ತ ಪಾವತಿಸಿದ್ದೆ. 1,18,370 ರೂಪಾಯಿ ವಿಮೆ ಹಣ ಬರಬೇಕಿತ್ತು. ಆದರೆ, ಈವರೆಗೂ ವಿಮೆ ಹಣ ಬಂದಿಲ್ಲ. ಈಗ ಮತ್ತೆ ವಿಮೆ ಮಾಡಿಸಿ ಎನ್ನುತ್ತಿದ್ದಾರೆ.

-ರಮೇಶ್‌, ರೈತ, ತೊಟ್ಲಿ

ಪ್ರಧಾನಮಂತ್ರಿ ಫಸಲ್‌ ಭೀಮಾ ಯೋಜನೆಯಡಿ 2018-19ನೇ ಸಾಲಿನಲ್ಲಿ ವಿಮೆ ಮಾಡಿಸಿದ ಕೋಲಾರ ಜಿಲ್ಲೆಯವರಿಗೆ ಮಾತ್ರವಲ್ಲ ರಾಜ್ಯದ ಯಾವುದೆ ಜಿಲ್ಲೆವಯವರಿಗೂ ವಿಮಾ ಮೊತ್ತ ಇನ್ನು ಬಂದಿಲ್ಲ. ಕೇಂದ್ರ ಸರಕಾರಕ್ಕೂ ಮಾಹಿತಿ ಹೋಗಿ, ಕೆಲ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕಾಗಲಿದೆ. ಹಾಗಾಗಿ ಸ್ಪಲ್ಪ ತಡವಾಗಿದೆ.

-ಡಾ.ಶಿವಕುಮಾರ್‌, ಜಂಟಿ ನಿರ್ದೇಶಕ, ಕೃಷಿ ಇಲಾಖೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ