ಆ್ಯಪ್ನಗರ

ಹಿರಿಯ ನೋಂದಣಾಧಿಕಾರಿ ಕಚೇರಿ ಎದುರು ರೈತಸಂಘ ಪ್ರತಿಭಟನೆ

ಖಾಸಗಿ ಕಟ್ಟಡದಲ್ಲಿರುವ ಹಿರಿಯ ನೋಂದಣಾಧಿಕಾರಿ ಕಚೇರಿ ಜಿಲ್ಲಾಡಳಿತ ಭವನಕ್ಕೆ ವರ್ಗಾವಣೆ ಮಾಡಿ ಇಲಾಖೆಯಲ್ಲಿ ಹೆಜ್ಜೆ ಹೆಜ್ಜೆಗೂ ಜನ ಸಾಮಾನ್ಯರ ರಕ್ತ ಹೀರುವ ದಲ್ಲಾಳಿಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ರೈತ ಸಂಘದಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

Vijaya Karnataka 13 Jul 2019, 5:00 am
ಕೋಲಾರ: ಖಾಸಗಿ ಕಟ್ಟಡದಲ್ಲಿರುವ ಹಿರಿಯ ನೋಂದಣಾಧಿಕಾರಿ ಕಚೇರಿ ಜಿಲ್ಲಾಡಳಿತ ಭವನಕ್ಕೆ ವರ್ಗಾವಣೆ ಮಾಡಿ ಇಲಾಖೆಯಲ್ಲಿ ಹೆಜ್ಜೆ ಹೆಜ್ಜೆಗೂ ಜನ ಸಾಮಾನ್ಯರ ರಕ್ತ ಹೀರುವ ದಲ್ಲಾಳಿಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ರೈತ ಸಂಘದಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
Vijaya Karnataka Web farmers protest in front of senior registrars office
ಹಿರಿಯ ನೋಂದಣಾಧಿಕಾರಿ ಕಚೇರಿ ಎದುರು ರೈತಸಂಘ ಪ್ರತಿಭಟನೆ


ಕಚೇರಿಯಲ್ಲಿನ ಅಧಿಕಾರಿಗಳ ಲಂಚತನ ಮಿತಿಮೀರಿದ್ದು, ಕೂಡಲೇ ಕಡಿವಾಣ ಜನಸಾಮಾನ್ಯರಿಗೆ ಉತ್ತಮ ಸೇವೆಗಳನ್ನು ನೀಡಬೇಕು ಎಂದು ಆಗ್ರಹಿಸಲಾಯಿತು. ಈ ವೇಳೆ ಪ್ರತಿಭಟನಾಕಾರರಿಗೆ ಮತ್ತು ಹಿರಿಯ ನೋಂದಣಾಧಿಕಾರಿಗೆ ಮಾತಿನ ಚಕಮುಕಿ ನಡೆಯಿತು.

ಹೋರಾಟದ ನೇತೃತ್ವವಹಿಸಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ, ಕೋಟ್ಯಂತರ ರೂ. ಖರ್ಚು ಮಾಡಿ ಸರಕಾರ ಜಿಲ್ಲಾಡಳಿತ ಭವನ ನಿರ್ಮಿಸಿ 2 ವರ್ಷ ಕಳೆದರೂ ಇನ್ನೂ ಕೆಲ ಇಲಾಖೆಗಳು ಖಾಸಗಿ ಕಟ್ಟಡಗಳಲ್ಲಿ ಕಚೇರಿ ನಡೆಸಿ ಲಕ್ಷಾಂತರ ರೂ.ಬಾಡಿಗೆ ನೀಡಿ ಸಾರ್ವಜನಿಕರ ಹಣ ಪೋಲು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನೋಂದಣಿ ಕಚೇರಿ ಖಾಸಗಿಯವರಿಗೆ ಸುಮಾರು 60 ರಿಂದ 70 ಸಾವಿರ ಬಾಡಿಗೆ ನೀಡುತ್ತಿದ್ದರೂ ಈ ಕಚೇರಿಯನ್ನು ಸರಕಾರಿ ಜಿಲ್ಲಾಡಳಿತ ಭವನಕ್ಕೆ ವರ್ಗಾವಣೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ.

ಹಿರಿಯ ಅಧಿಕಾರಿಗಳನ್ನು ಕೇಳಿದರೆ ಕಚೇರಿಯನ್ನು ವರ್ಗಾವಣೆ ಮಾಡಿದರೆ, ಜನ ಸಾಮಾನ್ಯರಿಗೆ ತೊಂದರೆಯಾಗುತ್ತದೆ. ವಯಸ್ಸಾದ ವ್ಯಕ್ತಿಗಳು ಜಿಲ್ಲಾಡಳಿತ ಭವನದ ಮೆಟ್ಟಲನ್ನು ಹತ್ತಲು ಆಗುವುದಿಲ್ಲವೆಂಬ ಬೇಜವಾಬ್ದಾರಿ ಮಾತುಗಳನ್ನು ಹೇಳುತ್ತಾರೆ.

ಇವರ ಮಾತು ಕೇಳಿದರೆ ಬರುವ ಆದಾಯಕ್ಕೆ ಕತ್ತರಿ ಬೀಳುತ್ತದೆಯೋ ಅಥವಾ ಜನ ಸಾಮಾನ್ಯರಿಗೆ ತೊಂದರೆಯಾಗುತ್ತದೆಯೋ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ ಎಂದ ಅವರು, ಕಮೀಷನ್‌ ದಂಧೆ ನಡೆಸಲು ಖಾಸಗಿ ಕಟ್ಟಡದ ಮಾಲೀಕರ ಜತೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷ ಮರಗಲ್‌ ಶ್ರೀನಿವಾಸ್‌ ಮಾತನಾಡಿ, ನೋಂದಣಿ ಇಲಾಖೆಯಲ್ಲಿ ಅವ್ಯವಹಾರ ನಡೆಯುತಿದೆ ಎಂದು ಹಿರಿಯ ಅಧಿಕಾರಿಗಳೇ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದು, ಕಚೇರಿ ಇಂದು ಅಧಿಕಾರಿಗಳಿಗೆ ಮತ್ತು ದಲ್ಲಾಳಿಗಳಿಗೆ ಚಿನ್ನದ ಮೊಟ್ಟೆ ಇಡುವ ಇಲಾಖೆಯಾಗಿದೆ ಎಂದು ದೂರಿದರು.

ಹಣ ನೀಡಿದರೆ, ದಾಖಲೆಗಳನ್ನು ಪರಿಶೀಲಿಸದೆ ಸರಕಾರಿ ಗೋಮಾಳ, ಗುಂಡು ತೋಪು ಕೆರೆಗಳನ್ನೇ ನೋಂದಣಿ ಮಾಡಿ ಜನಸಾಮಾನ್ಯರ ರಕ್ತ ಹೀರುತ್ತಿದ್ದು, ರಿಯಲ್‌ ಎಸ್ಟೇಟ್‌ ಉದ್ದಿಮೆಗಳಿಗೆ ಮತ್ತು ರಾಜಕಾರಣಿಗಳಿಗೆ ಇಲಾಖೆಯು ತವರು ಮನೆಯಾಗಿದೆ.

ಅಧಿಕಾರಿಗಳು ಮತ್ತು ದಲ್ಲಾಳಿಗಳಿಗೆ ಕಡಿವಾಣ ಹಾಕಬೇಕೆಂಬ ಇಚ್ಛಾಶಕ್ತಿ ಜಿಲ್ಲಾಧಿಕಾರಿಗೆ ಇದ್ದರೆ, ಕೂಡಲೇ ಖಾಲಿ ಇರುವ ಜಿಲ್ಲಾಡಳಿತ ಭವನಕ್ಕೆ ಇಲಾಖೆಯನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷ ಮರಗಲ್‌ ಶ್ರೀನಿವಾಸ್‌, ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಾಪುರ ಪುರುಶೋತ್ತಮ್‌, ಶ್ರೀನಿವಾಸಪುರ ತಾ.ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ರಂಜಿತ್‌, ಸಾಗರ್‌, ಸುಪ್ರಿಂ ಚಲ, ಮಂಗಸಂದ್ರ ನಾಗೇಶ್‌, ಮಂಗಸಂದ್ರ ತಿಮ್ಮಣ್ಣ, ಮಂಗಸಂದ್ರ ವೆಂಕಟೇಶಪ್ಪ, ಮುದುವಾಡಿ ಚಂದ್ರಪ್ಪ, ವೆಂಕಟೇಶಪ್ಪ, ಐತಂಡಹಳ್ಳಿ ಉದಯ್‌, ವಡ್ಡಹಳ್ಳಿ ಮಂಜುನಾಥ ಮುಂತಾದವರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ