ಆ್ಯಪ್ನಗರ

ಬೆಲೆ ಏರಿಕೆ ನಡುವೆಯೂ ಗೌರಿ-ಗಣೇಶ ಹಬ್ಬದ ಸಂಭ್ರಮ

ಬೆಲೆ ಏರಿಕೆ ನಡುವೆಯೂ ಗೌರಿ-ಗಣೇಶ ಹಬ್ಬದ ಸಡಗರಕ್ಕೆ ಅಗತ್ಯ ವಸ್ತುಗಳ ಖರೀದಿಯು ಮಂಗಳವಾರದಂದು ಕೋಲಾರ ನಗರದಲ್ಲಿ ಕಂಡುಬಂದಿತು.

Vijaya Karnataka Web 12 Sep 2018, 5:00 am
ಗೌರಿ-ಗಣೇಶ ಮೂರ್ತಿಗಳ ವ್ಯಾಪಾರ ಚುರುಕು| ಅಗತ್ಯ ವಸ್ತುಗಳ ಖರೀದಿಗೆ ಮುಂದಾದ ಗ್ರಾಹಕರು - ಕಿಕ್ಕರ್‌
Vijaya Karnataka Web gauri ganesh festival is a celebration despite price rise
ಬೆಲೆ ಏರಿಕೆ ನಡುವೆಯೂ ಗೌರಿ-ಗಣೇಶ ಹಬ್ಬದ ಸಂಭ್ರಮ


ಕೋಲಾರ :
ಬೆಲೆ ಏರಿಕೆ ನಡುವೆಯೂ ಗೌರಿ-ಗಣೇಶ ಹಬ್ಬದ ಸಡಗರಕ್ಕೆ ಅಗತ್ಯ ವಸ್ತುಗಳ ಖರೀದಿಯು ಮಂಗಳವಾರದಂದು ಕೋಲಾರ ನಗರದಲ್ಲಿ ಕಂಡುಬಂದಿತು.

ಗೌರಿ-ಗಣೇಶ ಹಬ್ಬಕ್ಕಾಗಿ ಮೂರ್ತಿಗಳ ಖರೀದಿಯು ನಗರದ ಹಳೆಯ ಬಸ್‌ ನಿಲ್ದಾಣ, ಒಕ್ಕಲಿಗರ ಹಾಸ್ಟೆಲ್‌ ಆವರಣದ ಬಳಿ ಮಳಿಗೆಗಳನ್ನು ಆರಂಭಿಸಲಾಗಿದ್ದು, 100ರೂಗಳಿಂದ 50 ಸಾವಿರ ರೂಗಳವರೆಗೆ ಗಣಪತಿ ಮೂರ್ತಿಗಳನ್ನು ಮಾರಾಟಕ್ಕೆ ಇರಿಸಲಾಗಿದೆ.

ಭರ್ಜರಿ ವ್ಯಾಪಾರ: ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಹೆಚ್ಚಾಗಿ ಪೇಪರ್‌ ಗಣೇಶ ಹಾಗೂ ಮಣ್ಣಿನ ಗಣಪನ ಮೂರ್ತಿಗಳು ಮಾರುಕಟ್ಟೆಯಲ್ಲಿ ಕಂಡುಬಂದವು. ಇನ್ನು ಗೌರಿ ಮೂರ್ತಿಗಳು 50 ರೂಗಳಿಂದ 100, 150, 200 ರೂಗಳಿಗೆ ಮಾರಾಟ ಮಾಡಲಾಗುತ್ತಿತ್ತು.

ಇಷ್ಟು ದಿನ ಮಂಕಾಗಿದ್ದ ಗಣೇಶ ಮೂರ್ತಿಗಳ ವ್ಯಾಪಾರವು ಮಂಗಳವಾರ ಚುರುಕುಪಡೆದುಕೊಂಡಿದ್ದು, ಇಂದು ಮತ್ತು ನಾಳೆ ಸಂಜೆಯವರೆಗೂ ಜೋರಾಗಿ ನಡೆಯಲಿದೆ.

ಹೂ-ಹಣ್ಣು ಬೆಲೆ ದುಪ್ಪಟ್ಟು:
ಜತೆಗೆ ಹೂವು-ಹಣ್ಣಿನ ದರ ದುಪ್ಪಟ್ಟಾಗಿರುವುದರಿಂದ ಸಾರ್ವಜನಿಕರು ಮಾರುಕಟ್ಟೆಗೆ ಹೋಗಿ ದರಗಳನ್ನು ಕೇಳಿ ಶಾಕ್‌ ಆಗುವ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಹಬ್ಬ ಮಾಡಲೇಬೇಕೆಂಬ ಆಶಯದಿಂದ ಚೌಕಾಸಿ ವ್ಯಾಪಾರ ಮಾಡಿ ಹೂ, ಹಣ್ಣು ಖರೀದಿಸುತ್ತಿದ್ದುದು ಕಂಡು ಬಂತು.

ಕಳೆದ ಎರಡು-ಮೂರು ದಿನಗಳಿಂದ ನಗರದ ದೊಡ್ಡಪೇಟೆ, ಬ್ರಾಹ್ಮಣರ ಬೀದಿ, ಹಳೆ ಬಸ್‌ ನಿಲ್ದಾಣ, ಸರಕಾರಿ ಬಸ್‌ ನಿಲ್ದಾಣ ವೃತ್ತ, ಕಾಳಿಕಾಂಬ ದೇವಾಲಯ ಬೀದಿ, ಅಮ್ಮವಾರಿಪೇಟೆ ಸೇರಿದಂತೆ ಇನ್ನಿತರ ಕಡೆ ನೂರಾರು ತಳ್ಳುವ ಕೈ ಗಾಡಿಗಳಲ್ಲಿ ವ್ಯಾಪಾರಿಗಳು ಹಣ್ಣು-ಹಂಪಲು, ಹೂವು, ಬಾಳೆದಿಂಡು ಮಾರಾಟ ಮಾಡುತ್ತಿರುವುದರಿಂದ ಪೈಪೋಟಿ ಜೋರಾಗಿಯೇ ಇತ್ತು.

ನಗರದ ಮಾರುಕಟ್ಟೆಯಲ್ಲಿ ಕಾಕಡ ಮಲ್ಲಿಗೆ ಕೆಜಿಗೆ 700-800ರೂ, ಕನಕಾಂಬರ 1600 ರೂ, ಬಟನ್ಸ್‌ ಗುಲಾಬಿ 180-200 ರೂ. ಮಲ್ಲಿಗೆ 500ರಿಂದ 700 ರೂ, ಚೆಂಡುಹೂವು 30-40ರೂ, ಮಾವಿನ ಸೊಪ್ಪು ಒಂದು ಕಟ್ಟಿಗೆ 10ರಿಂದ 15ರೂ ಹೀಗೆ ಇದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಹೂವುಗಳ ಬೆಲೆಯಲ್ಲೂ ಹೆಚ್ಚಳ ಕಂಡುಬಂದಿದೆ. ಇದರ ಜತೆಗೆ ಬಾಳೆದಿಂಡುಗಳು ಸಹ ಒಂದು ಜತೆಗೆ 40ರೂ ಮೇಲ್ಪಟ್ಟು ಮಾರಾಟ ಮಾಡಲಾಯಿತು.
ಇನ್ನು ಹಣ್ಣಿನ ಬೆಲೆ ಸಹ ಹೆಚ್ಚಳವಾಗಿದ್ದು, ಸೇಬು ಕೆಜಿಗೆ 120 ರೂ, ದಾಳಿಂಬೆ 100ರೂ, ಅನನಾಸು ಒಂದಕ್ಕೆ 40 ರೂ, ಮೂಸಂಬಿ 60 ರೂ, ಆರೆಂಜ್‌ 100 ರೂ. ಸಪೋಟ 60 ರೂ, ಪಪ್ಪಾಯ 20 ರೂ. ಪಚ್ಚೆಬಾಳೆ 30 ರೂ. ಏಲಕ್ಕಿ 80 ರೂಗೆ, ಚೇಪೆಕಾಯಿ ಕೆಜಿಗೆ 60 ರೂ.ಗೆ ಕಂಡು ಬಂದಿತು.
ಬೆಲೆ ಏರಿಕೆಯ ನಡುವೆಯೂ ಜನತೆ ತಮ್ಮ ಶಕ್ತ್ಯಾನುಸಾರ ಹೂವು ಹಣ್ಣು ಇನ್ನಿತರೆ ಪೂಜಾ ಸಾಮಗ್ರಿಗಳನ್ನು ಹಬ್ಬಕ್ಕೆ ಎರಡು ದಿನ ಇರುವಾಗಲೇ ಖರೀದಿಸುವುದರಲ್ಲಿ ತಲ್ಲೀನರಾಗಿದ್ದುದು ಕಂಡುಬಂದಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ