ಆ್ಯಪ್ನಗರ

ಹುರುಳಿಗೆ ಹೆಚ್ಚಿದ ಬೇಡಿಕೆ: ತಾಲೂಕಿನಾದ್ಯಂತ ಪಶು ಆಹಾರದ್ದೇ ಘಮಲು

ಹಸುವಿನ ಆಹಾರವೇಂದೇ ಪರಿಗಣಿಸಲ್ಪಟ್ಟಿದ್ದ ಹುರುಳಿಯಲ್ಲಿ ರೋಗ ನಿರೋಧಕ ಶಕ್ತಿ ಇದೆ ಎನ್ನುವ ಕಾರಣದಿಂದಾಗಿ ಈಗ ಮಾರುಕಟ್ಟೆಯಲ್ಲಿ ಹುರುಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಹೀಗಾಗಿ ತಾಲೂಕಿನಾದ್ಯಂತ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಹುರುಳಿ ಬೆಳೆ ಬೆಳೆದಿದ್ದು, ಫಸಲು ನಳನಳಿಸುತ್ತಿದೆ.

Vijaya Karnataka 20 Dec 2018, 5:00 am
ಬಾಲವೆಂಕಟೇಶ್‌ ಕೆ.ಎಂ. ಕೆಜಿಎಫ್‌ : ಹಸುವಿನ ಆಹಾರವೇಂದೇ ಪರಿಗಣಿಸಲ್ಪಟ್ಟಿದ್ದ ಹುರುಳಿಯಲ್ಲಿ ರೋಗ ನಿರೋಧಕ ಶಕ್ತಿ ಇದೆ ಎನ್ನುವ ಕಾರಣದಿಂದಾಗಿ ಈಗ ಮಾರುಕಟ್ಟೆಯಲ್ಲಿ ಹುರುಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಹೀಗಾಗಿ ತಾಲೂಕಿನಾದ್ಯಂತ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಹುರುಳಿ ಬೆಳೆ ಬೆಳೆದಿದ್ದು, ಫಸಲು ನಳನಳಿಸುತ್ತಿದೆ.
Vijaya Karnataka Web increased demand for cattle the cattle feed throughout the taluk is solid
ಹುರುಳಿಗೆ ಹೆಚ್ಚಿದ ಬೇಡಿಕೆ: ತಾಲೂಕಿನಾದ್ಯಂತ ಪಶು ಆಹಾರದ್ದೇ ಘಮಲು


ಮೇವಿಗೆ ಬೆಳೆದಿದ್ದ ಬೆಳೆಗೆ ಬಂಗಾರದ ಬೆಲೆ:


ಯಾವಾಗಲು ಶೇಂಗಾ, ಸೂರ್ಯಕಾಂತಿ, ಗೋವಿನ ಜೋಳ ಹಾಗೂ ಹತ್ತಿಯಂತಹ ವಾಣಿಜ್ಯ ಬೆಳೆ ಬೆಳೆದು ನಷ್ಟ ಅನುಭವಿಸಿ ಸಾಲಕ್ಕೆ ತುತ್ತಾದ ರೈತರು, ಭೂಮಿಯನ್ನು ಹಾಳುಬಿಡುವ ಬದಲು ಹಸುಗಳಿಗೆ ಮೇವಾದರೂ ಆಗಲಿ ಎಂಬ ಕಾರಣಕ್ಕೆ ಹುರುಳಿ ಬೆಳೆದಿದ್ದರು. ಅದೃಷ್ಟವಶಾತ್‌ ಹುರುಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.

ಕಣ್ಣು ಹಾಯಿಸಿದಲೆಲ್ಲಾ ಹುರುಳಿ:

ಕ್ಯಾಸಂಬಳ್ಳಿ, ಕೆಂಪಾಪುರ ಗುಟ್ಟಹಳ್ಳಿ, ರಾಜಪೇಟೆ ರಸ್ತೆ ಬೇತಮಂಗಮ, ಕಾಮಸಮುದ್ರಂ, ರಾಮಪುರ, ಪಾರಂಡಹಳ್ಳಿ, ಪೊಟ್ಟೇನಹಳ್ಳಿ, ದೊಡ್ಡಕಂಬಳಿ, ಶಾಂತಿಪುರ ಸೇರಿದಂತೆ ತಾಲ್ಲೂಕಿನ ಹಲವಾರು ಗ್ರಾಮದ ರೈತರು ಕೆಂಪು ಮಿಶ್ರಿತ ಮಣ್ಣಿನಲ್ಲಿ ಹುರುಳಿಯನ್ನು ನೂರಾರು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದಾರೆ.

ಔಷಧ ಗುಣ

ಹುರಳಿ ಸಂಗಟ್ಟಿಗೆ ಬೆಲ್ಲ ಸೇರಿಸಿ ಸೇವಿಸಿದರೇ ಮನುಷ್ಯ ಯಾವುದೇ ರೋಗರುಜಿನಗಳಲ್ಲಿದೇ ದೃಢಕಾಯನಾಗಿ ಬೆಳೆಯುತ್ತಾನೆ ಎಂಬ ಮಾತು ಇತ್ತೀಚೆಗೆ ಪ್ರಚಲಿತಕ್ಕೆ ಬರುತ್ತಿದೆ. ಇದಕ್ಕೆ ಹಿರಿಯ ಆಹಾರ ಪದ್ದತಿಯನ್ನು ನೆನಪಿಸಿಕೊಳ್ಳಲಾಗುತ್ತಿದೆ. ಹಿಂದಿನ ಕಾಲದಲ್ಲಿ ರೈತರ ಒಡನಾಡಿಯಾಗಿ ದುಡಿಯುತ್ತಿದ್ದ ಎತ್ತುಗಳಿಗೆ ಸಂಜೆ ವೇಳೆ ಹುರುಳಿ ಕಾಳುಗಳನ್ನು ಬೇಯಿಸಿ ನೀಡುತ್ತಿದ್ದರು. ಹುರುಳಿ ಬೇಯಿಸಿದ ನೀರನ್ನು ಬಸಿದು ಸಾರು ಮಾಡಿ ಉಣ್ಣುತ್ತಿದ್ದರು. ಹುರುಳಿಯಲ್ಲಿ ಸಕ್ಕರೆ ಕಾಯಿಲೆ ಸೇರಿದಂತೆ ಹತ್ತು ಹಲವು ಕಾಯಿಲೆಗಳನ್ನು ತಡೆಯುವ ಶಕ್ತಿ ಇದೆ ಎಂಬ ಅಂಶ ಬೆಳಕಿಗೆ ಬಂದಿದೆ. ಈ ವಿಚಾರ ಹಬ್ಬುತ್ತಿದ್ದಂತೆ ಹುರುಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ರೈತರು ಹುರುಳಿ ಬೆಳೆಯತ್ತ ಮುಖ ಮಾಡಿದ್ದಾರೆ.

ಪೌಷ್ಟಿಕಾಂಶದ ಆಗರ:

ಆಧುನಿಕ ಜೀವನ ಶೈಲಿ ಮತ್ತು ಆಹಾರ ಪದ್ದತಿ ಮನುಷ್ಯನನ್ನು ಅನೇಕ ರೀತಿಯ ರೋಗಗಳಿಗೆ ಈಡು ಮಾಡುತ್ತಿದೆ. ಇದರಲ್ಲಿ ಸಕ್ಕರೆ ಕಾಯಿಲೆ ಮುಂಚೂಣಿಯಲ್ಲಿದೆ. ಹುರುಳಿ ಆಧುನಿಕ ಕಾಲದ ಅನೇಕ ರೋಗಗಳಿಗೆ ರಾಮಬಾಣ ಎಂಬ ವಿಷಯ ಬೆಳಕಿಗೆ ಬಂದಿದೆ. ರಾಗಿ, ನವಣೆ ಹೊರತುಪಡಿಸಿದರೆ ಹುರುಳಿ ಕಾಳು ಆಧುನಿಕ ಜೀವನ ಶೈಲಿಗೆ ಹೇಳಿ ಮಾಡಿಸಿದ ಆಹಾರ ಎಂದು ಆಹಾರ ತಜ್ಞರು ಹೇಳುತ್ತಾರೆ. ಇದರಿಂದ ಮಾರುಕಟ್ಟೆಯಲ್ಲಿ ಹುರುಳಿಗೆ ಬೇಡಿಕೆ ಹೆಚ್ಚಿದೆ.

ರೈತನ ಕೈಹಿಡಿದೀತೆ ಹುರುಳಿ?:

ಪ್ರತಿವರ್ಷ ಗೋವಿನಜೋಳ, ಸೂರ್ಯಕಾಂತಿ, ಶೆಂಗಾ ಬೆಳೆದು ಬೆಲೆ ಇಲ್ಲದೇ ಸಾಲ ಮಾಡಿ ಸಾಕಾಗಿ ಹೋಗಿದೆ. ಭೂಮಿಯನ್ನು ಬರಡುಬಿಟ್ಟರೆ ಕಳೆ ಬೆಳೆದು ಹಾಳಾಗುತ್ತದೆ. ಅದರ ಬದಲು ಜಾನುವಾರುಗಳಿಗೆ ಮೇವಾದರೂ ಆಗಲಿ ಎಂದು ಬಿತ್ತಿದ ಹುರುಳಿ ಹುಲುಸಾಗಿ ಬೆಳೆದಿದೆ. ದೇವರ ದಯದಿಂದ ಒಳ್ಳೆಯ ಬೆಳೆಯೂ ಬಂದಿದೆ. ಫಸಲು ಕೈಸೇರುವವರೆಗೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದು, ಬದುಕು ಹಸನಾಗಬಹುದು ಎಂಬ ವಿಶ್ವಾಸ ಇದೆ ಎಂದು ರಾಮಪುರದ ರೈತರ ಕೃಷ್ಣಾರೆಡ್ಡಿ ಹೇಳಿದ್ದಾರೆ.

ಹುರಳಿಗೆ ಚಿನ್ನದ ಬೆಲೆ


ಅತ್ಯಂತ ಕಡಿಮೆ ಖರ್ಚಿನ ಜತೆ ಬಿತ್ತಿದ 90 ದಿನದಲ್ಲಿ ಕೇವಲ ತಂಪು ವಾತಾವರಣದಲ್ಲಿ ಬೆಳೆಯುವ ಹುರಳಿ ಎಕರೆ ಒಂದಕ್ಕೆ 2 ರಿಂದ 3 ಕ್ವಿಂಟಲ್‌ ಬೆಳೆ ಬರುತ್ತದೆ. ಮಾರುಕಟ್ಟೆಯಲ್ಲಿ ಕೇವಲ 1000 ರಿಂದ 1500 ಇದ್ದ ಹುರಳಿ ಬೆಲೆ ಈಗ ಪ್ರತಿ ಕ್ವಿಂಟಾಲ್‌ಗೆ 2500 ರಿಂದ 3000ಕ್ಕೆ ಏರಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 60 ರಿಂದ 70 ಇದೆ ಹೀಗಾಗಿ ಹುರಳಿ ಬೆಳೆಗೆ ಉತ್ತಮ ಬೆಲೆ ದೊರೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ