ಆ್ಯಪ್ನಗರ

ದೊಡ್ಡ ಮಟ್ಟದ ದರೋಡೆಗೆ ಹೊಂಚು ಹಾಕಿದ್ದ ಕುಖ್ಯಾತ ಇರಾನಿ ಗ್ಯಾಂಗ್‌, ಕೋಲಾರ ಪೊಲೀಸರ ಯಶಸ್ವಿ ಕಾರ್ಯಾಚರಣೆಯಲ್ಲಿ 6 ಮಂದಿ ಬಂಧನ

Irani Gang Robbers arrested by kolar police: ಸರಗಳ್ಳತನ, ಮಹಿಳೆಯನ್ನು ನಂಬಿಸಿ ಆಭರಣಗಳನ್ನು ಬಿಚ್ಚುವಂತೆ ಮಾಡಿ ವಂಚನೆ ಹಾಗೂ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆಯಂತಹ ಕೃತ್ಯಗಳನ್ನು ನಡೆಸುತ್ತಿದ್ದ ಇರಾನಿ ಗ್ಯಾಂಗ್‌ ಅನ್ನು ಕೋಲಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಮಾರು ಒಂದು ತಿಂಗಳು ಆಂಧ್ರ ಪ್ರದೇಶದಲ್ಲಿ ಪೊಲೀಸರ ತಂಡವು ಕಾರ್ಯಾಚರಣೆ ನಡೆಸಿ, ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Edited byಹೇಮಂತ್ ಕುಮಾರ್ ಎಸ್ | Vijaya Karnataka 23 Mar 2023, 10:27 pm

ಹೈಲೈಟ್ಸ್‌:


  • ಕೋಲಾರ-ಬಂಗಾರಪೇಟೆ ರಸ್ತೆಯಲ್ಲಿ ದರೋಡೆಗೆ ಹೊಂಚು
  • 13.50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಬೈಕ್‌ ವಶಕ್ಕೆ
  • 30 ದಿನಗಳ ಸತತ ಪ್ರಯತ್ನದಿಂದ ಯಶಸ್ಸು
  • ಕುಖ್ಯಾತ ಇರಾನಿ ಗ್ಯಾಂಗ್‌ ಪೊಲೀಸರ ವಶಕ್ಕೆ: ಎಸ್ಪಿ ಎಂ.ನಾರಾಯಣ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Robbers arrested
ಪ್ರಾತಿನಿಧಿಕ ಚಿತ್ರ
ಕೋಲಾರ: ಜಿಲ್ಲೆಯಲ್ಲಿ ದೊಡ್ಡ ಮಟ್ಟದ ದರೋಡೆ ನಡೆಸಲು ಸಿದ್ಧತೆ ನಡೆಸಿದ್ದಂತಹ ಇರಾನಿ ಗ್ಯಾಂಗ್‌ನ ಆರು ಮಂದಿಯನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೋಲಾರ-ಬಂಗಾರಪೇಟೆ ರಸ್ತೆಯಲ್ಲಿ ದರೋಡೆ ಮಾಡಲು ಮಾರಕಾಸ್ತ್ರಗಳೊಂದಿಗೆ ಸಿದ್ಧವಾಗಿದ್ದಂತಹ ಇರಾನಿ ಗ್ಯಾಂಗ್‌ ಸದಸ್ಯರನ್ನು ಜಿಲ್ಲಾ ಪೊಲೀಸರ ತಂಡವು ಬಂಧಿಸಿದ್ದು, ಸುಮಾರು 13.50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಬೈಕ್‌ ವಶಪಡಿಸಿಕೊಂಡಿದ್ದಾರೆ.
Kolar: ಕೆಜಿಎಫ್‌ನಲ್ಲಿ ಎಂಟು ವರ್ಷದ ಹಿಂದೆ ಸತ್ತ ಮಹಿಳೆ ಹೆಸರಲ್ಲಿ ಪಹಣಿ- ತಹಶೀಲ್ದಾರ್‌ ಯಡವಟ್ಟು
ಇರಾನಿ ಗ್ಯಾಂಗ್‌ ಬಂಧನದ ಕುರಿತಂತೆ ಗುರುವಾರ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ ಅವರು, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಮೋಸ ಹಾಗೂ ಸರಗಳ್ಳತನದಲ್ಲಿ ತೊಡಗಿದ್ದ ಇರಾನಿ ಗ್ಯಾಂಗ್‌ನ ಆರು ಸದಸ್ಯರನ್ನು ಬಂಧಿಸಿದ್ದು, ಉಳಿದವರ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ಗುಂತಕಲ್‌ ಮೂಲದ ಐದಾರು ಮಂದಿ ಕುಖ್ಯಾತ ಇರಾನಿ ಗ್ಯಾಂಗ್‌ನ ಸದಸ್ಯರಲ್ಲಿ ಒಬ್ಬರು ಪೊಲೀಸ್‌ ಅಧಿಕಾರಿಯಂತೆ, ಮತ್ತೊಬ್ಬ ಸಿಬ್ಬಂದಿಯಂತೆ ನಟಿಸಿ ತಮ್ಮನ್ನು ಪೊಲೀಸರು ಎಂದು ಸಾರ್ವಜನಿಕರ ಬಳಿ ಪರಿಚಯಿಸಿಕೊಳ್ಳುತ್ತಿದ್ದರು.

ಬಳಿಕ ಮಹಿಳೆಯರನ್ನು ಆ ಅಧಿಕಾರ ಬಳಿ ಕರೆದುಕೊಂಡು ಬಂದು ಮುಂದೆ ಕಳ್ಳತನವಾಗಿದೆ, ಕೊಲೆಯಾಗಿದೆ, ಗಲಾಟೆಯಾಗುತ್ತಿದೆ ಎಂದು ಹೇಳಿ ನಿಮ್ಮ ಒಡವೆಗಳನ್ನು ಬಿಚ್ಚಿಕೊಡಿ ನಾವು ಸುರಕ್ಷಿತವಾಗಿ ಕವರಿನಲ್ಲಿ ಹಾಕಿಕೊಡುತ್ತೇವೆಂದು ನಂಬಿಸಿ ಅವರು ಧರಿಸಿದ್ದಂತಹ ಮಾಂಗಲ್ಯ ಸರ, ಉಂಗುರಗಳು, ಓಲೆಗಳನ್ನು ಬಿಚ್ಚಿಸಿ ಒಡವೆಗಳನ್ನು ಕವರಿನಲ್ಲಿ ಹಾಕುವಂತೆ ನಟಿಸಿ ಅವರ ಗಮನ ಬೇರೆಡೆ ಸೆಳೆದು ಪರಾಗಿಯಾಗುತ್ತಿದ್ದರು ಎಂದು ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ₹80 ಲಕ್ಷ ದೋಚಿದ್ದ ಅಂತಾರಾಜ್ಯ ಡಕಾಯಿತರ ಬಂಧನ, ಆರೋಪಿಗಳಿಗೆ ಆಂಧ್ರ ಶಾಸಕನ ನಂಟು!
ಇದರೊಂದಿಗೆ ಕರ್ನಾಟಕ, ಆಂಧ್ರಪ್ರದೇಶದ ಸೇರಿದಂತೆ ಹಲವೆಡೆಗಳಲ್ಲಿ ಒಬ್ಬಂಟಿಯಾಗಿ ಓಡಾಡುವ ಮಹಿಳೆರ ಕತ್ತಿನಲ್ಲಿದ್ದ ಚಿನ್ನದ ಸರಗಳನ್ನು ಕಿತ್ತುಕೊಂಡು ಹೋಗಿದ್ದಂತಹ ಅಬ್ಬಾಸ್‌ ಅಲಿ, ರಫೀಸ್‌ ಹುಸೇನ್‌, ಅಬ್ಬಾಸ್‌ ಅಲಿ, ಮೊಹಮ್ಮದ್‌ ಅಲಿ, ಖೈಬರ್‌ ಸಾದೀಕ್‌ ಜಾಫರಿ, ಅಲಿ ಹೈದರ್‌ ಎಂಬುವರನ್ನು ಬಂಧಿಸಲಾಗಿದೆ ಎಂದು ನಾರಾಯಣ ಅವರು ಮಾಹಿತಿ ನೀಡಿದರು.

ಬಂಧಿತರ ವಿರುದ್ಧ ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ 110ಕ್ಕೂ ಹೆಚ್ಚಿನ ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿದ್ದು, ರಾಜ್ಯದ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ 98 ಪ್ರಕರಣಗಳಲ್ಲಿ ಆರೋಪಿಗಳು ಬೇಕಾಗಿದ್ದು, ಮುಂದಿನ ತನಿಖೆಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಕಳ್ಳ ಮಾಲು ಖರೀದಿದಾರ ವಶಕ್ಕೆ

ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಮೋಸ ಹಾಗೂ ಸರಗಳ್ಳತನ ಮಾಡಿ ಇರಾನಿ ಗ್ಯಾಂಗ್‌ ಸದಸ್ಯರು ತರುತ್ತಿದ್ದಂತಹ ಚಿನ್ನದ ಒಡವೆಗಳನ್ನು ಖರೀದಿ ಮಾಡುತ್ತಿದ್ದಂತಹ ಆಂಧ್ರಪ್ರದೇಶದ ಗುಂತಕಲ್‌ನ ವಾಸಿ ಶೇಖ್‌ ಖಾಜಾವಲಿ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಸುಮಾರು 12.50 ಲಕ್ಷ ಮೌಲ್ಯದ 250 ಚಿನ್ನದ ಒಡವೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿಗಳು ತಿಳಿಸಿದರು.
'ಲೈಂಗಿಕ ಸುಲಿಗೆ'ಗೆ 40 ವರ್ಷದ ಆಸುಪಾಸಿನವರೇ ಟಾರ್ಗೆಟ್! ಅಪರಿಚಿತರ ಜೊತೆ ಚಾಟಿಂಗ್ ಬೇಡವೇ ಬೇಡ!
30 ದಿನಗಳ ಸತತ ಪ್ರಯತ್ನದಿಂದ ಯಶಸ್ಸು

ಜಿಲ್ಲಾಪೊಲೀಸರು ಸತತ 30 ದಿನಗಳ ನಿರಂತರ ಪರಿಶ್ರಮ ಹಾಗೂ ಕೋಲಾರಮ್ಮ ದೇವಿಯ ಆಶೀರ್ವಾದದಿಂದಾಗಿ ಇರಾನಿ ಗ್ಯಾಂಗ್‌ ಸದಸ್ಯರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ 30 ದಿನಗಳ ಕಾಲ ಆಂಧ್ರದಲ್ಲಿದ್ದು ಕಾರ್ಯಾಚರಣೆ ನಡೆಸಿದಂತಹ ಎಲ್ಲ ಸಿಬ್ಬಂದಿಗೆ ಐಜಿಪಿ ರವಿಕಾಂತೇಗೌಡರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಕೋಲಾರ ನಗರ ಠಾಣೆ ಇನ್ಸ್‌ಪೆಕ್ಟರ್‌ ಎಂ.ಬಿ.ಗೊರವನಕೊಳ್ಳ, ಗಲ್‌ಪೇಟೆ ಸಿಪಿಐ ಸಿ.ವಸಂತ್‌, ಮಹಿಳಾ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಭೈರ, ಮುಳಬಾಗಿಲು ನಗರ ಠಾಣೆ ಇನ್ಸ್‌ಪೆಕ್ಟರ್‌ ಸುರೇಶ್‌, ಕೋಲಾರ ನಗರ ಪಿಎಸ್‌ಐ ಬಿ.ಎನ್‌.ನವೀನ್‌ಕುಮಾರ್‌, ಸಿಬ್ಬಂದಿಯಾದ ನಾಗರಾಜ್‌, ರಾಘವೇಂದ್ರ, ರಮೇಶ್‌, ಆಂಜಿನಪ್ಪ, ಸಾದಿಕ್‌ ಪಾಷಾ, ವಿ.ಎನ್‌.ಮೋಹನ, ಭಾಸ್ಕರ್‌, ನಾರಾಯಣಸ್ವಾಮಿ, ಶ್ರೀನಾಥ, ರವಿಚಂದ್ರ ಇದ್ದರು ಎಂದು ಎಸ್ಪಿಯವರು ಮಾಹಿತಿ ನೀಡಿದ್ದಾರೆ.

ಇರಾನಿ ಗ್ಯಾಂಗ್‌ ಪತ್ತೆ ಕಾರ್ಯದಲ್ಲಿ ತೊಡಗಿದ್ದಂತಹ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಐಜಿಪಿ ರವಿಕಾಂತೇಗೌಡರು, ತಮ್ಮ ಹಾಗೂ ಎಎಸ್ಪಿಯವರಿಂದ ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನವನ್ನು ನೀಡಿ ಗೌರವಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ಲೇಖಕರ ಬಗ್ಗೆ
ಹೇಮಂತ್ ಕುಮಾರ್ ಎಸ್
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ 2022ರಿಂದ ಕಾರ್ಯನಿರ್ವಹಿಸುತ್ತಿರುವ ಹೇಮಂತ್ ಮಾಧ್ಯಮ ರಂಗಕ್ಕೆ ಅಧಿಕೃತ ಪ್ರವೇಶ ಆಗಿದ್ದು 2011ರಲ್ಲಿ ನ್ಯೂಸ್ ಚಾನೆಲ್ ಮೂಲಕ. ಅದಕ್ಕೂ ಹಿಂದಿನಿಂದ ವಾರಪತ್ರಿಕೆಗಳಿಗೆ ಪ್ರಚಲಿತ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಲೇಖನಗಳ ಬರವಣಿಗೆಯಿಂದ ಬರಹದ ನಂಟು ಬೆಳೆಸಿಕೊಂಡಿದ್ದರು. ಸಿನಿಮಾ, ಕ್ರೈಂ, ರಾಜಕೀಯ, ಮೆಟ್ರೊ, ಕನ್ನಡ ಮತ್ತು ಸಂಸ್ಕೃತಿ, ಶಿಕ್ಷಣ, ರಾಷ್ಟ್ರ-ಅಂತಾರಾಷ್ಟ್ರೀಯ ವಿದ್ಯಮಾನಗಳು ಹಾಗೂ ಜಿಲ್ಲೆಗಳಲ್ಲಿನ ಬೆಳವಣಿಗೆಗಳ ಬಗ್ಗೆ ಆಸಕ್ತಿ ವಿಸ್ತರಿಸಿಕೊಂಡಿದ್ದಾರೆ. ಟಿವಿ, ಪತ್ರಿಕೆ, ಡಿಜಿಟಲ್‌/ ವೆಬ್‌, ಕೆಲ ಸಮಯ ರೇಡಿಯೊ ಚಾನೆಲ್‌ನಲ್ಲೂ ತೊಡಗಿಸಿಕೊಂಡ ಅನುಭವಿರುವ ಇವರ ಮಂತ್ರ 'ಬದುಕು ನಿರಂತರ'. ಚಾರಣ, ರಂಗಭೂಮಿ, ಪ್ರವಾಸ, ಓದು,...ಹೀಗೆ ಒಂದಷ್ಟು ಅಭ್ಯಾಸ-ಹವ್ಯಾಸಗಳು ಜೊತೆಗಿವೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ