ಆ್ಯಪ್ನಗರ

ಕೋಲಾರದಲ್ಲಿ ರಾಜಕೀಯ ಸಂಚಲನ, ಏಕಾಏಕಿ 'ಕೈ' ಕೊಟ್ಟು ಬಿಜೆಪಿ ಸೇರಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ

ಕೋಲಾರ ಜಿಲ್ಲೆಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುವ ಬೆಳವಣಿಗೆ ಶನಿವಾರ ನಡೆದಿದ್ದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕೆ. ಚಂದ್ರಾರೆಡ್ಡಿ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

Lipi 27 Nov 2021, 4:37 pm
ಕೋಲಾರ: ಕೋಲಾರ - ಚಿಕ್ಕಬಳ್ಳಾಪುರ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹೊಡೆತ ಬಿದ್ದಿದೆ. ಜಿಲ್ಲೆಯ ರಾಜಕೀಯ ವಲಯದಲ್ಲಿ ಸಂಚಲನ ನಡೆದಿದ್ದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕೆ. ಚಂದ್ರಾರೆಡ್ಡಿ ರಾಜೀನಾಮೆ ನೀಡಿ ಶನಿವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
Vijaya Karnataka Web K Chandra Reddy


ರಾಜೀನಾಮೆ ಪತ್ರವನ್ನು ತಮ್ಮ ಆಪ್ತರ ಮೂಲಕ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷರಿಗೆ ತಲುಪಿಸಿ, ಬಳಿಕ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಕೆ. ಚಂದ್ರಾರೆಡ್ಡಿ ಬಿಜೆಪಿಗೆ ಸೇರ್ಪಡೆಯಾದರು. ಸಚಿವರಾದ ಡಾ.ಕೆ. ಸುಧಾಕರ್, ಮುನಿರತ್ನ, ಸಂಸದ ಎಸ್. ಮುನಿಸ್ವಾಮಿ ನೇತೃತ್ವದಲ್ಲಿ ಕೆ. ಚಂದ್ರಾರೆಡ್ಡಿ ಅವರು ಕಮಲ ಪಕ್ಷದ ಬಾವುಟ ಹಿಡಿದರು.


ಇದೇ ವೇಳೆ ಕೆಲವು ಕಾಂಗ್ರೆಸ್ ಮುಖಂಡರು, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಪುರಸಭೆ ಸದಸ್ಯರು ಬಿಜೆಪಿಗೆ ಸೇರ್ಪಡೆಯಾದರು. ಚಂದ್ರಾರೆಡ್ಡಿ ಸೇರ್ಪಡೆಯಿಂದ ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಲಿದ್ದು, ಕಾಂಗ್ರೆಸ್ ಪಕ್ಷಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ.

ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದ ಚಂದ್ರಾರೆಡ್ಡಿ

ಡಿಸೆಂಬರ್ 10ರಂದು ನಡೆಯಲಿರುವ ಕೋಲಾರ - ಚಿಕ್ಕಬಳ್ಳಾಪುರ ವಿಧಾನಪರಿಷತ್ ಚುನಾವಣೆಯಲ್ಲಿ ಕೆ.ಚಂದ್ರಾರೆಡ್ಡಿ ಕಾಂಗ್ರೆಸ್‌ನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಕೆ. ಚಂದ್ರಾರೆಡ್ಡಿ ಬದಲು ಅನಿಲ್ ಕುಮಾರ್‌ಗೆ ಟಿಕೆಟ್ ನೀಡಿತು. ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ 25 ವರ್ಷಗಳ ಕಾಂಗ್ರೆಸ್ ಸಖ್ಯಕ್ಕೆ ರಾಜೀನಾಮೆ ಮೂಲಕ ಅಂತ್ಯ ಹಾಡಿ ಬಿಜೆಪಿ ಸೇರಿದ್ದಾರೆ.

ಇತ್ತೀಚೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೆರೆ ಹಾನಿ ಪರಿಸ್ಥಿತಿ ಅವಲೋಕನಕ್ಕೆ ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ಬಂದಿದ್ದಾಗ ಅವರನ್ನು ಸ್ವಾಗತಿಸಲೂ ಕೆ. ಚಂದ್ರಾರೆಡ್ಡಿ ಬಂದಿರಲಿಲ್ಲ. ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲೂ ಚಂದ್ರಾರೆಡ್ಡಿ ಅಂತರ ಕಾಪಾಡಿಕೊಂಡಿದ್ದರು. ಅಲ್ಲದೆ, ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯಿಂದಲೂ ಚಂದ್ರಾರೆಡ್ಡಿ ದೂರವಿದ್ದರು.

ಚಂದ್ರಾರೆಡ್ಡಿ ಅವರು ಕಳೆದ 7 ವರ್ಷಗಳಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷವನ್ನು ಬಲಗೊಳಿಸಿದ್ದರು. ಇವರ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ನಗರಸಭೆ ಸೇರಿ ಜಿಲ್ಲೆಯ ಬಹುತೇಕ ಕಡೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆದರೆ ಇದೀಗ ಅದೇ ಚಂದ್ರಾರೆಡ್ಡಿ ಪಕ್ಷ ತೊರೆದಿರುವ ಹಿನ್ನೆಲೆಯಲ್ಲಿ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗುವ ಸಂಭವ ಇದೆ.

ವರ್ತೂರು ಪ್ರಕಾಶ್ ಮನೆಯಲ್ಲಿ ಬಿಜೆಪಿ ನಾಯಕರು!


ಒಂದೆಡೆ ಚಂದ್ರಾರೆಡ್ಡಿಯನ್ನು ಬುಟ್ಟಿಗೆ ಹಾಕಿಕೊಂಡಿರುವ ಬಿಜೆಪಿ ನಾಯಕರು ಇದೀಗ ಕೋಲಾರದ ಮಾಜಿ ಶಾಸಕ ವರ್ತೂರ್ ಪ್ರಕಾಶ್‌ನ್ನು ಭೇಟಿಯಾಗಿ ಮತ್ತೊಂದು ಅಚ್ಚರಿ ಹುಟ್ಟಿಸಿದ್ದಾರೆ.

ಸಚಿವರಾದ ಕೆ. ಸುಧಾಕರ್, ಮುನಿರತ್ನ, ಸಂಸದ ಮುನಿಸ್ವಾಮಿ, ಶಾಸಕ ಎಚ್. ನಾಗೇಶ್ ವರ್ತೂರ್‌ ಪ್ರಕಾಶ್‌ ಅವರ ಮನೆಗೆ ಭೇಟಿ ನೀಡಿ ಅವರ ಮನೆಯಲ್ಲಿ ಊಟ ಸೇವಿಸಿದ್ದಾರೆ.

ಮಧ್ಯಾಹ್ನ ಕೋಲಾರ ‌ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಬಿಜೆಪಿ ನಾಯಕರಿಂದ ವರ್ತೂರ್ ಪ್ರಕಾಶ್‌ ಭೇಟಿ ನಡೆದಿದ್ದು ಕೋಲಾರದಲ್ಲಿ ಒಂದೇ ದಿನದಲ್ಲಿ‌ ಎರಡೆರಡು ಅಚ್ಚರಿಯ ರಾಜಕೀಯ ಬೆಳವಣಿಗೆಗಳು ನಡೆದಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ