ಆ್ಯಪ್ನಗರ

ಸಿದ್ದರಾಮಯ್ಯ ಕೊಟ್ಟ ಅಕ್ಕಿ ಉಂಡು, ಮೋದಿಗೆ ವೋಟು ಹಾಕಿರುವುದು ದುರ್ದೈವ: ಮುನಿಯಪ್ಪ

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಳಿಕ ಇದೀಗ ಕೆ.ಎಚ್‌.ಮುನಿಯಪ್ಪ ಅವರು ಮತದಾರರ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದಾರೆ.

Vijaya Karnataka 30 Jun 2019, 7:15 am
ಕೋಲಾರ: ಸಿದ್ದರಾಮಯ್ಯ ಕೊಟ್ಟ ಅಕ್ಕಿ ತಿಂದು, ಮೋದಿಗೆ ವೋಟು ಹಾಕಿರುವುದು ಎಂತಹ ದುರ್ದೈವ ಎಂದು ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಮತದಾರರ ವಿರುದ್ಧ ಕಿಡಿಕಾರಿದರು. ಜತೆಗೆ ತಾವು ಯಾವ ಅರ್ಥದಲ್ಲಿ ಹಾಗೆ ಹೇಳಿದ್ದೇನೆ ಎಂಬುದಕ್ಕೂ ಸ್ಪಷ್ಟನೆ ನೀಡಿದರು.
Vijaya Karnataka Web muniyappa


ಶನಿವಾರ ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ''ಸಿದ್ದರಾಮಯ್ಯ ಅವರು ರಾಜ್ಯದ ಜನರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಆದರೆ, ಮೋದಿ ಯಾರಿಗೂ ಉದ್ಯೋಗ ಕೊಟ್ಟಿಲ್ಲ, ನೋಟು ಅಮಾನ್ಯ, ಜಿಎಸ್‌ಟಿ ತಂದು ಜನರಿಗೆ ತೊಂದರೆ ಕೊಟ್ಟಿದ್ದಾರೆ. ಆದರೂ ಜನರು ಅವರಿಗೆ ಮತ ಹಾಕಿದ್ದಾರೆ,'' ಎಂದು ಸಮಜಾಯಿಷಿ ನೀಡಿದರು.

''ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ನಿರುದ್ಯೋಗ ಪ್ರಮಾಣ 2014-19ರ ಅವಧಿಯಲ್ಲಿ ಹೆಚ್ಚಾಗಿರುವುದು ಅಂಕಿ-ಅಂಶಗಳಿಂದ ಬಯಲಾಗಿದೆ. ಆದರೂ ಮೋದಿಯವರು ಪುಲ್ವಾಮಾ ಹಾಗೂ ಏರ್‌ಸ್ಟ್ರೈಕ್‌ಗಳಿಂದ ಜನರನ್ನು ದಿಕ್ಕುತಪ್ಪಿಸಿದರು. ಇವೆಲ್ಲವನ್ನೂ ಯುವಕರು ತಿಳಿದುಕೊಳ್ಳಬೇಕು,'' ಎಂದು ಹೇಳಿದರು.

ಮೈತ್ರಿ ಮಾಡಿಕೊಂಡಿದ್ದು ಹಿನ್ನಡೆಗೆ ಕಾರಣ:

''ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇಡಬೇಕೆಂಬ ಉದ್ದೇಶದಿಂದ ರಾಹುಲ್‌ ಗಾಂಧಿಯವವರು ಜೆಡಿಎಸ್‌ ಮೈತ್ರಿಯಲ್ಲಿ ಚುನಾವಣೆ ಎದುರಿಸುವಂತೆ ತಿಳಿಸಿದರು. ಆದರೆ, ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಎರಡೂ ಪಕ್ಷಗಳಿಗೆ ಹಿನ್ನಡೆಯಾಯಿತು ಎಂಬುದು ವಾಸ್ತವ ಸಂಗತಿಯಾಗಿದೆ. ಕೋಮುವಾದಿಗಳನ್ನು ದೂರವಿಡಲು ಕಾಂಗ್ರೆಸ್‌-ಜೆಡಿಎಸ್‌ ಮುಖಂಡರು ಒಂದಾದರೂ, ಕಾರ್ಯಕರ್ತರು ಹಾಗೂ ಮತದಾರರು ಒಂದಾಗಲಿಲ್ಲ. ಎರಡೂ ಪಕ್ಷಗಳು ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದರೆ ಕಾಂಗ್ರೆಸ್‌ಗೆ 10-15 ಹಾಗೂ ಜೆಡಿಎಸ್‌ 3-5 ಸ್ಥಾನಗಳನ್ನು ಗೆಲ್ಲುತ್ತಿತ್ತು ,''ಎಂದು ವಿವರಣೆ ನೀಡಿದರು.

ಮೈತ್ರಿ ಮುಂದುವರಿಕೆ:

''ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳು ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸಿದರೂ ಇದರಿಂದ ಸಮ್ಮಿಶ್ರ ಸರಕಾರಕ್ಕೆ ಯಾವುದೇ ರೀತಿಯ ತೊಂದರೆಯಿಲ್ಲ. ಮುಂದಿನ ಆರು ತಿಂಗಳಲ್ಲಿ ರಾಜ್ಯದ ಎಲ್ಲ ರೈತರ ಸಾಲ ಮನ್ನಾ ಆಗಲಿದ್ದು, ಮನ್ನಾ ಪತ್ರಗಳು ಅವರ ಕೈಸೇರಲಿವೆ,'' ಎಂದು ಹೇಳಿದರು.

ಪಕ್ಷ ವಿರೋಧಿಗಳ ವಿರುದ್ಧ ಹೈಕಮಾಂಡ್‌ ಕ್ರಮ

''ನಾನು ಗೆಲ್ಲಿಸಿದವರೇ ವಿನಾಕಾರಣ ಬಿಜೆಪಿ ಜತೆಗೆ ಕೆಲಸ ಮಾಡಿದ್ದು, ತುಂಬಾ ನೋವುಂಟು ಮಾಡಿದೆ. ಪಕ್ಷದ ಕೆಲ ಶಾಸಕರು ಪ್ರಾಮಾಣಿಕವಾಗಿ ಕೆಲಸ ಮಾಡಲಿಲ್ಲ. ಸಮ್ಮಿಶ್ರ ಸರ್ಕಾರ ಭದ್ರವಾಗಿರಬೇಕೆಂಬ ಕಾರಣದಿಂದ ಶಾಸಕರ ಹೆಸರನ್ನು ಹೇಳುತ್ತಿಲ್ಲ. ಆ ಶಾಸಕರು ಯಾರು, ಅವರು ಏನು ಮಾಡಿದ್ದಾರೆ ಎಂಬ ಸಂಪೂರ್ಣವಾದ ಮಾಹಿತಿಯುಳ್ಳ ವರದಿಯನ್ನು ಕೇಂದ್ರ ಹಾಗೂ ರಾಜ್ಯ ಹೈಕಮಾಂಡ್‌ಗೆ ನೀಡಿದ್ದು, ಸಮಯ ಬಂದಾಗ ಹೈಕಮಾಂಡ್‌ ಕ್ರಮಕೈಗೊಳ್ಳಲಿದೆ,'' ಎಂದು ಮಾರ್ಮಿಕವಾಗಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ