ಆ್ಯಪ್ನಗರ

ಮುನಿಸ್ವಾಮಿ ಸಂಸದ ಸ್ಥಾನದ ಅರ್ಹತೆ ತಿಳಿದುಕೊಳ್ಳಲಿ

ಸಂಸದರ ಸ್ಥಾನದ ಅರ್ಹತೆ, ಗೌರವ ತಿಳಿಯದ ಎಸ್‌.ಮುನಿಸ್ವಾಮಿ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ನನ್ನ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿರುವುದು ಖಂಡನೀಯ ಎಂದು ಶಾಸಕ ಕೆ.ವೈ.ನಂಜೇಗೌಡ ಸಂಸದರಿಗೆ ತಿರುಗೇಟು ನೀಡಿದರು.

Vijaya Karnataka 16 Jun 2019, 5:00 am
ಮಾಲೂರು: ಸಂಸದರ ಸ್ಥಾನದ ಅರ್ಹತೆ, ಗೌರವ ತಿಳಿಯದ ಎಸ್‌.ಮುನಿಸ್ವಾಮಿ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ನನ್ನ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿರುವುದು ಖಂಡನೀಯ ಎಂದು ಶಾಸಕ ಕೆ.ವೈ.ನಂಜೇಗೌಡ ಸಂಸದರಿಗೆ ತಿರುಗೇಟು ನೀಡಿದರು.
Vijaya Karnataka Web let me know the status of the muniswami mp
ಮುನಿಸ್ವಾಮಿ ಸಂಸದ ಸ್ಥಾನದ ಅರ್ಹತೆ ತಿಳಿದುಕೊಳ್ಳಲಿ


ಪಟ್ಟಣದಲ್ಲಿ ಶುಕ್ರವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮಾಲೂರು ತಾಲೂಕು ಟೇಕಲ್‌ ಹೋಬಳಿಯ ಹುಡುಗನಿಗೆ ಸಂಸದರಾಗಿ ಆಯ್ಕೆಯಾಗಲು ಅವಕಾಶ ಸಿಕ್ಕಿದೆ. ಒಳ್ಳೆಯ ಗೌರವಯುತವಾಗಿ ನಡೆದುಕೊಳ್ಳುತ್ತಾರೆ ಎಂದು ನನ್ನ ಭಾವನೆ ಇತ್ತು. ಬಹಳ ಸಂತೋಷಪಟ್ಟಿದ್ದೆ. ಆದರೆ ಇವರಿಗೆ ಸಂಸದರ ಸ್ಥಾನದ ಬಗ್ಗೆ ಗೊತ್ತಿದೆಯೇ ಇಲ್ಲವೇ ಎಂಬ ಅನುಮಾನ ಜಿಪಂ ಕೆಡಿಪಿ ಸಭೆಯ ಬಳಿಕ ನನಗೆ ಶುರುವಾಗಿದೆ ಎಂದು ಹೇಳಿದರು.

ಸಂಸದರ ಸ್ಥಾನಕ್ಕೆ ವಿಶೇಷ ಗೌರವ ಇದೆ. ಯಾವುದೇ ಹೇಳಿಕೆ ನೀಡುವಾಗ ಯೋಚನೆ ಮಾಡುವ ಪ್ರಜ್ಞೆ ಮುಖ್ಯ. ಏನಾದರೂ ಇದ್ದರೆ ನೇರವಾಗಿ ಬಂದು ಕೇಳಲಿ. ಈಗಾಗಲೇ ಚುನಾವಣೆ ಮುಗಿದಿದೆ. ಅಭಿವೃದ್ಧಿಯ ಕಡೆಗೆ ಗಮನಹರಿಸಬೇಕು.ಚುನಾವಣೆಯಲ್ಲಿ ಪಕ್ಷ ಗಳು ಇರಬೇಕು. ಆನಂತರ ಅಭಿವೃದ್ಧಿಯನ್ನಷ್ಟೇ ನೋಡಬೇಕು. ತುಂಬಾ ಚಿಕ್ಕ ವಯಸ್ಸಿದ್ದು, ಸಂಸದರ ಅರ್ಹತೆ, ಗೌರವವನ್ನು ಇಟ್ಟುಕೊಂಡು ನಡೆದುಕೊಳ್ಳುವುದು ಸೂಕ್ತ. ಕೆಡಿಪಿ ಸಭೆಯಲ್ಲಿ ನನ್ನ ಬಗ್ಗೆ ಮಾತನಾಡಿರುವುದನ್ನು ಖಂಡಿಸುತ್ತೇನೆ ಎಂದು ತಿಳಿಸಿದರು.

ವಿವೇಚನೆ ಇರಲಿ: ಸಂಸದರ ಬಗ್ಗೆ ಅದನ್ನು ಮಾತನಾಡು, ಇದನ್ನು ಎಂದು ನನಗೂ ಅನೇಕರು ಹೇಳಿಕೊಡುತ್ತಾರೆ. ಅಂತಹ ಮಾತುಗಳನ್ನು ಹೇಳುವವರು ಬೇರೆ ಇರುತ್ತಾರೆ, ಕೇಳುವ ನಮಗೆ ಬುದ್ಧಿ ಇರಬೇಕು. ಇನ್ನು ಮುಂದಾದರೂ ಜಿಲ್ಲೆಯ ಎಲ್ಲ ಶಾಸಕರು, ಜನಪ್ರತಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಸದರ ಅರ್ಹತೆ, ಜಿಲ್ಲೆಯ ಇತಿಹಾಸವನ್ನು ಕಾಪಾಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಪಾಲನೆ ಮಾಡುವುದು ನನಗೂ ಗೊತ್ತಿದೆ, ಪಕ್ಷಾತೀತವಾಗಿ ಅಭಿವೃದ್ಧಿ ಮಾಡಬೇಕಿದೆ. ವಿನಾಕಾರಣ ಹೇಳಿಕೆಗಳನ್ನು ನೀಡುವುದು ಬಿಟ್ಟು ಕೇಂದ್ರದಿಂದ ಅನುದಾನಗಳನ್ನು ತಂದು ಮಾಲೂರು ತಾಲೂಕು ಸೇರಿದಂತೆ ಜಿಲ್ಲೆಯನ್ನು ಅಭಿವೃದ್ಧಿ ಪಡಿಸಲಿ, ಅದನ್ನು ಬಿಟ್ಟು ಏನೂ ಗೊತ್ತಿಲ್ಲದ ಮೊದಲ ಸಭೆಯಲ್ಲಿ ಇಲ್ಲಸಲ್ಲದ್ದನ್ನು ಮಾತನಾಡಿರುವುದು ಸಂಸದರ ಸ್ಥಾನಕ್ಕೆ ಗೌರವ ತರುವುದಲ್ಲ ಎಂದು ಎಚ್ಚರಿಸಿದರು.


ರೈತ ಕುಟುಂಬದ ನಮಗೆ ಮಜಾ ಮಾಡುವುದು ಗೊತ್ತಿಲ್ಲ

ನಾವು ಮೂಲತಃ ರೈತ ಕುಟುಂಬದವರು. ರೈತರ ಹಣದಲ್ಲಿ ಮಜಾ ಮಾಡುವುದು ನಮಗೆ ಗೊತ್ತಿಲ್ಲ. ಎಂದು ಶಾಸಕ ಕೆ.ವೈ.ನಂಜೇಗೌಡ ಸಂಸದ ಎಸ್‌.ಮುನಿಸ್ವಾಮಿಗೆ ತಿರುಗೇಟು ನೀಡಿದರು.

ಜಿಪಂ ಕೆಡಿಪಿ ಸಭೆಯಲ್ಲಿ ಕೋಚಿಮುಲ್‌ ಕಾರ್ಯಕ್ರಮಕ್ಕೆ 85 ಲಕ್ಷ ಖರ್ಚು ಮಾಡಿ, ರೈತರ ಹಣದಲ್ಲಿ ಮಜಾ ಮಾಡಿದ್ದಾರೆ ಎಂದು ಸಂಸದರು ಆರೋಪ ಮಾಡಿರುವುದಕ್ಕೆ ಪ್ರತಿಕ್ರಿಯಿಸಿರುವ ಶಾಸಕ, ರಾಜಕೀಯಕ್ಕಾಗಿ ಸಂಸದರು ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದರು.

20 ಕೋಟಿ ನಷ್ಟದಲ್ಲಿದ್ದ ಕೋಚಿಮುಲ್‌ ಈಗ 18 ಕೋಟಿ ಲಾಭದಲ್ಲಿದೆ. ಅದಕ್ಕಾಗಿ ಸುಮಾರು 160 ಕೋಟಿ ರೂ.ಗಳಲ್ಲಿ ಎಂವಿಕೆ ಗೋಲ್ಡನ್‌ ಡೇರಿ, ಹಾಲು ಉತ್ಪಾದಕರ ಮಕ್ಕಳಿಗೆ ಉನ್ನತ ಶಿಕ್ಷ ಣಕ್ಕಾಗಿ ಹಾಸ್ಟೆಲ್‌, ಶ್ರೀನಿವಾಸಪುರದಲ್ಲಿ ಕಾರ್ಗೆಟೆಡ್‌ ಬಾಕ್ಸ್‌ ಮಾಡಲು ಹೊರಟಿದ್ದೇವೆ. ಇವೆಲ್ಲದರ ಶಂಕುಸ್ಥಾಪನೆಗಾಗಿ ಸಿಎಂ ಕೋಲಾರಕ್ಕೆ ಆಗಮಿಸಿದ್ದಾಗ ಸುಮಾರು 25 ಸಾವಿರ ಮಂದಿ ಹಾಲು ಉತ್ಪಾದಕರು ಭಾಗವಹಿಸಿದ್ದ ಕಾರ್ಯಕ್ರಮ ನಾವು ಮಾಡಿದ್ದೇವೆ. ಯಾವುದಕ್ಕೆ ಎಷ್ಟು ಹಣ ಖರ್ಚು ಆಗಿದೆ ಎಂದು ಬೇಕಿದ್ದರೆ ಮಾಹಿತಿ ನೀಡುತ್ತೇವೆ. ಅದನ್ನು ಪಡೆದ ನಂತರ ಮಾತನಾಡಲಿ ಎಂದು ಸವಾಲು ಹಾಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ