ಆ್ಯಪ್ನಗರ

ಫುಟ್‌ಪಾತ್‌ ಮೇಲಿನ ಅಂಗಡಿ ತೆರವುಗೊಳಿಸಿದ ನಗರಸಭೆ

ನಗರದ ಪಾದಾಚಾರಿ(ಫುಟ್‌ಪಾತ್‌) ಮಾರ್ಗದಲ್ಲಿನ ಅಂಗಡಿಗಳನ್ನು ನಗರಸಭೆ ವತಿಯಿಂದ ಬುಧವಾರ ತೆರವು ಗೊಳಿಸಲಾಯಿತು.

Vijaya Karnataka 20 Jun 2019, 3:05 pm
ಕೋಲಾರ: ನಗರದ ಪಾದಾಚಾರಿ(ಫುಟ್‌ಪಾತ್‌) ಮಾರ್ಗದಲ್ಲಿನ ಅಂಗಡಿಗಳನ್ನು ನಗರಸಭೆ ವತಿಯಿಂದ ಬುಧವಾರ ತೆರವು ಗೊಳಿಸಲಾಯಿತು.
Vijaya Karnataka Web municipality clears foothpath shops
ಫುಟ್‌ಪಾತ್‌ ಮೇಲಿನ ಅಂಗಡಿ ತೆರವುಗೊಳಿಸಿದ ನಗರಸಭೆ


ಸದಾ ಸಂಚಾರ ದಟ್ಟಣೆಯಿಂದ ಕೂಡಿರುವ ರಸ್ತೆ ಬದಿಯ ಪಾದಾಚಾರಿ ಮಾರ್ಗದಲ್ಲೂ ಅಂಗಡಿಗಳಿರಿಸಿಕೊಳ್ಳಲಾಗಿದೆ. ಇದಕ್ಕೆ ನಗರದ ಟಿ.ಚನ್ನಯ್ಯ ರಂಗಮಂದಿರ ಬಳಿಯ ಪಾದಾಚಾರಿ ಮಾರ್ಗವೆ ನಿದರ್ಶನ. ಅಂಗಡಿಮುಂಗಟ್ಟುಗಳಿರಿಸಿಕೊಂಡ ಪರಿಣಾಮ ಓಡಾಡಲು ಕಷ್ಟವಾಗಿದೆ. ರಸ್ತೆಯಲ್ಲೆ ಓಡಾಡುವ ಸಂಕಷ್ಟ ಎದುರಾಗಿದೆ ಎಂದು ಸಾರ್ವಜನಿಕರಿಂದ ಹಲವು ದಿನದಿಂದ ದೂರು ಕೇಳಿಬಂತು. ಕೂಡಲೆ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸುವ ಮೂಲಕ ಓಡಾಡಲು ಅನುಕೂಲ ಮಾಡಿಕೊಡಬೇಕೆಂಬ ಒತ್ತಾಯ ವ್ಯಕ್ತವಾಗುತ್ತಿತ್ತು.

ಫುಟ್‌ಪಾತ್‌ ಮೇಲಿನ ಅಂಗಡಿಗಳ ತೆರವುಗೆ ಸಂಬಂಧಿಸಿದಂತೆ ಜಿಲ್ಲಾಡಳಿತಕ್ಕೂ ದೂರು ಮುಟ್ಟಿತ್ತು. ಈ ವಿಷಯವಾಗಿ ನಗರಸಭೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದ ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಕೂಡಲೆ ಅಂಗಡಿ ಮುಂಗಟ್ಟನ್ನು ತೆರವುಗೊಳಿಸಿ, ಓಡಾಡಲು ಅನುವು ಮಾಡಿಕೊಡಬೇಕು ಎಂದು ಕಟ್ಟಪ್ಪಣೆ ಮಾಡಿದ್ದರು.

ಇದರಿಂದ ಎಚ್ಚೆತ್ತುಕೊಂಡ ನಗರಸಭೆಯು, ಟಿ.ಚನ್ನಯ್ಯ ರಂಗಮಂದಿರ ಮುಂಭಾಗದ ರಸ್ತೆ, ಕೋಲಾರ-ಬಂಗಾರಪೇಟೆ ಮುಖ್ಯರಸ್ತೆ ಪಾದಾಚಾರಿ ಮಾರ್ಗದಲ್ಲಿನ ಹಾಗೂ ರಸ್ತೆ ಅಕ್ಕಪಕ್ಕದ ಅನಧಿಕೃತವಾಗಿ ಇರಿಸಿದ್ದ ಅಂಗಡಿಗಳನ್ನು ಪೊಲೀಸ್‌ ಭದ್ರತೆಯೊಂದಿಗೆ ಬುಧವಾರ ಬೆಳಗ್ಗೆ ತೆರವು ಕಾರ್ಯಾಚರಣೆಗಿಳಿದಿತ್ತು. ಬೆಳಗ್ಗೆ 10 ಬಳಿಕವೂ ಈ ಕಾರ್ಯಾಚರಣೆ ಮುಂದುವರಿದಿತ್ತು.

ವ್ಯಕ್ತವಾಯ್ತು ಆಕ್ಷೇಪ: ಅಂಗಡಿಗಳ ತೆರವು ಕಾರ್ಯಾಚರಣೆಗೆ ಕೆಲವರಿಂದ ಆಕ್ಷೇಪ ವ್ಯಕ್ತವಾಯಿತು.

ತೆರವುಗೊಳಿಸುವ ವಿಷಯವನ್ನು ಮೊದಲೆ ಹೇಳಬೇಕಿತ್ತು. ಗಮನಕ್ಕೂ ತರದೆ, ಏಕಾಏಕಿ ಅಂಗಡಿ ತೆರವುಗೊಳಿಸುತ್ತಿರುವುದು ಸರಿಯಲ್ಲವೆಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದಾಗ, ಮಧ್ಯೆಪ್ರವೇಶಿಸಿದ ಪೊಲೀಸರು, ಅಧಿಕಾರಿಗಳು ಅವರನ್ನು ಸಮಾಧಾನಪಡಿಸಿ ತಮ್ಮ ಕಾರ್ಯಾಚರಣೆ ಮುಂದುವರಿಸಿದರು.

ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ರಂಗಸ್ವಾಮಿ, ನಗರಸಭೆ ಪ್ರಭಾರ ಪೌರಾಯುಕ್ತ ಶಿವಪ್ರಸಾದ್‌ ಮತ್ತಿತರರು ಇದ್ದರು.

ಮತ್ತೆ ಫುಟ್‌ಪಾತ್‌ಮೇಲೆ ಅಂಗಡಿ ಇಟ್ಟರೆ ಕ್ರಮ: 'ಪಾದಚಾರಿ ಮಾರ್ಗದಲ್ಲಿನ ಅನಧಿಕೃತವಾಗಿರಿಸಿಕೊಂಡಿದ್ದ ಅಂಗಡಿಗಳನ್ನು ತೆರವುಗೊಳಿಸುವಂತೆ ಮಾಲೀಕರಿಗೆ ತಿಳಿಸಲಾಗಿತ್ತು. ಆದರೆ, ತೆರವುಗೊಳಿಸದ ಹಿನ್ನೆಲೆಯಲ್ಲಿ ನಗರಸಭೆಯೆ ತೆರವುಗೊಳಿಸಲಾಗಿದೆ ಎಂದು ಪ್ರಭಾರ ಪೌರಾಯುಕ್ತ ಶಿವಪ್ರಕಾಶ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ದಿನ 20ಕ್ಕೂ ಹೆಚ್ಚು ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಈ ಪಾದಾಚಾರಿ ಮಾರ್ಗದಲ್ಲಿ ಅಂಗಡಿ ಇಟ್ಟುಕೊಂಡರೆ, ಕೂಡಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮುಖ್ಯರಸ್ತೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಪಾದಚಾರಿ ಮಾರ್ಗ ನಿರ್ಮಾಣ ಮಾಡಲಾಗಿದೆ. ಈ ಮಾರ್ಗದಲ್ಲಿ ಅನಧಿಕೃತವಾಗಿ ಅಂಗಡಿ ಇಟ್ಟುಕೊಂಡಿರುವವರು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಬೇಕು. ಒಂದು ವೇಳೆ ತೆರವುಗೊಳಿಸದಿದ್ದರೆ ತೆರವುಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ