ಆ್ಯಪ್ನಗರ

ಪರಿಣಾಮಕಾರಿಯಾಗಿ ಜಾರಿಯಾಗದ ಪ್ಲಾಸ್ಟಿಕ್‌ ನಿಷೇಧ

ಪರಿಸರಕ್ಕೆ ಶತ್ರುವಾಗಿರುವ ಪ್ಲಾಸ್ಟಿಕ್‌ ಬಳಕೆ ನಿಷೇಧ ಪಟ್ಟಣದಲ್ಲಿಜಾರಿಯಲ್ಲಿದ್ದರೂ ಪರಿಣಾಮಕಾರಿಯಾಗಿ ಅನುಷ್ಠಾನ ಮಾತ್ರ ಇಂದಿಗೂ ಸಾಧ್ಯವಾಗಿಲ್ಲ. ದಂಡದ ಎಚ್ಚರಿಕೆ ನಡುವೆಯೂ ಅಂಗಡಿಗಳಲ್ಲಿಪ್ಲಾಸ್ಟಿಕ್‌ ಕೈಚೀಲ ಮಾರಾಟ ನಿರ್ಭೀತಿಯಿಂದ ಸಾಗಿದೆ ಜನರ ಮನಸ್ಥಿತಿ ಬದಲಾಗದಿರುವುದು ಪ್ಲಾಸ್ಟಿಕ್‌ ನಿಷೇಧಕ್ಕೆ ದೊಡ್ಡ ತೊಡಕಾಗಿ ಪರಿಣಮಿಸಿದೆ.

Vijaya Karnataka 12 Oct 2019, 2:26 pm
ಮಾಲೂರು: ಪರಿಸರಕ್ಕೆ ಶತ್ರುವಾಗಿರುವ ಪ್ಲಾಸ್ಟಿಕ್‌ ಬಳಕೆ ನಿಷೇಧ ಪಟ್ಟಣದಲ್ಲಿಜಾರಿಯಲ್ಲಿದ್ದರೂ ಪರಿಣಾಮಕಾರಿಯಾಗಿ ಅನುಷ್ಠಾನ ಮಾತ್ರ ಇಂದಿಗೂ ಸಾಧ್ಯವಾಗಿಲ್ಲ. ದಂಡದ ಎಚ್ಚರಿಕೆ ನಡುವೆಯೂ ಅಂಗಡಿಗಳಲ್ಲಿಪ್ಲಾಸ್ಟಿಕ್‌ ಕೈಚೀಲ ಮಾರಾಟ ನಿರ್ಭೀತಿಯಿಂದ ಸಾಗಿದೆ ಜನರ ಮನಸ್ಥಿತಿ ಬದಲಾಗದಿರುವುದು ಪ್ಲಾಸ್ಟಿಕ್‌ ನಿಷೇಧಕ್ಕೆ ದೊಡ್ಡ ತೊಡಕಾಗಿ ಪರಿಣಮಿಸಿದೆ.
Vijaya Karnataka Web no effective implementation of plastic ban
ಪರಿಣಾಮಕಾರಿಯಾಗಿ ಜಾರಿಯಾಗದ ಪ್ಲಾಸ್ಟಿಕ್‌ ನಿಷೇಧ


ಮೂರು ತಿಂಗಳಿಗೋ, ಆರು ತಿಂಗಳಿಗೋ ಒಮ್ಮೆ ಪುರಸಭೆ ಅಧಿಕಾರಿಗಳು ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್‌ ವಸ್ತುಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ಸಾಮಾನ್ಯವಾಗಿದೆ. ಅದನ್ನು ಬಿಟ್ಟರೆ ಸಮರೋಪಾದಿಯಲ್ಲಿಬಳಕೆಗೆ ಕಡಿವಾಣ ಹಾಕುವುದಕ್ಕೆ ಯಾರೊಬ್ಬರೂ ಮುಂದಾಗುತ್ತಿಲ್ಲ. ಇದರಿಂದ ಚಿಲ್ಲರೆ ಅಂಗಡಿಗಳಿಂದ ಹಿಡಿದು ದೊಡ್ಡ ಅಂಗಡಿಯವರೆಗೂ ಪ್ಲಾಸ್ಟಿಕ್‌ ವಸ್ತುಗಳು ಗ್ರಾಹಕರಿಗೆ ಸುಲಭವಾಗಿ ಸಿಗುತ್ತಿದೆ.

ರಾಜ್ಯದಾದ್ಯಂತ ಪ್ಲಾಸ್ಟಿಕ್‌ ಚೀಲಗಳ ಬಳಕೆ ಮಾಡಿದ ಸಂದರ್ಭದಲ್ಲಿ1ನೇ ಅಪರಾಧಕ್ಕೆ 5 ಸಾವಿರ ರೂ, 2ನೇ ಅಪರಾಧಕ್ಕೆ 10 ಸಾವಿರ ರೂ, 3ನೇ ಅಪರಾಧಕ್ಕೆ 25 ಸಾವಿರ ರೂ. ದಂಡ ಮತ್ತು ಮೂರು ತಿಂಗಳ ಜೈಲುವಾಸ ವಿಧಿಸುವ ಸುಗ್ರೀವಾಜ್ಞೆ ಜಾರಿಗೆ ತರಲಾಗಿದೆ. ಆದರೂ ಕಟ್ಟುನಿಟ್ಟಿನ ಅನುಷ್ಠಾನ ಸಾಧ್ಯವಾಗದೆ ನಿಯಂತ್ರಣಕ್ಕೆ ಬಾರದಂತಾಗಿದೆ.

ಪ್ಲಾಸ್ಟಿಕ್‌ ಶವಯಾತ್ರೆ:
ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿಪ್ಲಾಸ್ಟಿಕ್‌ ಮಾರಾಟ ಮಾಡುವವರು ಹಾಗೂ ಉಪಯೋಗಿಸುವವರ ಮೇಲೆ ದಂಡ ಪ್ರಯೋಗ ಮಾಡುವುದಕ್ಕೆ ಪುರಸಭೆ ಪ್ಲಾಸ್ಟಿಕ್‌ ಶವಯಾತ್ರೆ ನಡೆಸುವ ಮುಖಾಂತರ ನಿರ್ಧರಿಸಿತು. ಆದರೂ ಹದಿನೈದು ದಿನ ಕಳೆದರೂ ಅದು ಜಾರಿಯಾಗಿಲ್ಲಹೊರಗಿನಿಂದ ಪ್ಲಾಸ್ಟಿಕ್‌ ಚೀಲಗಳು ಸೇರಿದಂತೆ ನಾನಾ ಮಾದರಿಯ ನಿಷೇಧಿತ ಪ್ಲಾಸ್ಟಿಕ್‌ ವಸ್ತುಗಳು ಪಟ್ಟಣವನ್ನು ಪ್ರವೇಶಿಸುತ್ತಾ ಪುರಸಭೆ ಆಡಳಿತವನ್ನು ನಾಚಿಕೆ ಪಡುವಂತೆ ಮಾಡಿದೆ. ಅಲ್ಲದೆ ಆಯುಧಪೂಜೆ, ವಿಜಯದಶಮಿ ಸಮಯದಲ್ಲಿಹಾದಿ ಬೀದಿಗಳಲ್ಲಿಪ್ಲಾಸ್ಟಿಕ್‌ ಕೈಚೀಲಗಳು ಸಾವಿರಾರು ಸಂಖ್ಯೆಯಲ್ಲಿಮಾರಾಟವಾದರೂ ಕೇಳುವವರೇ ಇರಲಿಲ್ಲ. ಪ್ಲಾಸ್ಟಿಕ್‌ ಬಳಕೆ ಕಾನೂನಾತ್ಮಕ ಕ್ರಮಗಳು ಕಠಿಣವಾಗಿದ್ದರೂ ಅವುಗಳನ್ನು ಜಾರಿಗೆ ತರುವಲ್ಲಿಅಧಿಕಾರಿಗಳು ಬದ್ಧತೆ, ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲಇದು ಪ್ಲಾಸ್ಟಿಕ್‌ ವಿರುದ್ಧದ ಹೋರಾಟ ಕುಗ್ಗುವಂತೆ ಮಾಡಿದೆ.

ಕೆಲವೊಂದು ಹೋಟೆಲ್‌, ಬೇಕರಿ, ಅಂಗಡಿ ಮಾಲೀಕರು, ವರ್ತಕರು ಸೇರಿದಂತೆ ಹಲವು ವ್ಯಾಪಾರಿಗಳು ಪ್ಲಾಸ್ಟಿಕ್‌ ಬಳಕೆ ನಿಷೇಧಕ್ಕೆ ಸ್ವಯಂ ಪ್ರೇರಿತವಾಗಿ ಮುಂದಾಗಿದ್ದಾರೆ. ಕೆಲವು ಹೋಟೆಲ್‌ಗಳಲ್ಲಿಈಗಾಗಲೇ ನಾಮಫಲಕವನ್ನು ಅಳವಡಿಸಿದ್ದು ಊಟ ತಿಂಡಿಗಳನ್ನು ತೆಗೆದುಕೊಂಡು ಹೋಗುವರು ಟಿಫನ್‌ ಬಾಕ್ಸ್‌ ಹಾಗೂ ಬಟ್ಟೆ ಚೀಲದ ಬ್ಯಾಗ್‌ ತರುವಂತೆ ಸೂಚನಾ ಫಲಕಗಳನ್ನು ಹಾಕಿದ್ದಾರೆ. ಬೇಕರಿ, ಅಂಗಡಿ ವರ್ತಕರು ಗ್ರಾಹಕರ ಖರೀದಿಸುವ ತಿಂಡಿ ಹಾಗೂ ಇನ್ನಿತರ ವಸ್ತುಗಳಿಗೆ ಬಟ್ಟೆ ಬ್ಯಾಗ್‌ ನೀಡಿ ಅದಕ್ಕೆ ಪ್ರತ್ಯೇಕ ಹಣ ಪಡೆಯುತ್ತಿದ್ದಾರೆ.

ಆದರೆ ಬೀದಿ ವ್ಯಾಪಾರಿಗಳು, ಸಣ್ಣಪುಟ್ಟ ಅಂಗಡಿ ಹಾಗೂ ಕೆಲವು ದೊಡ್ಡಮಟ್ಟದ ವರ್ತಕರು, ವ್ಯಾಪಾರಿಗಳು ಮಾತ್ರ ಪ್ಲಾಸ್ಟಿಕ್‌ ಕೈಚೀಲಗಳು ಹಾಗೂ ನಿಷೇಧಿತ ಪ್ಲಾಸ್ಟಿಕ್‌ ವಸ್ತುಗಳನ್ನು ಮಾರಾಟ ಮಾಡುವುದು ಬಿಟ್ಟಿಲ್ಲ. ಅಂತಹ ವ್ಯಾಪಾರಿಗಳು ಹಾಗೂ ಬಳಸುವವರನ್ನು ಹಿಡಿದು ದಂಡ ಶಿಕ್ಷೆಗೆ ಗುರಿ ಪಡಿಸದಿರುವುದರಿಂದ ಪ್ಲಾಸ್ಟಿಕ್‌ ನಿಷೇಧ ಕಾನೂನಿನ ಬಗ್ಗೆ ಜನರು ನಿರ್ಲಕ್ಷಿಸಲು ಕಾರಣವಾಗಿದೆ.

ದಿಟ್ಟ ಹೆಜ್ಜೆ: ಕಡ್ಡಾಯವಾಗಿ ಪ್ಲಾಸ್ಟಿಕ್‌ ನಿಷೇಧಿಸುವ ನಿಟ್ಟಿನಲ್ಲಿತಾಲೂಕು ಪಂಚಾಯಿತಿ, ಪ್ಲಾಸ್ಟಿಕ್‌ ವಿರುದ್ಧ ಹೋರಾಟ ನಡೆಸುವಲ್ಲಿಸ್ಥಳೀಯ ಸಂಸ್ಥೆಗಳು ದಿಟ್ಟ ಹೆಜ್ಜೆ ಇಟ್ಟಿವೆ. ಗ್ರಾಮೀಣ ಪ್ರದೇಶದಲ್ಲೂ ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣಾ ನಿಯಮಗಳ ಪ್ರಕಾರ ಹಳ್ಳಿಗಳಲ್ಲೂಕಡ್ಡಾಯವಾಗಿ ಪ್ಲಾಸ್ಟಿಕ್‌ ನಿಷೇಧಿಸುವ ನಿಟ್ಟಿನಲ್ಲಿತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಆದರೂ ಸಹ ಗ್ರಾಮೀಣ ಪ್ರದೇಶದಲ್ಲಿಯೂ ಪ್ಲಾಸ್ಟಿಕ್‌ ವಸ್ತುಗಳನ್ನು ಹೆಚ್ಚಾಗಿ ಸಾರ್ವಜನಿಕರು ಬಳಸುವಲ್ಲಿನಿರತರಾಗಿದ್ದಾರೆ.

ಪ್ರತಿಯೊಬ್ಬ ಗ್ರಾಹಕರು ಅಂಗಡಿಗೆ ಹೋಗುವ ಮುನ್ನ ಬಟ್ಟೆ ಚೀಲ ಅಥವಾ ಬುಟ್ಟಿಯನ್ನು ತೆಗೆದುಕೊಂಡು ಹೋಗಬೇಕು. ಅಂಗಡಿ, ಹೋಟೆಲ್‌, ಕಲ್ಯಾಣ ಮಂಟಪ ಮಾಲೀಕರು ಪ್ಲಾಸ್ಟಿಕ್‌ ವಸ್ತುಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಉಪಯೋಗಿಸಿದ್ದಲ್ಲಿಕಾನೂನು ರೀತಿ ದಂಡ ವಿಧಿಸಲಾಗುವುದು.

-ಎಸ್‌.ಪ್ರಸಾದ್‌, ಪುರಸಭೆ ಮುಖ್ಯಾಧಿಕಾರಿ

ಗ್ರಾಮ ಪಂಚಾಯಿತಿಗಳು ಸಂಪೂರ್ಣ ಪ್ಲಾಸ್ಟಿಕ್‌ ನಿಷೇಧ ಮಾಡಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪಂಚಾಯಿತಿ ವ್ಯಾಪ್ತಿಯಲ್ಲಿನ ಪ್ರತಿಯೊಂದು ಗ್ರಾಮದ ಮನೆ ಮನೆಗೆ ತೆರಳಿ ಪ್ಲಾಸ್ಟಿಕ್‌ ನಿಷೇಧದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಪ್ಲಾಸ್ಟಿಕ್‌ ಬದಲಿಗೆ ಪರ್ಯಾಯ ವಸ್ತುಗಳನ್ನು ಬಳಸುವಂತೆ ತಿಳಿವಳಿಕೆ ಹಾಗೂ ಪ್ಲಾಸ್ಟಿಕ್‌ ವಸ್ತುಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸೆ.25ರಿಂದ ಅ.5ರವರೆಗೂ ಜಾಥಾ ಆಂದೋಲನದ ಮೂಲಕ ಅರಿವು ಮೂಡಿಸಲಾಗಿದೆ.

-ಕೃಷ್ಣಪ್ಪ, ತಾಪಂ ಕಾರ್ಯನಿರ್ವಹಣಾಧಿಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ