ಆ್ಯಪ್ನಗರ

ರೇಷ್ಮೆ ಹುಳು ಸಾಕಣೆ ಮನೆಯಲ್ಲಿ ಶೈತ್ಯಾಂಶ ವೃದ್ಧಿ ಪ್ರಯೋಗ

ಬಿರು ಬಿಸಿಲು ರೇಷ್ಮೆ ಹುಳು ಮೇಲೆ ಬೀರುವ ಪರಿಣಾಮ ತಪ್ಪಿಸಿ, ಗುಣಮಟ್ಟದ ಗೂಡು ಉತ್ಪಾದನೆ ಮೂಲಕ ಉತ್ತಮ ಲಾಭ ಪಡೆಯಲು ಜಿಲ್ಲೆಯಲ್ಲಿ ಫಾಗರ್ಸ್‌ (ಶೈತ್ಯಾಂಶ ಹೆಚ್ಚಿಸುವ ಉಪಕರಣ)ಪ್ರಯೋಗ ಪ್ರಾರಂಭವಾಗಿದೆ.

Vijaya Karnataka 22 Apr 2019, 10:34 pm
ಕೋಲಾರ: ಬಿರು ಬಿಸಿಲು ರೇಷ್ಮೆ ಹುಳು ಮೇಲೆ ಬೀರುವ ಪರಿಣಾಮ ತಪ್ಪಿಸಿ, ಗುಣಮಟ್ಟದ ಗೂಡು ಉತ್ಪಾದನೆ ಮೂಲಕ ಉತ್ತಮ ಲಾಭ ಪಡೆಯಲು ಜಿಲ್ಲೆಯಲ್ಲಿ ಫಾಗರ್ಸ್‌ (ಶೈತ್ಯಾಂಶ ಹೆಚ್ಚಿಸುವ ಉಪಕರಣ)ಪ್ರಯೋಗ ಪ್ರಾರಂಭವಾಗಿದೆ.
Vijaya Karnataka Web silkworm breeding experimentation at home
ರೇಷ್ಮೆ ಹುಳು ಸಾಕಣೆ ಮನೆಯಲ್ಲಿ ಶೈತ್ಯಾಂಶ ವೃದ್ಧಿ ಪ್ರಯೋಗ


ಸತತ ಬರದಿಂದ ತತ್ತರಿಸಿರುವ ಜಿಲ್ಲೆಯ ರೈತರ ಪಾಲಿಗೆ ರೇಷ್ಮೆ ಕೃಷಿ ಕಲ್ಪವೃಕ್ಷವಾಗಿದೆ. ಜಿಲ್ಲೆಯಲ್ಲಿ ಒಟ್ಟು 1589(ಕೋಲಾರ ತಾಲೂಕಿನಲ್ಲಿ 331, ಬಂಗಾರಪೇಟೆ ತಾಲೂಕಿನಲ್ಲಿ 355, ಮಾಲೂರು ತಾಲೂಕಿನಲ್ಲಿ 306, ಮುಳಬಾಗಿಲು ತಾಲೂಕಿನಲ್ಲಿ 346, ಶ್ರೀನಿವಾಸಪುರ ತಾಲೂಕಿನಲ್ಲಿ 251) ಗ್ರಾಮಗಳಲ್ಲಿ ರೇಷ್ಮೆ ಬೆಳೆಯಲಾಗುತ್ತಿದೆ. ಒಟ್ಟು 19935.59 ಹೆಕ್ಟೇರ್‌ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆಯಲಿದ್ದು, 19005 ಮಂದಿ ರೇಷ್ಮೆ ಬೆಳೆಗಾರರಿದ್ದಾರೆ. ಈ ಪೈಕಿ ಕೋಲಾರ ತಾಲೂಕಿನಲ್ಲಿ 6904, ಬಂಗಾರಪೇಟೆ ತಾಲೂಕಿನಲ್ಲಿ 3595, ಮಾಲೂರು ತಾಲೂಕಿನಲ್ಲಿ 1637, ಮುಳಬಾಗಿಲು ತಾಲೂಕಿನಲ್ಲಿ 2915, ಶ್ರೀನಿವಾಸಪುರ ತಾಲೂಕಿನಲ್ಲಿ 3954 ಮಂದಿ ರೇಷ್ಮೆ ಬೆಳೆಗಾರರಿದ್ದಾರೆ. ರೇಷ್ಮೆ ಕೃಷಿ ಮೇಲೆ ಹೆಚ್ಚು ಮಂದಿ ಅವಲಂಭಿತರಾಗಿದ್ದಾರೆಂಬುದಕ್ಕೆ ಇದು ನಿದರ್ಶನ.

ವಾತಾವರಣದಲ್ಲಿ ಏರುಪೇರಾದಾಗಲೆಲ್ಲಾ ಒಂದೊಂದು ರೋಗಕ್ಕೆ ರೇಷ್ಮೆ ಬೆಳೆ ತುತ್ತಾಗುವುದು ಸಾಮಾನ್ಯವಾಗಿದೆ. ಗಾಳಿ ಹೆಚ್ಚಾದರೆ ಸಪ್ಪೆರೋಗ ಆವರಿಸಲಿದೆ. ಈ ರೋಗ ಆವರಿಸಿದರೆ ಹಿಪ್ಪುನೇರಳೆಯಲ್ಲಿ ತೇವಾಂಶ ಕಡಿಮೆಯಾಗಿ, ಹುಳ ಗೂಡು ಕಟ್ಟುವುದಿಲ್ಲ. ಇನ್ನು ಬಿಸಿಲು ಹೆಚ್ಚಾದರೆ ರೋಗ ಬರಲಿದ್ದು, ಈ ರೋಗ ಬಂದರೆ ಹುಳ ಸಾಯುತ್ತದೆ. ಹೆಚ್ಚು ಮಳೆಯಾದರೆ, ಸುಣ್ಣಕಟ್ಟು ರೋಗ ಬರಲಿದ್ದು, ತೇವ,ಚಳಿ ಹೆಚ್ಚಾಗಿ ರೇಷ್ಮೆ ಹುಳ ಸಾಯುತ್ತವೆ. ಹಾಗಾಗಿ ಈ ಕೃಷಿಯಲ್ಲಿ ತೊಡಗಿರುವವರು ಹೆಚ್ಚು ಗಮನ ಹರಿಸಬೇಕಾಗಲಿದೆ. ಬಿಸಿಲಿನ ತಾಪ ಹೆಚ್ಚಾಗುವ ಸಂದರ್ಭದಲ್ಲಿ ಹುಳ ಬೆಳವಣಿಗೆಯಲ್ಲಿ ಏರುಪೇರಾಗಿ, ರೋಗಕ್ಕೆ ತುತ್ತಾಗಲಿದೆ. ಇದರಿಂದ ರೇಷ್ಮೆ ಕೃಷಿಕರು ಕೈ ಸುಟ್ಟುಕೊಂಡಿರುವ ನಿದರ್ಶನವೂ ಇದೆ. ಬೇಸಿಗೆ ಸಮಯದಲ್ಲಿ ಎದುರಾಗುವ ಈ ಸಮಸ್ಯೆ ನಿವಾರಣೆಗೆ ರೇಷ್ಮೆ ಇಲಾಖೆಯು ಫಾಗರ್ಸ್‌ ಪ್ರಯೋಕಕ್ಕೆ ಮುಂದಾಗಿದ್ದು, ಈಗಾಗಲೆ ರೇಷ್ಮೆ ಕೃಷಿಯಲ್ಲಿ ತೊಡಗಿರುವವರ ರೇಷ್ಮೆ ಹುಳ ಸಾಕಣೆ ಮನೆಗಳಿಗೆ ಅಳವಡಿಸಲಾಗಿದೆ.

ರೇಷ್ಮೆ ಹುಳ ಸಾಕಣೆ ಮನೆಯಲ್ಲಿ ಉಷ್ಣಾಂಶ 24ರಿಂದ 28 ಡಿಗ್ರಿ ಇರಬೇಕು. ಆದರೆ, ಉಷ್ಣಾಂಶವು 37ಡಿಗ್ರಿಗೆ ಏರಿಕೆಯಾಗಿತ್ತು. ಹುಳ ಮನೆಯಲ್ಲಿ ಶೇ.70ರಿಂದ 85ರಬೇಕಾದ ಶೈತ್ಯಾಂಶವು ಶೇ.30ರಿಂದ ಶೇ.35ರಷ್ಟಕ್ಕೆ ಕುಸಿದಿತ್ತು. ಇದು ಹುಳ ಬೆಳವಣಿಗೆಯಲ್ಲಿ ಏರುಪೇರಾಗಿ, ರೋಗಕ್ಕೂ ತುತ್ತಾಗುವ ಆತಂಕ ಇಗಷ್ಟೆ ಅಲ್ಲ, ಪ್ರತಿ ಬೇಸಿಗೆಯ ಸಮಯದಲ್ಲೂ ರೇಷ್ಮೆ ಕೃಷಿಕರನ್ನು ಕಾಡತೊಡಗಿತ್ತು. ಈ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಫಾಗರ್ಸ್‌ ಬಳಕೆಗೆ ಆದ್ಯತೆ ನೀಡಲಾಗಿದೆ.

ರೇಷ್ಮೆ ಹುಳ ಮನೆಯ ಕಿಟಿಕಿ, ಬಾಗಿಲುಗಳ ಬಳಿ ಈ ಫಾಗರ್ಸ್‌ಅನ್ನು ಅಳವಡಿಸಲಾಗುತ್ತದೆ.ಇದರಿಂದ ಹಿಮ(ಮಂಜು)ದಂತೆ ಹೊರಹೊಮ್ಮಲಿದ್ದು, ಹುಳ ಮನೆಗೆ ಹೊರಗಿನಿಂದ ಹೋಗುವ ಗಾಳಿಯಲ್ಲಿದು ಸೇರಿ ಶೈತ್ಯಾಂಶ ಹೆಚ್ಚಾಗಲಿದೆ. ಮನೆಯಲ್ಲಿ ತಂಪಾದ ವಾತಾವರಣ ನಿರ್ಮಾಣವಾಗಲಿದೆ. ಉಷ್ಣಾಂಶ ಕಡಿಮೆಯಾಗಿ ಶೈತ್ಯಾಂಶ ಹೆಚ್ಚಾದಾಗ, ರೇಷ್ಮೆ ಹುಳ ಬೆಳವಣಿಯಲ್ಲಿನ ಏರುಪೇರಾಗುವುದು, ರೋಗಕ್ಕೆ ತುತ್ತಾಗುವುದು ತಪ್ಪಲಿದೆ. ಉತ್ತಮ ಇಳುವರಿ ಪಡೆದು, ಲಾಭ ಪಡೆಯಲು ಅವಕಾಶವಾಗಲಿದೆ. ಹಾಗಾಗಿ ಫಾಗರ್ಸ್‌ ಅಳವಡಿಸಲಾಗುತ್ತಿದೆ.

ದ್ವಿತಳಿ ಬೆಳೆಗಾರರಿಗೆ ಆದ್ಯತೆ

ಸರಕಾರಿದಿಂದ ಪ್ರಾಯೋಗಿಕವಾಗಿ ಫಾಗರ್ಸ್‌ ಅಳವಡಿಸಲಾಗುತ್ತಿದ್ದು, ದ್ವಿತಳಿ ಬೆಳೆಗಾರರಿಗೆ ಆದ್ಯತೆ ನೀಡಲಾಗಿದೆ.

1970ರ ವೇಳೆ ಪರಿಚಯಿಸಿದ ಮಿಶ್ರತಳಿ ಹೆಚ್ಚಾಗಿ ಪ್ರಚಾರದಲ್ಲಿತ್ತು.ಇದಕ್ಕೆ ಪರ್ಯಾಯವಾಗಿ ಹೆಚ್ಚಿನ ಉತ್ಪಾದನಾ ಗುಣವುಳ್ಳ ಕೋಲಾರ್‌ಗೋಲ್ಡ್‌ 2002ರ ವೇಳೆಗೆ ಜನಪ್ರಿಯತೆ ಗಳಿಸಿತು. ಒಟ್ಟಾರೆ ಉತ್ಪಾದಕತೆ ಹಾಗೂ ನೂಲಿನ ಗುಣಮಟ್ಟ ಉತ್ತಮವಾಗಿರುವಂತೆ ಅಭಿವೃದ್ಧಿಪಡಿಸಿದ ಹೊಸ ಸಂಕರಣಗಳು ಸಂಶೋಧನಾ ಸಂಸ್ಥೆಗಳಿಂದ ನಿರಂತರವಾಗಿ ಬಿಗುಡೆಯಾಗುತ್ತಿದ್ದು, ರೇಷ್ಮೆ ಕೈಗಾರಿಕೆ ಅಗತ್ಯತೆಗಳನ್ನು ಪೂರೈಸುತ್ತಿವೆ. ಈಗ ದ್ವಿತಳಿ ರೇಷ್ಮೆಗೆ ಹೆಚ್ಚಿನ ಪ್ರಾಮುಖ್ಯತೆ ದೊರಕಿದೆ.

ಸ್ವಯಂಚಾಲಿತ, ನೂಲು ಬಿಚ್ಚಾಣಿಕೆ ಯಂತ್ರಕ್ಕೆ ಹೊಂದಿಕೊಳ್ಳುವ, ನೂಲು ಬೇಗ ತುಂಡಾಗದ ದ್ವಿತಳಿ(ಬೈವೋಲ್ಟಿನ್‌), ಜಪಾನ್‌, ಚೀನಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಬೇಡಿಕೆ ಇರುವ ದ್ವಿತಳಿ ಉತ್ಪಾದನೆಗೆ ರೇಷ್ಮೆ ಕೃಷಿಕರು ಮುಂದಾಗುತ್ತಿದ್ದಾರೆ. ಹಾಗಾಗಿ ಈ ದ್ವಿತಳಿ ಬೆಳೆಗಾರರಿಗೆ ಫಾಗರ್ಸ್‌ ಪ್ರಯೋಜನ ದೊರಕಿಸಿಕೊಡಲಾಗಿದೆ. ಜಿಲ್ಲೆಗೆ ಸರಕಾರದಿಂದ ಸುಮಾರು 241 ಫಾಗರ್ಸ್‌ ನೀಡಿದ್ದು, ಈಗಾಗಲೆ ಅಳವಡಿಸುವ ಕಾರ್ಯವು ನಡೆಯುತ್ತಿದೆ.


ರೇಷ್ಮೆ ಹುಳ ಮನೆಗೆ ಶೇ. 70ರಿಂದ ಶೇ. 85ರಷ್ಟು ಶೈತ್ಯಾಂಶ ಇರಬೇಕು. ಆದರೆ ಬೇಸಿಗೆಯಲ್ಲಿ ಇದರ ಪ್ರಮಾಣ ಶೇ.30ರಿಂದ ಶೇ.35ರಷ್ಟಕ್ಕೆ ಕುಸಿಯಲಿದೆ. ಇದರಿಂದ ಹುಳಬೆಳವಣಿಗೆಯಲ್ಲಿ ಏರುಪೇರಾಗಿ ರೋಗಕ್ಕೆ ತುತ್ತಾಗಲಿದೆ. ಇದನ್ನು ತಪ್ಪಿಸಲು ಫಾಗರ್ಸ್‌ಅನ್ನು ರೇಷ್ಮೆ ಹುಳ ಮನೆಯ ಕಿಟಕಿ, ಬಾಗಿಲು ಬಳಿ ಅಳವಡಿಸಲಾಗುತ್ತದೆ. ಇದು ಶೈತ್ಯಾಂಶ ಹೆಚ್ಚಿಸಲು ನೆರವಾಗಲಿದೆ.

-ಎಂ.ಕೆ. ಪ್ರಭಾಕರ್‌, ಉಪನಿರ್ದೇಶಕ, ರೇಷ್ಮೆ ಇಲಾಖೆ.

ರೇಷ್ಮೆ ಹುಳ ಶೀತಲಹರಿ. ಉಷ್ಣಾಂಶ, ಶೈತ್ಯಾಂಶ ಅತ್ಯಗತ್ಯ. ಉಷ್ಣಾಂಶ 24ರಿಂದ 28 ಡಿಗ್ರಿ ಇರಬೇಕು. ಆದರೆ, ಬೇಸಿಗೆಯಲ್ಲಿ ಇದು 37ಡಿಗ್ರಿಗೆ ಹೆಚ್ಚಾಗಿತ್ತು. ಶೈತ್ಯಾಂಶ ಪ್ರಮಾಣ ಕುಸಿದಿತ್ತು. ಇದರಿಂದ ರೇಷ್ಮೆ ಹುಳದ ಮೇಲೆ ಪರಿಣಾಮ ಬೀರುವುದು ಸಾಮಾನ್ಯವಾಗಿತ್ತು. ಈಗ ಫಾಗರ್ಸ್‌ ಅಳವಡಿಕೆಯಿಂದ, ಶೈತ್ಯಾಂಶ ಹೆಚ್ಚಾಗಿದೆ. ಇದರಿಂದ ಅನುಕೂಲವಾಗಿದೆ.

-ಸಿ.ಎಲ್‌.ನಾಗರಾಜ್‌, ರೈತ, ಚಿಟ್ನಹಳ್ಳಿ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ