ಆ್ಯಪ್ನಗರ

ಮೇಕೆದಾಟುವಿನಲ್ಲಿ ಜಿಲ್ಲೆಗೆ ದ್ರೋಹ ಖಂಡನೀಯ

ಸತತ ಬರಗಾಲವನ್ನು ಎದುರಿಸುತ್ತಿರುವ ಅವಿಭಜಿತ ಕೋಲಾರ ಜಿಲ್ಲೆಗೆ ಮೇಕೆದಾಟು ಯೋಜನೆಯಲ್ಲಿ ನೀರನ್ನು ಒದಗಿಸದೆ ಸಿಎಂ ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್‌ ದ್ರೋಹ ಮಾಡಿರುವುದು ಖಂಡನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಕಿಡಿಕಾರಿದರು.

Vijaya Karnataka 10 Jan 2019, 5:00 am
ಕೋಲಾರ : ಸತತ ಬರಗಾಲವನ್ನು ಎದುರಿಸುತ್ತಿರುವ ಅವಿಭಜಿತ ಕೋಲಾರ ಜಿಲ್ಲೆಗೆ ಮೇಕೆದಾಟು ಯೋಜನೆಯಲ್ಲಿ ನೀರನ್ನು ಒದಗಿಸದೆ ಸಿಎಂ ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್‌ ದ್ರೋಹ ಮಾಡಿರುವುದು ಖಂಡನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಕಿಡಿಕಾರಿದರು.
Vijaya Karnataka Web the betrayal of the district in mekadattu is condemnable
ಮೇಕೆದಾಟುವಿನಲ್ಲಿ ಜಿಲ್ಲೆಗೆ ದ್ರೋಹ ಖಂಡನೀಯ


ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಈ ಜಿಲ್ಲೆಗಳಿಗೆ ಮೇಕೆದಾಟು ಯೋಜನೆಯಿಂದ ಕುಡಿವ ನೀರನ್ನು ತರುವರೆಂಬ ವಿಶ್ವಾಸ ನಮಗೂ ಇತ್ತು ಆದರೆ, ಎರಡೂ ಜಿಲ್ಲೆಗಳನ್ನು ಹೊರತುಪಡಿಸಿ ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್‌ ಪ್ರತಿನಿಧಿಸುವ ರಾಮನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಮಾತ್ರ ನೀರು ಕೊಟ್ಟು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರನ್ನು ವಂಚಿಸಿರುವುದು ನ್ಯಾಯ ಸಮ್ಮತವಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.

ನಾನು ದಿಲ್ಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸುತ್ತಿದ್ದು, ಸಭೆ ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಜಿಲ್ಲೆಯ ಸ್ಥಿತಿ ಗತಿಗಳ ಬಗ್ಗೆ ಅವರಿಗೆ ಮನದಟ್ಟು ಮಾಡಿ ಮೇಕೆದಾಟು ಯೋಜನೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಸೇರಿಸುವ ಕುರಿತು ಮಾತನಾಡುವುದಾಗಿ ತಿಳಿಸಿದರು.

ರಾಜ್ಯ ಸಮ್ಮೀಶ್ರ ಸರಕಾರದ ಮುಖಂಡರನ್ನೂ ಭೇಟಿಯಾಗಿ ಯೋಜನೆಯ ಡಿಪಿಆರ್‌ ತಯಾರು ಮಾಡುವಾಗ ಈ ಜಿಲ್ಲೆಗಳನ್ನೂ ಸೇರಿಸುವಂತೆ ಕೋರಲಾಗುವುದು ಎಂದೂ ತಿಳಿಸಿದರು.

ಮಾಜಿ ಶಾಸಕ ಎ.ನಾಗರಾಜ್‌ ಮಾತನಾಡಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಇದೆ. ಎತ್ತಿನಹೊಳೆ ಯೋಜನೆಯಿಂದ ಈ ಜಿಲ್ಲೆಗಳಿಗೆ ನೀರು ತರುವುದು ಅನುಮಾನ. ಈ ಯೋಜನೆಯಿಂದ ತರುವ ನೀರು ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಸಾಕಾಗುವುದಿಲ್ಲ ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯನ್ನು ದಾಟಿಕೊಂಡು ಕೋಲಾರ ಜಿಲ್ಲೆಗೆ ಬರುವ ಗ್ಯಾರಂಟಿ ಏನು ಎಂದು ಪ್ರಶ್ನಿಸಿದರು.

ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಜೋರಾಗಿ ಸುರಿದಿದ್ದರಿಂದ 350 ಟಿ.ಎಂ.ಸಿ.ನೀರು ಕಾವೇರಿ ಕೊಳ್ಳದಿಂದ ಹರಿದು ಬಂತು ಅದರಲ್ಲಿ 220 ಟಿ.ಎಂ.ಸಿ.ನೀರು ಸಮುದ್ರ ಸೇರಿದೆ. ಈ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆಯಲ್ಲಿ ನೀರು ಸಂಗ್ರಹಿಸಿ ಬರದ ಜಿಲ್ಲೆಗೆ ಕುಡಿವ ನೀರು ಕೊಡುವುದು ಉತ್ತಮ ಯೋಜನೆಯಾಗಿದ್ದು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಬೇಕಾಗಿರುವುದು ಕೇವಲ 18 ಟಿಎಂಸಿ ನೀರು ಮಾತ್ರ ಎಂದು ಅವರು ತಿಳಿಸಿದರು.

ಹೀಗಾಗಿ ಜಿಲ್ಲೆಯ ಜನ ಮತ್ತು ಎಲ್ಲರೂ ಒಗ್ಗಟ್ಟಾಗಿ ಮೇಕೆದಾಟು ಯೋಜನೆಯಲ್ಲಿ ಈ ಭಾಗದ ಎರಡೂ ಜಿಲ್ಲೆಗಳನ್ನು ಸೇರಿಸುವಂತೆ ಸರಕಾರದ ಮೇಲೆ ಒತ್ತಡ ಹಾಕಬೇಕಾಗಿದೆ ಎಂದು ಎ.ನಾಗರಾಜ್‌ ಒತ್ತಾಯಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ