ಆ್ಯಪ್ನಗರ

ಕೋಲಾರ ಸೇರಿದಂತೆ ದೇಶದಲ್ಲಿ ಬಿಜೆಪಿ ಜಯಭೇರಿ

ಕೋಲಾರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ಮುನಿಸ್ವಾಮಿ ಗೆಲುವು ನಿಶ್ಚಿತವೆಂದು ಗೊತ್ತಾಗುತ್ತಿದ್ದಂತೆ ಪಕ್ಷ ದ ನೂರಾರು ಕಾರ್ಯಕರ್ತರು ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಓಂಶಕ್ತಿ ಚಲಪತಿ ನೇತೃತ್ವದಲ್ಲಿ ನಗರದ ನಾನಾ ವೃತ್ತಗಳಲ್ಲಿ ಪಟಾಕಿ ಸಿಡಿಸಿ, ಸಿಹಿಹಂಚಿ ವಿಜಯೋತ್ಸವ ಆಚರಿಸಿದರು.

Vijaya Karnataka 24 May 2019, 5:00 am
ಕೋಲಾರ : ಕೋಲಾರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ಮುನಿಸ್ವಾಮಿ ಗೆಲುವು ನಿಶ್ಚಿತವೆಂದು ಗೊತ್ತಾಗುತ್ತಿದ್ದಂತೆ ಪಕ್ಷ ದ ನೂರಾರು ಕಾರ್ಯಕರ್ತರು ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಓಂಶಕ್ತಿ ಚಲಪತಿ ನೇತೃತ್ವದಲ್ಲಿ ನಗರದ ನಾನಾ ವೃತ್ತಗಳಲ್ಲಿ ಪಟಾಕಿ ಸಿಡಿಸಿ, ಸಿಹಿಹಂಚಿ ವಿಜಯೋತ್ಸವ ಆಚರಿಸಿದರು.
Vijaya Karnataka Web the bjp won the country including kolar
ಕೋಲಾರ ಸೇರಿದಂತೆ ದೇಶದಲ್ಲಿ ಬಿಜೆಪಿ ಜಯಭೇರಿ


ನಗರದ ರಂಗಮಂದಿರದ ಮುಂಭಾಗ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದ ಬಿಜೆಪಿ ಕಾರ್ಯಕರ್ತರು ಬೈಕುಗಳಲ್ಲಿ ತೆರಳಿ ಬಸ್‌ ನಿಲ್ದಾಣ ವೃತ್ತ, ಡೂಂಲೈಟ್‌ ವೃತ್ತ, ಬಂಗಾರಪೇಟೆ ವೃತ್ತಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಬಿಜೆಪಿ ಅಭ್ಯರ್ಥಿ ಸುಮಾರು ಒಂದು ಲಕ್ಷ ಕ್ಕೂ ಅಧಿಕ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ ಎಂಬ ಸುದ್ದಿ ಹೊರ ಬರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರ ಉತ್ಸಾಹ ಎಲ್ಲೆ ಮೀರಿತ್ತು. ಸೇರಿದ್ದ ಸಾವಿರಾರು ಮಂದಿಯಿಂದ ಮೋದಿ, ಮೋದಿ ಎಂಬ ಕೂಗು ಮುಗಿಲುಮುಟ್ಟಿತ್ತು.

ರಂಗಮಂದಿರದ ಮುಂದೆ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಗೆ ಜೈಕಾರ ಕೂಗಿದರು. ಕೋಲಾರ ಜಿಲ್ಲೆಗೆ ಶಾಪ ವಿಮೋಚನೆಯಾಗಿದೆ ಎಂದು ಘೋಷಣೆಗಳನ್ನು ಕೂಗಿ ಕುಣಿದು ಕುಪ್ಪಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಯುವಮೋರ್ಚಾ ಉಪಾಧ್ಯಕ್ಷ ಓಂಶಕ್ತಿ ಚಲಪತಿ, ಕೋಲಾರದಲ್ಲಿ ಕಳೆದ 28 ವರ್ಷಗಳ ಕಾಲ 7 ಬಾರಿ ಸಂಸದರಾಗಿ ಕೆಲಸ ಮಾಡಿದ್ದ ಸಂಸದ ಮುನಿಯಪ್ಪ ಸಾಧನೆ ಶೂನ್ಯವಾಗಿದ್ದು, ಜನತೆ ತಿರಸ್ಕರಿಸಿದ್ದಾರೆ ಎಂದರು.

7 ಬಾರಿ ಸಂಸದರಾಗಿಯೂ ಜಿಲ್ಲೆಯಲ್ಲಿ ಕನಿಷ್ಠ ಒಂದಾದರೂ ಶಾಶ್ವತವಾದ ಕೆಲಸ ಮಾಡಿದ್ದಾರೆಯೇ ಎಂಬುದನ್ನು ಜನತೆ ಹೋದ ಕಡೆಗಳೆಲ್ಲೆಲ್ಲಾ ಕೇಳಿದ್ದಾರೆ, ಇದೀಗ ಮುನಿಯಪ್ಪ ಅವರನ್ನು ಮನೆಗೆ ಕಳುಹಿಸುವ ನಿರ್ಧಾರ ಮಾಡಿದ್ದಾರೆ ಎಂದರು.

ಬಿಜೆಪಿ ಅಭ್ಯರ್ಥಿ ಮತ ನೀಡಿದವರನ್ನು ಎಂದಿಗೂ ಮರೆಯೋದಿಲ್ಲ, ಕೋಲಾರ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಶ್ರಮಿಸಲಿದ್ದಾರೆ, ಜನರ ನಂಬಿಕೆ ಉಳಿಸಿಕೊಳ್ಳಲಿದ್ದಾರೆ ಇದು ನರೇಂದ್ರ ಮೋದಿಯವರ ದೇಶಪ್ರೇಮ, ಅಭಿವೃದ್ದಿಪರ ಚಿಂತನೆಗೆ ಜನತೆ ನೀಡಿರುವ ಗೆಲುವು ಎಂದು ಬಣ್ಣಿಸಿದರು.

ಮೋದಿಯವರು ಪ್ರಧಾನಿ ಎಂಬುದನ್ನೂ ಪರಿಗಣಿಸದೇ ಏಕವಚನದಲ್ಲಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್‌-ಜೆಡಿಎಸ್‌ ಮುಖಂಡರ ವರ್ತನೆಯಿಂದ ರೋಸಿಹೋಗಿದ್ದ ದೇಶದ ಜನತೆ ಈ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿದ್ದಾರೆ ಎಂದರು.

ಈ ದೇಶದ ಗಡಿ ರಕ್ಷ ಣೆ ಮೋದಿ ಸರಕಾದಿಂದ ಮಾತ್ರ ಸಾಧ್ಯ ಎಂದು ದೇಶದ ಜನತೆ ನಂಬಿದ್ದಾರೆ. ನಮ್ಮ ವೀರಯೋಧರಿಗೆ ಮೋದಿ ಮಾತ್ರ ಪ್ರೇರಣೆ ಎಂಬುದನ್ನು ಅರಿತು ಮತ ನೀಡಿದ್ದಾರೆ. ಮೋದಿ ವಿರುದ್ಧ ಸಲ್ಲದ ಆರೋಪ ಮಾಡಿದ್ದ ಕಾಂಗ್ರೆಸ್‌ ಮುಖಂಡರು ಇಂದು ಜನರ ದೃಷ್ಟಿಯಲ್ಲಿ ಕಾಣೆಯಾಗಿದ್ದಾರೆ ಎಂದು ಟೀಕಿಸಿದರು.

ವಿಜಯೋತ್ಸವದಲ್ಲಿ ಬಿಜೆಪಿ ಮುಖಂಡರಾದ ಸಾ.ಮಾ.ಬಾಬು, ಶ್ರೀನಾಥ್‌, ಭರತ್‌, ಚಿನ್ನಾ, ಮಹೇಶ್‌, ಹರೀಶ್‌, ಶಶಿ, ಸುರೇಶ್‌, ವಿಜಯಣ್ಣ, ಪ್ರಕಾಶ್‌, ರಮೇಶ್‌, ಸಂಪತ್‌ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ