ಆ್ಯಪ್ನಗರ

ಎರಡು ಪ್ರಕರಣಗಳಲ್ಲಿ ಮೂವರಿಗೆ ಕಾರಾಗೃಹ ಶಿಕ್ಷೆ

ಪೋಕ್ಸೊಗೆ ಸಂಬಂಧಿಸಿ ಎರಡು ಪ್ರಕರಣಗಳಲ್ಲಿ ಮೂವರಿಗೆ ಕಾರಾಗೃಹ ಶಿಕ್ಷೆ ಮತ್ತು ದಂಡವನ್ನು ವಿಧಿಸಿ ಇಲ್ಲಿನ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಶುಕ್ರವಾರ ತೀರ್ಪು ಪ್ರಕಟಿಸಿದ್ದಾರೆ.

Vijaya Karnataka 26 Jan 2019, 10:45 pm
ಕೋಲಾರ : ಪೋಕ್ಸೊಗೆ ಸಂಬಂಧಿಸಿ ಎರಡು ಪ್ರಕರಣಗಳಲ್ಲಿ ಮೂವರಿಗೆ ಕಾರಾಗೃಹ ಶಿಕ್ಷೆ ಮತ್ತು ದಂಡವನ್ನು ವಿಧಿಸಿ ಇಲ್ಲಿನ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಶುಕ್ರವಾರ ತೀರ್ಪು ಪ್ರಕಟಿಸಿದ್ದಾರೆ.
Vijaya Karnataka Web three cases were sentenced to three prisoners
ಎರಡು ಪ್ರಕರಣಗಳಲ್ಲಿ ಮೂವರಿಗೆ ಕಾರಾಗೃಹ ಶಿಕ್ಷೆ


ಪ್ರಕರಣ-1: ಮಾಲೂರು ತಾಲೂಕಿನ ಪಡುವನಹಳ್ಳಿಯ ಅಪ್ರಾಪ್ತ ಬಾಲಕಿಯ ಅಕ್ಕ ಚಿಂತಾಮಣಿ ತಾಲೂಕಿನ ಸೀತಾರಾಮಪುರ ಗ್ರಾಮದ ಶಿಲ್ಪ ಮತ್ತು ಭಾವ ಸುರೇಶ್‌ಸೇರಿ ತಮಗೆ 2ನೇ ಮದುವೆ ಮಾಡಿಕೊಡುವಂತೆ ಬಾಲಕಿಯ ತಂದೆಯನ್ನು ಕೇಳಿದ್ದಾರೆ.

ಇದಕ್ಕೆ ಒಪ್ಪದ ಬಾಲಕಿಯ ತಂದೆ ಆಕೆಯನ್ನು ಬಂಗಾರಪೇಟೆ ತಾಲೂಕಿನ ಬೆಂಗನೂರು ಗ್ರಾಮದ ತನ್ನ ಅಕ್ಕನ ಮನೆಯಲ್ಲಿ ಇರಿಸಿದ್ದರು. ಆದರೆ, 2016ರ ಸೆ.12ರಂದು ಶಿಲ್ಪ ಮತ್ತು ಸುರೇಶ್‌ ಕಾರಿನಲ್ಲಿ ಬಂದು ಬಾಲಕಿಯನ್ನು ಅಪಹರಿಸಿ ಧರ್ಮಸ್ಥಳಕ್ಕೆ ಹೋಗಿ ಮದುವೆಯಾಗಿ, ಆಂಧ್ರಪ್ರದೇಶದ ಬಿ.ಕೊತ್ತಕೋಟೆಗೆ ಹೋಗಿ ಸುರೇಶ್‌ ಆಕೆಯ ಮೇಲೆ ಅತ್ಯಾಚಾರವೆಸಗಿದ್ದನು.

ಈ ಬಗ್ಗೆ ಬಂಗಾರಪೇಟೆ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಸಿಪಿಐ ದಿನೇಶ್‌ ಪಾಟೀಲ್‌ ತನಿಖೆ ನಡೆಸಿ ಆರೋಪಿತರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್‌.ರೇಖಾ ಆರೋಪಿ ಸುರೇಶ್‌ಗೆ 10 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ, 10 ಸಾವಿರ ದಂಡ ಮತ್ತು ಶಿಲ್ಪಾಗೆ 3 ವರ್ಷ ಕಾರಾಗೃಹ ಶಿಕ್ಷೆ, 5 ಸಾವಿರ ದಂಡವಿಧಿಸಿ ಆದೇಶ ಹೊರಡಿಸಿದ್ದಾರೆ.

ಪ್ರಕರಣ-2: 2016ರ ಏ.11ರಂದು ಶ್ರೀನಿವಾಸಪುರ ತಾಲೂಕಿನ ಕೊಪ್ಪವಾರಿಪಲ್ಲಿ ಗ್ರಾಮದ ಬಾಲಕಿ ತನ್ನ ಮನೆಯ ಬಳಿ ಪಾತ್ರೆ ತೊಳೆಯುತ್ತಿದ್ದ ವೇಳೆ ಅದೇ ಗ್ರಾಮದ ರೆಡ್ಡೆಪ್ಪ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಈ ವೇಳೆ ಆಕೆ ತಪ್ಪಿಸಿಕೊಂಡು ಹೋಗಿ ತನ್ನ ತಾಯಿಗೆ ವಿಚಾರ ಮುಟ್ಟಿಸಿದ್ದಾಳೆ.

ಅದೇ ದಿನ ಸಂಜೆ ಬಾಲಕಿಯ ತಂದೆ, ತಾಯಿ ಮತ್ತು ಅಣ್ಣ ರೆಡ್ಡೆಪ್ಪನ ವಿಚಾರವಾಗಿ ಆತನ ಸಂಬಂಧಿಕರಾದ ನಾರಾಯಣರೆಡ್ಡಿ, ಶ್ರೀರಾಮಪ್ಪ, ಕುಮಾರ್‌, ಚಿನ್ನಪ್ಪಯ್ಯರಿಗೆ ಮಾತನಾಡಲು ಹೋದಾಗ ಅವರೆಲ್ಲರೂ ಇವರನ್ನೇ ಹೊಡೆದು ಗಲಾಟೆ ಮಾಡಿದ್ದ ಸಂಬಂಧ ಗೌನಿಪಲ್ಲಿ ಠಾಣೆಯಲ್ಲಿ ಪೋಕ್ಸೊ ಪ್ರಕರಣವನ್ನು ದಾಖಲಿಸಲಾಗಿತ್ತು.

ಪಿಎಸ್‌ಐ ವಿಕಾಸ್‌ ತನಿಖೆ ನಡೆಸಿ, ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2ನೇ ಜಿಲ್ಲಾ ಮತ್ತು ಸತ್ರನ್ಯಾಯಾಧೀಶರಾದ ಬಿ.ಎಸ್‌.ರೇಖಾ ಆರೋಪಿ ರೆಡ್ಡೆಪ್ಪಗೆ 3 ವರ್ಷ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ದಂಡ ವಿಧಿಸಿದ್ದು, ಉಳಿದ ಆರೋಪಿಗಳ ವಿರುದ್ಧ ಆರೋಪ ಸಾಭೀತಾಗದ ಹಿನ್ನೆಲೆಯಲ್ಲಿ ಪ್ರಕರಣದಿಂದ ಖುಲಾಸೆಗೊಳಿಸಿದ್ದಾರೆ.

ಎರಡೂ ಪ್ರಕರಣಗಳಲ್ಲಿ ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕ ಎಸ್‌.ಮುನಿಸ್ವಾಮಿಗೌಡ ವಾದ ಮಂಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ