ವೇಮಗಲ್: ಕೇವಲ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಷ್ಟೇ ಬರಗಾಲ ಬಂದಿಲ್ಲ. ಪ್ರತಿವರ್ಷ ತುಂಬಿ ತುಳುಕುತ್ತಿದ್ದ ಕೆಆರ್ಎಸ್ ಅಣೆಕಟ್ಟು ಈ ಬಾರಿ ಖಾಲಿಯಾಗಿದೆ. ಆ ದೇವರೇ ಮುನಿಸಿಕೊಂಡರೆ ಏನು ಮಾಡುವುದು? ಸರಕಾರಕ್ಕೆ ಇದು ಗಂಭೀರ ಸವಾಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್ಕುಮಾರ್ ಆತಂಕ ವ್ಯಕ್ತಪಡಿಸಿದರು.
ಕೋಲಾರ ತಾಲೂಕಿನ ಸುಗಟೂರು ಹೋಬಳಿ ತೊಟ್ಲಿ ಗ್ರಾಪಂ ವ್ಯಾಪ್ತಿಯ ಆಲೇರಿ ಗ್ರಾಮದಲ್ಲಿ ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಬಂಗಾರಪೇಟೆ, ವೆಸ್ಟ್ ಲಯನ್ಸ್ ಕಣ್ಣಿನ ಆಸ್ಪತ್ರೆ ಹಾಗೂ ಆಲೇರಿ ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕಣ್ಣಿನ ಪೊರೆರೋಗ ಉಚಿತ ತಪಾಸಣೆ, ರಕ್ತದಾನ ಶಿಬಿರ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು (ಐಒಎಲ್) ಉದ್ಘಾಟಿಸಿ ಮಾತನಾಡಿದರು.
ಎಲ್ಲೆಡೆ ಬರಗಾಲವಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರನ್ನು ಒದಗಿಸಿ ಜನರನ್ನು ಪಾರು ಮಾಡುವುದು ಸಕರಕಾರಕ್ಕೆ ದೊಡ್ಡಸವಾಲಾಗಿದೆ ಎಂದರು.
ಶೀಘ್ರದಲ್ಲಿ ಕೆ.ಸಿ.ವ್ಯಾಲಿ ನೀರು ಅವಿಭಜಿತ ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿದು ಬರಲಿದೆ. ಅದುವರೆಗೂ ರೈತರು ಸಹಕರಿಸಬೇಕೆಂದು ಮನವಿ ಮಾಡಿದರು.
ಸಮಾಜದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬದಲಾದ ಆಹಾರ ಪದ್ಧತಿ ಮತ್ತು ವಾತಾವರಣ ಬದಲಾವಣೆಯಿಂದಾಗಿ ಹೊಸಹೊಸ ಕಾಯಿಲೆಗಳು ಜನ-ಜಾನುವಾರುಗಳನ್ನು ಬಾಧಿಸುತ್ತಿವೆ. ವೈದ್ಯರು ಮತ್ತು ವಿಜ್ಞಾನಿಗಳಿಗೆ ಕಾಯಿಲೆಗಳನ್ನು ಪತ್ತೆಮಾಡುವುದೇ ದೊಡ್ಡ ಸವಾಲಾಗಿದೆ ಎಂದರು.
ಸರಕಾರಿ ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ಚಿಕಿತ್ಸೆಯೂ ಇದೆ. ಅನಗತ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಹಣ ವ್ಯಯ ಮಾಡಿಕೊಳ್ಳಬೇಡಿ. ಕಿವಿ, ಕಣ್ಣು, ಮೂಗು, ಹಲ್ಲು, ಹೃದಯ ಈ ಭಾಗಗಳು ಮನುಷ್ಯನಿಗೆ ತುಂಬಾ ಮುಖ್ಯ. 45 ವರ್ಷಕಳೆಯುತ್ತಿದ್ದಂತೆ ಈ ಅಂಗಾಗಗಳಲ್ಲಿ ತೊಂದರೆ ಕಾಣಿಸಿಕೊಂಡು ನೋವು ಕೊಡುವುದು ಸಾಮಾನ್ಯ ಸಂಗತಿ ಎಂದರು.
ದುಬಾರಿ ಖಾಸಗಿ ಆಸ್ಪತ್ರೆ ಮತ್ತು ಔಷಧ ಕಂಪನಿಗಳ ಮಾಲೀಕರು ತಮ್ಮ ಬಳಿ ಬಂದು ಇಂಗ್ಲಿಷ್ನಲ್ಲಿ ಮಾತನಾಡಿ ತಮಗೆ ಕಮಿಷನ್ ಕೊಡುತ್ತೇವೆಂದು ಹೇಳಿದರೆ ತಾನು ನೇರವಾಗಿ ಬೇಡ ಎಂದು ನಿರಾಕರಿಸುತ್ತಿದ್ದು, ಮತದಾರರ ವಿಶ್ವಾಸದಿಂದ ಆಯ್ಕೆಯಾಗಿರುವ ತಾನು ಜನರಿಗೆ ವಂಚನೆ ಮಾಡಿ, ಕಂಪನಿಗಳ ಏಜೆಂಟರುಗಳ ಬಳಿ ನಾಯಿಯಾಗಿ ಬದುಕಲು ತಾನೆಂದೂ ಸಿದ್ಧನಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುಗಟೂರು ಎಸ್ಎಫ್ಎಸ್ ಸೊಸೈಟಿಯ ಅಧ್ಯಕ್ಷ ಟಿ.ವಿ.ತಿಮ್ಮರಾಯಪ್ಪ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಾದಮಂಗಲ ಮಂಜುನಾಥ್, ತಾಲೂಕು ಪಂಚಾಯಿತಿ ಸದಸ್ಯೆ ಪದ್ಮಾವತಮ್ಮ ಚಂದೇಗೌಡ, ಆಂಜಿನಮ್ಮ ಕೃಷ್ಣಪ್ಪ, ಆಲೇರಿ ವೆಂಕಟರಾಮೇಗೌಡ, ತೊಟ್ಲಿ ಗ್ರಾಪಂ ಅಧ್ಯಕ್ಷೆ ಅಶ್ವಿನಿಬಾಬು, ಮಾಜಿ ಅಧ್ಯಕ್ಷ ಸಂಪಂತ್ಕುಮಾರ್, ಯುವ ಮುಖಂಡ ಆಲೇರಿಬಾಬು, ಲಯನ್ಸ್ ಸಂಸ್ಥೆಯ ಅದಿಲ್ಪಾಷಾ, ಶಾಲಾ ಮುಖ್ಯೋಪಾಧ್ಯಾಯ ಆರ್.ಶ್ರೀನಾಥ್, ಆಲೇರಿ ಯುವಕ ಸಂಘದ ಮುಖಂಡರಾದ ಮುರಳೀಗೌಡ, ಸುಮನ್ಗೌಡ, ಶಿವರಾಜ್, ರಾಜೇಶ್, ಚೌಡರೆಡ್ಡಿ, ಪೀರ್ಸಾಬ್, ತನ್ವೀರ್ ಪಾಷಾ , ಸಿ.ನಾರಾಯಣಸ್ವಾಮಿ ಮುಂತಾದವರು ಭಾಗವಹಿಸಿದ್ದರು.