ಆ್ಯಪ್ನಗರ

ಮೇಲ್ಮನೆ ಚುನಾವಣೆ ಮೈತ್ರಿ: ಭಾನುವಾರದೊಳಗೆ ನಿರ್ಧಾರ ಎಂದ ಕುಮಾರಸ್ವಾಮಿ

ಬಿಜೆಪಿ ಒಂದು ಕಡೆ ಜೆಡಿಎಸ್ ಬೆಂಬಲ ಕೇಳುತ್ತದೆ. ಇನ್ನೊಂದು ಕಡೆ ನಮ್ಮ ಪಕ್ಷವನ್ನು ಮುಗಿಸಲು ಪ್ರಯತ್ನ ಮಾಡುತ್ತಿದೆ. ಜೆಡಿಎಸ್ ಪಕ್ಷವನ್ನು ಸಂಪೂರ್ಣ ನಾಶ ಮಾಡಬೇಕೆಂದು ಎರಡೂ ರಾಷ್ಟ್ರೀಯ ಪಕ್ಷಗಳು ಪೈಪೋಟಿ ನಡೆಸುತ್ತಿವೆ.

Vijaya Karnataka Web 3 Dec 2021, 6:50 pm
ಕೋಲಾರ: 2023ರ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಪ್ರಸಕ್ತ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷವು ಯಾವ ಪಕ್ಷಕ್ಕಾದರೂ ಬೆಂಬಲ ನೀಡಬೇಕೆ-ಬೇಡವೇ ಎಂಬುದನ್ನು ಭಾನುವಾರದೊಳಗೆ ತೀರ್ಮಾನ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
Vijaya Karnataka Web ಎಚ್‌ಡಿ ಕುಮಾರಸ್ವಾಮಿ
ಎಚ್‌ಡಿ ಕುಮಾರಸ್ವಾಮಿ


ಮೇಲ್ಮನೆ ಚುನಾವಣೆ ನಿಮಿತ್ತ ಕೋಲಾರ ಜಿಲ್ಲೆಯಲ್ಲಿ ಕುಮಾರಸ್ವಾಮಿ ಪ್ರಚಾರ ಕೈಗೊಂಡಿದ್ದು, ಬೆಳಗ್ಗೆ ಮುಳಬಾಗಿಲಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದರು.

ವಿಧಾನಸಭಾ ಚುನಾವಣೆಯಲ್ಲಿ ನಿಖಿಲ್‌ ಸ್ಪರ್ಧೆ..? ಚರ್ಚೆಯೇ ಅಪ್ರಸ್ತುತ ಅಂದ್ರು ಕುಮಾರಸ್ವಾಮಿ..

ಬಿಜೆಪಿ ನಾಯಕರು ಬೆಂಬಲ ಕೇಳಿದ್ದಾರೆ ನಿಜ. ಎರಡು ದಿನದಲ್ಲಿ ನಮ್ಮ ಪಕ್ಷದ ಅಭಿಪ್ರಾಯ ಹೇಳುವುದಾಗಿ ನಾನು ಹೇಳಿರುವುದೂ ನಿಜ. ಇನ್ನೂ ಸಮಯ ಇದೆ, ಆತುರವೇನೂ ಇಲ್ಲ. 2023ರ ವಿಧಾನಸಭೆ ಚುನಾವಣೆಯಲ್ಲಿ 123 ಸ್ಥಾನ ಗೆಲ್ಲುವ ಗುರಿ ನಮ್ಮ ಪಕ್ಷದ್ದು. ಆ ಗೆಲುವಿಗೆ ಏನೆಲ್ಲ ಆಗಬೇಕೋ ಆ ಹಿನ್ನೆಲೆಯಲ್ಲಿ ಸ್ಥಳೀಯವಾಗಿಯೇ ಪಕ್ಷದ ನಾಯಕರು ಏನು ತೀರ್ಮಾನ ತೆಗೆದುಕೊಳ್ಳಬೇಕೋ ಎಂಬ ನಿರ್ದೇಶನವನ್ನು ನಾಳೆ ಅಥವಾ ನಾಡಿದ್ದರ ಒಳಗೆ ನೀಡಲಾಗುವುದು ಎಂದು ಎಚ್‌ಡಿಕೆ ಸ್ಪಷ್ಟಪಡಿಸಿದರು.

ಬಿಜೆಪಿ ಒಂದು ಕಡೆ ಜೆಡಿಎಸ್ ಬೆಂಬಲ ಕೇಳುತ್ತದೆ. ಇನ್ನೊಂದು ಕಡೆ ನಮ್ಮ ಪಕ್ಷವನ್ನು ಮುಗಿಸಲು ಪ್ರಯತ್ನ ಮಾಡುತ್ತಿದೆ. ಜೆಡಿಎಸ್ ಪಕ್ಷವನ್ನು ಸಂಪೂರ್ಣ ನಾಶ ಮಾಡಬೇಕೆಂದು ಎರಡೂ ರಾಷ್ಟ್ರೀಯ ಪಕ್ಷಗಳು ಪೈಪೋಟಿ ನಡೆಸುತ್ತಿವೆ. ಇದೆಲ್ಲವನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. 2022ಕ್ಕೆ ಜನತೆಯಿಂದಲೇ ಇದೆಲ್ಲಕ್ಕೂ ಉತ್ತರ ದೊರೆಯಲಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಮಾರ್ಮಿಕವಾಗಿ ಉತ್ತರಿಸಿದರು.

ಮೇಲ್ಮನೆಯಲ್ಲಿ ಕಾಂಗ್ರೆಸ್‌ ಮಣಿಸಲು ಬಿಜೆಪಿ-ಜೆಡಿಎಸ್‌ ನಡುವೆ ಮೈತ್ರಿ ಸಾಧ್ಯತೆ!

ಚುನಾವಣೆಗಳನ್ನು ಹೇಗೆ ಗೆಲ್ಲಬೇಕು ಎಂಬುದು ಬಿಜೆಪಿಗೆ ಚೆನ್ನಾಗಿ ಕರಗತವಾಗಿದೆ. ಹಣದಿಂದ ಗೆಲುವು ಸಾಧಿಸುವುದು ಹೇಗೆ ಎಂಬುದು ಆ ಪಕ್ಷಕ್ಕೆ ಚೆನ್ನಾಗಿ ತಿಳಿದಿದೆ. ರಾಜ್ಯದ ಹಣ ಲೂಟಿ ಮಾಡಿ ಆ ಪಕ್ಷ ಚುನಾವಣೆಗಳನ್ನು ಗೆಲ್ಲುತ್ತಿದೆ. ಆ ವಿಷಯದಲ್ಲಿ ಆ ಪಕ್ಷದ ನಾಯಕರಿಗೆ ಒಳ್ಳೆಯ ಅನುಭವ ಇದೆ ಹಾಗೂ ಅದರಲ್ಲಿ ಅವರು ಯಶಸ್ಸು ಸಾಧಿಸಿದ್ದಾರೆ. ಇಂಥ ಗೆಲುವು ನಿರಂತರವಾಗಿ ಎಲ್ಲ ಸಂದರ್ಭಗಳಲ್ಲೂ ಆಗುತ್ತದೆ ಎಂದು ಅವರು ನಂಬಿದ್ದಾರೆ. ಅದಕ್ಕೆ ವಿರುದ್ಧವಾಗಿ ಜನರು ತೀರ್ಮಾನ ತೆಗೆದುಕೊಳ್ಳುವ ಕಾಲ ಬಂದಿದೆ. ಹಣ ಬಲದ ವಿರುದ್ಧ ಒಂದಲ್ಲ ಒಂದು ದಿನ ರಾಜ್ಯದ ಜನರು ತಿರುಗಿಬೀಳುತ್ತಾರೆ ಎಂದು ಎಚ್‌ಡಿ ಕುಮಾರಸ್ವಾಮಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ