ಅಳವಂಡಿ; ಸಮೀಪದ ಬೆಟಗೇರಿ ಗ್ರಾ.ಪಂ.ನಲ್ಲಿ ಸೋಮವಾರ ನಡೆಯಬೇಕಿದ್ದ ಸಾಮಾನ್ಯ ಸಭೆ, ವಾಗ್ವಾದ, ಗದ್ದಲದಿಂದಾಗಿ ಮುಂದೂಡಲಾಯಿತು.
ಪಿಡಿಒ ಯಲ್ಲನಗೌಡರ್ ಸರಕಾರದಿಂದ ಬಂದ ಸುತ್ತೋಲೆಗಳನ್ನು ಓದಿದರು. ಗ್ರಾ.ಪಂ. ವ್ಯಾಪ್ತಿಯ ವಿಫಲ ಬೋರ್ವೆಲ್ ಮುಚ್ಚುವುದು, ಗ್ರಾಮ ನೀರು, ನೈರ್ಮಲ್ಯ ಸಮಿತಿ ರಚಿಸುವುದು, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಕರೆತರುವ ಅಭಿಯಾನ, ಗ್ರಾಮದ ಪಶು ಚಿಕಿತ್ಸಾಲಯಕ್ಕೆ ಆವರಣ ಗೋಡೆ ನಿರ್ಮಿಸುವ ಬಗ್ಗೆ ಚರ್ಚಿಸಿದರು.
ಸದಸ್ಯ ಗವಿಸಿದ್ದಪ್ಪ ಬೆಟಗೇರಿ, ಪಿಡಿಒ ಹಾಗೂ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡರು. ಸದಸ್ಯರಿಗೆ ಸರಿಯಾಗಿ ಗೌರವಧನ ಪಾವತಿಸುತ್ತಿಲ್ಲ. ಕಳೆದ ಒಂದು ವರ್ಷದಿಂದ ಸರಿಯಾಗಿ ಸಾಮಾನ್ಯ ಸಭೆ ನಡೆಸಿಲ್ಲ. ಜಮಾ ಖರ್ಚಿನ ಮಾಹಿತಿ ಇಲ್ಲ ಇತ್ಯಾದಿ ಸಮಸ್ಯೆಗಳ ಬಗ್ಗೆ ದನಿ ಎತ್ತಿದರು. ಇತರ ಸದಸ್ಯರೂ ಸಾಥ್ ನೀಡಿದರು.
ಒಂದು ವರ್ಷದ ಜಮಾ ಖರ್ಚಿನ ಬಗ್ಗೆ ಸದಸ್ಯರಿಗೆ ತಿಳಿಸುವವರೆಗೂ ಸಭೆ ನಡೆಸದಂತೆ ಸದಸ್ಯರು ತಾಕೀತು ಮಾಡಿದರು. ನಂತರ ಸಭೆಯನ್ನು ಮುಂದೂಡಲಾಯಿತು.
ಗ್ರಾ.ಪಂ.ಅಧ್ಯಕ್ಷೆ ಹನುಮವ್ವ ಕಂಬಳಿ ಅಧ್ಯಕ್ಷ ತೆ ವಹಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷೆ ಶಾರವ್ವ ನಡುವಿನಮನಿ, ಸದಸ್ಯರಾದ ನಿರ್ಮಲಾ ತಿಗರಿ, ಗಿರಿಜಮ್ಮ ಕೊರಣ್ಣವರ, ರಹೆಮಾನ್ಸಾಬ್ ಜೀರಕಂಡಿ, ನಿರ್ಮಲಾ, ಮತ್ತೂರು, ಮಹೇಶ ಯತ್ನಳ್ಳಿ, ಬಸವರಾಜ ಮತ್ತೂರ, ರೇಣುಕಾ ಕಿಟಗೇರಿ, ಹಂಚಾಳಪ್ಪ ಕೊರವರ, ದೇವಮ್ಮ ಮಾಗಳದ, ಹನುಮವ್ವ ಹಾರ್ನಳ್ಳಿ, ಅಂದಪ್ಪ ಚಿಲಗೋಡ್ರ, ದ್ಯಾಮಪ್ಪ ನೀರಲಗಿ ಹಾಗೂ ಕಾರ್ಯದರ್ಶಿ ಶಿವರಾಜ ಸಿಬ್ಬಂದಿ ಹಾಜರಿದ್ದರು.