ಕೊಪ್ಪಳ; ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ಫಲಾನುಭವಿಗಳಿಗೆ ಸತಾಯಿಸದೇ ಸರಳ ರೀತಿಯಲ್ಲಿ ಸಾಲ ಮಂಜೂರುಗೊಳಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸಂಸದ ಸಂಗಣ್ಣ ಕರಡಿ ಸೂಚಿಸಿದರು.
ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು. 2015-16 ನೇ ಸಾಲಿನಲ್ಲಿ ಬ್ಯಾಂಕ್ಗಳಿಂದ ಮಂಜೂರಾಗಿರುವ ಮೊದಲನೆ ಕಂತಿನ ಸಾಲ ಬಿಡುಗಡೆ ಮಾಡಿದ ಪ್ರಕರಣಗಳಿಗೆ ಪೂರ್ಣ ಸಾಲ ಬಿಡುಗಡೆ ಮಾಡಿ ಘಟಕಗಳ ಅನುಷ್ಠಾನಕ್ಕೆ ಶೀಘ್ರ ಕ್ರಮ ತೆಗೆದುಕೊಳ್ಳಬೇಕು. ಈ ಯೋಜನೆಗೆ ಕೇಂದ್ರ ಸರಕಾರದ ಅನುದಾನ ಸಾಕಷ್ಟು ಲಭ್ಯವಿದ್ದು, ಸಹಾಯ ಧನವನ್ನು ಬ್ಯಾಂಕ್ಗಳು ತಮ್ಮ ಕೇಂದ್ರ ಶಾಖೆಯಿಂದ ಪಡೆದುಕೊಳ್ಳಬೇಕು.ಯೋಜನೆಯ ಫಲಾನುಭವಿಗಳಿಗೆ ಕಿರುಕುಳ ನೀಡಬಾರದು. ಜಿಲ್ಲೆಯಲ್ಲಿ ಬರಗಾಲ ಆವರಿಸಿದ್ದು, ಜನತೆ ಗುಳೆ ಹೋಗದಂತೆ ತಡೆಯಲು ಹೆಚ್ಚು ಫಲಾನುಭವಿಗಳಿಗೆ ಸಾಲ ಬಿಡುಗಡೆಗೊಳಿಸಬೇಕು. ಕೇಂದ್ರ ಸರಕಾರದ ಹೊಸ ಯೋಜನೆಯಾದ ಮುದ್ರಾ ಯೋಜನೆಯಡಿ ಅರ್ಜಿ ಸಲ್ಲಿಸಿದವರಿಗೆ ಯಾವುದೇ ಶೂರಿಟಿ ಕೇಳದೆ ಸುಲಭವಾಗಿ ಸಾಲ ಮಂಜೂರುಗೊಳಿಸಬೇಕು. ಸ್ಟ್ಯಾಂಡ್ ಅಪ್ ಯೋಜನೆಯಲ್ಲಿ ಪ್ರತಿ ಬ್ಯಾಂಕ್ ಶಾಖೆಗಳು ಕನಿಷ್ಠ ಒಬ್ಬ ಮಹಿಳಾ ಫಲಾನುಭವಿ, ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ ಸಾಲ ಮಂಜೂರುಗೊಳಿಸಬೇಕು. ಈ ಯೋಜನೆಯ ಫಲಾನುಭವಿಗಳಿಗೆ ಕೈಗಾರಿಕಾ ಕೇತ್ರದಲ್ಲಿ ರಾಜ್ಯ ಸರಕಾರ 2014-19 ರ ಕೈಗಾರಿಕಾ ನೀತಿಯಡಿ ಸಹಾಯ ಧನ ಸೌಲಭ್ಯ ಒದಗಿಸಿದ್ದು, ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಎಂ.ಕನಗವಲ್ಲಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಆರ್.ರಾಮಚಂದ್ರನ್, ನಾಮ ನಿರ್ದೇಶಿತ ಸದಸ್ಯರು, ಲೀಡ್ ಬ್ಯಾಂಕ್ ಮ್ಯಾನೇಜರ್ ಸೇರಿ ಇತರರು ಇದ್ದರು.