ಆ್ಯಪ್ನಗರ

ಅಂಜನಾದ್ರಿ ಬೆಟ್ಟದಲ್ಲಿ ‘ಪೂರ್ಣಾಹುತಿ ಹೋಮ’

ತಾಲೂಕಿನ ಆನೆಗೊಂದಿ ಬಳಿಯ ಅಂಜನಾದ್ರಿ ಬೆಟ್ಟದಲ್ಲಿ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರು, ಮೂರು ದಿನಗಳ ವ್ರತವನ್ನು ಮಂಗಳವಾರ ಪೂರ್ಣಗೊಳಿಸಿದರು. ಇದೇ ಸಂದರ್ಭದಲ್ಲಿ 42 ತಿಂಗಳ ಜೈಲು ಶಿಕ್ಷೆ ನೆನೆದು ಭಾವುಕರಾದರು.

ವಿಕ ಸುದ್ದಿಲೋಕ 1 Jun 2016, 8:33 am
ಗಂಗಾವತಿ; ತಾಲೂಕಿನ ಆನೆಗೊಂದಿ ಬಳಿಯ ಅಂಜನಾದ್ರಿ ಬೆಟ್ಟದಲ್ಲಿ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರು, ಮೂರು ದಿನಗಳ ವ್ರತವನ್ನು ಮಂಗಳವಾರ ಪೂರ್ಣಗೊಳಿಸಿದರು. ಇದೇ ಸಂದರ್ಭದಲ್ಲಿ 42 ತಿಂಗಳ ಜೈಲು ಶಿಕ್ಷೆ ನೆನೆದು ಭಾವುಕರಾದರು.
Vijaya Karnataka Web
ಅಂಜನಾದ್ರಿ ಬೆಟ್ಟದಲ್ಲಿ ‘ಪೂರ್ಣಾಹುತಿ ಹೋಮ’


ಹನುಮ ಜಂಯಂತಿ ನಿಮಿತ್ತ ಅವರು, ಬೆಳಗ್ಗೆ ಋಷಿಮುಖ ಪರ್ವತ ಬಳಿಯ ತುಂಗಭದ್ರಾ ನದಿಯಲ್ಲಿ ಸ್ನಾನಮಾಡಿದರು. ಇರುಮುಡಿ ಹೊತ್ತು ಅಂಜನಾದ್ರಿ ಬೆಟ್ಟ ಏರಿದರು. ಇದೇ ಸಂದರ್ಭದಲ್ಲಿ ‘ಪೂರ್ಣಾಹುತಿ ಹೋಮ’ದಲ್ಲೂ ಭಾಗವಹಿಸಿದರು. ನಂತರ ಅವರನ್ನು ದೇವಸ್ಥಾನದ ಅರ್ಚಕ ಪಂಡಿತ ವಿದ್ಯಾದಾಸ್‌ಬಾಬಾ ಸನ್ಮಾನಿಸಿದರು.

ಅಪಾರ ಹಿಂಸೆ ಅನುಭವಿಸಿರುವೆ ;ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಜಿ.ಜನಾರ್ದನರೆಡ್ಡಿ ಮಾತನಾಡಿದರು. ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ 42 ತಿಂಗಳು ಅನುಭವಿಸಿದ ಜೈಲು ಶಿಕ್ಷೆಯನ್ನು ನೆನೆದು ಕೆಲ ಕಾಲ ಭಾವುಕರಾದರು. ‘‘ಗಣಿಗಾರಿಕೆಯಲ್ಲಿ ತಪ್ಪು ಮಾಡಿದ್ದೇನೆಯೋ? ಇಲ್ಲವೋ? ನನಗಂತೂ ಗೊತ್ತಿಲ್ಲ. ಇಡೀ ವಿಶ್ವವೇ ತಿರುಗಿ ನೋಡುವ ರೀತಿಯಲ್ಲಿ ನಾನು ಹಿಂಸೆ ಅನುಭವಿಸಿದ್ದೇನೆ. ನ್ಯಾಯಾಲಯದ ಮೇಲೆ ನನಗೆ ಅಪಾರ ನಂಬಿಕೆ ಇದೆ. ಬಂದಿರುವ ಕಷ್ಟಗಳನ್ನು ಶ್ರೀರಾಮ ಹಾಗೂ ಆಂಜನೇಯ ಪರಿಹರಿಸಲಿದ್ದಾರೆ ಎಂಬ ನಂಬಿಕೆಯಿದೆ. ಸಂಕಲ್ಪ ಈಡೇರಿಸುವಂತೆ ಕೋರಿ ಸ್ನೇಹಿತ ಬಿ.ಶ್ರೀರಾಮುಲು ಅವರ ಜತೆ ಹನುಮ ಮಾಲೆ ಧರಿಸಿ, ಮೂರು ದಿನಗಳವರೆಗೆ ವ್ರತ ಆಚರಿಸಿದೆ’’ ಎಂದರು.

ಬಳ್ಳಾರಿಗೆ ಕಾಲಿಡಲಾಗದ್ದಕ್ಕೆ ನೋವು: ‘‘ಜೈಲಿನಲ್ಲಿದ್ದಾಗ ನಿತ್ಯ 6-8 ತಾಸು ರಾಮಾಯಣ, ಭಗವದ್ಗೀತೆ, ಮಹಾಭಾರತ ಗ್ರಂಥಗಳ ಪಠಣ ಮಾಡುತ್ತಿದ್ದೆ. ನನ್ನ ತಂದೆ ಒಬ್ಬ ಪೊಲೀಸ್ ಪೇದೆಯಾಗಿದ್ದರು. ನಂತರ ನಾನು ಅಧಿಕಾರದಲ್ಲಿದ್ದು ಒಳ್ಳೆಯದು, ಕೆಟ್ಟದ್ದು ಎರಡೂ ನೋಡಿದೆ. ಹಣವಿದ್ದಾಗ ಕೀರ್ತಿ, ಅಪಕೀರ್ತಿ, ಗೌರವ, ಅಗೌರವ ಅನುಭವಿಸಿದೆ. ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಬಂದಾಗ ನನ್ನ ಮೇಲೆ ನಂಬಿಕೆ ಇಟ್ಟಿರುವ ಜನರು, ನನಗೆ ಮೊದಲಿನ ಪ್ರೀತಿ ತೋರಿದರು. ಆದರೆ, ಬಳ್ಳಾರಿ ಜಿಲ್ಲೆಗೆ ಕಾಲಿಡಲಾಗದ ನೋವು ಬಲವಾಗಿ ಕಾಡುತ್ತಿದೆ’’ ಎಂದು ಹೇಳಿದರು.

ಪಕ್ಷ ಬಯಸಿದರೆ ರಾಜಕೀಯಕ್ಕೆ: ‘‘ನನ್ನ ಮೇಲಿರುವ ಎಲ್ಲ ಆರೋಪಗಳು ಖುಲಾಸೆಯಾದ ಬಳಿಕ, ಬಿಜೆಪಿ ನಾಯಕರು ಬಯಸಿದರೆ, ರಾಜಕೀಯಕ್ಕೆ ಮತ್ತೆ ಮರಳುವೆ. ಸ್ನೇಹಿತ ಬಿ.ಶ್ರೀರಾಮುಲು ಅವರನ್ನು ಬಿಟ್ಟು ಯಾವ ನಿರ್ಧಾರ ಕೈಗೊಳ್ಳುವುದಿಲ್ಲ’’ ಎಂದರು. ಈ ಸಂದರ್ಭದಲ್ಲಿ ಕಂಪ್ಲಿ ಶಾಸಕ ಟಿ.ಎಚ್.ಸುರೇಶಬಾಬು, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಎಮ್ಮೆಲ್ಸಿ ಮೃತ್ಯುಂಜಯ ಜಿನಗಾ, ಬಳ್ಳಾರಿ ಮಾಜಿ ಮೇಯರ್ ಗೋವಿಂದರಾಜು, ಪಾಲಿಕೆ ಸದಸ್ಯ ಕೆ.ಎಸ್.ದಿವಾಕರ್, ಬುಡಾ ಮಾಜಿ ಅಧ್ಯಕ್ಷ ಗುರುಲಿಂಗನಗೌಡ, ಕೆಎಂಎಫ್ ಮಾಜಿ ಅಧ್ಯಕ್ಷ ತಿಮ್ಮಾರೆಡ್ಡಿ, ಉದ್ಯಮಿ ಜಯಂತ ಪಂತರ್, ಸಿಂಗನಾಳ ಸುರೇಶ ಸೇರಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ