ಆ್ಯಪ್ನಗರ

‘ಕೈ’ ಗೊಂದಲ ಶೀಘ್ರ ಶಮನ: ಸಚಿವ ರಾಯರೆಡ್ಡಿ

ರಾಜ್ಯ ಸಚಿವ ಸಂಪುಟ ಪುನಾರಚನೆ ನಂತರ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಗೊಂದಲ, ಇನ್ನೆರಡು ದಿನಗಳಲ್ಲಿ ಶಮನವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.

ವಿಕ ಸುದ್ದಿಲೋಕ 27 Jun 2016, 7:19 am
ಕೊಪ್ಪಳ; ರಾಜ್ಯ ಸಚಿವ ಸಂಪುಟ ಪುನಾರಚನೆ ನಂತರ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಗೊಂದಲ, ಇನ್ನೆರಡು ದಿನಗಳಲ್ಲಿ ಶಮನವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.
Vijaya Karnataka Web
‘ಕೈ’ ಗೊಂದಲ ಶೀಘ್ರ ಶಮನ: ಸಚಿವ ರಾಯರೆಡ್ಡಿ


ಸಚಿವರಾದ ಬಳಿಕ ಸ್ವಕ್ಷೇತ್ರಕ್ಕೆ ಮೊದಲ ಬಾರಿ ಆಗಮಿಸಿದ್ದ ಅವರು, ಯಲಬುರ್ಗಾ ಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭಕ್ಕೂ ಮುಂಚೆ ಸುದ್ದಿಗಾರರೊಂದಿಗೆ ಮಾತನಾಡಿದರು. ‘‘ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅವರು, ಅಧಿಕಾರ ವ್ಯಾಮೋಹ ಬಿಟ್ಟು ಬೇರೆಯವರಿಗೆ ಸಚಿವ ಸ್ಥಾನ ಸಿಕ್ಕಿರುವುದಕ್ಕೆ ಖುಷಿ ಪಡಬೇಕು. ಮೂರು ವರ್ಷ ಆಡಳಿತ ನಡೆಸಿದ ಕೆಲ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲಾಗಿದೆ. ಮಂತ್ರಿ ಪರಿಷತ್ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು, ಸಚಿವ ಸ್ಥಾನದಿಂದ ಕೆಲವರನ್ನು ಕೈಬಿಡುವ ಸೂಚನೆಯನ್ನೂ ನೀಡಿದ್ದರು. ಶ್ರೀನಿವಾಸ ಪ್ರಸಾದ್ ಅವರ ಬಗ್ಗೆ ಅಪಾರ ಗೌರವವಿದೆ. ಅವರೊಬ್ಬ ಪ್ರಬುದ್ಧ ರಾಜಕಾರಣಿ. ಸದ್ಯದ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕು. ಸಂವಿಧಾನದಲ್ಲಿ ಸಿಎಂ ಸೇರಿ 34ಕ್ಕಿಂತ ಹೆಚ್ಚಿನ ಶಾಸಕರಿಗೆ ಸಚಿವ ಸ್ಥಾನ ನೀಡಲು ಬರುವುದಿಲ್ಲ. ನಾನು 6 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು, ಮೂರು ವರ್ಷ ಸಚಿವ ಸ್ಥಾನಕ್ಕಾಗಿ ಕಾಯಲಿಲ್ಲವೇ? ಎಲ್ಲರಿಗೂ ಸಚಿವ ಸ್ಥಾನ ದೊರೆಯದು’’ ಎಂದರು.

ಜನರೇ ದೇವರು: ‘‘ನನ್ನನ್ನು ಸಚಿವನಾಗಿ ಮಾಡುವ ಮೂಲಕ ಪಕ್ಷ ದೊಡ್ಡ ಜವಾಬ್ದಾರಿ ನೀಡಿದೆ. ಸಚಿವನಾಗಿದ್ದೇನೆ ಎಂಬ ಉತ್ಸಾಹದ ಜತೆಗೆ ಜವಾಬ್ದಾರಿ ಹೆಚ್ಚಿದೆ. ಸಚಿವನೆಂಬ ಗತ್ತಿನಲ್ಲಿ ಕಾರಿನ ಮುಂದೆ ಪೊಲೀಸ್ ಜೀಪ್ ಒಯ್ಯಬೇಕು ಎನ್ನುವ ಇರಾದೆ ಇಲ್ಲ. ಜನರ ಸೇವೆಯೇ ನನಗೆ ಮುಖ್ಯ. ಜನರೇ ನನ್ನ ಪಾಲಿಗೆ ನಿಜವಾದ ದೇವರು. ದೇವರನ್ನು ಹುಡುಕಿಕೊಂಡು ದೇವಾಲಯಕ್ಕೆ ಹೋಗುವುದಿಲ್ಲ. ಜನರ ಬಳಿಗೆ ತೆರಳಿ, ನಿಜವಾದ ದೇವರ ಸೇವೆಮಾಡುವೆ. ಅವರ ಸಮಸ್ಯೆ ಪರಿಹರಿಸುವೆ. ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಜನ ಸೇವೆ ಮಾಡುವೆ’’ ಎಂದು ಭರವಸೆನೀಡಿದರು.

ಅಧಿಕಾರಿಗಳಿಂದ ಮಾಹಿತಿ: ‘‘ಅತಿಥಿ ಉಪನ್ಯಾಸಕರ ಸಮಸ್ಯೆ ಗಮನಕ್ಕೆ ಬಂದಿದೆ. ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆಯುವೆ. ತಳಕಲ್ ಎಂಜಿನಿಯರಿಂಗ್ ಕಾಲೇಜಿಗೆ 100 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕಟ್ಟಡ ನಿರ್ಮಾಣ ಕಾಮಗಾರಿ ಶೀಘ್ರ ಆರಂಭವಾಗಲಿದೆ. ನಮ್ಮೂರಿನ ಕಾಲೇಜಿಗೆ ಅನುಮೋದನೆ ಸಹಿ ಹಾಕುವ ಭಾಗ್ಯ ನನಗೆ ದಕ್ಕಿದೆ’’ ಎಂದು ಹೇಳಿದರು.

3ನೇ ಮಹಡಿಯಿಂದ ಭ್ರಷ್ಟಾಚಾರ: ‘‘ವಿಧಾನಸಭೆಯ ಮೂರನೇ ಮಹಡಿಯಿಂದಲೇ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧ. ನಾವೆಲ್ಲರೂ ಪ್ರಾಮಾಣಿಕವಾಗಿ ಎಲ್ಲಿಯವರೆಗೆ ಕೆಲಸ ಮಾಡುವುದಿಲ್ಲವೊ? ಅಲ್ಲಿಯವರೆಗೆ ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ. ಜವಾಬ್ದಾರಿ ಸ್ಥಾನದಲ್ಲಿ ಇರುವವರು ಪ್ರಾಮಾಣಿಕರಾಗಿರಬೇಕು. ಮಾಸಿಕ ವೇತನ 80 ಸಾವಿರ ರೂ., ಮನೆಬಾಡಿಗೆ 1 ಲಕ್ಷ ರೂ., ಟಿಎ, ಡಿಎ 2,500 ರೂ.ಗಳನ್ನು ನಾನು ಈಗಲೂ ತೆಗೆದುಕೊಳ್ಳುವುದಿಲ್ಲ’’ ಎಂದು ಸಚಿವ ರಾಯರೆಡ್ಡಿ ಪುನರುಚ್ಛರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ