ಕೊಪ್ಪಳ; ಇಲ್ಲಿನ ನಗರಸಭೆಯ ಸಾಮಾನ್ಯ ಸಭೆಯಲ್ಲಿ ವಾರ್ಡ್ಗಳ ಜ್ವಲಂತ ಸಮಸ್ಯೆಗೆ ಮಹತ್ವ ನೀಡಿಲ್ಲ ಎಂದು ಆರೋಪಿಸಿ, ಸದಸ್ಯರು ಗೈರು ಹಾಜರಾದ ಹಿನ್ನೆಲೆಯಲ್ಲಿ ಶುಕ್ರವಾರ ಸಭೆ ರದ್ದುಗೊಂಡಿತು.
ವಾರ್ಡ್ನ ಜನರು ಹತ್ತು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಮಾನ್ಯಸಭೆಯಲ್ಲಿ ವಿಷಯ ತೆಗೆದುಕೊಂಡಿಲ್ಲ. ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ತಾಳುತ್ತಿದ್ದಾರೆ. ಎಲ್ಲ ವಾರ್ಡ್ಗಳ ಸಮಸ್ಯೆಗಳನ್ನು ಸಭೆಯಲ್ಲಿ ಚರ್ಚೆಗೆ ತೆಗೆದುಕೊಳ್ಳುವವರೆಗೆ ಹಾಜರಾಗುವುದಿಲ್ಲ ಎಂದು ಆಡಳಿತ ಪಕ್ಷದ ಸದಸ್ಯರು ಸಹಿ ಮಾಡಿರುವ ಪತ್ರವನ್ನು ಪೌರಾಯುಕ್ತರಿಗೆ ರವಾನಿಸಿದರು.
ಈ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯಬೇಕಿದ್ದ ಸಭೆಗೆ ನಾಲ್ಕೈದು ಸದಸ್ಯರು ಮಾತ್ರ ಹಾಜರಾಗಿದ್ದರು. ಸಭೆ ನಡೆಯಬೇಕಿದ್ದ ಸಭಾಂಗಣದಲ್ಲಿ ವಿದ್ಯುತ್ ಬೆಳಕು ಕೂಡ ಇರಲಿಲ್ಲ.
ನಡೆಯದ ಚರ್ಚೆ: ಸಭೆ ನಡೆದಿದ್ದರೆ ಹಲವಾರು ವಿಷಯಗಳು ಚರ್ಚೆಗೆ ಬರುತ್ತಿದ್ದವು. ಜನೆವರಿಯಿಂದ ಜೂನ್ವರೆಗೆ ಆದ ಜಮಾ, ಖರ್ಚುಗಳಿಗೆ ಅನುಮೋದನೆ ನೀಡುವುದು, ಸಾರ್ವಜನಿಕ ಮೈದಾನ, ಶಾದಿಮಹಲ್, ಸಾಹಿತ್ಯ ಭವನ ಸೇರಿದಂತೆ ನಾನಾ ಕಡೆಗಳಲ್ಲಿ ಮನರಂಜನೆ, ಸೇಲ್, ಭಾಷಣ ಕಾರ್ಯಕ್ರಮ ಸೇರಿ ನಾನಾ ಖಾಸಗಿ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಸೇವಾ ಶುಲ್ಕ ನಿಗದಿಪಡಿಸುವುದು ಸೇರಿ 20 ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕಿತ್ತು. ಆದರೆ ಸಭೆ ರದ್ದುಗೊಂಡಿದ್ದರಿಂದ ಯಾವ ಚರ್ಚೆಗಳು ನಡೆಯಲಿಲ್ಲ.
ಬಿಗಿಪಟ್ಟು: ಸಭೆ ರದ್ದುಗೊಂಡಿದ್ದರಿಂದ ಎಲ್ಲ ವಿಷಯಗಳಿಗೆ ತಿಲಾಂಜಲಿ ಇಡಲಾಯಿತು. ಸದಸ್ಯರು ತಮ್ಮ ಬೇಡಿಕೆ ಈಡೇರಿಸುವವರೆಗೆ ಸಭೆಗೆ ಹಾಜರಾಗುವುದಿಲ್ಲ ಎಂದು ಪಟ್ಟು ಹಿಡಿದರು. ಮುಂದಿನ ಸಭೆಯಲ್ಲಿ ಎಲ್ಲ ವಾರ್ಡ್ಗಳಿಗೆ ಮಹತ್ವ ನೀಡುವ ಮೂಲಕ ಸಭೆ ನಡೆಯುತ್ತದೆಯೋ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕಿದೆ.
-----
ಆಡಳಿತ ಮಂಡಳಿ ಇರುವುದರಿಂದ ನಾನೇನು ಹೇಳುವುದಕ್ಕೆ ಬರುವುದಿಲ್ಲ. ಸದಸ್ಯರೆಲ್ಲರೂ ಬಂದರೆ ಸಭೆ ಆರಂಭಿಸಲಾಗುವುದು. ಇಲ್ಲಿಗೆ ಹೊಸದಾಗಿ ಬಂದಿರುವುದರಿಂದ ಸರಿಯಾಗಿ ಮಾಹಿತಿ ಇಲ್ಲ.
- ಕೆ.ಪರಮೇಶ್ವರ, ಪೌರಾಯುಕ್ತ, ನಗರಸಭೆ
------
ಸದಸ್ಯರ ಬೇಡಿಕೆಗಳನ್ನು ಸಭೆಯಲ್ಲಿ ಗಮನಕ್ಕೆ ತೆಗೆದುಕೊಂಡಿಲ್ಲ ಎಂದು ಬಹುತೇಕ ಸದಸ್ಯರು ಸಭೆಗೆ ಗೈರು ಹಾಜರಾಗಿದ್ದಾರೆ. ಸಭೆ ಆರಂಭಿಸಿದರೆ ಕೋರಂ ಕೊರತೆ ಅನುಭವಿಸಬೇಕಾಗಬಹುದೆಂದು ಸಭೆ ನಡೆಸಿಲ್ಲ.
- ಖಾಜಾವಲಿ ಬನ್ನಿಕೊಪ್ಪ, ಅಧ್ಯಕ್ಷ, ಸ್ಥಾಯಿ ಸಮಿತಿ