ಮುದೇನೂರು: ರೈತರ ಪಾಲಿಗೆ ವರವಾಗಬೇಕಿದ್ದೆ ಎಲೆಕೋಸು (ಕ್ಯಾಬೀಜ್), ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯ ಪರಿಣಾಮ, ಬಿಡಿಗಾಸಿಗೆ ಕೇಳುವವರಿಲ್ಲದಂತಾಗಿದೆ. ಬೆಳೆ ಬೆಳೆದ ಹೊಲದಲ್ಲೇ ಮಣ್ಣಾಗುತ್ತಿದೆ.!
ಲಾಭದ ಮಾತಿರಲಿ, ಬೆಳೆ ಬೆಳೆಯಲು ರೈತರು ಮಾಡಿದ ಖರ್ಚು ವಾಪಸ್ ದೊರೆಯದಂತಾಗಿದೆ. ಮಳೆ-ಬೆಳೆ ರೈತರೊಂದಿಗೆ ಚೆಲ್ಲಾಟವಾಡುತ್ತಿರುವ ಜತೆಗೆ, ಮಾರುಕಟ್ಟೆಯಲ್ಲಿನ ಬೆಲೆ ಇಳಿಕೆ ರೈತರು ನಷ್ಟಕ್ಕೊಳಗಾಗಲು ಕಾರಣವಾಗಿದೆ. ಬೇಡಿಕೆ ಕುಗ್ಗಿದ್ದು, ವೈಜ್ಞಾನಿಕ ಬೆಲೆಯೂ ದೊರೆಯುತ್ತಿಲ್ಲ. ಮದ್ಯವರ್ತಿಗಳ ತಂತ್ರವೂ ಬೆಲೆ ಇಳಿಕೆಗೆ ಪರೋಕ್ಷವಾಗಿ ಕಾರಣ ಎನ್ನುವ ಅನುಮಾನವೂ ರೈತ ವಲಯದಲ್ಲಿ ಸುಳಿದಾಡುತ್ತಿದೆ.
ಕೃಷಿಯಲ್ಲಿ ಹೊಸ ಪ್ರಯೋಗಗಳ ಮೂಲಕ ಗುರುತಿಸಿಕೊಂಡಿರುವ ದೇವರಡ್ಡೆಪ್ಪ ಮೇಟಿ ಅವರ ಹೊಲದಲ್ಲಿ ಹುಲುಸಾಗಿ ಬೆಳೆದಿರುವ ಉತ್ತಮ ತಳಿಯ ಎಲೆಕೋಸು, ವ್ಯಾಪಾರಿಗಳು ಖರೀದಿಸಲು ಸಿದ್ಧರಿಲ್ಲದ್ದರಿಂದ ಬೆಲೆಯಿಲ್ಲದೇ ಜಮೀನಿನಲ್ಲಿ ಕೊಳೆತು, ಹುಳಗಳಿಗೆ ಆಹಾರವಾಗಿದೆ.
ಖರ್ಚು: ಪ್ರತಿ ಎಕರೆಗೆ ಅಂದಾಜು 50 ಸಾವಿರ ರೂಪಾಯಿ ಖರ್ಚು ಮಾಡಲಾಗಿದ್ದು, ರೈತರ ಶ್ರಮ, ಕೂಲಿ ಕಾರ್ಮಿಕರ ವೇತನ ಲೆಕ್ಕ ಹಾಕಿದರೆ ಕಣ್ಣಲ್ಲಿ ನೀರು ಬರುತ್ತದೆ. ಎಕರೆಗೆ ಕನಿಷ್ಠ 2 ಲಕ್ಷ ರೂ. ಲಾಭ ಬರಬೇಕಿತ್ತು. ಕೃಷಿಯನ್ನು ಲಾಭದಾಯಕವಾಗಿಸಲು ಕೆಲವೊಮ್ಮೆ ಪರ್ಯಾಯ ಬೆಳೆಗಳನ್ನು ಬೆಳೆಯಲಾಗುತ್ತದೆ. ಆದರೆ ಮಾರುಕಟ್ಟೆಯ ವೈಪರೀತ್ಯ, ರೈತರನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ ಎನ್ನುವುದು ದೇವರಡ್ಡೆಪ್ಪ ಮೇಟಿ ಅವರ ಅಭಿಪ್ರಾಯ.
200 ಎಕರೆ: ಮದೇನೂರು ವ್ಯಾಪ್ತಿಯ ಸಾಸ್ವಿಹಾಳ, ಜುಮಲಾಪೂರ, ಗರ್ಜನಾಳ, ಕಿಡದೂರ, ಮ್ಯಾದರಡೊಕ್ಕಿ,ಅಮರಾಪೂರ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಬಹಳಷ್ಟು ರೈತರು 200ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಎಲೆಕೋಸು ಬೆಳೆ ಬೆಳೆದಿದ್ದಾರೆ. ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ.
ಎಷ್ಟಿದೆ ಬೆಲೆ : ಕಳೆದ ತಿಂಗಳಲ್ಲಿ ಮುದಗಲ್,ಲಿಂಗಸುಗೂರು, ಇಲಕಲ್, ಕುಷ್ಟಗಿ, ಗಂಗಾವತಿ ಮಾರುಕಟ್ಟೆಯಲ್ಲಿ 40 ಕೆ.ಜಿ ಮೂಟೆಗೆ 800 ರೂ.ವರೆಗೂ ಬೆಲೆ ಸಿಕ್ಕಿತ್ತು. ಈಗ ಅದರ ಬೆಲೆ 85 ರಿಂದ 100ರೂ.ಗೆ ಕುಸಿದಿದೆ. ಇನ್ನು ಬಿಡಿಯಾಗಿ ಕೆ.ಜಿ ಎಲೆಕೋಸು ಮೂರ್ನಾಲ್ಕು ರೂಪಾಯಿಗೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಹೋದಷ್ಟಕ್ಕೆ ಹೋಗ್ಲಿ: ಬಹಳಷ್ಟು ರೈತರು 1 ಅಥವಾ 2 ಎಕರೆಗಳಲ್ಲಿ ಮಾತ್ರ ಎಲೆಕೋಸು ಬೆಳೆದಿದ್ದಾರೆ. ಉಳಿದಂತೆ ಉಳ್ಳಾಗಡ್ಡೆ, ಮೆಣಸಿನಕಾಯಿ ಬೆಳೆ ಬೆಳೆದಿದ್ದಾರೆ. ಎಲೆಕೋಸು ಬೆಳೆ ಹೆಚ್ಚು ಆರೈಕೆ ಕೇಳುತ್ತದೆ. ಬೆಳೆಗೆ ರೋಗ ಹರಡಿದಾಗ ಹತೋಟಿಗೆ ತೀವ್ರ ಪ್ರಯಾಸಪಡಬೇಕಾಗುತ್ತದೆ. ಹಣ ಖರ್ಚು ಮಾಡಿ ಬೆಳೆ ಬೆಳೆದರೂ ಲಾಭ ಕೈಗೆಟುಕದಂತಾಗಿದೆ. ಬೆಲೆ ಕುಸಿತದ ನಡುವೆಯೂ ಅನಿವಾರ್ಯವಾಗಿ ಹೋದಷ್ಟಕ್ಕೆ ಹೋಗ್ಲಿ ಎಂದು ಮಾರಾಟ ಮಾಡಿದ್ದೇವೆ ಎಂದು ಸಾಸ್ವಿಹಾಳ ಗ್ರಾಮದ ರೈತರೊಬ್ಬರು ತಿಳಿಸಿದರು.
.....................
1 ಎಕರೆ ಜಮೀನಿನಲ್ಲಿ ಎಲೆಕೋಸು ಬೆಳೆದಿದ್ದು, ರಾಸಾಯನಿಕ ಗೊಬ್ಬರ, ಕೀಟನಾಶಕ, ಕೃಷಿ ಕೂಲಿಕಾರ್ಮಿಕರಿಗೆ ಕೂಲಿ ಎಲ್ಲ ಸೇರಿ ಒಟ್ಟು 50 ಸಾವಿರ ರೂ. ಖರ್ಚು ಮಾಡಿದ್ದೇವೆ. ಆದರೆ, ಮಾರುಕಟ್ಟೆಯಲ್ಲಿ ಬೆಲೆ ತೀವ್ರ ಕುಸಿತ ಕಂಡಿದ್ದು, ಕೈಗೆ ಬಂದ ತುತ್ತು ಬಾಯಿಗೆ ದಕ್ಕದಂತಾಗಿದೆ.
- ದೇವರಡೆಪ್ಪ ಮೇಟಿ, ರೈತ ಸಾಸ್ವಿಹಾಳ.