ಕೊಪ್ಪಳ: ಗಣಿತ ವಿಷಯ ಸಮುದ್ರವಿದ್ದಂತೆ. ಅದು ವಿಸ್ಮಯ, ಅಂಕಿ ಸಂಖ್ಯೆಗಳ ವಿಜ್ಞಾನ. ಕಲಿತಷ್ಟು ಆಳವಾಗಿ ಸಾಗುತ್ತದೆ ಎಂದು ಶ್ರೀಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ನಗರದ ಶ್ರೀಗವಿಮಠದಲ್ಲಿ ಶ್ರೀವೀರಭದ್ರೇಶ್ವರ ಪಬ್ಲಿಕೇಷನ್ಸ್ ಪ್ರಕಟಿಸಿರುವ ವಿ.ವಿ.ಗೊಂಡಬಾಳರ 'ಸ್ಪರ್ಧಾ ಗಣಿತ ಮತ್ತು ಮಾನಸಿಕ ಸಾಮರ್ಥ್ಯ' ಎಂಬ ಗಣಿತ ಪ್ರಶ್ನೋತ್ತರ ಕೃತಿಯನ್ನು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದರು. ಗಣಿತ ಕೃತಿಗಳ ರಚನೆ ಕಡಿಮೆಯಾಗಿದೆ. ಗಣಿತದ ವಿಷಯವೇ ಕಬ್ಬಿಣದ ಕಡಲೆ ಎನ್ನುವ ಮನೋಭಾವ ವಿದ್ಯಾರ್ಥಿಗಳಲ್ಲಿ ಮೂಡುತ್ತಿದೆ. ಇದನ್ನು ತೆಗೆದು ಹಾಕಬೇಕು. ಗಣಿತ ವಿಷಯದಲ್ಲಿ ಆಸಕ್ತಿಯಿಂದಲೇ ಕಲಿಕೆ ನಡಸಿದರೆ ಎಲ್ಲ ಲೆಕ್ಕಗಳೂ ಸುಲಭವಾಗಲಿವೆ. ಕೃತಿ ಗಣಿತವನ್ನು ಸಿದ್ಧಿಸಿಕೊಳ್ಳುವ ಪಟ್ಟುಗಳು, ತಂತ್ರ, ಕೌಶಲ, ಸುಳಿವು ಮತ್ತು ಹೊಳವುಗಳನ್ನು ಒಳಗೊಂಡಿದೆ. ಇಂತಹ ಕಲೆಯನ್ನು ಎಲ್ಲರೂ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಕೃತಿಯ ಲೇಖಕ ಗಂಗಾವತಿ ಕ್ಷೇತ್ರ ಸಮನ್ವಯಾಧಿಕಾರಿ ವಿ.ವಿ.ಗೊಂಡಬಾಳ, ಶ್ರೀಗವಿಸಿದ್ಧೇಶ್ವರ ಬಿಇಡಿ ಕಾಲೇಜು ಪ್ರಾಚಾರ್ಯ ಪ್ರಕಾಶ ಬಡಿಗೇರ, ಎನ್ಎಸ್ಯುಐ ಜಿಲ್ಲಾಧ್ಯಕ್ಷ ಮಂಜುನಾಥ ಗೊಂಡಬಾಳ, ಶಿಕ್ಷ ಕ ಖಾದರಭಾಷ ಸೋಂಪೂರ, ಮುದ್ರಕ ಆನಂದ ಗೊಂಡಬಾಳ ಇತರರು ಇದ್ದರು.