ಗಂಗಾಧರ ಬಂಡಿಹಾಳ, ಕೊಪ್ಪಳ
ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಿಗೇನೂ ಕೊರತೆ ಇಲ್ಲ.ಆದರೆ ಪ್ರಚಾರದ ಕೊರತೆ ಕಾರಣ ಐತಿಹಾಸಿಕ ಸ್ಥಳಗಳಿಗೆ ಮಂಕು ಕವಿದಿತ್ತು. ಹೀಗಾಗಿ ಪ್ರವಾಸೋದ್ಯಮ ಇಲಾಖೆಗೆ ನಯಾ ಪೈಸೆ ಆದಾಯವೂ ಇಲ್ಲದೇ ಬೊಕ್ಕಸ ಬರಿದಾಗಿತ್ತು. ಇದನ್ನು ನಿವಾರಿಸಿಕೊಳ್ಳಲು ಬರೋಬ್ಬರಿ 19 ವರ್ಷದ ಬಳಿಕ ಪ್ರವಾಸೋದ್ಯಮ ಇಲಾಖೆ ಎಚ್ಚೆತ್ತುಕೊಂಡಿದ್ದು, ಜಿಲ್ಲೆಯ ಪ್ರಸಿದ್ಧ ತಾಣಗಳ ಮೇಲೆ ಬೆಳಕು ಚೆಲ್ಲಲು ಯೋಜನೆ ರೂಪಿಸಿದೆ.
ಈಗಾಗಲೇ ಐತಿಹಾಸಿಕ ಹಿನ್ನೆಲೆಯುಳ್ಳ ಸ್ಥಳಗಳನ್ನು ಪಟ್ಟಿ ಮಡಲಾಗಿದ್ದು, ಇವುಗಳ ಪ್ರಚಾರಕ್ಕಾಗಿ ಪ್ರತ್ಯೇಕ ವೆಬ್ಸೈಟ್ ರೂಪಿಸಲಾಗುತ್ತಿದೆ. ಇಂತಹ ತಾಣಗಳ ಕುರಿತು ಫೋಟೊ ಹಾಗೂ ವಿಡಿಯೊ ಚಿತ್ರೀಕರಣ ನಡೆಸಲಾಗಿದೆ. ಸ್ಥಳ ಹಾಗೂ ಐತಿಹಾಸಿಕ ಹಿನ್ನೆಲೆ ಕುರಿತು ಪರಿಚಯ ಪುಸ್ತಕ ಬಿಡುಗಡೆಗೊಳಿಸಲಾಗುತ್ತಿದೆ. ಇನ್ನೊಂದು ತಿಂಗಳಲ್ಲಿ ಜಿಲ್ಲೆಯ ಸಮಗ್ರ ಮಾಹಿತಿ ನೀಡುವ ಅಂತರ್ಜಾಲ ತಾಣವೊಂದು ಅರ್ಪಣೆಯಾಗಲಿದ್ದು, ವಿಶ್ವದ ಐತಿಹಾಸಿಕ ಅಂತರ್ಜಾಲ ಪುಟದಲ್ಲಿ ಕೊಪ್ಪಳ ಜಿಲ್ಲೆಯೂ ಸೇರಲಿದೆ. ಈ ಮೂಲಕ ಪ್ರವಾಸಿಗರ ಆಕರ್ಷಣೆಗೆ ಪ್ರವಾಸೋದ್ಯಮ ಇಲಾಖೆ ಸಜ್ಜಾಗುತ್ತಿದೆ.
19 ವರ್ಷದ ಬಳಿಕ: ಜಿಲ್ಲೆಯಾಗಿ ಸುಮಾರು 19 ವರ್ಷ ಗತಿಸಿದ ಮೇಲೆ ಪ್ರವಾಸೋದ್ಯಮ ಇಲಾಖೆ ಇಂತಹ ಐತಿಹಾಸಿಕ ಕಾರ್ಯಕ್ಕೆ ಮುಂದಾಗಿದೆ. ಇಲಾಖೆಯ ಮೂಲಕ ಜಿಲ್ಲೆಯ ಎಲ್ಲ ಐತಿಹಾಸಿಕ ತಾಣಗಳನ್ನು ಪರಿಚಯಿಸುವ ಕಾರ್ಯ ಚುರುಕಾಗಿ ನಡೆದಿದೆ. ಈಗಾಗಲೇ ಜಿಲ್ಲೆಯ ಎಲ್ಲ ಐತಿಹಾಸಿಕ ತಾಣಗಳ ಮಾಹಿತಿ ಸಂಗ್ರಹಿಸಲಾಗಿದೆ. ಗಂಗಾವತಿ ತಾಲೂಕಿನ ಹನುಮ ಉದಯಿಸಿದ ಅಂಜನಾದ್ರಿ ಬೆಟ್ಟ, ವಿಜಯ ನಗರ ಸಾಮ್ರಜ್ಯದ ಆಡಳಿತಕ್ಕೆ ಒಳಪಟ್ಟ ಆನೆಗೊಂದಿ, ಐತಿಹಾಸಿಕ ಕನಕಗಿರಿ ಕನಕಾಚಲಪತಿ, ಯಲಬುರ್ಗಾ ತಾಲೂಕಿನ ಕಲ್ಯಾಣ ಚಾಲುಕ್ಯರ ಆಡಳಿತಾವಧಿಯಲ್ಲಿ ನಿರ್ಮಾಣವಾಗಿರುವ ದೇವಾಲಯ ಚಕ್ರವರ್ತಿ ಖ್ಯಾತಿಯ ಇಟಗಿ ಮಹಾದೇವ ದೇವಾಲಯ, ಕಲ್ಲಿನಾಥೇಶ್ವರ, ಕುಷ್ಟಗಿ ತಾಲೂಕಿನ ಚಂದಾಲಿಂಗೇಶ್ವರ, ಪುರ, ಕೊಪ್ಪಳದ ಕೋಟೆ, ಅಶೋಕ ಶಿಲಾಶಾಸನ, ಹುಲಿಗೆಮ್ಮ ದೇವಿ ದೇವಾಲಯ, ಕಿನ್ನಾಳ ಗ್ರಾಮದ ಕಿನ್ನಾಳ ಕಲೆ ಅಭಿವೃದ್ಧಿ ಸೇರಿದಂತೆ ಐತಿಹಾಸಿಕ ಸ್ಥಳಗಳ ಪಟ್ಟಿ ಬೆಳೆಯುತ್ತಿದೆ.
ಹೆಚ್ಚಿನ ವರ: ಬಳ್ಳಾರಿ ಜಿಲ್ಲೆಯ ಹಂಪಿಗೆ ಆಗಮಿಸುವ ದೇಶ, ವಿದೇಶಿ ಪ್ರವಾಸಿಗರು ಜಿಲ್ಲೆಯೊಳಗಿನ ಪ್ರವಾಸಿ ತಾಣಗಳನ್ನು ನೋಡುವುದಕ್ಕೆ ವಿಪುಲ ಅವಕಾಶಗಳಿವೆ. ಆದರೆ ಮಾಹಿತಿ ಕೊರತೆಯಿಂದ ಇಲ್ಲಿ ಪ್ರವಾಸೋದ್ಯಮ ಬೆಳೆಯಲು ಅಡಚಣೆಯಾಗಿದೆ. ಕೇವಲ ಬೆರಳೆಣಿಕೆಯಷ್ಟು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸಿದರೆ ಜಿಲ್ಲೆಯ ಆರ್ಥಿಕ ಸ್ಥಿತಿಗತಿ ಬದಲಾಗುವುದಲ್ಲದೇ ಉದ್ಯಮ ಬೆಳೆಯಲಿದೆ. ಹಂಪಿಗೆ ಹೊಂದಿಕೊಂಡೇ ಜಿಲ್ಲೆಯ ಹಲವು ಐತಿಹಾಸಿಕ ಸ್ಥಳಗಳಿದ್ದು, ಇವುಗಳ ವೀಕ್ಷಣೆಗೆ ಅವಕಾಶ, ನಿರ್ವಹಣೆ ಮಾಡಿದರೆ ಪ್ರವಾಸಿಗರ ಸಂಖ್ಯೆ ಜತೆಗೆ ಆದಾಯವೂ ದ್ವಿಗುಣಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
.............
ಕೋಟಿಗಟ್ಟಲೆ ಹಣ: ಈಗಾಗಲೇ ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ಹರಿದು ಬಂದಿದೆ. ಅಂಜನಾದ್ರಿ ಬೆಟ್ಟ ಮತ್ತು ಪಂಪಾ ಸರೋವರ ಬಳಿಯ ಪ್ರವಾಸಿಗರಿಗೆ ಮೂಲ ಸೌಲಭ್ಯ ಒದಗಿಸಲು 2 ಕೋಟಿ ರೂ., ಕಿನ್ನಾಳ ಗ್ರಾಮದ ಸ್ವದೇಶಿ, ವಿದೇಶಿ ಪ್ರವಾಸಿಗರು ಭೇಟಿ ನೀಡಲು ಗ್ರಾಮಕ್ಕೆ ರಸ್ತೆ ನಿರ್ಮಾಣಕ್ಕಾಗಿ 2 ಕೋಟಿ ರೂ.ಗಾಗಿ ಆಡಳಿತಾತ್ಮಕ ಮಂಜೂರಾತಿಗೆ ಸಲ್ಲಿಸಿದೆ. ಕನಕಗಿರಿಯ ಪಾಶ್ರ್ವನಾಥ ದೇವಾಲಯದ ಮೂಲ ಸೌಲಭ್ಯಕ್ಕೆ 50 ಲಕ್ಷ ರೂ., ನಗರದ ಹಜರತ್ ಮರ್ದಾನ್ಗೈಯಿಬ್ ಬಳಿ ಯಾತ್ರಿ ನಿವಾಸಕ್ಕೆ 50 ಲಕ್ಷ ರೂ., ಕುಷ್ಟಗಿ ತಾಲೂಕಿನ ಚಂದಾಲಿಂಗೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ. ಅಂದಾಜು ವೆಚ್ಚ ಸೇರಿದಂತೆ 6.10 ಕೋಟಿ ರೂ. ಕ್ರಿಯಾಯೋಜನೆಯಲ್ಲಿ ಈಗಾಗಲೇ 3.37 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ. ಬಾಕಿ 2.73 ಕೋಟಿ ರೂ. ಅನುದಾನ ಬಿಡುಗಡೆಯಾಗಬೇಕಾಗಿದೆ. ಇಷ್ಟು ಹಣ ಬಿಡುಗಡೆ ಮಾಡುತ್ತಿದ್ದರೂ ಇಲ್ಲಿನ ಸ್ಥಳಗಳು ಮಾತ್ರ ಅಭಿವೃದ್ಧಿಯಾಗಿರಲಿಲ್ಲ. ಆದರೆ ಈಗ ಪ್ರವಾಸೋದ್ಯಮ ಇಲಾಖೆ ಹಾಕಿಕೊಂಡ ಹೊಸ ಯೋಜನೆಯಿಂದ ಇದು ಸಫಲವಾಗುವ ನಿರೀಕ್ಷೆ ಹೆಚ್ಚಿದೆ.
...
ಕೊಪ್ಪಳ ಜಿಲ್ಲೆಯ ಐತಿಹಾಸಿಕ ತಾಣಗಳ ಪರಿಚಯಕ್ಕಾಗಿ ವೆಬ್ಸೈಟ್ ರೂಪಿಸಲಾಗುತ್ತಿದೆ. ಪ್ರವಾಸಿಗರಿಗೆ ಜಿಲ್ಲೆಯ ಐತಿಹಾಸಿಕ ತಾಣಗಳ ಪರಿಚಯಿಸುವುದು ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದೆ.
- ಮೋತಿಲಾಲ್ ಲಮಾಣಿ, ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಕೊಪ್ಪಳ