ಹನುಮಸಾಗರ: ಗ್ರಾಮದಲ್ಲಿ ಮದ್ಯಪಾನ ನಿಷೇಧಿಸುವಂತೆ ಒತ್ತಾಯಿಸಿ ಶಾಲಾ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಗ್ರಾ.ಪಂ.ಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಬಳಿಕ ಸಮೀಪದ ಕಾಟಾಪುರ ಗ್ರಾಮದ ಶರಣಬಸವೇಶ್ವರ ದೇಸವ್ಥಾನದ ದೈವದ ಕಟ್ಟಿಯ ಹತ್ತಿರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ವಿದ್ಯಾರ್ಥಿಗಳು, ಗ್ರಾಮದ ಕೆಲವು ಮನೆಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಮನೆಯಲ್ಲಿ ತಂದೆ, ಅಣ್ಣ-ತಮ್ಮಂದಿರು ಕುಡಿದ ಅಮಲಿನಲ್ಲಿ ಬಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾರೆ. ಕೆಲವು ಮನೆಗಳಲ್ಲಿ ಕುಡಿತಕ್ಕಾಗಿ ಸಾಮಗ್ರಿಗಳನ್ನು ಬೇರೆ ಕಡೆ ಮಾರಾಟ ಮಾಡಿದ್ದಾರೆ. ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸಬೇಕು. ಇಲ್ಲದಿದ್ದರೆ ಉಪವಾಸ ಕುಳಿತು ಪ್ರತಿಭಟಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಎಸ್ಐ ಸಾಂತಪ್ಪ ಬೆಲ್ಲದ ಮಾತನಾಡಿ, ನಿಮ್ಮ ಮನೆಯ ಕುಟುಂಬಸ್ಥರು ಬೀದಿಗೆ ಬಂದು ಸಮಸ್ಯೆಯನ್ನು ವಿವರಿಸುತ್ತಾರೆಂದರೆ ನಿಮಗೆಲ್ಲಾ ನಾಚಿಕೆಯಾಗಬೇಕು.ಕುಡಿತದಿಂದ ಒಳ್ಳೆದಾಗುವುದಿಲ್ಲ. ಅದೇ ಹಣದಲ್ಲಿ ಮನೆಗಳಿಗೆ ಉಪಯೋಗವಾಗುವ ಪದಾರ್ಥಗಳನ್ನು ತೆಗೆದುಕೊಂಡು ಹೋಗ್ರಿ, ಕುಟುಂಬಸ್ಥರಲ್ಲಿ ಪ್ರೀತಿಯಾದ್ರೂ ಹೆಚ್ಚಾಗುತ್ತದೆ ಎಂದು ಬುದ್ಧಿವಾದ ಹೇಳಿದರು.
ಸ್ಥಳಕ್ಕೆ ಆಗಮಿಸಿದ ಅಬಕಾರಿ ವೃತ್ತ ನಿರೀಕ್ಷ ಕ ಚಾಂದಪಾಷ ಮಾತನಾಡಿ, ಅನಧಿಕೃತವಾಗಿ ಮದ್ಯ ಮಾರಾಟ ಮಾಡಿದ್ರೆ ಅವರ ವಿರುದ್ಧ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದಕ್ಕೂ ಮುಂಚೆ ವಿದ್ಯಾರ್ಥಿಗಳು, ಮಹಿಳೆಯರು ಗ್ರಾಮದಲ್ಲಿ ಜಾಥಾ ನಡೆಸಿದರು. ಪ್ರಮುಖರಾದ ತಾ.ಪಂ.ಸದಸ್ಯೆ ಶೈಲಾ ಶಂಕರ ಕರಪಡಿ, ತಾ.ಪಂ.ಮಾಜಿ ಅಧ್ಯಕ್ಷ ಸಿದ್ಧಪ್ಪ ಹಾವಿನ, ಗ್ರಾ.ಪಂ.ಅಧ್ಯಕ್ಷೆ ರೇಖಾ ಫಕೀರಪ್ಪ ಬೆಳ್ಳೆರಿ, ಪಿಡಿಒ ನಿಂಗಪ್ಪ ಬಂಡರಗಲ್, ವೀರಯ್ಯ ಹಿರೇಮಠ, ಈರಪ್ಪ ಹಾದಿಮನಿ, ಗ್ರಾ.ಪಂ.ಸದಸ್ಯರು, ಶ್ರೀ ಶರಣಬಸವೇಶ್ವರ ಗ್ರಾಮೀಣಾಭಿವೃದ್ಧಿ ಟ್ರಸ್ಟ್, ನಾನಾ ಮಹಿಳಾ ಸದಸ್ಯರು ಇತರರು ಇದ್ದರು.