ಗಂಗಾವತಿ: ನಗರದ ಎಸ್ಟಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಎಸ್ಎಫ್ಐ ಕಾರ್ಯಕರ್ತರು ತಾಲೂಕು ಪಂಚಾಯಿತಿ ಆವರಣದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ವಸತಿ ನಿಲಯದಲ್ಲಿ 120 ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದು, ಗುಣಮಟ್ಟದ ಆಹಾರ ನೀಡುತ್ತಿಲ್ಲ. ಕಳಪೆ ಆಹಾರದಿಂದಾಗಿ ವಿದ್ಯಾರ್ಥಿನಿಯರ ಆರೋಗ್ಯ ಹಾಳಾಗುತ್ತಿದೆ. ಅಡುಗೆ ಸಹಾಯಕರಾಗಿ ಕಾರ್ಯನಿರ್ವಹಿಸುವ ಕೆಲಸಗಾರರು ಆಹಾರ ಪದಾರ್ಥಗಳನ್ನು ಸರಿಯಾಗಿ ಬೇಯಿಸದೆ. ಬೇಕಾ ಬಿಟ್ಟಿಯಾಗಿ ಬೇಯಿಸುತ್ತಿದ್ದಾರೆ. ಈ ಕುರಿತು ನಿಲಯ ಪಾಲಕರಿಗೆ ಮಾಹಿತಿ ನೀಡಿದರೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.ಅಲ್ಲದೇ ಮಂಗಳವಾರ ಸಹ ಸರಿಯಾಗಿ ಅಡುಗೆ ಮಾಡದೇ ಇರುವುದರಿಂದ ವಿದ್ಯಾರ್ಥಿನಿಯರು ಬೆಳಗ್ಗೆಯಿಂದ ಊಟ ಮಾಡುವುದನ್ನು ಬಿಟ್ಟು, ಸರಿಯಾಗಿ ಅಡುಗೆ ಮಾಡಿ ಎಂದು ಪಟ್ಟು ಹಿಡಿದರೂ ನಿಲಯ ಪಾಲಕರು ವಸತಿ ನಿಲಯಕ್ಕೆ ಭೇಟಿ ನೀಡಿಲ್ಲ. ನಿತ್ಯ ಅಡುಗೆಗೆ ಕೊಳೆತ ತರಕಾರಿಯನ್ನೇ ಬಳಸಲಾಗುತ್ತಿದೆ. ಇಂತಹ ಅಡುಗೆಯನ್ನು ಊಟ ಮಾಡಿದ ಕೆಲ ವಿದ್ಯಾರ್ಥಿನಿಯರಿಗೆ ವಾಂತಿ, ಭೇದಿಯಂತಹ ರೋಗ ಕಾಣಿಸಿಕೊಳ್ಳುತ್ತಿವೆ. ಅಲ್ಲದೇ ಮೂಲ ಸೌಲಭ್ಯಗಳ ಕೊರತೆ ಹೆಚ್ಚಾಗಿ ಕಾಡುತ್ತಿದೆ. ಕೂಡಲೇ ಇಲ್ಲಿನ ನಿಲಯ ಪಾಲಕರ ಮೇಲೆ ಕ್ರಮ ಕೈಗೊಳ್ಳಬೇಕು. ವಸತಿ ನಿಲಯಕ್ಕೆ ಮೂಲಸೌಕರ್ಯ, ಗುಣಮಟ್ಟದ ಆಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿನಿಯರಾದ ಕವಿತಾ, ಸಾವಿತ್ರಿ, ಹನುಂತಿ, ಮುತ್ತುಲಕ್ಷ್ಮಿ, ಜಯಶ್ರೀ, ನಾಗಲಕ್ಷ್ಮಿ, ರೇಣುಕಾ ಹಾಗೂ ಎಸ್ಎಫ್ಐ ಕಾರ್ಯಕರ್ತರು ಇದ್ದರು.