ರವಿ ಪಿ.ನಾಯಕ, ಗಂಗಾವತಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಕನಸಿನ 'ಸಂಸದರ ಆದರ್ಶ' ಗ್ರಾಮ ಯೋಜನೆ ಘೋಷಣೆಯಾಗಿ ಎರಡೂವರೆ ವರ್ಷ ಕಳೆದಿದ್ದು, ನಯಾ ಪೈಸೆ ಕಾಮಗಾರಿಯೂ ಆರಂಭವಾಗಿಲ್ಲ. ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ಎಳ್ಳು ನೀರು ಬಿಟ್ಟಂತಾಗಿದೆ.
ಕಳೆದ 2014 ಅಕ್ಬೋಬರ್ 11 ರಂದು ಸಂಸದರ ಆದರ್ಶ ಗ್ರಾಮಕ್ಕೆ ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಚಾಲನೆ ನೀಡಿದ್ದರು. ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ ಪರಿಕಲ್ಪನೆ ಹಿನ್ನೆಲೆಯಲ್ಲಿ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಗುರಿ ಇಟ್ಟುಕೊಂಡು, ಸಂಸದರು ತಮ್ಮ ಕ್ಷೇತ್ರ ವ್ಯಾಪ್ತಿಯ ಎರಡು ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿಗೊಳಿಸಬೇಕು ಎನ್ನುವುದು ಯೋಜನೆಯ ಉದ್ದೇಶವಾಗಿತ್ತು.
ಇಲ್ಲಿ ಏನೂ ಇಲ್ಲ: ಈ ಯೋಜನೆಯಲ್ಲಿ ಕೊಪ್ಪಳ ಲೋಕಸಾಭಾ ಕ್ಷೇತ್ರ ವ್ಯಾಪ್ತಿಯ ಗಂಗಾವತಿ ತಾಲೂಕಿನ ನವಲಿ, ಸಿಂಧನೂರು ತಾಲೂಕಿ ಆರ್.ಎಚ್.ಕ್ಯಾಂಪ್ ನಂ.-2 ಗ್ರಾ.ಪಂ.ಗಳನ್ನು ಸಂಸದ ಸಂಗಣ್ಣ ಕರಡಿ ಆಯ್ಕೆ ಮಾಡಿಕೊಂಡಿದ್ದರು. ಆದರೆ ಇಲ್ಲಿ ಇದುವರೆಗೂ ಏನೂ ಕೆಲಸ ಆರಂಭವಾಗಿಲ್ಲ. ಮೂರ್ನಾಲ್ಕು ಬಾರಿ ಎರಡೂ ಗ್ರಾಮಗಳಲ್ಲಿ ಗ್ರಾಮಸ್ಥರ, ಸ್ಥಳೀಯ ಚುನಾಯಿತರ ಸಭೆ ನಡೆಸಿದ್ದಾಗಿದೆ ಹೊರತು ಕನಿಷ್ಠ ಚರಂಡಿ ಕೆಲಸಗಳು ಆರಂಭವಾಗಿಲ್ಲ.
ಕ್ರಿಯಾ ಯೋಜನೆ ಸಿದ್ಧ: ಸಂಸದರ ಆದರ್ಶ ಗ್ರಾಮ ಯೋಜನೆಯಲ್ಲಿ ಕೈಗೊಳ್ಳುವ ಕುಡಿವ ನೀರು, ರಸ್ತೆ ನಿರ್ಮಾಣ, ಚರಂಡಿ, ಶೌಚಾಲಯಗಳ ಹಂಚಿಕೆ ಸೇರಿ ಯೋಜನೆಯ ಉದ್ದೇಶ ಪ್ರಕಾರ ಕಾಮಗಾರಿ ಆರಂಭಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಪ್ರತ್ಯೇಕವಾಗಿ ಎರಡೂ ಗ್ರಾಮದ ಡಿಪಿಆರ್ ರಚಿಸಲಾಗಿದೆ. ಸಿಂಧನೂರು ತಾಲೂಕಿನ ಆರ್.ಎಚ್.ಕ್ಯಾಂಪ್ ಗ್ರಾಮ ಪಂಚಾಯಿತಿಯೊಂದರ ಡಿಪಿಆರ್ನ್ನು 200ಕೋಟಿ ರೂ. ಅಂದಾಜಿಸಿ ತಯಾರಿಸಲಾಗಿದೆ. ವಿಶ್ವವಿದ್ಯಾನಿಲಯಗಳ ತಜ್ಞರೇ ಡಿಪಿಆರ್ ತಯಾರಿಸಿದ್ದಾರೆ. ಗ್ರಾಮಕ್ಕೆ ಏನು ಬೇಕು? ಏನಿಲ್ಲ? ಎನ್ನುವುದು ಈ ಡಿಪಿಆರ್ನಲ್ಲೇ ಇದೆ. ಆದರೆ ಇದು ಕೇವಲ ಕಾಗದದಲ್ಲೇ ಉಳಿದಿದ್ದು, ಇದುವರೆಗೂ ಆರಂಭವಾಗಿಲ್ಲ. ಆರ್.ಎಚ್.ಕ್ಯಾಂಪ್ನಲ್ಲಿ ಹೈಮಾಸ್ಟ್ ದೀಪಗಳನ್ನು ಅಳವಡಿಸಿದ್ದು ಬಿಟ್ಟರೇ ಬೇರೆನೂ ಕೆಲಸವಿಲ್ಲ. ನವಲಿಯಲ್ಲಿ ಇದು ಕೂಡ ಆಗಿಲ್ಲ. ಅಷ್ಟೇ ಯಾಕೆ? ನವಲಿ ಗ್ರಾಮ ಪಂಚಾಯಿತಿ ಡಿಪಿಆರ್ ಕೂಡ ತಯಾರಿಸಿಲ್ಲ.
.........
ಸರ್ವೆ ಪೂರ್ಣ
ಸಂದರ ಆದರ್ಶ ಗ್ರಾಮದ ಪರಿಕಲ್ಪನೆಯಂತೆ ಆಯ್ಕೆಯಾದ ಹಳ್ಳಿಗಳನ್ನು ಪೂರ್ಣ ಪ್ರಮಾಣದಲ್ಲಿ ಸಮೀಕ್ಷೆ ನಡೆಸಲಾಗಿದೆ. ಜನಸಂಖ್ಯೆ, ಕುಟುಂಬಗಳು, ಜಾನುವಾರು, ರಸ್ತೆ, ಚರಂಡಿ ಸ್ಥಿತಿಗತಿ ಸೇರಿ ಗ್ರಾಮಕ್ಕೆ ಬೇಕು-ಬೇಡಗಳ ಪಟ್ಟಿ ಮಾಡಲಾಗಿದೆ. ಕಂದಾಯ, ಗ್ರಾಮೀಣಾಭಿವೃದ್ಧಿ, ಕೃಷಿ, ಶಿಕ್ಷಣ ಸೇರಿ ಹಲವು ಇಲಾಖೆ ಅಧಿಕಾರಿಗಳು ಈ ಸರ್ವೆಯಲ್ಲಿ ಭಾಗವಹಿಸಿದ್ದರು. ಸಂಸದರ ಗ್ರಾಮ ಯೋಜನೆಗೆ ಆಯ್ಕೆಯಾದ ಹಳ್ಳಿಗಳ ಸಮರ್ಪಕ ಮಾಹಿತಿ ನೀಡಲಾಗಿದೆ. ಆದರೆ ಇಲ್ಲಿ ಕೆಲಸಗಳು ಮಾತ್ರ ಆರಂಭವಾಗಿಲ್ಲ.
.............
ಕೊಪ್ಪಳ ಜಿಲ್ಲೆಯಲ್ಲಿ ನವಲಿ ಗ್ರಾಮದ ಅಭಿವೃದ್ಧಿಗೆ ಜಿ.ಪಂ.ಸಿಇಒ ಮಟ್ಟದಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಈ ಯೋಜನೆಗೆ ಸರಕಾರದಿಂದ ಯಾವುದೇ ಪ್ರತ್ಯೇಕ ಅನುದಾನ ಬಿಡುಗಡೆಯಾಗುವುದಿಲ್ಲ. ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿಯೇ ಕೆಲಸ ನಿರ್ವಹಿಸಬೇಕು. ಸಿಂಧನೂರು ತಾಲೂಕಿನ ಆರ್.ಎಚ್.ಕ್ಯಾಂಪ್ನಲ್ಲಿ ಸೋಲಾರ್ ಮತ್ತು ರಸ್ತೆ ಕಾಮಗಾರಿ ಮಾಡಲಾಗಿದೆ. ಹೀಗೆ ಹಂತ ಹಂತವಾಗಿ ಕೆಲಸ ಮಾಡಲಾಗುವುದು.
-ಕರಡಿ ಸಂಗಣ್ಣ, ಸಂಸದ, ಕೊಪ್ಪಳ.