ಶಿವರಾಜ ಬಂಡಿಹಾಳ, ಹನುಮಸಾಗರ
ಡಿಗ್ರಿ ಸರ್ಟಿಫಿಕೇಟ್ ಬೇಕೆ? ಹಾಗಾದರೆ ಮೂರು ವರ್ಷ ಹೋಬಳಿ ತೊರೆಯಲೇ ಬೇಕು. ಇಲ್ಲವಾದರೆ, ಪಿಯುಸಿ ಓದಿ ಮನೆಯಲ್ಲೇ ಕುಳಿತುಕೊಳ್ಳಬೇಕು!.
25 ಸಾವಿರ ಜನಸಂಖ್ಯೆ, 72 ಗ್ರಾಮ ಹೊಂದಿದ ಕುಷ್ಟತಿ ತಾಲೂಕಿನ ಅತಿದೊಡ್ಡ ಹೋಬಳಿ ಎನಿಸಿದ ಹನುಮಸಾಗರದ ವ್ಯಥೆಯಿದು. ಹೋಬಳಿಯಲ್ಲಿ ಪದವಿ ಕಾಲೇಜೊಂದು ತೆರೆಯಬೇಕು ಎನ್ನುವ ಎರಡು ದಶಕದ ಕೂಗಿಗೆ ಇದುವರೆಗೂ ಯಾರು ಧ್ವನಿಯಾಗಿಲ್ಲ. ಹೀಗಾಗಿ ಇಲ್ಲಿನ ಯುವಕರು ಪದವಿ ಕಾಲೇಜು ಸೇರಬೇಕಂದರೆ ಗುಳೆ ಹೋಗುವುದು ಅನಿವಾರ್ಯ. ಅದು ಕೇವಲ ಜಿಲ್ಲಾ ಕೇಂದ್ರ ಕೊಪ್ಪಳಕ್ಕೆ ಮಾತ್ರವಲ್ಲ. ಪಕ್ಕದ ಬಾಗಲಕೋಟ ಜಿಲ್ಲೆಯ ಹುನಗುಂದ, ಇಳಕಲ್, ಬದಾಮಿ, ಗದಗ ಜಿಲ್ಲೆಯ ಗಜೇಂದ್ರಗಡ, ನರೇಗಲ್ಗಳತ್ತ ಸಾಗಬೇಕು. ಹೋಬಳಿ ವ್ಯಾಪ್ತಿಯ ಬಹುತೇಕ ಹಳ್ಳಿಗಳು ಗಡಿ ಭಾಗದಲ್ಲಿಯೇ ಇರುವುದರಿಂದ ಜಿಲ್ಲಾ ಸೀಮೆ ದಾಟಿ ಪರ ಜಿಲ್ಲೆಯತ್ತ ಪಯಣ ಅನಿವಾರ್ಯವಾಗಿದೆ. ಹೋಬಳಿ ವ್ಯಾಪ್ತಿಯ ಮತ್ತೊಂದು ದೊಡ್ಡ ಹಳ್ಳಿ ಹನುಮನಾಳ ಭಾಗದ ವಿದ್ಯಾರ್ಥಿಗಳು ಗಜೇಂದ್ರಗಡ, ಹುನಗುಂದ ಪಟ್ಟಣಕ್ಕೆ ತೆರಳಿದರೆ, ನಿಲೋಗಲ್, ರಾಂಪುರ, ಬಿಳೇಕಲ್ ಗ್ರಾಮದ ಯುವಕರು ಬದಾಮಿ ಬಸ್ ಹಿಡಯಬೇಕು. ಹೂಲಗೇರಿ, ಸೇಬಿನಕಟ್ಟಿ, ಮನ್ನೇರಾಳ, ಕಾಟಾಪುರ ಹಳ್ಳಿ ಯುವಕರು ಇಳಕಲ್, ಹುನಗುಂದ ಮಾರ್ಗ ಹುಡುಕಬೇಕು. ಗ್ರಾಮದಲ್ಲೇ ಪದವಿ ಕಾಲೇಜು ನಿರ್ಮಾಣವಾಗದ ಕಾರಣ ಇಲ್ಲಿನ ವಿದ್ಯಾರ್ಥಿಗಳಿಗೆ ಈ ಪಡಿಪಾಟಲು ಕಾಯಂ
ಕಾಗದದಲ್ಲೇ ಕಾಲೇಜು: ಹತ್ತು ವರ್ಷಗಳ ಹಿಂದೆ ಪದವಿ ಕಾಲೇಜು ಮಂಜೂರು ಮಾಡಲು ಒತ್ತಾಯಿಸಿ ಜನಪ್ರತಿನಿಧಿಗಳು ಹಾಗೂ ನಾನಾ ಸಂಘಟಕರು ಉನ್ನತ ಶಿಕ್ಷ ಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಹೋರಾಟಕ್ಕೆ ಮಡಿದ ಅಂದಿನ ಕಲಬುರಗಿ ವಿಭಾಗದ ಉನ್ನತ ಶಿಕ್ಷ ಣ ಇಲಾಖೆಯ ಜಂಟಿ ನಿರ್ದೇಶಕರು ಹೊಸ ಕಾಲೇಜಿಗಾಗಿ ಸ್ಥಳ ಪರಿಶೀಲನೆಗಾಗಿ 2008 ಆಗಸ್ಟ್ 10 ರಂದು ತಾಲೂಕಿನ ಪದವಿ ಕಾಲೇಜು ಪ್ರಾಚಾರ್ಯ ಎಚ್.ಎಂ.ಭೂತನಾಳ ಅವರಿಗೆ ಆದೇಶಿಸಿದ್ದರು. ಗ್ರಾಮಕ್ಕೆ ಆಗಮಿಸಿದ ಪ್ರಾಚಾರ್ಯರ ತಂಡ ಸ್ಥಳೀಯರ ಜತೆ ಚರ್ಚೆ ನಡೆಸಿತ್ತು. ಗಜೇಂದ್ರಗಡಕ್ಕೆ ಹೋಗುವ ಮಾರ್ಗ ಮಧ್ಯೆ ಸರಕಾರಿ ಪದವೀ ಪೂರ್ವ ಕಾಲೇಜು ಮೈದಾನದಲ್ಲಿ 2 ಎಕರೆ ನಿವೇಶನ ಗುರುತು ಮಾಡಿದರು. ಇದೇ ಸ್ಥಳದಲ್ಲಿ ಪದವಿ ಕಾಲೇಜು ಆರಂಭಿಸಬೇಕು. ಕಟ್ಟಡ ಆರಂಭವಾಗುವವರೆಗೆ ಪಿಯು ಕಾಲೇಜಿನಲ್ಲಿಯೇ ಬೋಧನೆ ನಡೆಸಬೇಕು ಎಂದು ಪ್ರಸ್ತಾವನೆ ಸಲ್ಲಿಸಿತು. ಆದರೆ ಈ ವರದಿಯನ್ನು ಪಡೆದ ಪ್ರಾದೇಶಿಕ ಆಯುಕ್ತರು, ಸರಕಾರಕ್ಕೆ ಶಿಫಾರಸ್ಸು ಮಾಡಿದ್ದಾಗಿದೆ. ಆದರೆ ಇಲ್ಲಿನ ವರದಿ ಸರಕಾರದ ಕೈ ಸೇರಿ ಬರೋಬ್ಬರಿ 8 ವರ್ಷ ಕಳೆಯುತ್ತಿದ್ದರು. ಇಲ್ಲಿ ಪದವಿ ಕಾಲೇಜು ಆರಂಭಿಸುವ ಬೇಡಿಕೆ ಈಡೇರಿಲ್ಲ. ಕೊಪ್ಪಳ ಜಿಲ್ಲೆಯವರೇ ಆದ ಬಸವರಾಜ ರಾಯರೆಡ್ಡಿ ಉನ್ನತ ಶಿಕ್ಷಣ ಮಂತ್ರಿಯಾಗಿದ್ದರೆ, ಇವರಾದರೂ ಇಲ್ಲಿನ ಜನರು ಕನಸಿಗೆ ನೀರೆರೆದು ಪೋಷಿಸುತ್ತಾರಾ? ಎನ್ನುವ ನಿರೀಕ್ಷೆಯೂ ಹುಸಿಯಾಗುತ್ತಿದ್ದು, ಇಲ್ಲಿನ ಯುವಕರು ಮಾತ್ರ ಪದವಿಗಾಗಿ ಊರು ಬಿಡುವುದು ತಪ್ಪುತ್ತಿಲ್ಲ.
............
ಹೊಸ ಪದವಿ ಕಾಲೇಜುಗಳು ಮಂಜೂರಾದರೆ ಮೊದಲು ಹನುಮಸಾಗರಕ್ಕೆ ಆದ್ಯತೆ ನೀಡಿ ಉಳಿದ ಕಾಲೇಜುಗಳನ್ನು ಬೇರೆ ಕಡೆ ಮಂಜೂರುಗೊಳಿಸಲಾಗುವುದು.
- ಬಸವರಾಜ ರಾಯರೆಡ್ಡಿ, ಉನ್ನತ ಶಿಕ್ಷ ಣ ಸಚಿವರು.
-----
ಗ್ರಾಮದ ಸಾವಿರಾರು ವಿದ್ಯಾರ್ಥಿಗಳು ಬೇರೆ ಜಿಲ್ಲೆಗಳಿಗೆ ಪದವಿ ಶಿಕ್ಷಣ ಪಡೆಯಲು ಹೋಗುವಂತಾಗಿದೆ. ಪದವಿ ಕಾಲೇಜು ಇಲ್ಲದ್ದರಿಂದ ಕೆಲ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಹಾಗಾಗಿ ಗ್ರಾಮದಲ್ಲಿ ಕಾಲೇಜು ಆರಂಭವಾದರೆ ಸ್ಥಳೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
- ಮಹಾಂತೇಶ ಗವಾರಿ, ನಾಗರಿಕ