ಹನುಮಸಾಗರ: ಗ್ರಾಮದಲ್ಲಿ ಸರಕಾರಿ ಕೈಗಾರಿಕಾ ಕೇಂದ್ರಕ್ಕೆ ಸೋಮವಾರ ಜಿ.ಪಂ. ಕೃಷಿ ಹಾಗೂ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಭೀಮಣ್ಣ ಅಗಸಿಮುಂದಿನ ಭೇಟಿ ನೀಡಿ ಪರಿಶೀಲಿಸಿದರು.
ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿನ ಅವ್ಯವಸ್ಥೆ ವಿರುದ್ಧ ಕಿಡಿಕಾರಿದ ಸದಸ್ಯರು, ಹೋಬಳಿ ವ್ಯಾಪ್ತಿಯಲ್ಲಿ ಇರುವುದು ಒಂದೇ ಕೈಗಾರಿಕಾ ತರಬೇತಿ ಕೇಂದ್ರ. ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ದಾಖಲಾತಿಗಾಗಿ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಇಂತಹ ಅವಧಿಯಲ್ಲಿ ಟಿ.ಒ, ಕಂಪ್ಯೂಟರ್ ಆಪರೇಟರ್, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ ಸೇರಿದಂತೆ ನಾಲ್ವರು ಸಿಬ್ಬಂದಿ ರಜೆ ಮೇಲೆ ತೆರಳಿದ್ದು, ವಿದ್ಯಾರ್ಥಿಗಳು ಯಾರ ಬಳಿ ಮಾಹಿತಿ ಪಡೆಯಬೇಕು? ಎಂದು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಬೋಧನಾ ವರ್ಗದ 5 ಜನರಲ್ಲಿ 4 ಜನ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಒಬ್ಬರನ್ನು ಬೇರೆ ಕಡೆ ನಿಯೋಜಿಸಲಾಗಿದೆ. ಮೂವರು ಪರಿಚಾರಕರಲ್ಲಿ 2 ಖಾಲಿ ಉಳಿದಿವೆ ಎಂದು ಸಿಬ್ಬಂದಿ ವಿವರಿಸಿದರು. ಈ ಬಗ್ಗೆ ಮೇಲಧಿಕಾರಿಗಳ ಜತೆ ಚರ್ಚಿಸುವುದಾಗಿ ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಭೀಮಣ್ಣ ಹೇಳಿದರು.
ಇದೇ ವೇಳೆ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ನ ನಿರ್ದೇಶಕ ಮಂಡಳಿಯ ಸದಸ್ಯ ವಿಠ್ಠಲ್ ಸಿಂಗ್ರಿ, ನವೋದಯ ಬ್ಯಾಂಕ್ನ ಅಧ್ಯಕ್ಷ ಚಂದ್ರಶೇಖರ ವಡ್ಡರ, ಗ್ರಾ.ಪಂ.ಮಾಜಿ ಸದಸ್ಯ ದುರುಗಪ್ಪ ಮಡಿವಾಳರ ಸೇರಿ ಇತರರು ಇದ್ದರು.