Please enable javascript.ಕಾರ್ಮಿಕರ ಕಾಯಂಗೆ ಒತ್ತಾಯಿಸಿ ಪ್ರತಿಭಟನೆ - ಕಾರ್ಮಿಕರ ಕಾಯಂಗೆ ಒತ್ತಾಯಿಸಿ ಪ್ರತಿಭಟನೆ - Vijay Karnataka

ಕಾರ್ಮಿಕರ ಕಾಯಂಗೆ ಒತ್ತಾಯಿಸಿ ಪ್ರತಿಭಟನೆ

ವಿಕ ಸುದ್ದಿಲೋಕ 10 Aug 2017, 6:40 am
Subscribe

ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ತುಂಗಭದ್ರಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ಟಾಸ್ಕ್ ವರ್ಕ್‌ಸಂಘದ ನೇತೃತ್ವದಲ್ಲಿ ಜಲ ಸಚಿವರ ಅಣಕ ಶವವನ್ನು ಪ್ರದರ್ಶಿಸುವ ಮೂಲಕ ಬುಧವಾರ ಪ್ರತಿಭಟಿಸಲಾಯಿತು.

ಕಾರ್ಮಿಕರ ಕಾಯಂಗೆ ಒತ್ತಾಯಿಸಿ ಪ್ರತಿಭಟನೆ
ಕೊಪ್ಪಳ: ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ತುಂಗಭದ್ರಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ಟಾಸ್ಕ್ ವರ್ಕ್‌ಸಂಘದ ನೇತೃತ್ವದಲ್ಲಿ ಜಲ ಸಚಿವರ ಅಣಕ ಶವವನ್ನು ಪ್ರದರ್ಶಿಸುವ ಮೂಲಕ ಬುಧವಾರ ಪ್ರತಿಭಟಿಸಲಾಯಿತು.

ತುಂಗಭದ್ರಾ ಎಡದಂಡೆ ಮತ್ತು ಬಲದಂಡೆ ವಿಜಯ ನಗರ ಕಾಲುವೆ ಹಾಗೂ ಕಿನ್ನಾಳ ಹಿರೇಹಳ್ಳ ಯೋಜನೆಯ ಗುತ್ತಿಗೆ ಕಾರ್ಮಿಕರನ್ನು ಕಾಯಂ ಗೊಳಿಸಬೇಕು ಎಂದು ಆಗ್ರಹಿಸಿ ಅನಿರ್ದಿಷ್ಟಾವಧಿವರೆಗೆ ಹೋರಾಟ ನಡೆಸಿದೆ. ಕಾರ್ಮಿಕ ಇಲಾಖೆ, ನೀರಾವರಿ ಇಲಾಖೆ ಸೇರಿದಂತೆ ಸರಕಾರ ಮಟ್ಟದಲ್ಲೂ ಮನವಿ ಸಲ್ಲಿಸಲಾಗಿದೆ. ಆದರೆ ಕಾರ್ಮಿಕರ ಮನವಿಗೆ ಬೆಲೆ ಇಲ್ಲದಂತಾಗಿದೆ. ಕಾರ್ಮಿಕ ಹೋರಾಟ 17ದಿನಕ್ಕೆ ಕಾಲಿಟ್ಟರೂ ಯಾವೊಬ್ಬ ಅಧಿಕಾರಿ ಕಾರ್ಮಿಕರ ಸಮಸ್ಯೆ

ಬಗೆಹರಿಸಲು ಮುಂದೆ ಬಂದಿಲ್ಲ. ಇಲಾಖೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಸರಕಾರ ಕಾರ್ಮಿಕರ ಬಗ್ಗೆ ನಿಷ್ಕಾಳಜಿ ಮತ್ತು ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಹೋರಾಟ ನಡೆಸಲಾಗುತ್ತಿದೆ. ನೀರಾವರಿ ಇಲಾಖೆಯಲ್ಲಿ 9 ವರ್ಷದಿಂದ ಒಂದೇ ಕಡೆ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ವರ್ಗಾವಣೆಗೊಳಿಸಬೇಕು. ಈ ಅಧಿಕಾರಿಗಳು ಕಾರ್ಮಿಕರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಜಲಸಂಪನ್ಮೂಲ ಸಚಿವರು ಭರವಸೆ ನೀಡಿದಂತೆ ಪೌರ ಕಾರ್ಮಿಕರಂತೆ ನೀರಾವರಿ ನಿಗಮದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಕಾಯಂಗೊಳಿಸುವುದಾಗಿ ಹೇಳಿದ್ದರು. ಆದರೆ ಈವರೆಗೆ ಅವರ ಭರವಸೆ ಈಡೇರಿಲ್ಲ. ತಕ್ಷಣ ಹೇಳಿದಂತೆ ಸಚಿವರು ನಡೆದುಕೊಳ್ಳಬೇಕು ಎಂದು ಕಾರ್ಮಿಕ ಮುಖಂಡರು ಆಗ್ರಹಿಸಿದರು.

ನಗರದ ಕೇಂದ್ರೀಯ ಬಸ್‌ನಿಲ್ದಾಣದಿಂದ ಅಶೋಕ ವೃತ್ತದವರೆಗೆ ಅಣಕ ಶವ ಪ್ರದರ್ಶಿಸಲಾಯಿತು. ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಕರ್ನಾಟಕ ನೀರಾವರಿ ನಿಗಮದ ಅಧ್ಯಕ್ಷ ಮಲ್ಲಿಕಾರ್ಜುನ ಗುಂಗೆ, ಮುನಿರಾಬಾದಿನ ಕೇಂದ್ರ ನೀರಾವರಿ ವಲಯದ ಮುಖ್ಯ ಎಂಜಿನಿಯರ್ ಶಂಕರೇಗೌಡ ಅವರ ಅಣಕ ಶವ ಪ್ರದರ್ಶನ ನಡೆಸಿ, ಜಿಲ್ಲಾಡಳಿತ ಭವನ ಎದುರು ದಹಿಸಲಾಯಿತು. ದಾರಿ ನಡುವೆ ಪಟಾಕಿ ಸಿಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಸಂಘದ ಅಧ್ಯಕ್ಷ ಆರ್.ಪಂಪಾಪತಿ ರಾಟಿ, ಮುಖಂಡರಾದ ಅಮರಗುಂಡಪ್ಪ, ಶರಣಪ್ಪ, ಸಿದ್ದಲಿಂಗಯ್ಯ, ಧನಂಜಯ್ಯ, ಪಾಂಡು ಇದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ