ಹನುಮಸಾಗರ (ಕೊಪ್ಪಳ); ಸಮೀಪದ ಪುರ್ತಗೇರಿ ಗ್ರಾಮದ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಸಿದ್ದನಗೌಡ ಮಾಲಿ ಪಾಟೀಲ್ ಕುಟುಂಬದ ವಾರ್ಷಿಕ ಆದಾಯ ಬರೀ 11 ರೂ.! ಕುಷ್ಟಗಿ ತಹಸಿಲ್ ಕಚೇರಿ ಇಂಥದ್ದೊಂದು ಅಚ್ಚರಿ ಸೃಷ್ಟಿಸಿದೆ.
ಐದನೇ ತರಗತಿಯಲ್ಲಿ ಕಲಿಯುತ್ತಿರುವ ಈ ವಿದ್ಯಾರ್ಥಿ, ಮುಂದಿನ ವ್ಯಾಸಂಗಕ್ಕಾಗಿ ಆದಾಯ ಪ್ರಮಾಣ ಪತ್ರ ಪಡೆಯಲು 2016, ಏಪ್ರಿಲ್ 4ರಂದು ತಹಸಿಲ್ ಕಚೇರಿಗೆ ಅರ್ಜಿ ಸಲ್ಲಿಸಿದ್ದ. ತಹಸೀಲ್ದಾರ್ ಡಿಜಿಟಲ್ ಸಹಿಯುಳ್ಳ ಆದಾಯ ಪ್ರಮಾಣ ಪತ್ರ, ಏ.28ರಂದು ವಿದ್ಯಾರ್ಥಿಯ ಕೈಸೇರಿದೆ. ಈ ಪ್ರಮಾಣ ಪತ್ರದಲ್ಲಿ ಕುಟುಂಬದ ವಾರ್ಷಿಕ ಆದಾಯ 11 ರೂ. ಎಂದು ನಮೂದಿಸಿರುವುದನ್ನು ಕಂಡ ವಿದ್ಯಾರ್ಥಿಯ ತಂದೆ ಬಸನಗೌಡ ಮಾಲಿ ಪಾಟೀಲ್ ಅವರಿಗೆ ದಿಗಿಲುಂಟಾಗಿದೆ. ಪ್ರಮಾಣ ಪತ್ರದ ತಪ್ಪು ಸರಿಪಡಿಸಲು ವಿದ್ಯಾರ್ಥಿ ಹಾಗೂ ಪಾಲಕರು ತಹಸಿಲ್ ಕಚೇರಿಗೆ ಅಲೆದಾಡುತ್ತಿದ್ದಾರೆ.
ಇತರ ವಿದ್ಯಾರ್ಥಿಗಳು ಪಡೆದ ಆದಾಯ ಪ್ರಮಾಣ ಪತ್ರಗಳಲ್ಲಿ ವಾರ್ಷಿಕ ಆದಾಯ 11ಸಾವಿರ ರೂ. ಎಂದು ಸಾಮಾನ್ಯವಾಗಿ ನಮೂದಾಗಿದೆ. ಸರಕಾರ ನಿಗದಿಪಡಿಸಿದಂತೆ ಕನಿಷ್ಠ ವಾರ್ಷಿಕ ಆದಾಯ 11ಸಾವಿರ ರೂ.! ಆದರೆ, ವಿದ್ಯಾರ್ಥಿ ಸಿದ್ದನಗೌಡ ಮಾಲಿ ಪಾಟೀಲ್, ತನ್ನ ಪ್ರಮಾಣ ಪತ್ರದಲ್ಲಿ ನುಸುಳಿದ ಲೋಪ ಸರಿಪಡಿಸಲು ಪರದಾಡುವಂತಾಗಿದೆ. ಪುರ್ತಗೇರಿ ಗ್ರಾಮ, ತಾಲೂಕು ಕೇಂದ್ರದಿಂದ 45 ಕಿ.ಮೀ. ಅಂತರದಲ್ಲಿದ್ದು, ಅಲ್ಲಿಂದ ಹೋಗಿ ಬರಲು ಪಾಲಕರು ನಿತ್ಯ ನೂರಾರು ರೂ. ಖರ್ಚುಮಾಡಬೇಕಿದೆ. ''ಪ್ರಮಾಣ ಪತ್ರದಲ್ಲಾದ ಲೋಪವನ್ನು ಒಂದೆರಡು ದಿನಗಳಲ್ಲಿ ಸರಿಪಡಿಸಲಾಗುವುದು'' ಎಂದು ತಹಸಿಲ್ ಕಚೇರಿಯ ಸಿಬ್ಬಂದಿ ಹೇಳಿದ್ದಾರೆ. ಅವರ ಭರವಸೆಯನ್ನೇ ಈ ವಿದ್ಯಾರ್ಥಿಯ ಕುಟುಂಬ ನಂಬಿದೆ. ತಹಸೀಲ್ದಾರ್ ವೇದವ್ಯಾಸ ಮುತಾಲಿಕ್ ಅವರು, ಆದಾಯ ಪ್ರಮಾಣ ಪತ್ರದಲ್ಲಿ ಡಿಜಿಟಲ್ ಸಹಿಗಾಗಿ ಬಯೋಮೆಟ್ರಿಕ್ ನೀಡುವ ಮೊದಲು ಸರಿಯಾಗಿ ಪರಿಶೀಲಿಸಿದ್ದರೆ ಇಂಥ ಲೋಪ ಉಂಟಾಗುತ್ತಿರಲಿಲ್ಲ'' ಎಂದು ಬಸನಗೌಡ ಮಾಲಿ ಪಾಟೀಲ್ ದೂರಿದ್ದಾರೆ.
............
ಆದಾಯ ಪ್ರಮಾಣ ಪತ್ರದಲ್ಲಿ ತಪ್ಪಾಗಿದ್ದರೆ ಎಷ್ಟು ಬಾರಿಯಾದರೂ ಹೊಸದಾಗಿ ಅರ್ಜಿ ಸಲ್ಲಿಸಿ, ಮತ್ತೊಂದು ಪ್ರಮಾಣ ಪತ್ರ ಪಡೆಯಬಹುದು. ಆದರೆ ಅದೇ ಪ್ರಮಾಣ ಪತ್ರದಲ್ಲಿ ತಿದ್ದುಪಡಿ ಮಾಡಲು ಬರುವುದಿಲ್ಲ. ಕಂಪ್ಯೂಟರ್ನಲ್ಲಿ ನಮೂದಿಸುವಾಗ ಈ ರೀತಿಯ ಲೋಪಗಳು ಉಂಟಾಗಿರುತ್ತವೆ. ಈ ವಿದ್ಯಾರ್ಥಿಗೆ ಮತ್ತೊಂದು ಪ್ರಮಾಣ ಪತ್ರ ನೀಡಿ, ಸಮಸ್ಯೆ ಪರಿಹರಿಸಲಾಗುವುದು.
-ಖಾಜಾಹುಸೇನ್, ಉಪತಹಸೀಲ್ದಾರ್