ಆ್ಯಪ್ನಗರ

ಫೇಸ್‌ಬುಕ್‌ನಲ್ಲಿ ‘ರೈತರಿಗೆ ಸಲಹೆ’

ಸಾಮಾಜಿಕ ಜಾಲತಾಣದಲ್ಲಿ ನಾನಾ ರೀತಿಯ ವಿಷಯಗಳ ಹಂಚಿಕೆಯ ಪೋಸ್ಟ್‌ ಗಮನಿಸುತ್ತೇವೆ. ಆದರೆ ಇಲ್ಲೊಬ್ಬ ಯುವ ರೈತ ಸಾಮಾಜಿಕ ಜಾಲತಾಣದಲ್ಲಿ ಕೃಷಿಗೆ ಸಂಬಂಧಿಸಿದ ಮಾಹಿತಿ ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

Vijaya Karnataka 20 Jun 2018, 5:00 am
ಮಹೇಶಗೌಡ ಭಾನಾಪುರ, ಕೊಪ್ಪಳ
Vijaya Karnataka Web KPL-KPL17MGB02


ಸಾಮಾಜಿಕ ಜಾಲತಾಣದಲ್ಲಿ ನಾನಾ ರೀತಿಯ ವಿಷಯಗಳ ಹಂಚಿಕೆಯ ಪೋಸ್ಟ್‌ ಗಮನಿಸುತ್ತೇವೆ. ಆದರೆ ಇಲ್ಲೊಬ್ಬ ಯುವ ರೈತ ಸಾಮಾಜಿಕ ಜಾಲತಾಣದಲ್ಲಿ ಕೃಷಿಗೆ ಸಂಬಂಧಿಸಿದ ಮಾಹಿತಿ ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

ತಾಲೂಕಿನ ಬೆಟಗೇರಿ ಗ್ರಾಮದ ರೈತ ಏಳುಕೋಟೇಶ್‌ ಕೊಮಲಾಪುರ ರೈತರಿಗೆ ಉಪಯುಕ್ತ ಮಾಹಿತಿಯನ್ನು ಪೇಸ್‌ಬುಕ್‌ನಲ್ಲಿ ಪ್ರಾತ್ಯಕ್ಷಿಕೆ ವಿಡಿಯೊ ಸಮೇತ ಹಂಚಿಕೊಂಡಿದ್ದು, ಹಲವು ರೈತರು ಮಾಹಿತಿ ಪಡೆದುಕೊಳ್ಳುವ ಜತೆಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಏಳುಕೋಟೇಶ್‌ ಗ್ರಾಮದಲ್ಲಿ ಜೇನು ಸಾಕಣೆ ನಡೆಸಿದ್ದು, ಇದರಿಂದ ಆದಾಯ ಕಂಡುಕೊಂಡಿದ್ದಾರೆ. ರೈತರು ಜೇನು ಹುಳು ಸಾಕಣೆ ಮಾಡುವುದು, ಪೋಷಣೆಯ ವಿಧಾನ, ಹುಳು ಹಿಡಿಯುವುದು, ಜೇನುತುಪ್ಪ ಸಂಗ್ರಹಣೆ ಸೇರಿದಂತೆ ಇನ್ನಿತರೆ ಮಾಹಿತಿಯನ್ನು ಫೇಸ್‌ಬುಕ್‌ ಪೋಸ್ಟ್‌ನಲ್ಲಿ ವಿಡಿಯೊವನ್ನು ಅಪ್‌ಲೋಡ್‌ ಮಾಡಿದ್ದಾರೆ. ವಿಡಿಯೊ ವೀಕ್ಷಿಸಿರುವ ರೈತರು ತಮಗೆ ಜೇನು ಸಾಕಣೆಯ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದ ಅರ್ಪಿಸಿದರೆ, ಕೆಲವರು ಕುತೂಹಲ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ತಾವೂ ಜೇನು ಸಾಕಣೆ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಸಾವಯವ ಗೊಬ್ಬರ ತಯಾರಿಕೆ: ಮುಂಗಾರು ಹಾಗೂ ಹಿಂಗಾರು ಬಿತ್ತನೆ ಸಂದರ್ಭದಲ್ಲಿ ಬಿತ್ತನೆಪೂರ್ವ ಬೀಜೋಪಚಾರ, ಸಾವಯವ ಗೊಬ್ಬರ ತಯಾರಿಕೆ ಸೇರಿದಂತೆ ಇನ್ನಿತರೆ ಮಾಹಿತಿಯ ಪೋಸ್ಟ್‌ಗಳನ್ನು ಏಳುಕೋಟೇಶ್‌ ತಮ್ಮ ಖಾತೆಯಲ್ಲಿ ಹಾಕಿದ್ದಾರೆ. ಪ್ರಗತಿಪರ ರೈತರಾಗಿರುವ ಅವರು ಕೃಷಿ ತಜ್ಞರಿಂದ ಪಡೆದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಟ್ಟಿದ್ದಾರೆ. ಫೇಸ್‌ಬುಕ್‌ ಮೂಲಕವೇ ಕೆಲವು ರೈತರು ನಂಬರ್‌ ಪಡೆದುಕೊಂಡು ನಾನಾ ಬೆಳೆಗಳ ಬಗ್ಗೆ ಪರಸ್ಪರ ವಿಷಯ ಹಂಚಿಕೊಂಡಿದ್ದಾರೆ ಎಂದು ಏಳುಕೋಟೇಶ ಹೇಳುತ್ತಾರೆ.

''ಸಾಮಾಜಿಕ ಜಾಲತಾಣವು ಪರಸ್ಪರ ಸಂವಹನ ನಡೆಸಲು ಅನುಕೂಲವಾಗಿದೆ. ಪೋಸ್ಟ್‌ ಹಾಕಿದಾಗಿನಿಂದ ಬಹಳಷ್ಟು ಜನರು ಯಾರಿಂದಲೋ ನನ್ನ ನಂಬರ್‌ ಪಡೆದುಕೊಂಡು ಸಂಪರ್ಕಿಸುತ್ತಿದ್ದಾರೆ. ಕೃಷಿಯಲ್ಲಿ ನಾನು ಕಂಡುಕೊಂಡ ಅನುಭವವನ್ನು ಅವರೊಂದಿಗೆ ಹಂಚಿಕೊಳ್ಳುವೆ. ಅವರೊಂದಿಗೂ ಮಾಹಿತಿ ಪಡೆದುಕೊಂಡು ಹೊಸ ಪ್ರಯೋಗಗಳಿಗೆ ಒಡ್ಡುತ್ತಿದ್ದೇನೆ'' ಎಂದು ರೈತ ಏಳುಕೋಟೇಶ್‌ ಹೇಳುತ್ತಾರೆ.

ಹಕ್ಕಿ, ಪಕ್ಷಿಗಳಿಂದ ಬೆಳೆ ರಕ್ಷಣೆಗೆ ಐಡಿಯಾ: ಹೊಲದಲ್ಲಿ ಸಜ್ಜೆ, ಜೋಳ, ಮಕ್ಕೆಜೋಳ ಸೇರಿದಂತೆ ಇನ್ನಿತರೆ ಬೆಳೆ ಎತ್ತರಕ್ಕೆ ಬೆಳೆದಾಗ ಹಕ್ಕಿ-ಪಕ್ಷಿಗಳ ಕಾಟ ಜಾಸ್ತಿ. ಹಕ್ಕಿ-ಪಕ್ಷಿ ಹಾಗೂ ಪ್ರಾಣಿಗಳಿಂದ ಬೆಳೆ ಹೇಗೆ ರಕ್ಷಣೆ ಮಾಡಬೇಕೆನ್ನುವ ಸಲಹೆಯನ್ನೂ ಪೋಸ್ಟ್‌ ಮೂಲಕ ಪ್ರಚುರಪಡಿಸಿದ್ದಾರೆ. ತಮಟೆ ಬಡಿದು ಹಕ್ಕಿ-ಪಕ್ಷಿಗಳನ್ನು ಓಡಿಸುವ ಚಿತ್ರದ ಪೋಸ್ಟ್‌ ಹಾಕಿದ್ದು, ಹಲವರು ಲೈಕ್‌ ಮಾಡಿದ್ದಾರೆ.

............

ರೈತರಿಗೆ ಉಪಯುಕ್ತ ಮಾಹಿತಿ ಸಾಮಾಜಿಕ ಜಾಲತಾಣಗಳಿಂದ ನೀಡಬಹುದು ಎನ್ನುವ ಉದ್ದೇಶದಿಂದ ಕೃಷಿಗೆ ಸಂಬಂಧಿಸಿದಂತೆ ವಿಷಯಗಳನ್ನು ಹಂಚಿಕೆ ಮಾಡಿದ್ದೇನೆ. ಮುಂಗಾರು, ಹಿಂಗಾರು ಬಿತ್ತನೆ, ಜೇನು ಸಾಕಣೆ, ಸಾವಯವ ಗೊಬ್ಬರ ತಯಾರಿಕೆ ಸೇರಿದಂತೆ ಇನ್ನಿತರೆ ಮಾಹಿತಿಯ ಪೋಸ್ಟ್‌ ಹಾಕಿದ್ದೇನೆ. ಕೆಲವರು ಫೇಸ್‌ಬುಕ್‌ನಲ್ಲಿ ನಂಬರ್‌ ಪಡೆದು ತಮಗೆ ಅವಶ್ಯವಿರುವ ಮಾಹಿತಿ ಕೇಳುತ್ತಾರೆ. ನನಗೆ ಗೊತ್ತಿರುವುದನ್ನು ಹೇಳುತ್ತೇನೆ.

- ಏಳುಕೋಟೇಶ್‌ ಕೋಮಲಾಪುರ, ಬೆಟಗೇರಿ ಗ್ರಾಮದ ರೈತ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ