ಆ್ಯಪ್ನಗರ

ಉಳಿತಾಯದ ಹಣದಲ್ಲಿ ಹೆಚ್ಚುವರಿ 15ದಿನ ಕೆಲಸ

ಸಾರ್ವಜನಿಕರು ಮತ್ತು ರೈತರು ನಿಡಶೇಸಿ ಕೆರೆ ಹೂಳೆತ್ತಲು ನೀಡಿರುವ ದೇಣಿಗೆಯಲ್ಲಿ ಉಳಿತಾಯವಾದ ಹಣದಿಂದ ಇನ್ನೂ 15 ದಿನ ಹೆಚ್ಚುವರಿ ಕೆಲಸ ಮಾಡಲು ಕೆರೆ ಅಭಿವೃದ್ಧಿ ಸಮಿತಿ ಶುಕ್ರವಾರ ನಿರ್ಧರಿಸಿತು.

Vijaya Karnataka 30 Mar 2019, 5:00 am
ಕುಷ್ಟಗಿ : ಸಾರ್ವಜನಿಕರು ಮತ್ತು ರೈತರು ನಿಡಶೇಸಿ ಕೆರೆ ಹೂಳೆತ್ತಲು ನೀಡಿರುವ ದೇಣಿಗೆಯಲ್ಲಿ ಉಳಿತಾಯವಾದ ಹಣದಿಂದ ಇನ್ನೂ 15 ದಿನ ಹೆಚ್ಚುವರಿ ಕೆಲಸ ಮಾಡಲು ಕೆರೆ ಅಭಿವೃದ್ಧಿ ಸಮಿತಿ ಶುಕ್ರವಾರ ನಿರ್ಧರಿಸಿತು.
Vijaya Karnataka Web an additional 15 day work at savings money
ಉಳಿತಾಯದ ಹಣದಲ್ಲಿ ಹೆಚ್ಚುವರಿ 15ದಿನ ಕೆಲಸ


ಕೆರೆ ಆವರಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಇದುವರೆಗೆ ನಡೆದಿರುವ ಕೆಲಸದ ಬಗ್ಗೆ ವಿವರಣೆ ನೀಡಿದ ಕೆರೆ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಲೆಕ್ಕಪತ್ರ ಮಂಡಿಸಿದರು.

ಹೆಚ್ಚುವರಿ ಕೆಲಸ: ಯೋಜನೆಯಂತೆ 45ದಿನ ಕೆಲಸ ನಡೆಸಲು ನಿರ್ಣಯಿಸಲಾಗಿತ್ತು. ಹೆಚ್ಚುವರಿಯಾಗಿ 6 ದಿನ ಕೆಲಸ ಮಾಡಿ ಮಾ.29ಕ್ಕೆ 51 ದಿನ ಕೆಲಸ ನಡೆಸಲಾಗಿದೆ. ಮಾ.28ವರೆಗೆ ಸಂಗ್ರಹವಾಗಿರುವ ಒಟ್ಟು ಹಣ 84.21ಲಕ್ಷ ರೂ.ಗಳು. ಇದರಲ್ಲಿ ಕೆರೆ ಹೂಳೆತ್ತುವ ಕೆಲಸದಲ್ಲಿ ನಿರತವಾಗಿರುವ ಯಂತ್ರಗಳು ಮತ್ತು ಟಿಪ್ಪರ್‌ಗಳಿಗೆ ಡೀಸೆಲ್‌ ಹಾಕಿಸಲು ಮಾ.29ವರೆಗೆ ಖರ್ಚಾಗಿರುವ ಹಣ 50.61ಲಕ್ಷ ರೂ., ಚಾಲಕರ ಭತ್ಯೆ 4.83ಲಕ್ಷ ರೂ., ಟಿಪ್ಪರ್‌ ಬಾಡಿಗೆ 1.05ಲಕ್ಷ ರೂ., ಇತರೆ ಖರ್ಚು 34,150ರೂ., ಜೆಸಿಬಿ ಬಾಡಿಗೆ 1.59ಲಕ್ಷ ರೂ. ಗಳಾಗಿದೆ. 29-3-2019ರಂದು ಕೆರೆ ಅಭಿವೃದ್ಧಿ ಸಮಿತಿಯ ಬ್ಯಾಂಕ್‌ ಖಾತೆಯಲ್ಲಿ ಉಳಿಕೆಯಾಗಿರುವ ಹಣ 28.50ಲಕ್ಷ ರೂ. ಮಾ.29 ವರೆಗೆ ದಾನಿಗಳು ನೀಡಿರುವ ಹಿಟಾಚಿ, ಜೆಸಿಬಿ ಯಂತ್ರಗಳನ್ನು ಬಳಸಿಕೊಳ್ಳಲಾಗಿತ್ತು. ಡೀಸೆಲ್‌ನ್ನು ಸಮಿತಿಯಿಂದ ಹಾಕಿಸಲಾಗುತ್ತಿತ್ತು.

ಬಾಡಿಗೆ: ಮಾ.30ರಿಂದ ಮುಂದಿನ 15 ದಿನಗಳವರೆಗೆ ಹೆಚ್ಚುವರಿ ಕೆಲಸ ಮಾಡಲಾಗುತ್ತಿದೆ. ಹೆಚ್ಚುವರಿ ಕೆಲಸ ನಡೆಸಲು ನಿತ್ಯ 5 ಹಿಟಾಚಿ, 16ಟಿಪ್ಪರ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಹೆಚ್ಚುವರಿ ಕೆಲಸಕ್ಕೆ ಬಳಸುವ ಹಿಟಾಚಿಗಳು ಮತ್ತು ಟಿಪ್ಪರ್‌ಗಳಿಗೆ ನಿತ್ಯ ಅಂದಾಜು 1.5ಲಕ್ಷ ರೂ. ಬಾಡಿಗೆ ನೀಡಲಾಗುತ್ತಿದೆ. ಸಾರ್ವಜನಿಕರಿಂದ ಸಂಗ್ರಹವಾಗಿ ಉಳಿಕೆಯಾಗಿರುವ ಹಣವನ್ನು ಹೆಚ್ಚುವರಿ ಕೆಲಸಕ್ಕೆ ಬಳಸಲಾಗುತ್ತಿದೆ ಎಂದು ಸಮಿತಿಯ ಕಾರ್ಯದರ್ಶಿ ಎಸ್‌.ಎಚ್‌.ಹಿರೇಮಠ ಸಭೆಯಲ್ಲಿ ಪ್ರಸ್ತಾಪಿಸಿದರು. ಸಭೆಯಲ್ಲಿ ಹಾಜರಿದ್ದವರು ಇದಕ್ಕೆ ಒಪ್ಪಿಗೆ ಸೂಚಿಸಿದರು.

ಸನ್ಮಾನ: ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ ಮಾತನಾಡಿ, ಕೂಲಿ ಮಾಡುವವರಿಂದ ಹಿಡಿದು ಅಧಿಕಾರಿಗಳವರೆಗೆ ಅನೇಕರು ಕೆರೆ ಹೂಳೆತ್ತುವ ಕೆಲಸಕ್ಕೆ ದೇಣಿಗೆ ನೀಡಿದ್ದಾರೆ. ಸಮಾರೋಪ ಸಮಾರಂಭ ದಿನಾಂಕವನ್ನು ಇಷ್ಟರಲ್ಲೇ ನಿಗದಿಗೊಳಿಸಲಾಗುವುದು. ಇದೊಂದು ಐತಿಹಾಸಿಕ ಕೆಲಸವಾಗಿದೆ. ಕೆರೆ ಹೂಳೆತ್ತುವ ಕೆಲಸಕ್ಕೆ ಸಿಪಿಐ ಮತ್ತು ಎಸ್‌ಐ ಅವರ ಶ್ರಮ ಬಹಳಷ್ಟಿದೆ. ಸಮಾರೋಪ ಸಮಾರಂಭ ವೇಳೆ ಶ್ರಮಿಕರು, ಸ್ವಯಂಸೇವಕರನ್ನು ಸನ್ಮಾನಿಸಲಾಗುವುದು. ದೇಣಿಗೆ ನೀಡಿರುವ ಎಲ್ಲರಿಗೂ ಕೃತಜ್ಞತಾ ಪತ್ರ ಹಾಗೂ ನೆನಪಿನ ಕಾಣಿಕೆಯನ್ನು ನೀಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕಲ್ಲೇಶ್‌ ತಾಳದ್‌, ಟಿ.ಬಸವರಾಜ, ಜಗನ್ನಾಥ ಗೋತಗಿ, ದೊಡ್ಡಬಸವ ಬಯ್ಯಾಪುರ, ಪರಸಪ್ಪ ಕತ್ತಿ, ಮಹಾಂತಯ್ಯ ಅರಳೆಲಿಮಠ, ಟಿ.ಬಸವರಾಜ, ಅಪ್ಪಣ್ಣ ನವಲೆ, ಈರಣ್ಣ ಬಳಿಗಾರ, ಶೇಖರಯ್ಯ ಹಿರೇಮಠ, ಅಮರಚಂದ್‌ ಜೈನ್‌, ಎಚ್‌.ವೈ.ಈಟಿಯವರ್‌ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ