ಆ್ಯಪ್ನಗರ

Anjanadri Development: ಕಾಂಗ್ರೆಸ್ V/S ಬಿಜೆಪಿ ಅಂಜನಾದ್ರಿ ಅಭಿವೃದ್ಧಿ ರಾಜಕೀಯ..!

Anjanadri Development Politics: ಅಷ್ಟಾಗಿ ಪ್ರಚಾರವಿಲ್ಲದ ಅಂಜನಾದ್ರಿಗೆ ನಿತ್ಯ ಈಗ ಸಾವಿರಾರು ಜನರು ಬರುತ್ತಿದ್ದಾರೆ. ರಾಜಕೀಯ ವಲಯದಲ್ಲಿಯೂ ಅಂಜನಾದ್ರಿ ಕುರಿತು ಚರ್ಚೆ ನಡೆಯುತ್ತಿದೆ. ಅಂಜನಾದ್ರಿಯ ಅಭಿವೃದ್ದಿಗಾಗಿ ಇತ್ತೀಚಿಗೆ ಸಿಎಂ ಸಭೆ ನಡೆಸಿ ಎರಡು ತಿಂಗಳಲ್ಲಿ ಅಂಜನಾದ್ರಿಯ ಅಭಿವೃದ್ದಿ ಕೆಲಸಕ್ಕೆ ಚಾಲನೆ ಸಿಗಲಿದೆ ಎಂದು ಹೇಳಿದ್ದರು. ಆದರೆ ಈಗಿನ ಸರಕಾರದ ಅವಧಿಯಲ್ಲಿ ಅಂಜನಾದ್ರಿ ಅಭಿವೃದ್ದಿ ಆಗುವುದಿಲ್ಲ. ಇದು ಕೇವಲ ಕಣ್ಣೊರೆಸುವ ತಂತ್ರ ಎನ್ನುತ್ತಿರುವ ಕಾಂಗ್ರೆಸ್ ನಾಯಕರು, ಅಂಜನಾದ್ರಿಯನ್ನು ಬಿಜೆಪಿಯವರು ಹೈಜಾಕ್ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Edited byದಿಲೀಪ್ ಡಿ. ಆರ್. | Lipi 29 Jun 2022, 4:05 pm

ಹೈಲೈಟ್ಸ್‌:

  • ಅಂಜನಾದ್ರಿ ಅಭಿವೃದ್ದಿಗೆ 100 ಕೋಟಿ ರೂಪಾಯಿ ಘೋಷಣೆ ಮಾಡಿದೆ ರಾಜ್ಯ ಬಿಜೆಪಿ ಸರ್ಕಾರ..!
  • ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಅಂಜನಾದ್ರಿಗೆ ಕರೆಸಲು ಸಜ್ಜಾಗಿದೆ ಕಾಂಗ್ರೆಸ್..!
  • ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 500 ಕೋಟಿ ರೂಪಾಯಿ ಅನುದಾನ ಕೊಡುವ ಭರವಸೆ..!
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web anjanadri
ಕೊಪ್ಪಳ: ರಾಮ ಭಕ್ತ ಹನುಮ ಜನ್ಮ ಸ್ಥಳ ಈಗ ವಿಶ್ವ ವಿಖ್ಯಾತಿ ಹೊಂದಲಿದೆ. ಇದೇ ಸಂದರ್ಭದಲ್ಲಿ ಹನುಮನ ಸ್ಥಳದ ಅಭಿವೃದ್ದಿ ವಿಚಾರವನ್ನೇ ಇಟ್ಟುಕೊಂಡು ರಾಜಕೀಯ ಆರಂಭವಾಗಿದೆ. ಅಂಜನಾದ್ರಿ ಅಭಿವೃದ್ದಿಗೆ ರಾಜ್ಯ ಬಿಜೆಪಿ ಸರ್ಕಾರ 100 ಕೋಟಿ ರೂಪಾಯಿ ಘೋಷಣೆ ಮಾಡಿದೆ. ಇನ್ನೊಂದೆಡೆ ಕಾಂಗ್ರೆಸ್ ಸಹ ರಾಷ್ಟ್ರೀಯ ನಾಯಕರಾದ ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಅಂಜನಾದ್ರಿಗೆ ಕರೆಸಲು ಸಜ್ಜಾಗಿದೆ..!
ಮುಂದೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 500 ಕೋಟಿ ರೂಪಾಯಿ ಅನುದಾನ ಕೊಡುತ್ತೇವೆ ಎನ್ನುತ್ತಿರುವ ಕಾಂಗ್ರೆಸ್ ನಾಯಕರು, ಈಗಿನ ಸರಕಾರ ಕೇವಲ ಕಣ್ಣೊರೆಸುವ ಕೆಲಸ ಮಾಡುತ್ತಿದೆ ಎಂದು ಹೇಳುತ್ತಿದೆ. ಇನ್ನೊಂದೆಡೆ, ಕಳೆದ ಒಂದು ದಶಕದಿಂದ ಆಂಜನೇಯನ ಜನ್ಮ ಸ್ಥಳದ ಬಗ್ಗೆಯೇ ಭಾರೀ ಚರ್ಚೆ ನಡೆಯುತ್ತಿದೆ.

ಅಂಜನಾದ್ರಿ ಭೇಟಿಗೆ ಪ್ರಿಯಾಂಕಾ, ರಾಹುಲ್ ಗಾಂಧಿ ತವಕ..! ಕಾಂಗ್ರೆಸ್‌ನಿಂದ ಭರದ ಸಿದ್ದತೆ..!
ರಾಜ್ಯ ಬಿಜೆಪಿ ಸರಕಾರ ಅಂಜನಾದ್ರಿಯನ್ನು ಅಯೋಧ್ಯೆ ಮಾದರಿಯಲ್ಲಿ ಅಭಿವೃದ್ದಿ ಮಾಡುತ್ತೇವೆ ಎಂದು ಹೇಳಿದೆ. ಅಯೋಧ್ಯೆಯ ನಂತರ ಹಿಂದೂಗಳ ಪವಿತ್ರ ಸ್ಥಳವೆಂದು ಖ್ಯಾತಿ ಹೊಂದಿರುವ ಅಂಜನಾದ್ರಿಯನ್ನು ಅಭಿವೃದ್ದಿ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ. ಈ ಹಿಂದೆ ಯಡಿಯೂರಪ್ಪ ಸರಕಾರದ ಬಜೆಟ್‌ನಲ್ಲಿ ಅಂಜನಾದ್ರಿಗೆ 20 ಕೋಟಿ ರೂಪಾಯಿ, ಬೊಮ್ಮಾಯಿ ಸರಕಾರದಲ್ಲಿ 100 ಕೋಟಿ ರೂಪಾಯಿ ಯೋಜನೆ ಘೋಷಣೆಯಾಗಿದೆ. ಇದರೊಂದಿಗೆ ಸ್ವದೇಶಿ ದರ್ಶನ ಯೋಜನೆಯಲ್ಲಿ 100 ಕೋಟಿ ರೂಪಾಯಿ ಹಾಗು ರಾಮಾ ಸರ್ಕ್ಯೂಟ್‌ ಯೋಜನೆ ಅಡಿಯಲ್ಲೂ ಅನುದಾನ ನೀಡಲು ಮುಂದಾಗಿದೆ.

ಈ ಮೊದಲು ಅಷ್ಟಾಗಿ ಪ್ರಚಾರವಿಲ್ಲದ ಅಂಜನಾದ್ರಿಗೆ ನಿತ್ಯ ಈಗ ಸಾವಿರಾರು ಜನರು ಬರುತ್ತಿದ್ದಾರೆ. ರಾಜಕೀಯ ವಲಯದಲ್ಲಿಯೂ ಅಂಜನಾದ್ರಿ ಕುರಿತು ಚರ್ಚೆ ನಡೆಯುತ್ತಿದೆ. ಅಂಜನಾದ್ರಿಯ ಅಭಿವೃದ್ದಿಗಾಗಿ ಇತ್ತೀಚಿಗೆ ಸಿಎಂ ಸಭೆ ನಡೆಸಿ ಎರಡು ತಿಂಗಳಲ್ಲಿ ಅಂಜನಾದ್ರಿಯ ಅಭಿವೃದ್ದಿ ಕೆಲಸಕ್ಕೆ ಚಾಲನೆ ಸಿಗಲಿದೆ ಎಂದು ಹೇಳಿದ್ದರು. ಆದರೆ ಈಗಿನ ಸರಕಾರದ ಅವಧಿಯಲ್ಲಿ ಅಂಜನಾದ್ರಿ ಅಭಿವೃದ್ದಿ ಆಗುವುದಿಲ್ಲ. ಇದು ಕೇವಲ ಕಣ್ಣೊರೆಸುವ ತಂತ್ರ ಎನ್ನುತ್ತಿರುವ ಕಾಂಗ್ರೆಸ್ ನಾಯಕರು, ಅಂಜನಾದ್ರಿಯನ್ನು ಬಿಜೆಪಿಯವರು ಹೈಜಾಕ್ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅಂಜನಾದ್ರಿ ಅಭಿವೃದ್ಧಿಗೆ ಸಿಎಂ ಮುದ್ರೆ..? ಬುಧವಾರ ನಡೆಯಲಿರುವ ಸಭೆಯತ್ತ ಕೊಪ್ಪಳ ಜನರ ಚಿತ್ತ..!
ಕಳೆದ ವರ್ಷ ಘೋಷಣೆ ಮಾಡಿದ 20 ಕೋಟಿ ರೂಪಾಯಿಯೇ ಈವರೆಗೂ ಖರ್ಚಾಗಿಲ್ಲ. ಪರಿಸ್ಥಿತಿ ಹೀಗಿರುವಾಗ ಚುನಾವಣೆ ಸಂದರ್ಭದಲ್ಲಿ ಮಾತ್ರ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಾರೆ. ಹೀಗಾಗಿ, ಬಿಜೆಪಿಯವರು ಅಂಜನಾದ್ರಿಯನ್ನು ಅಭಿವೃದ್ದಿ ಮಾಡೋದಿಲ್ಲ ಎಂದು ಮಾಜಿ ಸಚಿವ, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಹೇಳಿದ್ದಾರೆ.

ಡಿಸೆಂಬರ್ ತಿಂಗಳೊಳಗಾಗಿ ಅಂಜನಾದ್ರಿಗೆ ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಹಾಗೂ ರಾಜ್ಯದ ಕಾಂಗ್ರೆಸ್ ಮುಖಂಡರು ಭೇಟಿ ಕೊಡಲಿದ್ದಾರೆ ಎಂದಿರುವ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ನಾಯಕರು, ಹನುಮ ಮಾಲಾ ಸಂದರ್ಭದಲ್ಲಿ ನಮ್ಮ ಮುಖಂಡರು ಅಂಜನಾದ್ರಿಗೆ ಭೇಟಿ ಕೊಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಮುಂದೆ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಿದರೆ ಅಂಜನಾದ್ರಿಗೆ 500 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುವುದು ಎಂದೂ ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿ ಜಿಲ್ಲಾ ಬಿಜೆಪಿ ಅಧ್ಯಕ್ಷರೂ ಆಗಿರುವ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ನಾವು ಕಣ್ಣೊರೆಸುವ ತಂತ್ರ ಮಾಡ್ತಿಲ್ಲ ಎಂದಿದ್ದಾರೆ. ಈ ಯೋಜನೆ ಘೋಷಣೆ ಮಾಡಿದ್ದು ನಾವು.. ಅಭಿವೃದ್ಧಿ ಕಾರ್ಯವನ್ನೂ ನಾವೇ ಮಾಡ್ತೀವಿ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ 2023 ರ ಚುನಾವಣೆಗೂ ಮುನ್ನ ಹನುಮನ ಜನ್ಮ ಸ್ಥಳವು ರಾಜಕೀಯ ದಾಳವಾಗುವುದು ಸ್ಪಷ್ಟವಾಗುತ್ತಿದೆ. ರಾಜಕೀಯ ಹೊರತು ಪಡಿಸಿ ಪೌರಾಣಿಕ ಹಿನ್ನೆಲೆಯ ಹನುಮನ ಸ್ಥಳ ಅಭಿವೃದ್ದಿ ಹೊಂದಲಿ ಎಂದು ಜನತೆ ಆಶಿಸಿದ್ದಾರೆ.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ