ಗಂಗಾವತಿ; ನಗರದ ತಾ.ಪಂ.ಆವರಣದ ಮಂಥನ ಸಭಾಂಗಣದಲ್ಲಿ ಜಗಜ್ಯೋತಿ ಬಸವಣ್ಣನವರ ಜಯಂತಿ ಆಚರಣೆ ಕುರಿತು ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ ನೇತೃತ್ವದಲ್ಲಿ ಸೋಮವಾರ ಪೂರ್ವಭಾವಿ ಸಭೆ ನಡೆಯಿತು.
ಪೂರ್ವಭಾವಿ ಸಭೆಗೆ ಆಗಮಿಸಿದ ಸಾರ್ವಜನಿಕರು ಹಾಗೂ ನಾನಾ ಸಂಘಟನೆಗಳು ಮುಖಂಡರು ಮಾತನಾಡಿ, ಜಾಸ್ತಿ ಬಿಸಿಲು ಇದೆ. ಹಾಗಾಗಿ, ಮೇ 9 ರಂದು ನಡೆಯಲಿರುವ ಜಯಂತಿ ಮೆರವಣಿಗೆಗಾಗಿ ರಸ್ತೆ ಮೇಲೆ ನೀರು ಹೊಡೆಯಬೇಕು. ಬೆಳಗ್ಗೆ ಬೇಗ ಮೆರವಣಿಗೆ ಪ್ರಾರಂಭಿಸಿ, ವೇದಿಕೆ ಕಾರ್ಯಕ್ರಮ ನಡೆಸಬೇಕು. ನಗರಸಭೆಯಿಂದ ವೃತ್ತಗಳ ಸ್ವಚ್ಛತೆ ಹಾಗೂ ಸಾರ್ವಜನಿಕರಿಗೆ ಕುಡಿವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.
ನಗರಸಭೆ ಪೌರ ಕಾರ್ಮಿಕ ಸಂಘಟನೆ ತಾಲೂಕು ಅಧ್ಯಕ್ಷ ರಗಡಪ್ಪ, ಕಾರ್ಮಿಕ ಮುಖಂಡ ಜೆ.ಭಾರದ್ವಾಜ್ ಮಾತನಾಡಿ, ಎಲ್ಲ ಸಮುದಾಯದವರು ಬಸವೇಶ್ವರ ಜಯಂತಿ ಆಚರಿಸಬೇಕು. ಸರಕಾರ ಜಯಂತಿ ಆಚರಣೆ ಮಾಡುತ್ತಿದೆ ಎಂಬ ಕಾರಣಕ್ಕೆ ಕಾಟಾಚಾರದ ಜಯಂತಿ ಆಗಬಾರದು ಎಂದು ಹೇಳಿದರು.
ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ ಮಾತನಾಡಿ, ಬಸವೇಶ್ವರ ಜಯಂತಿ ವೇಳೆ ಅಗತ್ಯ ಸೌಲಭ್ಯದ ಜತೆ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಉಪಾಹಾರ ವ್ಯವಸ್ಥೆಯನ್ನು ದಾನಿಗಳಿಂದ ಮಾಡಿಸಲಾಗುವುದು. ನಗರದ ನೀಲಕಂಠೇಶ್ವರ ವೃತ್ತದ ಬಳಿ ಇರುವ ಮಾದರಿ ಸರಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮ ನಡೆಸಲಾಗುವುದು ಎಂದರು.
ನಗರಸಭೆ ಪೌರಾಯುಕ್ತ ಸಿ.ಆರ್.ರಂಗಸ್ವಾಮಿ, ತಾ.ಪಂ.ಇಒ. ಟಿ.ವೆಂಕೋಬಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ವಿಜಯಕುಮಾರ, ರಾಷ್ಟ್ರೀಯ ಬಸವದಳದ ತಾಲೂಕು ಅಧ್ಯಕ್ಷ ಪಾಪಣ್ಣ, ನಗರ ಠಾಣೆ ಪಿಐ ಈ.ಕಾಳಿಕೃಷ್ಣ ಇತರರು ಇದ್ದರು.