ಆ್ಯಪ್ನಗರ

ಒಂದೇ ಕಾರ್ಯಕ್ರಮಕ್ಕೆ ಬೇರೆ ಬೇರೆ ವಿಮಾನದಲ್ಲಿ ಬಂದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌, ಕಾರ್ಯಕರ್ತರಲ್ಲಿ ಅಚ್ಚರಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ರಾಯಚೂರಿನಲ್ಲಿ ನಡೆದ ಮದುವೆಗೆ ಇಬ್ಬರೂ ಬೇರೆ ಬೇರೆ ವಿಮಾನದಲ್ಲಿ ಬಂದಿದ್ದು ಇದನ್ನು ಜಗಜ್ಜಾಹೀರು ಮಾಡಿದೆ.

Vijaya Karnataka Web 27 Jun 2022, 7:39 pm
ಕೊಪ್ಪಳ: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು, ಸಮೀಪದ ಬಸಾಪುರ ವಿಮಾನ ನಿಲ್ದಾಣಕ್ಕೆ ಸೋಮವಾರ ಬೇರೆ ಬೇರೆ ವಿಮಾನಗಳಲ್ಲಿ ಆಗಮಿಸಿ, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರಿಗೆ ಅಚ್ಚರಿ ಹಾಗೂ ಅನುಮಾನ ಮೂಡಿಸಿದರು.
Vijaya Karnataka Web ಡಿಕೆ ಶಿವಕುಮಾರ್, ಸಿದ್ದರಾಮಯ್ಯ
ಡಿಕೆ ಶಿವಕುಮಾರ್, ಸಿದ್ದರಾಮಯ್ಯ


ಉಭಯ ನಾಯಕರು ರಾಯಚೂರು ಜಿಲ್ಲೆ ಮಸ್ಕಿ ಕ್ಷೇತ್ರದ ಶಾಸಕ ಬಸನಗೌಡ ತುರುವಿಹಾಳ ಕುಟುಂಬದವರ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಸಿಂಧನೂರಿಗೆ ತೆರಳಲು ಇಲ್ಲಿಗೆ ಆಗಮಿಸಿದ್ದರು. ಇಬ್ಬರು ಭಿನ್ನ ವಿಮಾನಗಳಲ್ಲಿ ಆಗಮಿಸಿದ್ದರಿಂದ ಅವರ ಮಧ್ಯೆ ಮುನಿಸಿದೆಯೇ? ಎಂಬ ಪ್ರಶ್ನೆ ಸ್ಥಳದಲ್ಲಿಇದ್ದವರನ್ನು ಕೆಲ ಕಾಲ ಕಾಡಿತು.

ಪ್ರಜಾಪ್ರಭುತ್ವಕ್ಕೆ ಆಪರೇಷನ್ ಕಮಲ ಕೂಡ ಮಾರಕ: ಸಿದ್ದರಾಮಯ್ಯ ವಾಗ್ದಾಳಿ!

ಮತ್ತೊಂದೆಡೆ ಕೊಪ್ಪಳ ಸಮೀಪದ ಬಸಾಪುರ ವಿಮಾನ ನಿಲ್ದಾಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಸಚಿವ ಶಿವರಾಜ್‌ ತಂಗಡಗಿ ಹಾಗೂ ಗಂಗಾವತಿಯ ಮಾಜಿ ಶಾಸಕ ಇಕ್ಬಾಲ್‌ ಅನ್ಸಾರಿ ಮಧ್ಯೆ ನಡೆದ ಚರ್ಚೆ ಕುತೂಹಲ ಹುಟ್ಟಿಸಿದೆ. ಮಾಜಿ ಎಂಎಲ್‌ಸಿ ಎಚ್‌.ಆರ್‌.ಶ್ರೀನಾಥ ಅವರು, ಜೆಡಿಎಸ್‌ ತೊರೆದು ಜುಲೈ 3 ರಂದು ಕಾಂಗ್ರೆಸ್‌ ಸೇರುತ್ತಿದ್ದು, ಈ ಮುಖಂಡರ ಭೇಟಿ ಮಹತ್ವ ಪಡೆದಿದೆ. ಕಾಂಗ್ರೆಸ್‌ ಟಿಕೆಟ್‌ ಸಿಗುವ ಭರವಸೆಯಲ್ಲಿರುವ ಮಾಜಿ ಶಾಸಕ ಇಕ್ಬಾಲ್‌ ಅನ್ಸಾರಿ ಅವರಿಗೆ ಎಚ್‌.ಆರ್‌.ಶ್ರೀನಾಥ ಅವರ ಕಾಂಗ್ರೆಸ್‌ ಸೇರ್ಪಡೆ ಇರುಸು ಮುರುಸು ತರುವ ಹಿನ್ನೆಲೆ ಈ ಚರ್ಚೆ ನಡೆದಿದೆ ಎಂದು ಅರ್ಥೈಸಲಾಗಿದೆ.

'ಆಪರೇಷನ್‌ ಕಮಲ ಮಾರಕ'

''ಆಪರೇಷನ್‌ ಕಮಲ ಪ್ರಜಾಪ್ರಭುತ್ವಕ್ಕೆ ಮಾರಕ. ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದ್ದು ಪ್ರಜಾ ಪ್ರಭುತ್ವಕ್ಕೆ ಮಾರಕ ಎನ್ನುವ ಬಿಜೆಪಿಯವರು ಆಪರೇಷನ್‌ ಕಮಲ ಪಾಲಿಸುತ್ತಿರುವುದು ಏನು? ಇಂತಹ ಅಕ್ರಮ ಸರಕಾರ ರಚನೆಗೆ ಪಾಪದ ಹಣ ಖರ್ಚು ಮಾಡುತ್ತಿದ್ದಾರೆ. ಒಬ್ಬ ಶಾಸಕರಿಗೆ 25 ರಿಂದ 30 ಕೋಟಿ ರೂ. ಕೊಟ್ಟು ಖರೀದಿ ಮಾಡುತ್ತಾರೆ. ಇದೆಲ್ಲ ಲೂಟಿ ಹಣವಾಗಿದೆ'' ಎಂದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

''ಬಿಜೆಪಿ ಸರಕಾರದಲ್ಲಿ 40 ಪರ್ಸೆಂಟ್‌ ಕಮಿಷನ್‌ ದಂಧೆ ಜೀವಂತವಾಗಿದೆ. ಬಿಜೆಪಿ ಬಳಿ ದುಡ್ಡಿದೆ, ಅಧಿಕಾರವಿದೆ. ಹಾಗಾಗಿ ಅವರು ಎಲ್ಲ ಕಡೆ ಆಪರೇಶನ್‌ ಕಮಲ ಮಾಡುತ್ತಿದ್ದಾರೆ'' ಎಂದ ಅವರು, ''ನನ್ನ ಕಂಡ್ರೆ ಆರ್‌ಎಸ್‌ಎಸ್‌, ಜೆಡಿಎಸ್‌ನವರಿಗೆ ಭಯ. ಹಾಗಾಗಿ ಅವರೆಲ್ಲ ನನ್ನ ಟಾರ್ಗೆಟ್‌ ಮಾಡುತ್ತಾರೆ'' ಎಂದು ದೂರಿದರು.

''ಎಚ್‌.ಡಿ.ಕುಮಾರಸ್ವಾಮಿ ಅವರು ತಾವು ಮತ್ತೆ ಸಿಎಂ ಆಗುವೆ ಎನ್ನುತ್ತಿದ್ದಾರಲ್ಲ?'' ಎಂಬ ಪ್ರಶ್ನೆಗೆ ''ರಾಜ್ಯದ ಜನ ತಿರ್ಮಾನ ಮಾಡಬೇಕು. ನಾನೇ ಸಿಎಂ ಆಗುತ್ತೇನೆ ಎಂದು ಕೂಡಲು ಆಗುತ್ತದೆಯೇ? ವಿಧಾನ ಪರಿಷತ್‌ ಚುನಾವಣೆಯಲ್ಲಿ ಜೆಡಿಎಸ್‌ ಯಾವ ಸ್ಥಾನಕ್ಕೆ ಹೋಗಿದೆ? ಅಂತಹ ಪಾರ್ಟಿ ಅಧಿಕಾರಕ್ಕೆ ಬರುತ್ತಾ?'' ಎಂದು ಸಿದ್ದರಾಮಯ್ಯ ಮರು ಪ್ರಶ್ನಿಸಿದರು.

'ಬಿಜೆಪಿ ತೊಲಗಿದರಷ್ಟೇ ಕಮಿಷನ್‌ ದಂಧೆಗೆ ಕಡಿವಾಣ'

'' ಬಿಜೆಪಿ ಸರಕಾರ ತೊಲಗಿದರೆ ಮಾತ್ರ ಕಮಿಷನ್‌ ದಂಧೆಗೆ ಕಡಿವಾಣ ಬೀಳಲಿದೆ. ಪಿಎಸ್‌ಐ ಹಗರಣದಲ್ಲಿ ಪ್ರಮುಖ ಆರೋಪಿಗಳನ್ನು ಈವರೆಗೂ ಬಂಧಿಸಿಲ್ಲ. ಖಾನಾವಳಿಯಲ್ಲಿ ಊಟದ ದರದ ಬೋರ್ಡ್‌ ಇರುವಂತೆ ಎಲ್ಲ ಹುದ್ದೆ, ವರ್ಗಾವಣೆಗೆ ಬೋರ್ಡ್‌ ಹಾಕಿಕೊಂಡು ಬಿಜೆಪಿಯವರು ಆಡಳಿತ ನಡೆಸುತ್ತಿದ್ದಾರೆ. ಈ ಸರಕಾರ ಕಿತ್ತು ಹಾಕಲು ಜನ ತೀರ್ಮಾನಿಸಿದ್ದಾರೆ. ನಾವು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಮರ್ಪಕ ಸರ್ವೆ ಮಾಡಿ, ಅಭ್ಯರ್ಥಿಗಳಿಗೆ ಟಿಕೆಟ್‌ ಕೊಡುತ್ತೇವೆ'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

ಬಿಜೆಪಿಯಿಂದ ತನಿಖಾ ಸಂಸ್ಥೆಗಳ ದುರ್ಬಳಕೆ: ಡಿಕೆ ಶಿವಕುಮಾರ್ ಆರೋಪ!

'100 ಕ್ಕೆ ನೂರು ನನಗೆ ಟಿಕೆಟ್‌'

''ನಮ್ಮ ನಾಯಕರ ಮಾತಿನ ಮೇಲೆ ನಂಬಿಕೆ ಇಟ್ಟು ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 80 ಸಾವಿರ ಡಿಜಿಟಲ್‌ ಸದಸ್ಯತ್ವ ಮಾಡಿಸಿದ್ದೇನೆ. ಕಾಂಗ್ರೆಸ್‌ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅವರು ಎಂದೂ ನನ್ನನ್ನು ಬಿಟ್ಟು ಕೊಟ್ಟಿಲ್ಲ. ಮುಂದೆಯೂ ಬಿಟ್ಟು ಕೊಡುವುದಿಲ್ಲ. ಯಾರು ಬೇಕಾದರೂ ಆಕಾಂಕ್ಷಿ ಇರಬಹುದು, ನಾನು ಪಕ್ಷದ ವರಿಷ್ಠರ ಮಾತಿನ ಮೇಲೆ ಮುಂದೆ ಹೋಗುತ್ತಿದ್ದೇನೆ. 100 ಕ್ಕೆ ನೂರು ನನಗೆ ಟಿಕೆಟ್‌ ಸಿಗುವ ಭರವಸೆಯಿದೆ. ಮತ್ತೇಕೆ ಜೆಡಿಎಸ್‌ಗೆ ಹೋಗಲಿ? ಕಾಂಗ್ರೆಸ್‌ನಿಂದ ಜು.3ಕ್ಕೆ ಸಭೆಯಿದೆ. ಅಂದು ಚುನಾವಣೆ ಕುರಿತು ಚರ್ಚೆ ನಡೆಯಲಿದೆ'' ಎಂದು ಗಂಗಾವತಿ ಕ್ಷೇತ್ರದ ಮಾಜಿ ಶಾಸಕ ಇಕ್ಬಾಲ್‌ ಅನ್ಸಾರಿ ಹೇಳಿದರು.
Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ