ಆ್ಯಪ್ನಗರ

ಕಣ್ಣೀರ ತರಿಸುವ ‘ಈರುಳ್ಳಿ’ಗೀಗ ಕೊಳೆ ರೋಗ; 12 ಸಾವಿರ ಹೆಕ್ಟೇರ್‌ ಪ್ರದೇಶದ ಬೆಳೆನಾಶ

ಕೊಪ್ಪಳ ತಾಲೂಕಿನ ಅಳವಂಡಿ, ಕಾತರಕಿ-ಗುಡ್ಲಾನೂರು, ಹಿರೇಸಿಂದೋಗಿ, ಬಿಸರಳ್ಳಿ, ಮೈನಳ್ಳಿ, ಹಲಗೇರಿ ಕುಕನೂರು ತಾಲೂಕಿನ ತಳಕಲ್‌, ಭಾನಾಪುರ, ನರೇಗಲ್‌ ಸೇರಿ ಇತರೆಡೆ ಮಳೆಯಾಗುತ್ತಿರುವುದರಿಂದ ಈರುಳ್ಳಿ ಬೆಳೆಗೆ ಕೊಳೆ ರೋಗ ತಗುಲಿದ್ದು, ಬಹುತೇಕ ಕಡೆ ರೈತರು ನಷ್ಟದ ಸುಳಿಗೆ ಸಿಲುಕಿದ್ದಾರೆ. ಕೊಪ್ಪಳ ತಾಲೂಕಿನ ಕಾತರಕಿ-ಗುಡ್ಲಾನೂರು ಗ್ರಾಮವೊಂದರಲ್ಲೇ ಬರೋಬ್ಬರಿ 100 ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದ್ದು, ಈ ಪೈಕಿ 40 ಎಕರೆಯಷ್ಟು ಬೆಳೆ ಈ ಕೊಳೆ ರೋಗಕ್ಕೆ ತುತ್ತಾಗಿದೆ.

Vijaya Karnataka 5 Sep 2021, 8:41 am
ದೇವೇಂದ್ರ ಬಳಗೇರ
Vijaya Karnataka Web Onion Crop Destroy

ಕೊಪ್ಪಳ: ಪ್ರತಿಯೊಬ್ಬರ ಕಣ್ಣಲ್ಲಿ ಕಣ್ಣೀರ ತರಿಸುವ ಈರುಳ್ಳಿ ಬೆಳೆಗೆ ಈಗ ಕೊಳೆ ರೋಗದ ಭೀತಿ ಅಂಟಿಕೊಂಡಿದೆ. ಅಂದಾಜು 12 ಸಾವಿರ ಹೆಕ್ಟೇರ್‌ ಪ್ರದೇಶ ವ್ಯಾಪ್ತಿಯಲ್ಲಿ ಬೆಳೆದ ಈರುಳ್ಳಿ ಬೆಳೆಯನ್ನು ನಾಶಪಡಿಸುವ ಹಂತಕ್ಕೆ ಬಂದು ತಲುಪಿದೆ. ಇದರಿಂದ ಈರುಳ್ಳಿ ಬೆಳೆಯನ್ನು ಬೆಳೆದ ರೈತರೂ ಕೂಡ ಬರೀ ಕಣ್ಣೀರಲ್ಲೇ ಕಾಲ ಕಳೆಯುವಂತಾಗಿದೆ.

ಮೊದಲೇ ಮಹಾಮಾರಿ ಕೊರೊನಾ ಸೋಂಕಿನ ಭೀತಿಯಿಂದ ಅರ್ಥಿಕವಾಗಿ ಜರ್ಜರಿತವಾಗಿರುವ ಅನ್ನದಾತರು ಸಾಲ ಮಾಡಿ ಬಿತ್ತನೆ ಮಾಡಿದ ಈರುಳ್ಳಿ ಬೆಳೆಗೆ ಕೊಳೆ ರೋಗದ ಭೀತಿ ಎದುರಾಗಿದೆ. ಇದರಿಂದ ರೈತರು ಮತ್ತಷ್ಟು ಆಂತಕ್ಕಕ್ಕೀಡಾಗಿದ್ದಾರೆ. ಜಿಲ್ಲೆಯ ಕುಷ್ಟಗಿ, ಕುಕನೂರು, ಯಲಬುರ್ಗಾ, ಕೊಪ್ಪಳ, ಕನಕಗಿರಿ, ಕಾರಟಗಿ ಹಾಗೂ ಗಂಗಾವತಿ ಸೇರಿ ಜಿಲ್ಲಾದ್ಯಂತ 12 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬೆಳೆಯನ್ನು ಬೆಳೆಯಲಾಗಿದ್ದು, ಬೆಳೆ ಸಮೃದ್ಧಿಯಾಗಿದೆ. ಆದರೆ, ಕೆಲ ದಿನಗಳಿಂದ ಜಿಲ್ಲೆಯ ಬಹುತೇಕ ಕಡೆ ಜಿಟಿ-ಜಿಟಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಈರುಳ್ಳಿ ಬೆಳೆಗೆ ಕೊಳೆ ರೋಗ ಆವರಿಸಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಮೊದಲೇ ಕೊರೊನಾ ಸೋಂಕಿನಿಂದ ಆರ್ಥಿಕವಾಗಿ ದುರ್ಬಲವಾಗಿರುವ ರೈತರು ಮತ್ತೆ ಸಾಲದ ಸುಳಿಗೆ ಸಿಲುಕುವಂತೆ ಮಾಡಿದೆ.

40 ಎಕರೆ ಬೆಳೆ ನಾಶ:
ಕೊಪ್ಪಳ ತಾಲೂಕಿನ ಅಳವಂಡಿ, ಕಾತರಕಿ-ಗುಡ್ಲಾನೂರು, ಹಿರೇಸಿಂದೋಗಿ, ಬಿಸರಳ್ಳಿ, ಮೈನಳ್ಳಿ, ಹಲಗೇರಿ ಕುಕನೂರು ತಾಲೂಕಿನ ತಳಕಲ್‌, ಭಾನಾಪುರ, ನರೇಗಲ್‌ ಸೇರಿ ಇತರೆಡೆ ಮಳೆಯಾಗುತ್ತಿರುವುದರಿಂದ ಈರುಳ್ಳಿ ಬೆಳೆಗೆ ಕೊಳೆ ರೋಗ ತಗುಲಿದ್ದು, ಬಹುತೇಕ ಕಡೆ ರೈತರು ನಷ್ಟದ ಸುಳಿಗೆ ಸಿಲುಕಿದ್ದಾರೆ. ಕೊಪ್ಪಳ ತಾಲೂಕಿನ ಕಾತರಕಿ-ಗುಡ್ಲಾನೂರು ಗ್ರಾಮವೊಂದರಲ್ಲೇ ಬರೋಬ್ಬರಿ 100 ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದ್ದು, ಈ ಪೈಕಿ 40 ಎಕರೆಯಷ್ಟು ಬೆಳೆ ಈ ಕೊಳೆ ರೋಗಕ್ಕೆ ತುತ್ತಾಗಿರುವುದರಿಂದ ಅನ್ನದಾತರು ಟ್ರ್ಯಾಕ್ಟರ್‌ ಮೂಲಕ ಬೆಳೆ ನಾಶಪಡಿಸಿ ಪರ್ಯಾಯ ಬೆಳೆಯತ್ತ ಚಿತ್ತ ಹರಿಸಿದ್ದಾರೆ.

ಕೊಳೆಯುತ್ತಿದೆ ಗಡ್ಡೆ: ಕಾತರಕಿ- ಗುಡ್ಲಾನೂರು, ಅಳವಂಡಿ ಹೋಬಳಿ ವ್ಯಾಪ್ತಿಯಲ್ಲಿ ಈರುಳ್ಳಿ ಗಡ್ಡೆ ಕೊಳೆಯುತ್ತಿದ್ದು, ಬೆಳೆ ಒಕ್ಕಣೆ ಮಾಡುವುದಕ್ಕೆ ಕೇವಲ 20 ದಿನ ಇರುವಾಗಲೇ ಕೊಳೆ ರೋಗ ರೈತರ ಸಂತಸವನ್ನೇ ಕಸಿದುಕೊಂಡಿದೆ. ಅಲ್ಲದೇ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಔಷಧೋಪಚಾರಕ್ಕೂ ರೋಗ ನಿಯಂತ್ರಣವಾಗದ ಹಿನ್ನೆಲೆಯಲ್ಲಿ ರೈತರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆಗೆ ತೊಡಗಿಸಿದ ಬಂಡವಾಳವೂ ಬರಲಿಲ್ಲ. ಬೆಳೆಯೂ ಕೈಗೆ ಸಿಗಲಿಲ್ಲ ಎಂಬಂತಾಗಿದೆ. ಈರುಳ್ಳಿ ಬೆಳೆಯಿಂದ ನಷ್ಟಕ್ಕೆ ಒಳಗಾಗಿರುವ ರೈತರು ಬೆಳೆ ನಾಶಪಡಿಸಿ ಪರ್ಯಾಯ ಬೆಳೆ ಬೆಳೆಯಲು ಜಮೀನನ್ನು ಹದ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ನಾಶಪಡಿಸಿದ ಈರುಳ್ಳಿ ಬೆಳೆಗೆ ಸರಕಾರ ಪರಿಹಾರ ನೀಡಿ, ನಮ್ಮ ಸಂಕಷ್ಟಕ್ಕೆ ಸ್ಪಂದಿಸಲಿ ಎಂಬುದು ರೈತರ ಆಗ್ರಹವಾಗಿದೆ.
ಕೋವಿಡ್‌ಗೆ ಬಲಿಯಾದ ಅಪ್ಪನ ಸಮಾಧಿ ಬಳಿ ಕೇಕ್‌ ಕತ್ತರಿಸಿ ಜನ್ಮದಿನ ಆಚರಿಸಿದ ಪುಟ್ಟ ಬಾಲಕಿ
ಕೊರೊನಾ ಸೋಂಕಿನಿಂದ ಈಗಾಗಲೇ ಸಾಲದ ಸುಳಿಗೆ ಸಿಲುಕಿದ್ದೇವೆ. ಇನ್ನೇನು ಈರುಳ್ಳಿ ಬೆಳೆ ಕೈಗೆ ಬರುವಷ್ಟರಲ್ಲಿ ಕೊಳೆ ರೋಗ ನಮ್ಮನ್ನು ಮತ್ತಷ್ಟು ಆಂತಕ್ಕಕ್ಕೇ ದೂಡಿದೆ. ಎರಡು ಎಕರೆಯಲ್ಲಿ ಬೆಳೆದ ಈರುಳ್ಳಿಗೆ ಬರೋಬ್ಬರಿ 30 ಸಾವಿರ ರೂಪಾಯಿ ಖರ್ಚು ಮಾಡಿದ್ದು, ಈಗ ಕೊಳೆ ರೋಗ ತಗುಲಿದ್ದರಿಂದ ಬೆಳೆ ನಾಶಪಡಿಸಿದ್ದೇವೆ ಎಂದು ಗಿರೀಶ ಅಂಗಡಿ, ಕಾತರಕಿ-ಗುಡ್ಲಾನೂರ ಹೇಳುತ್ತಾರೆ.

ಈರುಳ್ಳಿ ಬೆಳೆಗೆ ಅಂಟಿಕೊಂಡಿರುವ ಕೊಳೆ ರೋಗದ ಹತೋಟಿಗೆ ಈಗಾಗಲೇ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಅಗತ್ಯ ಸಲಹೆ ನೀಡಿದೆ. ಆದಾಗ್ಯೂ ಕೊಳೆ ರೋಗದಿಂದ ಕೊಪ್ಪಳ ಸೇರಿ ಇತರೆ ತಾಲೂಕಿನಲ್ಲಿ ರೈತರು ಬೆಳೆ ನಾಶಪಡಿಸಿದ್ದು ಗಮನಕ್ಕೆ ಬಂದಿದೆ. ಕೂಡಲೇ ಅಧಿಕಾರಿಗಳಿಂದ ಸರ್ವೇ ಕಾರ್ಯ ನಡೆಸಿ, ರೈತರಿಗೆ ಪರಿಹಾರ ಕಲ್ಪಿಸಲು ಆದ್ಯತೇ ನೀಡುವೆ.
ಕೃಷ್ಣ ಉಕ್ಕುಂದ, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಕೊಪ್ಪಳ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ