ಆ್ಯಪ್ನಗರ

ಇದ್ಯಾವ ಕಾಲದಲ್ಲಿದ್ದೇವೆ ಇನ್ನೂ? ದಲಿತರ ಮಗು ದೇಗುಲ ಪ್ರವೇಶಿಸಿದ್ದಕ್ಕೆ ದಂಡ ವಿಧಿಸಿದ ಗ್ರಾಮಸ್ಥರು!

ದಲಿತ ಸಮುದಾಯದ 2 ವರ್ಷದ ಮಗುವನ್ನು ಸೆ.4ರಂದು ಅದರ ಜನ್ಮದಿನದ ಹಿನ್ನೆಲೆಯಲ್ಲಿ ತಂದೆ ದೇವರ ದರ್ಶನಕ್ಕೆಂದು ಕರೆದುಕೊಂಡು ಹೋಗಿದ್ದರು. ಆ ದೇವಸ್ಥಾನಕ್ಕೆ ದಲಿತರ ಪ್ರವೇಶ ಇಲ್ಲದ ಹಿನ್ನೆಲೆಯಲ್ಲಿ ದೇವಸ್ಥಾನದ ಹೊರಗಿಂದಲೇ ನಮಸ್ಕರಿಸಿ ತೆರಳುವುದು ಮಗುವಿನ ತಂದೆಯ ಆಲೋಚನೆಯಾಗಿತ್ತು. ಆದರೆ ಮಗು ದೇವಾಲಯದ ಒಳಗೆ ಹೋಗಿದೆ. ಈ ವಿಚಾರಕ್ಕೆ ಸಂಬಂಧಿಸಿ ಮತಿಗೆಟ್ಟ ಗ್ರಾಮದ ಮುಖಂಡರು ಸಭೆ ನಡೆಸಿ ದೇವಾಲಯ ಅಪವಿತ್ರವಾಗಿದ್ದು, ಹೋಮ ಹವನ ಮಾಡಿ ಸರಿಪಡಿಸಬೇಕು. ಅದಕ್ಕಾಗಿ 25 ಸಾವಿರ ದಂಡ, ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಆಗುವ ವೆಚ್ಚ ನೀಡಬೇಕೆಂದು ಷರತ್ತು ವಿಧಿಸಿದ್ದರು.

Vijaya Karnataka Web 21 Sep 2021, 10:12 am
ಹನುಮಸಾಗರ: ಇನ್ನೂ ಸರಿಯಾಗಿ ನಡೆದಾಡಲು ಬಾರದ ಎರಡು ವರ್ಷದ ಪುಟ್ಟ ಮಗುವೊಂದು ದೇಗುಲ ಪ್ರವೇಶಿಸಿದ್ದಕ್ಕೆ ಗ್ರಾಮಸ್ಥರು ಮಗುವಿನ ಪೋಷಕರಿಗೆ ದಂಡ ವಿಧಿಸಿರುವ ನಾಚಿಕೆಗೆಟ್ಟ ಘಟನೆ ಕೊಪ್ಪಳ ಜಿಲ್ಲೆಯ ಹನುಮಸಾಗರ ಸಮೀಪದ ಮಿಯಾಪುರದಲ್ಲಿ ನಡೆದಿದೆ.
Vijaya Karnataka Web hanuma sagar


ಮತಿಗೆಟ್ಟ ಗ್ರಾಮಸ್ಥರ ಪ್ರಕಾರ ಏನೂ ಅರಿಯದ ಎರಡು ವರ್ಷದ ಮಗುವೊಂದು ಅಚಾನಕ್‌ ಆಗಿ ದೇವಾಲಯ ಪ್ರವೇಶ ಮಾಡಿದ್ದೇ ತಪ್ಪಾಯ್ತು. ಇದಕ್ಕಾಗಿ ಮಗುವಿನ ಹೆತ್ತವರಿಗೆ ದಂಡ ಹಾಗೂ ದೇವಸ್ಥಾನದಲ್ಲಿ ಕೈಗೊಳ್ಳಬೇಕಿರುವ ಶುದ್ಧಿಕಾರ್ಯಗಳಿಗೆ ತಗಲುವ ವೆಚ್ಚ ನೀಡುವಂತೆ ಗ್ರಾಮದ ಮೇಲ್ಜಾತಿಯ ಮುಖಂಡರು ಷರತ್ತು ವಿಧಿಸಿ ಅಮಾನವೀಯತೆ ಮೆರೆದಿದ್ದಾರೆ. ಘಟನೆ ಬಗ್ಗೆ ಮಾಹಿತಿ ತಿಳಿದ ಪೊಲೀಸ್‌, ಕಂದಾಯ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಅಸ್ಪೃಶ್ಯತಾ ನಿವಾರಣೆ ಕುರಿತು ಜಾಗೃತಿ ಸಭೆ ನಡೆಸಿದ್ದು ದಂಡ ವಿಧಿಸಿದವರಿಗೆ ಶಿಕ್ಷೆ ವಿಧಿಸುವ ಬದಲು ಕೇವಲ ತರಾಟೆಗೆ ತೆಗೆದುಕೊಂಡು ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ನೀಡಿ ಕೈತೊಳೆದುಕೊಂಡು ಬಿಟ್ಟಿದ್ದಾರೆ.
ಶಾಲೆಗೆ ತೆರಳುವ ದಲಿತ ಯುವತಿಯರಿಗೆ ಕೋಲಾರದಲ್ಲಿ ನಿತ್ಯ ಕಿರುಕುಳ; ಪ್ರಶ್ನಿಸಿದ್ದಕ್ಕೆ 50 ಜನ ಪುಂಡರಿಂದ ಥಳಿತ!
ಘಟನೆ ವಿವರ: ಚನ್ನದಾಸರ ಸಮುದಾಯದ 2 ವರ್ಷದ ಮಗುವನ್ನು ಸೆ.4ರಂದು ಅದರ ಜನ್ಮದಿನದ ಹಿನ್ನೆಲೆಯಲ್ಲಿ ತಂದೆ ದೇವರ ದರ್ಶನಕ್ಕೆಂದು ಕರೆದುಕೊಂಡು ಹೋಗಿದ್ದರು. ಆ ದೇವಸ್ಥಾನಕ್ಕೆ ದಲಿತರ ಪ್ರವೇಶ ಇಲ್ಲದ ಹಿನ್ನೆಲೆಯಲ್ಲಿ ದೇವಸ್ಥಾನದ ಹೊರಗಿಂದಲೇ ನಮಸ್ಕರಿಸಿ ತೆರಳುವುದು ಮಗುವಿನ ತಂದೆಯ ಆಲೋಚನೆಯಾಗಿತ್ತು. ಆದರೆ ಮಗು ದೇವಾಲಯದ ಒಳಗೆ ಹೋಗಿದೆ ಎನ್ನಲಾಗಿದೆ. ಇದನ್ನು ಗಮನಿಸಿದ ತಂದೆ ಮಗುವನ್ನು ಹೊರಗಡೆ ಕರೆದುಕೊಂಡು ಬಂದಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸೆ.11ರಂದು ಗ್ರಾಮದಲ್ಲಿ ಮುಖಂಡರು ಸಭೆ ನಡೆಸಿ ದೇವಾಲಯ ಅಪವಿತ್ರವಾಗಿದ್ದು, ಹೋಮ ಹವನ ಮಾಡಿ ಸರಿಪಡಿಸಬೇಕು. ಅದಕ್ಕಾಗಿ 25 ಸಾವಿರ ದಂಡ, ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಆಗುವ ವೆಚ್ಚ ನೀಡಬೇಕೆಂದು ಮಗುವಿನ ತಂದೆಗೆ ಷರತ್ತು ವಿಧಿಸಿದ್ದರು.
ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪಿ ಪಿಎಸ್‌ಐ ಅರ್ಜುನ್‌ ವಿರುದ್ಧ ಎಫ್‌ಐಆರ್ ದಾಖಲು
ಇದನ್ನು ಖಂಡಿಸಿರುವ ಚನ್ನದಾಸರ ಸಮುದಾಯದವರು ಪೊಲೀಸರ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ನೇತೃತ್ವದಲ್ಲಿ ಪೊಲೀಸ್‌, ಕಂದಾಯ, ಸಮಾಜ ಕಲ್ಯಾಣ ಇಲಾಖೆ ಹಾಗೂ ಗ್ರಾಪಂ ಅಧಿಕಾರಿಗಳು ಅಸ್ಪೃಶೃತಾ ನಿವಾರಣೆಯ ಜಾಗೃತಿ ಸಭೆ ನಡೆಸಿ, ಅಸ್ಪೃಶೃತೆ ಸಂಪೂರ್ಣವಾಗಿ ತೊಲಗಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ. ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ಮಾಡಲು ಎಲ್ಲರಿಗೂ ಸಮಾನ ಅವಕಾಶವಿದೆ. ಅಸ್ಪೃಶೃತೆ ಆಚರಣೆ ಮಾಡುವುದು ಅಕ್ಷಮ್ಯ ಅಪರಾಧ, ಇನ್ನು ಮುಂದೆ ಗ್ರಾಮದಲ್ಲಿ ಈ ರೀತಿ ಚಟುವಟಿಕೆ ನಡೆದರೆ ಕಾನೂನು ಕ್ರಮ ಜರುಗಿಸಲಾಗವುದು ಎಂದು ಎಚ್ಚರಿಕೆ ನೀಡಿ ಭಾಷಣ ಬಿಗಿದು ಹೋಗಿದ್ದಾರೆ. ಈ ವೇಳೆ ತಹಸೀಲ್ದಾರ್‌ ಎಂ.ಸಿದ್ದೇಶ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಾಲಚಂದ್ರ ಸಂಗನಾಳ, ಸಿಪಿಐ ನಿಂಗಪ್ಪ ಎನ್‌.ಆರ್‌, ಪಿಎಸ್‌ಐಗಳಾದ ತಿಮ್ಮಣ್ಣ ನಾಯಕ, ಅಶೋಕ ಬೇವೂರು, ಕಂದಾಯ ನಿರೀಕ್ಷಕ ಉಮೇಶಗೌಡ ಪಾಟೀಲ್‌, ಪಿಡಿಒ ವೆಂಕಟೇಶ ನಾಯ್ಕ್‌ ಇದ್ದರು.
ಗ್ರಾಮದಲ್ಲಿ ಶಾಂತಿ, ಸೌಹಾರ್ದತೆ ನಿರಂತರವಾಗಿ ಮುಂದುವರಿಯಲಿ, ಎಲ್ಲ ಸಮುದಾಯದವರು ಅನ್ಯೋನ್ಯವಾಗಿ ಬಾಳಿ ಬದುಕಲಿ ಎಂದು ದೂರು ದಾಖಲಿಸಲಿಲ್ಲ. ಆದರೆ ಇನ್ನು ಇಂತಹ ಘಟನೆ ಆಗದಂತೆ ಎರಡೂ ಸಮುದಾಯದ ಮುಖಂಡರು ನೋಡಿಕೊಳ್ಳಬೇಕು. ಪೊಲೀಸರು ಸಹ ಸ್ವಯಂಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಳ್ಳಬೇಕು.
ರಾಘವೇಂದ್ರ ಕೆ, ಚನ್ನದಾಸರ ಸಮುದಾಯದ ರಾಜ್ಯ ಸಂಘಟನಾ ಕಾರ್ಯದರ್ಶಿ

ಇದೊಂದು ಘಟನೆ ಆದರೆ, ಇನ್ನು ಯಲಬುರ್ಗಾ ತಾಲೂಕಿನ ಹೊಸಹಳ್ಳಿಯಲ್ಲಿ ದಲಿತ ಯುವಕರಿಗೆ ಕ್ಷೌರ ಮಾಡಿಸಿಕೊಳ್ಳುವ ವಿಷಯಕ್ಕೆ ವಾಗ್ವಾದ ಆಗಿ ನಂತರ ಇಬ್ಬರು ಯುವಕರು ನೊಂದು ಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಂಥ ಹಂತಕ್ಕೆ ಹೋಗಿತ್ತು. ಈ ಘಟನೆಯ ನಂತರ ಗ್ರಾಮದಲ್ಲಿ ಹಲವು ದಿನಗಳವರೆಗೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇತ್ತು. ಈ ಮಧ್ಯೆ ಕಾರಟಗಿ ತಾಲೂಕಿನ ಬರಗೂರಿನಲ್ಲಿ ದಲಿತ ಯುವಕ ಇದೇ ಗ್ರಾಮದ ಸವರ್ಣಿಯ ಯುವತಿಯನ್ನು ಪ್ರೀತಿಸಿದ್ದ, ಈ ಸಂದರ್ಭದಲ್ಲಿ ಹಲವು ಬಾರಿ ಗಲಾಟೆಯಾಗಿತ್ತು, ಆದರೆ ಕೊನೆಗೆ ಯುವಕನನ್ನು ಮಾರ್ಯಾದಾ ಹತ್ಯೆ ಮಾಡಲಾಗಿತ್ತು. ಕೊಪ್ಪಳ ಜಿಲ್ಲೆಯಲ್ಲಿ ಈಗಲೂ ಸಹ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ದಲಿತರ ಮನೆಯಲ್ಲಿ ಸಮಾರಂಭಗಳು, ಸಾವುಗಳ ಸಂಭವಿಸಿದರೆ ಗ್ರಾಮದಲ್ಲಿರುವ ಸವರ್ಣಿಯರ ಹೊಟೆಲ್‌ಗಳು ಬಂದ್ ಮಾಡುತ್ತಾರೆ.

ಗ್ರಾಮಗಳಲ್ಲಿನ ದಲಿತರಿಗೆ ಹೋಟೆಲ್‌ಗೆ ಪ್ರವೇಶ ನಿಷಿದ್ಧ ಇದೆ. ದಲಿತರ ಮನೆಯ ಸಾವು ಹಾಗೂ ಸಮಾರಂಭಗಳಿಗೆ ಬೇರೆ ಗ್ರಾಮದ ದಲಿತರು ಆಗಮಿಸುತ್ತಾರೆ. ಅವರು ಹೊಟೆಲ್‌ಗೆ ಬಂದರೆ ಅಪವಿತ್ರವಾಗುತ್ತವೆ. ಅವರಿಗೆ ತಿಂಡಿ, ಚಹಾ ನೀಡಲು ನಿರಾಕರಿಸಿದರೆ ಗಲಾಟೆಯಾಗುತ್ತವೆ ಎಂಬ ಕಾರಣಕ್ಕೆ ಒಂದೊಂದು ದಿನ ಹೊಟೆಲ್ ಬಂದ್ ಮಾಡುತ್ತಾರೆ. ಕೊಪ್ಪಳ ಮಾತ್ರವಲ್ಲದೇ ರಾಜ್ಯದ ಇನ್ನೂ ಅನೇಕ ಕಡೆಗಳಲ್ಲಿ ದಲಿತರಿಗೆ ದೇಗುಲ ಪ್ರವೇಶ, ಕ್ಷೌರ ನಿಷಿದ್ಧ ಪದ್ಧತಿ ಆಚರಣೆ ಇದ್ದು, ಮಾತೆತ್ತಿದರೆ ನಾವೆಲ್ಲ ಹಿಂದು, ನಾವೆಲ್ಲ ಒಂಧು ಅನ್ನೋ ಮಂದಿ ಹನುಮಸಾಗರದಲ್ಲಿ ನಡೆದ ಘಟನೆಯೂ ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಅಸ್ಪೃಶ್ಯತಾ ಆಚರಣೆ ಕುರಿತು ಬಾಯಿಗೆ ಬೀಗ ಹಾಕಿ ಕೂತಿದ್ದಾರೆ ಎಂದು ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ