ಆ್ಯಪ್ನಗರ

ರಾಮಮಂದಿರ ನಿರ್ಮಾಣಕ್ಕೆ ಒಳ್ಳೆಯ ಅವಕಾಶ: ಪೇಜಾವರ ಶ್ರೀ

ರಾಮಮಂದಿರ ನಿರ್ಮಾಣಕ್ಕೆ ಒಳ್ಳೆಯ ಅವಕಾಶವಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥರು ಹೇಳಿದರು.

Vijaya Karnataka 20 Jul 2019, 11:05 am
ಕೊಪ್ಪಳ: ರಾಮಮಂದಿರ ನಿರ್ಮಾಣಕ್ಕೆ ಒಳ್ಳೆಯ ಅವಕಾಶವಿದ್ದು, ಸರಕಾರ ಮುಂದಾಗಬೇಕಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥರು ಹೇಳಿದರು.
Vijaya Karnataka Web pejavar shree


ಆನೆಗೊಂದಿಯ ನವ ವೃಂದಾವನದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದರು.

ಲೋಕಸಭೆಯಲ್ಲಿ ಬಹುಮತವಿದೆ. ರಾಜ್ಯ ಸಭೆಯಲ್ಲೂ ಒಂದು ವರ್ಷದೊಳಗೆ ಬಹುಮತ ಬರಲಿದೆ. ರಾಮಮಂದಿರ ನಿರ್ಮಾಣ ಕುರಿತಂತೆ ಸುಪ್ರೀಂ ಕೋರ್ಟ್‌ ನಿಂದ ಯಾವುದೇ ನಿರ್ಣಯ ಬರಲಿ, ಸರಕಾರ ಸುಗ್ರಿವಾಜ್ಞೆ ಹೊರಡಿಸಿದರೆ ಮಂದಿರ ನಿರ್ಮಾಣಕ್ಕೆ ಯಾವುದೇ ತೊಡಕು ಬರುವುದಿಲ್ಲ. ರಾಮಮಂದಿರ ಮಸೀದಿಗೆ ಸ್ವಲ್ಪ ದೂರವಿರಲಿ. ಒಳ್ಳೆಯ ರೀತಿಯ ಸಮಯ ಬಂದಿದೆ. ಕೇಂದ್ರ ಸರಕಾರ ಅದನ್ನು ಬಳಸಿಕೊಳ್ಳಬೇಕು. ಗಂಗಾನದಿ ಸ್ವಚ್ಛಗೊಳಿಸಿದರೂ ಶುದ್ಧಿಯಾಗುವುದಿಲ್ಲ. ಕಲ್ಮಶ ನೀರು ಮತ್ತೇ ಶೇಖರಣೆ ಆದರೆ ಶುದ್ಧಿಯಾಗುವುದಿಲ್ಲ. ಆದ್ದರಿಂದ ಕಲ್ಮಶ ನೀರು ಬರುವುದನ್ನು ತಡೆಗಟ್ಟಬೇಕು. ಶುದ್ಧೀಕರಣಗೊಳಿಸಿ ನದಿಗೆ ನೀರು ಬಿಡಬೇಕು ಎಂದರು.

ದೊಡ್ಡ ಮಹಾತ್ಮರು:

ವ್ಯಾಸರಾಯರು ದೊಡ್ಡ ಮಹಾತ್ಮರು. ಪುರಂದಾಸರು, ಕನಕದಾಸರಿಗೆ ದೀಕ್ಷೆ ಕೊಟ್ಟಿದ್ದಾರೆ. ಕೃಷ್ಣ ದೇವರಾಯ ಅರಸನಿಗೆ ಗುರುಗಳಾಗಿದ್ದು, ವಿದೇಶದಿಂದಲೂ ಬಂದು ಅವರಿಂದ ಜ್ಞಾನ ಪಡೆಯುತ್ತಿದ್ದರು. ಮಾಧ್ವ ಸಮಾಜಕ್ಕೆ ಮಾತ್ರವಲ್ಲ; ರಾಷ್ಟ್ರಕ್ಕೆ ಅವರ ಕೊಡುಗೆ ಅಪಾರ. ಅಂಥವರ ಸಮಾಧಿ ಮೇಲೆ ನಡೆದ ಅಕ್ರಮಣ, ಹಲ್ಲೆ ತೀವ್ರವಾಗಿ ಖಂಡಿಸಬೇಕು. ಎಲ್ಲ ಮಠಾಧೀಶರು ಒಂದಾಗಿ ಶ್ರೀ ವ್ಯಾಸರಾಜರ ವೃಂದಾವನ ನಿರ್ಮಾಣ ಮಾಡುತ್ತಿದ್ದೇವೆ. ಮಠಾಧೀಪತಿಗಳು ನವವೃಂದಾವನ ಅಭಿವೃದ್ಧಿಗೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಸರಕಾರ ಭದ್ರತೆ ಒದಗಿಸಬೇಕು. ಶ್ರೀ ವ್ಯಾಸರಾಜರು ಬರೀ ಒಂದು ಸಮಾಜಕ್ಕೆ ಸೀಮಿತವಲ್ಲ. ರಾಜ್ಯಕ್ಕೆ ಹೆಮ್ಮೆಯ ಗುರುಗಳಾಗಿದ್ದರು ಎಂದರು.

'ಸರ್ವಪಕ್ಷೀಯ ಆಡಳಿತ ಬರಲಿ'

ಕೊಪ್ಪಳ:
ಎಲ್ಲ ರಾಜಕೀಯ ಪಕ್ಷಗಳಲ್ಲಿ ಭ್ರಷ್ಟಾಚಾರವಿದೆ. ಈಗ ಸರ್ವಪಕ್ಷೀಯ ಸರಕಾರ ಆಡಳಿತಕ್ಕೆ ಬರಬೇಕು ಎಂದು ಪೇಜಾವರ ಮಠದ ಶ್ರೀಗಳು ಹೇಳಿದರು.

ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯ ನವವೃಂದಾವನದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದರು.

ರಾಜಕೀಯವೇ ಬಹಳ ಭ್ರಷ್ಟವಾಗಿದೆ. ಎಲ್ಲರೂ, ಎಲ್ಲ ಪಕ್ಷಗಳು ಭ್ರಷ್ಟವಾಗಿವೆ. ಎರಡು ಪಕ್ಷ ಸೇರಿ ಮೈತ್ರಿ ದೋಸ್ತಿ ಮಾಡಿರುವುದೇ ದೊಡ್ಡ ತಪ್ಪು. ಮೊದಲು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ವಿರೋಧಿಸುತ್ತಿದ್ದವು. ಆದರೆ, ಎರಡು ಪಕ್ಷಗಳು ಅಧಿಕಾರಕ್ಕಾಗಿ ಒಂದಾಗುವುದಾದರೆ ಮೂರು ಪಕ್ಷಗಳು ಏಕೆ ಒಟ್ಟಾಗಬಾರದು? ಎಂದು ಶ್ರೀಗಳು ಪ್ರಶ್ನಿಸಿದರು.

ಜಯಪ್ರಕಾಶ್‌ ಚಳವಳಿಯಲ್ಲಿ ಆರ್‌ಎಸ್‌ಎಸ್‌ ಸೇರಿಕೊಂಡಿತ್ತು. ಅದೇ ರೀತಿ ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಒಟ್ಟಾಗಿ ಸರಕಾರ ಮಾಡಿದರೆ ಪಕ್ಷಾಂತರ, ರೆಸಾರ್ಟ್‌ ವಾಸ ಇರುವುದಿಲ್ಲ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಭಯ ಇರುವುದಿಲ್ಲ. ಯಾರು ಯಾವಾಗ ತಪ್ಪಿಸಿಕೊಳ್ಳುತ್ತಾರೆ ಎನ್ನುವ ಆತಂಕದಲ್ಲಿ ಅಭಿವೃದ್ಧಿ ಕೆಲಸ ಆಗುವುದಿಲ್ಲ. ಯಾರು ತಪ್ಪಿಸಿಕೊಳ್ಳುತ್ತಾರೋ ಎನ್ನುವ ಭಯದಲ್ಲಿ ಕೆಲಸವಾಗುವುದಿಲ್ಲ. ಶಾಸಕರನ್ನು ಒಟ್ಟು ಗೂಡಿಸುವುದೇ ಕೆಲಸವಾಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದರೂ ಇದೇ ಸಮಸ್ಯೆ. ನಿತ್ಯ ಅದೇ ಆಗುತ್ತದೆ. ತಮ್ಮ ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುತ್ತಾರೆ. ಸರ್ವಪಕ್ಷೀಯ ಸರಕಾರ ಆಡಳಿತಕ್ಕೆ ಬರಬೇಕು. ಬಿಜೆಪಿ ಎಲ್ಲ ಜನರಿಗೆ ಸದಸ್ಯತ್ವಕ್ಕೆ ಸಮಾನ ಅವಕಾಶ ನೀಡಬೇಕು. ಬಿಜೆಪಿಗೆ ಜಾತಿ ಹಾಗೂ ಹಿಂದೂಪರ ಹಣೆಪಟ್ಟಿ ಕಟ್ಟಿ ಪ್ರತ್ಯೇಕ ಯಾಕೆ ಮಾಡಿದ್ದು? ಕಡು ವಿರೋಧಿ ಕಾಂಗ್ರೆಸ್‌, ಜೆಡಿಎಸ್‌ ಒಂದಾಗುವುದಾದರೆ ಮೂರು ಪಕ್ಷ ಒಂದಾದರೆ ದೇಶ ಇನ್ನೂ ಚೆನ್ನಾಗಿ ಅಭಿವೃದ್ಧಿಯಾಗುತ್ತದೆ. ದೊಡ್ಡ ರೀತಿಯ ಬಹುಮತ ಬರುತ್ತದೆ. ಮರುಚುನಾವಣೆ, ರಾಷ್ಟ್ರಪತಿ ಆಳ್ವಿಕೆ ಬದಲು ಮೂರು ಪಕ್ಷಗಳು ಸೇರಿ ಒಗ್ಗೂಡಿ ಆಡಳಿತ ನಡೆಸಬೇಕು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ