ಆ್ಯಪ್ನಗರ

ಮೃತ ಪತ್ನಿಯ ನೆನಪಲ್ಲಿ ಮೇಣದ ಮೂರ್ತಿಯೊಂದಿಗೆ ಉದ್ಯಮಿಯ ಗೃಹ ಪ್ರವೇಶ

ಮುಮ್ತಾಜ್‌ಗಾಗಿ ಭವ್ಯ ತಾಜ್‌ಮಹಲ್‌ ಕಟ್ಟಿದ ರಾಜ ಷಹಜಹಾನ್‌, ನೀರು ತರುವಾಗ ಬೆಟ್ಟದಿಂದ ಬಿದ್ದು ಸಾವಿಗೀಡಾದ ಪತ್ನಿಯ ನೆನಪಲ್ಲಿ ಏಕಾಂಗಿಯಾಗಿ ಬೆಟ್ಟವನ್ನೇ ಕೊರೆದ ದಶರಥ್‌ ಮಾಂಜಿ - ಹೀಗೆ ಹಲವು ಪ್ರೇಮ ಕಥೆಗಳ ಸಾಲಿಗೆ ಹೀಗೊಂದು ಮನಮಿಡಿಯುವ ಅಪರೂಪದ ಪ್ರೇಮ ಕಥೆ!

Vijaya Karnataka 11 Aug 2020, 9:50 am
ಕೊಪ್ಪಳ: ಎರಡು ವರ್ಷಗಳ ಹಿಂದೆ ಅಗಲಿದ ತಮ್ಮ ಪತ್ನಿಯ ಮೇಣದ ಮೂರ್ತಿಯೊಂದಿಗೆ ಉದ್ಯಮಿಯೊಬ್ಬರು ಮನೆಯ ಗೃಹ ಪ್ರವೇಶ ನಡೆಸಿ ಸುದ್ದಿಗೆ ಗ್ರಾಸವಾಗಿದ್ದಾರೆ.
Vijaya Karnataka Web Koppal Industrialist Srinivas Gupta


ಭಾಗ್ಯನಗರ ಪಟ್ಟಣದ ಕೂದಲು ಉದ್ಯಮಿ ಶ್ರೀನಿವಾಸ್‌ ಗುಪ್ತಾ ಅವರೇ ಈ ವ್ಯಕ್ತಿ. ಅವರು ತಮ್ಮ ಮನೆಯ ಗೃಹ ಪ್ರವೇಶ ಸಂದರ್ಭದಲ್ಲಿ ಅತಿಥಿಗಳನ್ನು ಪತ್ನಿಯ ಮೇಣದ ಪ್ರತಿಮೆಯ ಜೊತೆಗೂಡಿ ಸ್ವಾಗತಿಸುವ ಮೂಲಕ ಗಮನಸೆಳೆದಿದ್ದಾರೆ.

ಜುಲೈ 2017ರಲ್ಲಿ ಕುಟುಂಬ ಸಮೇತ ಪ್ರಯಾಣಿಸುವ ವೇಳೆ ರಸ್ತೆ ಅಪಘಾತದಲ್ಲಿ ಶ್ರೀನಿವಾಸ್‌ ಗುಪ್ತಾ ಅವರ ಪತ್ನಿ ಮಾಧವಿ ಸಾವನ್ನಪ್ಪಿದ್ದರು. ಪತ್ನಿ ಅಗಲಿದ್ದರೂ ಅವರ ನೆನಪಲ್ಲೇ ಶ್ರೀನಿವಾಸ್‌ ಗುಪ್ತಾ ಕೊರಗುತ್ತಿದ್ದರು. ಸಾಯುವ ಮುನ್ನ ಹೊಸ ಮನೆ ಕಟ್ಟಿಸಬೇಕು ಎನ್ನುವುದು ಅವರ ಪತ್ನಿಯ ಮಹದಾಸೆಯಾಗಿತ್ತು. ಮನೆಯೇನೋ ನಿರ್ಮಾಣವಾಯಿತು. ಆದರೆ ಪತ್ನಿ ಅಷ್ಟೊತ್ತಿಗಾಗಲೇ ಇಹಲೋಕದ ಪಯಣ ಮುಗಿಸಿದ್ದರು.

ಕಲಾವಿದರಿಂದ ಶ್ರೀನಿವಾಸ್‌ ಗುಪ್ತಾ ಪತ್ನಿ ಮಾಧವಿ ಮೇಣದ ಪ್ರತಿಮೆಗೆ ಅಂತಿಮ ಸ್ಪರ್ಷ


ಆಗ ಅವರ ತಲೆಗೆ ಬಂದಿದ್ದೇ ಮೇಣದ ಪ್ರತಿಮೆಯ ಯೋಚನೆ. ಅದರಂತೆ ಬೆಂಗಳೂರು ಮೂಲದ ಕಲಾವಿದ ರಂಗಣ್ಣನವರ್‌ ಅವರನ್ನು ಸಂಪರ್ಕಿಸಿದ ಶ್ರೀನಿವಾಸ್‌ ಗುಪ್ತಾ, ಶ್ರೀಧರ್‌ ಮೂರ್ತಿ ಅವರಿಂದ ಸಿಲಿಕಾನ್‌ ವ್ಯಾಕ್ಸ್‌ನಲ್ಲಿ ಪತ್ನಿಯ ಸುಂದರ ಮೂರ್ತಿ ಮಾಡಿಸಿದ್ದಾರೆ. ಹೀಗೆ 'ಕುಟುಂಬ ಸಮೇತರಾಗಿ' ಅವರು ತಮ್ಮ ಕನಸಿನ ಮನೆಯ ಗೃಹ ಪ್ರವೇಶ ನಡೆಸಿದ್ದಾರೆ.

"ನನ್ನ ಹೆಂಡತಿಯನ್ನು ಮತ್ತೆ ನನ್ನ ಮನೆಯಲ್ಲಿ ನೋಡುವುದೇ ಒಂದು ಸೌಭಾಗ್ಯ. ಏಕೆಂದರೆ ಇದು ಅವಳ ಕನಸಿನ ಮನೆಯಾಗಿತ್ತು. ನನ್ನ ಹೆಂಡತಿಯ ಪ್ರತಿಮೆ ತಯಾರಿಸಲು ಬೆಂಗಳೂರಿನ ಕಲಾವಿದ ಶ್ರೀಧರ್ ಮೂರ್ತಿ ಒಂದು ವರ್ಷ ತೆಗೆದುಕೊಂಡರು. ಪ್ರತಿಮೆ ಹೆಚ್ಚು ಬಾಳಿಕೆ ಬರಲು ಸಿಲಿಕಾನ್ ಅನ್ನು ಬಳಸಲಾಗಿದೆ," ಎನ್ನುತ್ತಾರೆ ಶ್ರೀನಿವಾಸ್‌ ಗುಪ್ತಾ.

ಮುಮ್ತಾಜ್‌ಗಾಗಿ ಭವ್ಯ ತಾಜ್‌ಮಹಲ್‌ ಕಟ್ಟಿದ ಷಹಜಹಾನ್‌, ನೀರು ತರುವಾಗ ಬೆಟ್ಟದಿಂದ ಬಿದ್ದು ಸಾವಿಗೀಡಾದ ಪತ್ನಿಯ ನೆನಪಲ್ಲಿ ಏಕಾಂಗಿಯಾಗಿ ಬೆಟ್ಟವನ್ನೇ ಕೊರೆದ ದಶರಥ್‌ ಮಾಂಜಿ - ಹೀಗೆ ಹಲವು ಪ್ರೇಮ ಕಥೆಗಳ ಸಾಲಿನಲ್ಲಿ ಇದೂ ಒಂದು ಮನಮಿಡಿಯುವ ಅಪರೂಪದ ಪ್ರೇಮ ಕಥೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ