ಆ್ಯಪ್ನಗರ

ಮಗನೇ ಇಲ್ಲ, ಪರಿಹಾರ ಏನ್‌ ಮಾಡ್ಲಿ, ನೆರೆ ಸಂತ್ರಸ್ತರಿಗೆ ಕೊಡಿ

ನೋವಿನಲ್ಲೂ ಮಾನವೀಯತೆ ಮೆರೆದ ಮೃತ ವಿದ್ಯಾರ್ಥಿ ದೇವರಾಜ್‌ ಅವರ ತಾಯಿ ದೇವಮ್ಮ

Vijaya Karnataka 19 Aug 2019, 9:40 am
ಕೊಪ್ಪಳ: ಮಗನೇ ಇಲ್ಲವೆಂದ ಮ್ಯಾಲೆ ಪರಿಹಾರ ತಗೋಂಡು ಏನ್ಮಾಡ್ಲಿ. ಬಾಗಲಕೋಟೆಯಲ್ಲಿ ಮನೆ ಕಳೆದುಕೊಂಡವರಿಗೆ ಕೊಡ್ರಿ ಎಂದ ಮೃತ ವಿದ್ಯಾರ್ಥಿ ದೇವರಾಜ್‌ ಅವರ ತಾಯಿ ದೇವಮ್ಮ, ನೋವಿನಲ್ಲೂ ಮಾನವೀಯತೆ ಮೆರೆದರು.
Vijaya Karnataka Web Koppal


ತಾಲೂಕಿನ ಮಾದಿಗನೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಹೇಳಿದರು. ಬಾಳಿಬದುಕಬೇಕಾದ ಮಗನನ್ನೇ ಕಳೆದುಕೊಂಡ ಮೇಲೆ ಹಣ ತೆಗೆದುಕೊಂಡು ಏನು ಮಾಡಬೇಕು. ದೇವರು ದುಡಿಯುವ ಶಕ್ತಿ ಕೊಟ್ಟಿದ್ದಾನೆ. ಬೇಕಾದ್ರೆ ಪರಿಹಾರ ಬಾಗಲಕೋಟದಲ್ಲಿ ಮನೆ ಮುಳುಗಿದವ್ರಿಗೆ ನೀಡಲಿ ಎಂದರು.

ಮುನ್ನೆಚ್ಚರಿಕೆ ಕೊರತೆಯೇ ಅವಘಡಕ್ಕೆ ಕಾರಣ: 20 ವರ್ಷದಿಂದ ಹಾಸ್ಟೆಲ್‌ ಒಂದೇ ಕಟ್ಟಡದಲ್ಲಿತ್ತು

ಜಿಲ್ಲೆಯಲ್ಲಿ ಐದು ಮಕ್ಕಳ ಬಲಿ ಪಡೆದಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್‌ ಪೂರ್ವ ಹಾಸ್ಟೆಲ್‌ ಬಾಡಿಗೆ ಕಟ್ಟಡ ಸುಮಾರು 20 ವರ್ಷಗಳಿಂದ ಬಾಡಿಗೆ ನಡೆಯುತ್ತಿದೆ.

ನಗರದ ಬನ್ನಿಕಟ್ಟಿ ಏರಿಯಾದ ಮೆಟ್ರಿಕ್‌ ಪೂರ್ವ ಹಾಸ್ಟೆಲ್‌ನ ಮೊದಲ ಮಹಡಿಯ ಬಳಿಯೇ ವಿದ್ಯುತ್‌ ತಂತಿ ಹಾಕಲಾಗಿದೆ. ಆದರೆ ಪಕ್ಕದ ಮನೆಗಳ ಮೇಲೆ ಹಾಯ್ದು ಹೋಗಿರುವ ವಿದ್ಯುತ್‌ ತಂತಿಗೆ ಪೈಪ್‌ ಅಳವಡಿಸಿ ರಕ್ಷಣೆ ಮಾಡಿಕೊಳ್ಳಲಾಗುತ್ತಿದೆ.

ಗುಳೆ ಹೋಗಿದ್ದ ಅಪ್ಪ-ಅಮ್ಮ ಮಗನ ನೋಡುವ ಕಾತುರದಲ್ಲಿ ಬರುವಷ್ಟರಲ್ಲಿ ಆತ ಹೆಣವಾಗಿದ್ದ

ಎಚ್ಚೆತ್ತುಕೊಳ್ಳಲಿಲ್ಲ: ಸುಮಾರು 60 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಸಿಸುವ ಹಾಸ್ಟೆಲ್‌ನ ಮೇಲ್ಭಾಗದ 11ಕೆ.ವಿ. ವಿದ್ಯುತ್‌ ಲೈನ್‌ ತಂತಿಗೆ ಯಾವುದೇ ರಕ್ಷಣೆ ಇಲ್ಲ. ಹಾಸ್ಟೆಲ್‌ ಕೆಳಗಡೆಯೇ ವಿದ್ಯುತ್‌ ಪರಿವರ್ತಕ ಅಳವಡಿಸಿದೆ. ವಿದ್ಯಾರ್ಥಿಗಳ ಕೈ ಚಾಚಿದರೆ ಟಿಸಿ ಸಿಗುತ್ತದೆ. ಹಾಸ್ಟೆಲ್‌ ಮೇಲ್ನೋಟಕ್ಕೆ ಅಪಾಯ ಆಹ್ವಾನಿಸುವ ರೀತಿಯಲ್ಲಿ ಕಂಡುಬರುತ್ತಿದೆ. ಆದರೂ ಇಲಾಖೆಯ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಇತ್ತೀಚೆಗೆ ಇಲ್ಲಿಯೇ ವಿದ್ಯುತ್‌ ಶಾಟ್‌ ಸಕ್ರ್ಯೂಟ್‌ನಿಂದ 20 ಕೋತಿಗಳು ಮೃತಪಟ್ಟಿದ್ದವು. ಈ ಬಳಿಕ ಜೆಸ್ಕಾಂ ಅಧಿಕಾರಿಗಳಿಗೆ ಫೋನ್‌ ಮಾಡಿ ಹೇಳಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಸ್ಥಳೀಯರು ಆರೋಪಿಸಿದರು.

ಸೌಲಭ್ಯ ಕೊರತೆ ಹೆಚ್ಚು: ಹಾಸ್ಟೆಲ್‌ನಲ್ಲಿ ಮೂಲ ಸೌಲಭ್ಯಗಳು ಇಲ್ಲದಿರುವ ಕುರಿತು ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ಹಲವು ವರ್ಷಗಳಿಂದ ಪ್ರತಿಭಟನೆ ನಡೆಯುತ್ತಿದೆ. ಆದರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಮೊದಲು ಮೆಟ್ರಿಕ್‌ ನಂತರದ ಹಾಸ್ಟೆಲ್‌ ಕಾರ್ಯನಿರ್ವಹಿಸುತ್ತಿತ್ತು. ಹಿಂದುಳಿದ ವರ್ಗಗಳ ಇಲಾಖೆಯ ಸುಮಾರು 18 ಹಾಸ್ಟೆಲ್‌, ಪರಿಶಿಷ್ಟ ಜಾತಿ ಹಾಗೂ ಪಂಗಡದ 16 ಹಾಸ್ಟೆಲ್‌ ಸೇರಿ 33 ಹಾಸ್ಟೆಲ್‌ಗಳು ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡದಲ್ಲಿವೆ. ಬಾಡಿಗೆ ಮೊತ್ತ ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ಇದ್ದು, ನಗರ ಪ್ರದೇಶದಲ್ಲಿ ಹೆಚ್ಚಾಗಿದೆ. ಕನಿಷ್ಠ 5 ಸಾವಿರ ರೂ.ದಿಂದ 90 ಸಾವಿರ ರೂ.ವರೆಗೆ ಬಾಡಿಗೆ ನೀಡುತ್ತಿದ್ದು, ಸೌಲಭ್ಯಗಳನ್ನು ಕೇಳುವಂತಿಲ್ಲ.

ವಿದ್ಯಾರ್ಥಿಗಳ ಸ್ಥಳಾಂತರ: ಘಟನೆಯಿಂದ ಭಯಭೀತರಾಗಿದ್ದ ವಿದ್ಯಾರ್ಥಿಗಳನ್ನು ಅವರ ಗ್ರಾಮಕ್ಕೆ ಕಳುಹಿಸಲಾಯಿತು. ಸುಮಾರು 60 ವಿದ್ಯಾರ್ಥಿಗಳ ಸಾಮರ್ಥ್ಯ‌ ಹಾಸ್ಟೆಲ್‌ನಲ್ಲಿ ಭಾನುವಾರ ರಜೆ ದಿನ ಆಗಿರುವುದರಿಂದ ಬಹುತೇಕ ವಿದ್ಯಾರ್ಥಿಗಳು ಗ್ರಾಮಕ್ಕೆ ತೆರಳಿದ್ದರು. ಸುಮಾರು 26 ವಿದ್ಯಾರ್ಥಿಗಳು ಮಾತ್ರ ಹಾಸ್ಟೆಲ್‌ನಲ್ಲಿ ತಂಗಿದ್ದರು. ಬೆಳಗ್ಗೆ ದುರ್ಘಟನೆ ನಡೆಯುತ್ತಿದ್ದಂತೆ ವಿದ್ಯಾರ್ಥಿಗಳು ಭಯಭೀತರಾಗಿದ್ದರು. ಅವರನ್ನು ಪಕ್ಕದ ಖಾಸಗಿ ಶಾಲೆಯೊಂದಕ್ಕೆ ಸ್ಥಳಾಂತರಿಸಲಾಯಿತು. ನಂತರ ಪಾಲಕರಿಗೆ ಕರೆ ಮಾಡಿ ವಿದ್ಯಾರ್ಥಿಗಳನ್ನು ಅವರೊಂದಿಗೆ ಕಳುಹಿಸಲಾಯಿತು.

ಧ್ವಜಾರೋಹಣ ಕಂಬ ತೆಗೆಯಲು ಹೋದಾಗ ಶಾಟ್ ಸರ್ಕ್ಯೂಟ್ : ಐವರು ವಿದ್ಯಾರ್ಥಿಗಳ ದಾರುಣ ಸಾವು

ಅಧಿಕಾರಿಗಳ ಪರಿಶೀಲನೆ: ಹಿಂದುಳಿದ ವರ್ಗಗಳ ಆಯುಕ್ತ ಪಿ.ವಸಂತಕುಮಾರ್‌, ಜಿಲ್ಲಾಧಿಕಾರಿ ಪಿ.ಸುನಿಲ್‌ಕುಮಾರ್‌, ಎಸ್ಪಿ ರೇಣುಕಾ ಸುಕುಮಾರ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಈರಣ್ಣ ಪಂಚಾಳ್‌, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಈರಪ್ಪ ಆಶಾಪುರ ಸೇರಿದಂತೆ ನಾನಾ ಅಧಿಕಾರಿಗಳು ಭೇಟಿ ನೀಡಿದರು. ಸಂಸದ ಸಂಗಣ್ಣ ಕರಡಿ, ಶಾಸಕ ಅಮರೇಗೌಡ ಬಯ್ಯಾಪುರ, ಜಿ.ಪಂ.ಅಧ್ಯಕ್ಷ ಎಚ್‌.ವಿಶ್ವನಾಥರೆಡ್ಡಿ, ಸದಸ್ಯ ರಾಜಶೇಖರ್‌ ಹಿಟ್ನಾಳ್‌ ಸೇರಿದಂತೆ ಇತರರು ಭೇಟಿ ನೀಡಿದರು.

ಈ ದುರಂತ ನಡೆಯಬಾರದಿತ್ತು. ಬಾಡಿಗೆ ಕಟ್ಟಡಗಳ ಸುರಕ್ಷತೆಯ ಬಗ್ಗೆ ಪರಿಶೀಲಿಸಲಾಗುವುದು. ಘಟನೆ ಕುರಿತಂತೆ ತನಿಖೆ ಕೈಗೊಳ್ಳಲಾಗುವುದು.
-ಪಿ.ಸುನಿಲ್‌ಕುಮಾರ್‌, ಜಿಲ್ಲಾಧಿಕಾರಿ, ಕೊಪ್ಪಳ

ವಿದ್ಯಾರ್ಥಿಗಳ ಕುಟುಂಬದ ಸದಸ್ಯರು ಜೀವನ ಪರ್ಯಂತ ತೊಂದರೆ ಅನುಭವಿಸಬೇಕಿದೆ. ಸಣ್ಣ ಪುಟ್ಟ ಪರಿಹಾರದಿಂದ ಯಾವುದೇ ಪ್ರಯೋಜನವಿಲ್ಲ. ಮೃತ ವಿದ್ಯಾರ್ಥಿಗಳ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಬೇಕು.
- ಅಮರೇಗೌಡ ಬಯ್ಯಾಪುರ, ಶಾಸಕ, ಕುಷ್ಟಗಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ