ಗಂಗಾವತಿ; ತಾಲೂಕಿನ ಮರಳಿ ಬಳಿಯಲ್ಲಿನ ಟೋಲ್ಗೇಟ್ ಸಿಬ್ಬಂದಿ ಅಸಭ್ಯ ವರ್ತನೆ ಖಂಡಿಸಿ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ನಗರ ಠಾಣೆಯಲ್ಲಿ ಬುಧವಾರ ಆಕ್ರೋಶ ವ್ಯಕ್ತ ಪಡಿಸಿದರು.
ವಕೀಲ ಸಂಘದ ಮಾಜಿ ಅಧ್ಯಕ್ಷ ಶರಣೇಗೌಡ ಮಾಲಿ ಪಾಟೀಲ್ ಮಾತನಾಡಿ, ಮಂಗಳವಾರ ರವಿಸಿಂಗ್ ಎನ್ನುವ ವಕೀಲರು ಕಾರಟಗಿಯಿಂದ ಗಂಗಾವತಿಗೆ ಬರುವ ವೇಳೆ ಟೋಲ್ಗೇಟ್ನಲ್ಲಿ ಸಿಬ್ಬಂದಿಯು ವಕೀಲರಿಂದ ಟೋಲ್ ಫೀ ಪಡೆದು ತಪ್ಪು ರಸೀದಿ ನೀಡಿದ್ದಾರೆ. ಇದಕ್ಕೆ ಆಕ್ಷೇಪಿಸಿದ ವಕೀಲರಿಗೆ ಅವಾಚ್ಯವಾಗಿ ನಿಂಧಿಸಿದ್ದು, ಜಾತಿ ನಿಂಧನೆ ಸಹಿತ ಮಾನಸಿಕವಾಗಿ ಹಿಂಸೆ ನೀಡಿದ ಘಟನೆ ಖಂಡನೀಯ. ಜಿಕೆಸಿ ಕಂಪನಿ ಮರಳಿ ಹಾಗೂ ಹೇಮಗುಡ್ಡ ಬಳಿ ಹಾಕಿದ ಟೋಲ್ಗೇಟ್ ಅವೈಜ್ಞಾನಿಕ. ಟೋಲ್ ನಿರ್ಮಿಸಿರುವ ಕುರಿತು ಸರಿಯಾದ ದಾಖಲೆಗಳೂ ಇಲ್ಲ. ವಕೀಲರಿಗೆ ಈ ರೀತಿ ಮಾನಸಿಕ ಹಿಂಸೆ ನೀಡಿದರೆ ಸಾಮಾನ್ಯರ ಗತಿ ಏನು? ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ವಕೀಲರಾದ ಎ.ಸೋಮನಾಥ, ಸುಭಾಷ್, ಪಂಪಯ್ಯಸ್ವಾಮಿ, ಪರಸಪ್ಪ ನಾಯಕ, ಬಸವರಾಜ, ಶರಣಪ್ಪ, ನಾಗರಾಜ, ಹನುಮಂತಪ್ಪ ಇತರರಿದ್ದರು.