ಆ್ಯಪ್ನಗರ

‘ಬರಗಾಲ ಸಮರ್ಥ ಎದುರಿಸಲು ಸನ್ನದ್ಧ’

ಬರವನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಬೇಕು ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದರು.

Vijaya Karnataka 23 Aug 2018, 5:00 am
ಕೊಪ್ಪಳ : ಬರವನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಬೇಕು ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದರು.
Vijaya Karnataka Web KPL-KPL22PHOTO02


ಕುಕನೂರು ತಾಲೂಕಿನ ಭಾನಾಪುರ ಗ್ರಾಮದ ಪ್ರವಾಸಿ ಮಂದಿರದಲ್ಲಿ ಬರಪೀಡಿತ ಪ್ರದೇಶಗಳ ಕುರಿತು ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದರು. ಜಿಲ್ಲೆಯಲ್ಲಿ 2.52 ಲಕ್ಷ ಹೆಕ್ಟೇರ್‌ ಬಿತ್ತನೆಯ ಗುರಿ ಹೊಂದಿದ್ದು, 2.28 ಲಕ್ಷ ಹೆಕ್ಟೇರ್‌ನಲ್ಲಿ ಸೇಂಗಾ, ಮೆಕ್ಕೆಜೋಳ, ಸಜ್ಜೆ, ನವಣೆ, ಉಳ್ಳಾಗಡ್ಡಿ ಬಿತ್ತನೆಯಾಗಿದೆ. ಆದರೆ ಬಿತ್ತನೆಯಾದ ಪ್ರದೇಶದಲ್ಲಿ ಮಳೆ ಬಂದರೂ ಇಳುವರಿ ಕೈಗೆ ದೊರೆಯದ ಸ್ಥಿತಿಯಲ್ಲಿದೆ. ಮಳೆಯಾಶ್ರಿತ ಪ್ರದೇಶದ ರೈತರ ನಷ್ಟವಾದ 2.50 ಎಕರೆ ಜಮೀನಿಗೆ ತಕ್ಷಣವೇ 5 ರಿಂದ 10 ಸಾವಿರ ರೂ. ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನರೇಗಾ: ಕೂಲಿಕಾರ್ಮಿಕರು ಹಾಗೂ ರೈತರು ಗುಳೆ ಹೋಗುವುದನ್ನು ತಪ್ಪಿಸಲು ನರೇಗಾ ಯೋಜನೆ ಪರಿಣಾಮಕಾರಿ ಅನುಷ್ಠಾನಗೊಳಿಸಬೇಕು. ಕ್ರಿಯಾಯೋಜನೆ ರೂಪಿಸಿ ಎಲ್ಲರಿಗೂ ಉದ್ಯೋಗ ಒದಗಿಸಬೇಕು ಎಂದು ಸಚಿವರು ಹೇಳಿದಾಗ, ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್‌, ನರೇಗಾ ಯೋಜನೆಯಡಿ ಈವರೆಗೆ ಕ್ರಿಯಾಯೋಜನೆ ರೂಪಿಸಿಲ್ಲ. ನರೇಗಾ ಯೋಜನೆ ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ.

ಅಂದಾಜು 3 ತಿಂಗಳಿಂದ ಮಳೆ ಸರಿಯಾಗಿ ಆಗಿಲ್ಲ. ಅಧಿಕಾರಿಗಳಿಗೆ ಹೇಳುತ್ತ ಬಂದರೂ ಈವರೆಗೆ ಕೆಲಸ ಆಗುತ್ತಿಲ್ಲ ಎಂದರು. ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ, ಗ್ರಾ.ಪಂ.ನಲ್ಲೂ ತಾರತಮ್ಯ ಮಾಡಲಾಗುತ್ತಿದೆ. ಒಂದು ಗ್ರಾ.ಪಂ.ಗೆ 2.50 ಕೋಟಿ ರೂ. ಅನುದಾನ ಮಂಜೂರುಗೊಳಿಸಿದರೆ, ಮತ್ತೊಂದು ಗ್ರಾ.ಪಂ.ಗೆ 50 ಲಕ್ಷ ರೂ. ಅನುದಾನ ಮಂಜೂರುಗೊಳಿಸಿದೆ. ಎಲ್ಲ ಗ್ರಾ.ಪಂ.ಗಳಿಗೆ ನಿಗದಿತ ಅನುದಾನ ಗುರಿ ಮಾಡಬೇಕು. ಖರ್ಚು ಮಾಡಿದ ಗ್ರಾ.ಪಂ.ಗಳಿಗೆ ಹೆಚ್ಚುವರಿ ಅನುದಾನ ಬಿಡುಗಡೆಗೊಳಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಕ್ರಿಯಾಯೋಜನೆಗೆ ಅನುಮೋದನೆ ನೀಡಬೇಕು ಎಂದರು.

ಸಚಿವ ದೇಶಪಾಂಡೆ, ಜಿಲ್ಲಾಧಿಕಾರಿ, ಜಿ.ಪಂ.ಸಿಇಒ ಸೇರಿದಂತೆ ಇತರೆ ಅಧಿಕಾರಿಗಳು ಕುಳಿತಲ್ಲೇ ಕೆಲಸ ಮಾಡಬಾರದು. ಹೋಬಳಿ, ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ 3-4 ತಾಸುಗಳ ಸಮಯ ಕಳೆಯಬೇಕು. ನೈಜ ಸಮಸ್ಯೆ ಅರ್ಥವಾಗುತ್ತದೆ. ಕಾನೂನಿನ ಪ್ರಕಾರ ಪಾರದರ್ಶಕ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಕುಡಿವ ನೀರು: ಕುಡಿವ ನೀರಿಗೆ ಅನುದಾನ ಕೊರತೆ ಇಲ್ಲ. ಬರ ಪೀಡಿತ ಎಂದು ಘೋಷಿಸುವ ಮೊದಲೇ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ನೀರೊದಗಿಸುವ ಕೆಲಸ ಆಗಬೇಕು. ಜಿಲ್ಲೆಯ 123 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಕಂಡುಬಂದಿದೆ. ಕುಷ್ಟಗಿ ತಾಲೂಕಿನ 23 ಗ್ರಾಮಗಳಲ್ಲಿ ಬೋರ್‌ವೆಲ್‌ ಕೊರೆಸಿದರೂ ನೀರು ಬರುತ್ತಿಲ್ಲ. ಒಂದು ಗ್ರಾಮದಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜುಗೊಳಿಸಲಾಗುತ್ತಿದೆ. ಆದ್ದರಿಂದ ತಡಮಾಡದೇ ಜನಪ್ರತಿನಿಧಿಗಳ ಸಭೆ ನಡೆಸಿ ಎಲ್ಲೆಲ್ಲಿ ಕುಡಿವ ನೀರಿನ ಅವಶ್ಯಕತೆ ಇದೆಯೋ ಅಲ್ಲಿಗೆ ಪೈಪ್‌ಲೈನ್‌, ಫ್ಲಶಿಂಗ್‌ ಮಾಡಿ ನೀರು ಪೂರೈಸುವ ಕೆಲಸ ಆಗಬೇಕು. ಟ್ಯಾಂಕರ್‌ ಮೂಲಕ ನೀರು ಪೂರೈಸುವುದಾದರೆ ಜಿಪಿಎಸ್‌ ಅಳವಡಿಸಿ ಅಕ್ರಮಕ್ಕೆ ಕಡಿವಾಣ ಹಾಕಬೇಕು. 3-4 ವರ್ಷಗಳ ಹಿಂದಿನ ದಾಖಲೆ ಪರಿಶೀಲಿಸಿದರೆ ಸಮಸ್ಯೆ ಅರ್ಥವಾಗುತ್ತದೆ ಎಂದರು.

ಮೇವು ಖರೀದಿ: ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ, ಭತ್ತ ನಾಟಿ ನಡೆಯುತ್ತಿದೆ. ಭತ್ತದ ಹುಲ್ಲು ಬೇರೆಡೆ ಮಾರಾಟ ಮಾಡಿ ನಂತರ ಹೊರ ಜಿಲ್ಲೆ,ರಾಜ್ಯದಿಂದ ಖರೀದಿಸುವ ಬದಲು ಇಲ್ಲಿಯೇ ಸಂಗ್ರಹಿಸಬೇಕು ಎಂದು ಸಲಹೆ ನೀಡಿದಾಗ, ಸಚಿವರು ಒಪ್ಪಿಗೆ ಸೂಚಿಸಿ ಎಲ್ಲೆಲ್ಲಿ ಜಾನುವಾರುಗಳಿಗೆ ಮೇವು ಲಭ್ಯವಾಗಲಿದೆಯೋ ಅಲ್ಲಿಂದ ಖರೀದಿಸುವಂತೆ ಡಿಸಿಗೆ ಸೂಚಿಸಿದರು.

ಸಂಸದ ಸಂಗಣ್ಣ ಕರಡಿ, ಶಾಸಕರಾದ ಬಸವರಾಜ ದಢೇಸೂಗೂರು, ಕೆ.ರಾಘವೇಂದ್ರ ಹಿಟ್ನಾಳ್‌, ಪರಣ್ಣ ಮುನವಳ್ಳಿ, ಜಿಲ್ಲಾಧಿಕಾರಿ ಪಿ.ಸುನಿಲ್‌ಕುಮಾರ್‌, ಪ್ರಭಾರಿ ಅಪರ ಜಿಲ್ಲಾಧಿಕಾರಿ ಸಿ.ಡಿ.ಗೀತಾ, ಜಿ.ಪಂ.ಉಪಕಾರ್ಯದರ್ಶಿ ಎನ್‌.ಕೆ.ತೊರವಿ, ತಹಸೀಲ್ದಾರ್‌ ಗುರುಬಸವರಾಜ ಇದ್ದರು.

-------
ಕೇಂದ್ರ ಸರಕಾರದ 2016 ರ ನಿಯಮಾವಳಿ ಪ್ರಕಾರ ಶೇ. 50 ಕ್ಕಿಂತ ಹೆಚ್ಚು ಇಳುವರಿ ನಷ್ಟ, ತೇವಾಂಶ ಕೊರತೆಯಿಂದ ಬೆಳೆ ಹಾನಿ, ಅನಾವೃಷ್ಟಿ ಕುರಿತು ವರದಿ ಸಿದ್ಧಪಡಿಸಬೇಕು. ಬೆಳೆ ವಿಮೆ, ಪರಿಹಾರ ಸೇರಿದಂತೆ ರೈತರಿಗೆ ಸಿಗುವ ಸೌಲಭ್ಯಗಳನ್ನು ಒದಗಿಸಲು ಎಷ್ಟು ಸಾಧ್ಯವೋ ಅಷ್ಟು ಅನುಕೂಲ ಮಾಡಿಕೊಡಬೇಕು.

-ಆರ್‌.ವಿ.ದೇಶಪಾಂಡೆ, ಕಂದಾಯ ಸಚಿವ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ