ಕಾರಟಗಿ; ಕರ್ನಾಟಕ ಲೋಕಸೇವಾ ಆಯೋಗಕ್ಕೆ ಶ್ಯಾಮ್ಭಟ್ ಅವರನ್ನು ಅಧ್ಯಕ್ಷ ರನ್ನಾಗಿ ನೇಮಕಗೊಳಿಸಿದ್ದನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ತಹಸಿಲ್ ಕಚೇರಿ ಮುಂದೆ ಮಂಗಳವಾರ ಪ್ರತಿಭಟಿಸಿದರು.
ಬಿಡಿಎ ಅವ್ಯವಹಾರದಲ್ಲಿ ಶ್ಯಾಮ್ಭಟ್ ನೇರವಾಗಿ ಭಾಗಿಯಾಗಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ. ಲೋಕಾಯುಕ್ತದಲ್ಲಿ 21ಪ್ರಕರಣಗಳು ದಾಖಲಾಗಿವೆ. 2ಪ್ರಕರಣಗಳಲ್ಲಿ ಶ್ಯಾಮ್ಭಟ್ ಅವರ ಮೇಲೆ ಕ್ರಮ ಜರುಗಿಸುವಂತೆ ಸಕ್ಷ ಮ ಪ್ರಾಧಿಕಾರಕ್ಕೆ ಲೋಕಾಯುಕ್ತರು ಸೂಚಿಸಿದ್ದಾರೆ. ಇದರ ನಡುವೆ ರಾಜ್ಯ ಸರಕಾರ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಿ ಕೆಪಿಎಸ್ಸಿಗೆ ಅಧ್ಯಕ್ಷ ರನ್ನಾಗಿ ಆಯ್ಕೆಗೊಳಿಸಿದ್ದು ಖಂಡನೀಯ. ಕೆಪಿಎಸ್ಸಿ ಅಧ್ಯಕ್ಷ ಸ್ಥಾನ ನೇಮಕಾತಿಗೆ ರಾಜ್ಯ ಸರಕಾರ ಸ್ಪಷ್ಟ ನಿಯಮಾವಳಿ ರೂಪಿಸುವವರೆಗೂ, ಕಪ್ಪುಚುಕ್ಕೆ ಹೊಂದಿದವರನ್ನು ಹುದ್ದೆಗೆ ನೇಮಕಗೊಳಿಸಬಾರದು. ಪಿ.ಸಿ.ಹೋಟಾ ಸಮಿತಿ ನೀಡಿದ ಶಿಫಾರಸಿನಂತೆಯೇ ನೇಮಕ ನಡೆಸಬೇಕೆಂದು ಹೈಕೋರ್ಟ್ ಸೂಚಿಸಿದ್ದು, ಆದರೆ, ಶ್ಯಾಮ್ಭಟ್ ನೇಮಕಾತಿಯಲ್ಲಿ ನ್ಯಾಯಾಲಯದ ಸೂಚನೆಯನ್ನೇ ಗಾಳಿಗೆ ತೂರಲಾಗಿದೆ ಎಂದು ದೂರಿದರು. ಇವರ ನೇಮಕಾತಿ ಪ್ರಸ್ತಾಪವನ್ನು ಎರಡು ಬಾರಿ ತಿರಸ್ಕರಿಸಿದ್ದ ರಾಜ್ಯಪಾಲ ವಜೂಭಾಯಿ ವಾಲಾ ಮೂರನೇ ಬಾರಿಗೆ ಅನುಮತಿ ನೀಡಿದ್ದು, ಅನುಮಾನಕ್ಕೆ ಕಾರಣವಾಗಿದೆ. ಈ ಕೂಡಲೇ ಈ ನೇಮಕಾತಿಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.
ನಂತರ ವಿಶೇಷ ತಹಸೀಲ್ದಾರ್ ಕಿರಣ್ಕುಮಾರ್ ಅವರ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಿದರು.
ಆಮ್ ಆದ್ಮಿ ಪಾರ್ಟಿ ಜಿಲ್ಲಾ ಸಂಚಾಲಕ ಹುಸೇನ್ಸಾಬ್ ಗಂಗನಾಳ, ಕಾರ್ಯಕರ್ತರಾದ ಕೆ.ಮುರಳಿ ಮೋಹನ್, ಎಂ.ಶರಣಪ್ಪ ಸುದ್ದಿ, ಅನಂತಕುಮಾರ, ವಲಿಸಾಬ್, ವೀರೇಶ ಕಬ್ಬೇರ್, ರಾಜೇಂದ್ರ ಇದ್ದರು.