ಆ್ಯಪ್ನಗರ

‘ಬೀಜ ಭಾಗ್ಯ’ ಬೀಜದಲ್ಲಿ ಮೋಸ: ಆರೋಪ

ತೋಟಗಾರಿಕೆ ಇಲಾಖೆ 'ಬೀಜ ಭಾಗ್ಯ'' ಯೋಜನೆಯಡಿ ನೀಡಿರುವ ಬೀಜದಲ್ಲಿ ಮೋಸವಾಗಿದೆ ಎಂದು ತಾಲೂಕಿನ ಶಾಖಾಪುರ ರೈತರು ದೂರಿದ್ದಾರೆ.

Vijaya Karnataka 18 Jun 2018, 5:00 am
ಕುಷ್ಟಗಿ : ತೋಟಗಾರಿಕೆ ಇಲಾಖೆ 'ಬೀಜ ಭಾಗ್ಯ'' ಯೋಜನೆಯಡಿ ನೀಡಿರುವ ಬೀಜದಲ್ಲಿ ಮೋಸವಾಗಿದೆ ಎಂದು ತಾಲೂಕಿನ ಶಾಖಾಪುರ ರೈತರು ದೂರಿದ್ದಾರೆ.
Vijaya Karnataka Web KPL-KPL17KST04


ಗ್ರಾಮದ 8 ರೈತರಿಗೆ 2017-18ನೇ ಸಾಲಿನ ಬೀಜ ಭಾಗ್ಯ ಯೋಜನೆಯಡಿ ತೋಟಗಾರಿಕೆ ಇಲಾಖೆ ತರಕಾರಿ ಬೀಜಗಳನ್ನು ವಿತರಿಸಿತ್ತು. ರೈತರು ತಮ್ಮ ತಮ್ಮಲ್ಲೇ ಹೊಂದಾಣಿಕೆ ಮಾಡಿಕೊಂಡು ಹಾಗಲಕಾಯಿ ಬೀಜವನ್ನು ಒಬ್ಬರು, ಹೀರೆಕಾಯಿ, ಬೆಂಡೆಕಾಯಿ, ಟಮ್ಯಾಟೊ ಹೀಗೆ ಒಬ್ಬೊಬ್ಬರು ಒಂದೊಂದು ಬೀಜವನ್ನು ತಮ್ಮ ತೋಟಗಳಲ್ಲಿ ನಾಟಿ ಮಾಡಿದ್ದರು. ಹಾಗಲಕಾಯಿ ಬೀಜದ ಪ್ಯಾಕೆಟ್‌ ಮೇಲೆ ಬಿಳಿಬಣ್ಣದ ಉದ್ದನೆಯ ಹಾಗಲಕಾಯಿ ಚಿತ್ರ ಮುದ್ರಿಸಲಾಗಿತ್ತು. ಪ್ಯಾಕೆಟ್‌ ಮೇಲೆ ತೋರಿಸಿರುವ ಚಿತ್ರದಂತೆಯೇ ಹಾಗಲಕಾಯಿ ಬಿಡಬಹುದು ಎಂದೇ ರೈತ ಯಮನಪ್ಪ ಬಳೂಟಗಿ ತಮ್ಮ ಒಂದು ಎಕರೆ ಹೊಲದಲ್ಲಿ ಅಂದಾಜು 54 ಸಾಲು ಹಾಗಲಕಾಯಿ ಬೀಜ ನಾಟಿ ಮಾಡಿದರು. ಇದೀಗ ಬಳ್ಳಿಯಲ್ಲಿ ಬಿಟ್ಟಿರುವ ಕಾಯಿಗಳನ್ನು ಕಂಡು ರೈತನಿಗೆ ಅಚ್ಚರಿಯಾಗಿದೆ. ಕಾಯಿಗಳು ದುಂಡಾಗಿದ್ದು ಉದ್ದವಾಗಿಲ್ಲ, ಅಚ್ಚ ಹಸಿರು ಬಣ್ಣವನ್ನು ಹೊಂದಿವೆ. ಮಾರುಕಟ್ಟೆಯಲ್ಲಿ ಬಿಳಿ ಬಣ್ಣದ ಹಾಗಲಕಾಯಿಗೆ ಹೆಚ್ಚು ಬೇಡಿಕೆ. ದಟ್ಟ ಹಸಿರುಬಣ್ಣದ ಹಾಗಲಕಾಯಿಯನ್ನು ಗ್ರಾಹಕರು ಖರೀದಿಸಲು ಇಚ್ಛಿಸುವುದಿಲ್ಲ. ಪ್ಯಾಕೆಟ್‌ ಮೇಲಿನ ಚಿತ್ರ ನೋಡಿ ತಾವು ಮೋಸ ಹೋಗಿರುವುದಾಗಿ ರೈತ ಯಮನಪ್ಪ ಬಳೂಟಗಿ ಅಳಲು ತೋಡಿಕೊಂಡರು. ಈ ಬಗ್ಗೆ ತೋಟಗಾರಿಕೆ ಅಧಿಕಾರಿಗಳಿಗೂ ತಿಳಿಸಲಾಗಿದೆ. ಉಚಿತವಾಗಿ ದೊರೆಯುವ ಬೀಜವೆಂದು ನಾಟಿ ಮಾಡಿದರೆ ಇದೀಗ ಮಾರುಕಟ್ಟೆಯಲ್ಲಿ ಹಾಗಲಕಾಯಿ ಮಾರಾಟವಾಗದೇ ನಷ್ಟವಾಗಿದೆ ಎಂದು ರೈತ ಹೇಳಿದರು. ಬೀಜ ಮಾಡಲು, ಗೊಬ್ಬರ, ಔಷಧ ಸಿಂಪರಣೆಗೆ ಸಾಕಷ್ಟು ಹಣ ಖರ್ಚು ಮಾಡಿದ್ದು, ಇದೀಗ ಗಿಡಗಳನ್ನು ಕಿತ್ತುಹಾಕಲು ನಿರ್ಧರಿಸಿದ್ದಾಗಿ ತಿಳಿಸಿದರು.

............

ರೈತನ ಹೊಲಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಸರಕಾರದ ಯೋಜನೆಯಂತೆ ಬೀಜ ಉಚಿತವಾಗಿ ನೀಡಲಾಗಿದೆ. ಪ್ಯಾಕೆಟ್‌ ಮೇಲಿನ ಚಿತ್ರದಂತೆಯೇ ಇಳುವರಿ ಬರುತ್ತದೆ ಎಂದು ರೈತ ನಂಬಿದ್ದರು. ಈಗ ಬೇರೆ ಗಾತ್ರ ಮತ್ತು ಬಣ್ಣದ ಕಾಯಿಗಳು ಬಿಟ್ಟಿರುವುದು ಅಚ್ಚರಿ ಮೂಡಿಸಿದೆ.

-ಕೆ.ಎಂ.ರಮೇಶ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಕುಷ್ಟಗಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ